ಭಾರತದ ಮಾಜಿ ಪ್ರಧಾನ ಮಂತ್ರಿ From Wikipedia, the free encyclopedia
ಇಂದಿರಾ ಪ್ರಿಯದರ್ಶಿನಿ ಗಾಂಧಿಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ. ಅವರು ಮಹಾತ್ಮ ಗಾಂಧಿ ಅವರ ಸಂಬಂಧಿಕಳಲ್ಲ.
ಇಂದಿರಾ ಗಾಂಧಿ | |
---|---|
೪ನೆಯ ಭಾರತದ ಪ್ರಧಾನ ಮಂತ್ರಿ (೧ನೆಯ ಅವಧಿ) | |
ಅಧಿಕಾರ ಅವಧಿ ೨೪ ಜನವರಿ ೧೯೬೬ – ೨೪ ಮಾರ್ಚ್ ೧೯೭೭ | |
ರಾಷ್ಟ್ರಪತಿ | ಸರ್ವೆಪಲ್ಲಿ ರಾಧಾಕೃಷ್ಣನ್ ಜಾಕಿರ್ ಹುಸೇನ್ ವರಾಹಗಿರಿ ವೆಂಕಟಗಿರಿ ಫಕ್ರುದ್ದೀನ್ ಅಲಿ ಅಹ್ಮದ್ |
ಪೂರ್ವಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಉತ್ತರಾಧಿಕಾರಿ | ಮೊರಾರ್ಜಿ ದೇಸಾಯಿ |
೪ನೆಯ ಭಾರತದ ಪ್ರಧಾನ ಮಂತ್ರಿ (೨ನೆಯ ಅವಧಿ) | |
ಅಧಿಕಾರ ಅವಧಿ ೧೫ ಜನವರಿ ೧೯೮೦ – ೩೧ ಅಕ್ಟೋಬರ್ ೧೯೮೪ | |
ರಾಷ್ಟ್ರಪತಿ | ನೀಲಂ ಸಂಜೀವ ರೆಡ್ಡಿ ಗ್ಯಾನಿ ಜೈಲ್ ಸಿಂಗ್ |
ಪೂರ್ವಾಧಿಕಾರಿ | ಚೌಧುರಿ ಚರಣ್ ಸಿಂಗ್ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ಭಾರತದ ವಿದೇಶಾಂಗ ಸಚಿವ | |
ಅಧಿಕಾರ ಅವಧಿ ೯ ಮಾರ್ಚ್ ೧೯೮೪ – ೩೧ ಅಕ್ಟೋಬರ್ ೧೯೮೪ | |
ಪೂರ್ವಾಧಿಕಾರಿ | ಪಿ.ವಿ.ನರಸಿಂಹರಾವ್ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ಅಧಿಕಾರ ಅವಧಿ ೨೨ ಆಗಸ್ಟ್ ೧೯೬೭ – ೧೪ ಮಾರ್ಚ್ ೧೯೬೯ | |
ಪೂರ್ವಾಧಿಕಾರಿ | ಮಹೊಮ್ಮೆದಾಲಿ ಕರ್ರಿಮ್ ಚಗ್ಲ |
ಉತ್ತರಾಧಿಕಾರಿ | ದಿನೇಶ್ ಸಿಂಗ್ |
ಭಾರತದ ಹಣಕಾಸು ಸಚಿವ | |
ಅಧಿಕಾರ ಅವಧಿ ೨೬ ಜೂನ್ ೧೯೭೦ – ೨೯ ಏಪ್ರಿಲ್ ೧೯೭೧ | |
ಪೂರ್ವಾಧಿಕಾರಿ | ಮೊರಾರ್ಜಿ ದೇಸಾಯಿ |
ಉತ್ತರಾಧಿಕಾರಿ | ಯಶವಂತರಾವ್ ಚವಾಣ್ |
ಅಧಿಕಾರ ಅವಧಿ ೧೯೫೯ | |
ಪೂರ್ವಾಧಿಕಾರಿ | ಯು ಎನ್ ಧೇಬರ್ |
ಉತ್ತರಾಧಿಕಾರಿ | ನೀಲಂ ಸಂಜೀವ ರೆಡ್ಡಿ |
ಅಧಿಕಾರ ಅವಧಿ ೧೯೭೮ – ೧೯೮೪ | |
ಪೂರ್ವಾಧಿಕಾರಿ | ದೇವ್ ಕಾಂತ್ ಬರುಆ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ವೈಯಕ್ತಿಕ ಮಾಹಿತಿ | |
