ಕೊಡಗು ಜಿಲ್ಲೆ
ಕರ್ನಾಟಕದ ಒಂದು ಜಿಲ್ಲೆ / From Wikipedia, the free encyclopedia
ಕರ್ನಾಟಕ ರಾಜ್ಯದ ಒಂದು ಜಿಲ್ಲೆ,
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
ಅಲ್ಲೆ ಆ ಕಡೆ ನೋಡಲಾ
ಅಲ್ಲೆ ಕೊಡಗರ ನಾಡಲಾ
ಅಲ್ಲೆ ಕೊಡಗರ ಬೀಡಲಾ
ಭೂಲಕ್ಷ್ಮಿ ಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಜಿಲ್ಲೆ ಕೊಡಗನ್ನು ಗುರುತಿಸಲು ಇದಕ್ಕಿಂತ ಬೇರೆ ವರ್ಣನೆ ಬೇಕಾಗಿಲ್ಲ.
ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.ಕೊಡಗು, ಇದು ಪಶ್ಚಿಮ ಘಟ್ಟದ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ. ಇದು ನೈಋತ್ಯ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 4,102 ಚದರ ಕಿಲೋಮೀಟರ್ (1,584 ಚದರ ಮೈಲಿ) ಪ್ರದೇಶವನ್ನು ಆವರಿಸಿದೆ. 2011 ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆಯು 554,519 ರಷ್ಟಿದೆ, 13.74% ರಷ್ಟು ಜಿಲ್ಲೆಯ ನಗರ ಕೇಂದ್ರಗಳಲ್ಲಿ ಕೇಂದ್ರೀಕೃತಗೊಂಡಿದೆ, ಇದು ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಕೊಡಗು ಕೊಡವ ಭಾಷೆಯನ್ನು ಮಾತನಾಡುವ ಸ್ಥಳೀಯರಿಗೆ ನೆಲೆಯಾಗಿದೆ.
ಕೊಡಗಿನ ಅಧಿಕ ಭೂ ಭಾಗವು ಕೃಷಿಗಾಗಿ ಬಳಸಲಾಗುತ್ತಿದೆ. ಐತಿಹಾಸಿಕವಾಗಿ ಮತ್ತು ವಿಶಿಷ್ಟವಾಗಿ ಭತ್ತದ ಗದ್ದೆಗಳು ಕಣಿವೆ ಪ್ರದೇಶದಲ್ಲಿ ಕಂಡುಬರುತ್ತದೆ. ಕಾಫಿ ಮತ್ತು ಮೆಣಸಿನಗಿಡಗಳು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಮುಖ್ಯವಾಗಿ ಮಡಿಕೇರಿ ಬಳಿ ಕಂಡುಬರುತ್ತದೆ. ಸಾಮಾನ್ಯವಾಗಿ ಕಂಡುಬರುವಂತಹಾ ಬೆಳೆ ಕಾಫಿ, ಅದರಲ್ಲೂ ವಿಶೇಷವಾಗಿ ಕಾಫೀ ರೋಬಸ್ಟಾ ಹೇರಳವಾಗಿ ಬೆಳೆಯುತ್ತಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುದ್ದಗಿರಿಯ ನಂತರ ಭಾರತದ ಎರಡನೇ ಕಾಫಿ ಉತ್ಪಾದನಾ ಪ್ರದೇಶವಾಗಿದೆ. ಇದರಿಂದ ಕೊಡಗು ಭಾರತದ ಶ್ರೀಮಂತಜಿಲ್ಲೆಗಳಲ್ಲಿ ಒಂದಾಗಿ ಬೆಳೆದಿದೆ.
ಕೊಡಗು ವನ್ಯಜೀವಿ ಸಂಪನ್ಮೂಲಗಳಿಂದ ಸಮೃದ್ಧವೆಂದು ಪರಿಗಣಿಸಲಾಗಿದೆ . ಮೂರು ವನ್ಯಜೀವಿ ಅಭಯಾರಣ್ಯಗಳು ಮತ್ತು ಒಂದು ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ: ಬ್ರಹ್ಮಗಿರಿ, ತಲಕಾವೇರಿ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಅಥವಾ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲಾಗುತ್ತದೆ.
ಕುಶಾಲನಗರ ಕೊಡಗಿನ ಹೊಸದಾಗಿ ರಚನೆ ಅದ ತಾಲೂಕು ಆಗಿದೆ