ಜನನ | ಅಲಹಾಬಾದ್, United Provinces, ಬ್ರಿಟಿಷ್ ಭಾರತ | ೧೯ ನವೆಂಬರ್ ೧೯೧೭
ಮರಣ | 31 October 1984 66) ನವ ದೆಹಲಿ, ಭಾರತ | (aged
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಫಿರೋಝ್ ಗಾಂಧಿ |
ಮಕ್ಕಳು | ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ |
ಧರ್ಮ | ಫಾರ್ಸಿ |
ಸಹಿ |
ರಾಜಕೀಯ ಪ್ರಭಾವವಿದ್ದ ನೆಹರು ಕುಟುಂಬದಲ್ಲಿ ಅವರ ಜನನ. ಬೆಳೆದದ್ದು ತೀಕ್ಷ್ಣ ರಾಜಕೀಯ ವಾತಾವರಣದಲ್ಲಿ. ಮೋತಿಲಾಲ್ ನೆಹರು ಈಕೆಯ ಅಜ್ಜ. ಅವರೊಬ್ಬ ಪ್ರಮುಖ ಭಾರತೀಯ ರಾಷ್ಟ್ರೀಯ ಮುಖಂಡ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮುಂದಾಳು ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರು ಇಂದಿರಾಗಾಂಧಿಯವರ ತಂದೆ. ೧೯೪೧ರಲ್ಲಿ ಆಕ್ಸ್ಫರ್ಡ್ನಿಂದ ಭಾರತಕ್ಕೆ ಹಿಂದಿರುಗಿದ ನಂತರ ಈಕೆ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ೧೯೫೦ರ ದಶಕದಲ್ಲ್ಲಿ, ಮೊದಲ ಭಾರತದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಂದೆಗೆ ವೈಯಕ್ತಿಕ ಸಹಾಯಕರಾಗಿ ಅನಧಿಕೃತ ಸೇವೆ ಸಲ್ಲಿಸಿದರು.೧೯೬೪ರಲ್ಲಿ ಅವರ ತಂದೆಯ ನಿಧನ. ನಂತರ ಭಾರತದ ರಾಷ್ಟ್ರಪತಿಯಿಂದ ರಾಜ್ಯಸಭೆಯ ಸದಸ್ಯರಾಗಿ ಇವರ ನೇಮಕ. ಮುಂದೆ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಚಿವ ಸಂಪುಟದ ಸದಸ್ಯೆ.[1]
ಶಾಸ್ತ್ರಿಯವರ ಹಠಾತ್ ಮರಣಾನಂತರ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾದರು. ಇವರನ್ನು ಪ್ರಧಾನಿ ಗದ್ದುಗೆಗೇರಿಸುವಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕಾಮರಾಜ್ಅವರದ್ದು ಪ್ರಮುಖ ಪಾತ್ರ.[ಸೂಕ್ತ ಉಲ್ಲೇಖನ ಬೇಕು] ಗಾಂಧಿ ಯವರಿಂದ ಜನಾನುರಾಗಿ ರಾಜಕೀಯ ಸಿದ್ಧಾಂತಸ್ಥಾಪನೆ. ಚತುರ ಎದುರಾಳಿಗಳ ವಿರುದ್ಧ ಚುನಾವಣೆ ಗೆಲ್ಲುವಲ್ಲಿ ತನ್ನ ಸಾಮರ್ಥ್ಯದ ಪ್ರದರ್ಶನ. ಅವರಿಂದ ಹೆಚ್ಚು ಎಡ-ಪಕ್ಷೀಯ ಆರ್ಥಿಕ ನೀತಿಗಳ ಅನುಷ್ಠಾನ ಮತ್ತು ಕೃಷಿ ಉತ್ಪಾದಕತೆಗೆ ಬೆನ್ನು ತಟ್ಟಿ ಪ್ರೋತ್ಸಾಹ. ೧೯೭೧ರಲ್ಲಿ ಪಾಕಿಸ್ಥಾನದೊಂದಿಗೆ ನಡೆದ ಕದನದಲ್ಲಿ ಭಾರತದ್ದು ನಿರ್ಣಾಯಕ ಗೆಲುವು. ಈ ಸಂದರ್ಭದಲ್ಲಿ ಇಂದಿರಾ ಪ್ರಧಾನ ಮಂತ್ರಿ. ೧೯೭೫ ಅವರ ಪಾಲಿಗೆ ಒಂದು ಅಭದ್ರತೆಯ ಅವಧಿ. ಇದರಿಂದಾಗಿ ಆಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ. ದೀರ್ಘ ಕಾಲೀನ ನಿರಂಕುಶ ಪ್ರಭುತ್ವ. ಪರಿಣಾಮವಾಗಿ, ಸೋಲರಿಯದ ಕಾಂಗ್ರೆಸ್ ಪಕ್ಷಕ್ಕೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ. 1980 ಚುನಾವಣೆ ಯಲ್ಲಿ ಕಾಂಗ್ರೆಸ್ಗೆ ಮತ್ತೆ ಜಯ. ಪ್ರಧಾನ ಮಂತ್ರಿ ಅಧಿಕಾರ ಮತ್ತೆ ಇಂದಿರಾ ಗಾಂಧಿ ಕೈಗೆ. ೧೯೮೪ ಜೂನ್ನಲ್ಲಿ, ದಂಗೆಕೋರರನ್ನು ಬಂಧಿಲೆಂದು ಗಾಂಧಿ ಆದೇಶದ ಮೇರೆಗೆ ಸಿಖ್ರ ಪವಿತ್ರ ಸ್ವರ್ಣ ಮಂದಿರದೊಳಕ್ಕೆ ಭಾರತೀಯ ಸೇನಾ ಪಡೆಯಿಂದ ಬಲವಂತ ಪ್ರವೇಶ. ಈ ಕಾರ್ಯಾಚರಣೆಯ ಪ್ರತೀಕಾರವಾಗಿ ೧೯೮೪ ಅಕ್ಟೋಬರ್ ೩೧ರಂದು ಇಂದಿರಾ ಗಾಂಧಿ ಹತ್ಯೆಗೆ ತುತ್ತಾದರು.
ಇಂದಿರಾಗಾಂಧಿ 1917 ನವೆಂಬರ್ 19ರಂದು ಪಂಡಿತ್ ಜವಾಹರ್ಲಾಲ್ ನೆಹರು ಮತ್ತು ಕಮಲಾ ನೆಹರು ಅವರಿಗೆ ಜನಿಸಿದರು. ಈ ದಂಪತಿಗಳಿಗೆ ಇಂದಿರಾ ಏಕಮಾತ್ರ ಪುತ್ರಿ. ನೆಹರು ಅವರದು ಗೌರವಾನ್ವಿತ ಕಾಶ್ಮೀರಿ ಪಂಡಿತ್ ಕುಟುಂಬ. ಇವರು ಜನಿಸಿದಾಗ, ಅಜ್ಜ ಮೋತಿಲಾಲ್ ನೆಹರು ಮತ್ತು ತಂದೆ ಜವಾಹರ್ಲಾಲ್ ನೆಹರು, ಇಬ್ಬರೂ ಪ್ರಭಾವಿ ರಾಜಕೀಯ ಮುಖಂಡರು. ಗಾಂಧಿ ಬಾಲ್ಯವನ್ನು ನೆಹರು ಕುಟುಂಬದ ಮನೆ ಆನಂದ ಭವನದಲ್ಲಿ ಕಳೆಯತ್ತಾ ಬೆಳೆದರು. ಈ ಸಂದರ್ಭದಲ್ಲಿ ತೀಕ್ಷ್ಣ ರಾಜಕೀಯ ವಾತಾವರಣ ಆ ಮನೆಯಲ್ಲಿ ನೆಲೆಸಿತ್ತು. ನೆಹರು ಮನೆಮಂದಿಯಿಂದ ದೂರ ಉಳಿದಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಪ್ರೀತಿಯಲ್ಲಿ ಬೆಳೆದ ಇಂದಿರಾ ದೃಢ ರಕ್ಷಣಾತ್ಮಕ ಸ್ವಭಾವವನ್ನೂ ಮತ್ತು ಏಕಾಂಗಿ ವ್ಯಕ್ತಿತ್ವವನ್ನೂ ರೂಢಿಸಿಕೊಂಡಿದ್ದರು. ನೆಹರು ಮನೆಯಲ್ಲಿ ಆಗ ರಾಜಕೀಯ ಚಟುವಟಿಕೆಯ ಪ್ರವಾಹ. ಹೀಗಾಗಿ ಕುಟುಂಬದವರೊಂದಿಗೆ ಬೆರೆಯಲು ಆಗುತ್ತಿರಲಿಲ್ಲ. ವಿಜಯಲಕ್ಷ್ಮಿ ಪಂಡಿತ್ರನ್ನೂ ಒಳಗೊಂಡಂತೆ, ಇವರು ತಮ್ಮ ತಂದೆಯ ಸೋದರಿಯರೊಂದಿಗೆ, ವೈಯಕ್ತಿಕ ಭಿನ್ನಾಪ್ರಾಯ ಹೊಂದಿದ್ದರು. ಅವರೊಂದಿಗಿನ ಈ ಬಗೆಯ ಸಂಬಂಧವು ರಾಜಕೀಯ ಜಗತ್ತಿನಲ್ಲೂ ಹಾಗೇ ಮುಂದುವರಿಯಿತು. 'ನಾನು ಸೆರೆಮನೆಯಲ್ಲಿದ್ದಾಗ ಪೋಲೀಸರು ಪದೇ ಪದೇ ಮನೆಗೆ ಬಂದು, ಸರಕಾರ ಅವರಿಗೆ ವಿಧಿಸಿದ ದಂಡ ಪಾವತಿಯ ಪ್ರತಿಯಾಗಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು'-ಎಂದು ಇವರ ತಂದೆ ತಮ್ಮ ಆತ್ಮಚರಿತ್ರೆ ಟುವರ್ಡ್ ಫ್ರೀಡಮ್ ನಲ್ಲಿ ಬರೆಯುತ್ತಾರೆ. "ನನ್ನ ನಾಲ್ಕು-ವರ್ಷದ ಮಗಳು ಇಂದಿರಾ ಹೀಗೆ ನಡೆಯುತ್ತಿದ್ದ ಸತತ ಲೂಟಿಯಿಂದ ತುಂಬಾ ನೊಂದಿದ್ದಳು. ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದ್ದ ಅವಳು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಳು" ಎಂದು ನೆಹರು ಹೇಳುತ್ತಾರೆ. "ಬಾಲ್ಯದಲ್ಲಿ ಉಂಟಾದ ಅಚ್ಚಳಿಯದಂಥ ಈ ಬಗೆಯ ನೆನಪು ಪೋಲೀಸ್ ವ್ಯವಸ್ಥೆಯ ಬಗ್ಗೆ ಅವಳಲ್ಲಿ ವಿಭಿನ್ನ ದೃಷ್ಟಿಯನ್ನೇ ಸೃಷ್ಟಿಸುವುದೇನೋ ಎಂಬುದು ನನ್ನ ಕಳಕಳಿಯಾಗಿತ್ತು". ಇಂದಿರಾ ಯುವಕ ಮತ್ತು ಯುವತಿಯರಿಗಾಗಿ ವಾನರ ಸೇನೆ ಚಳವಳಿಗೆ ಚಾಲನೆ ನೀಡಿದರು. ಅದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಟ್ಟ ಆದರೆ ಗಮನಾರ್ಹ ಪಾತ್ರ ವಹಿಸಿತು. ಸೂಕ್ಷ್ಮ ಮಾಹಿತಿ ಪ್ರಕಟಣೆಗಳನ್ನು ಮತ್ತು ನಿರ್ಬಂಧಿತ ಸಂಗತಿಗಳನ್ನು ಪ್ರಸಾರ ಮಾಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಿಗೆ ನೆರವಾಯಿತು. ಧ್ವಜ ಪಥ ಸಂಚಲನ ನಡೆಸಿತು ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ತಂದೆಯ ಮನೆಯಿಂದ ಶಾಲಾ ಚೀಲದಲ್ಲಿ ಪ್ರಮುಖ ಕ್ರಾಂತಿಯ ಆರಂಭಕ್ಕಾಗಿ ರೂಪುರೇಷೆ ಸಿದ್ಧವಾಗಿದ್ದ ಯೋಜನೆಗಳ ಪ್ರಮುಖ ದಾಖಲೆಯನ್ನು ಪೊಲೀಸರ ಮೂಗಿನಡಿಯಲ್ಲೇ ರಹಸ್ಯವಾಗಿ ಇಂದಿರಾ ಸಾಗಿಸಿದ್ದರು. ಇದು 1930ರಲ್ಲಿನ ಕ್ರಾಂತಿಗೆ ಪ್ರೇರಣೆ ನೀಡಿತು ಎಂಬುದೊಂದು ಮಾತು ಜನಜನಿತ.
ಇಂದಿರಾಗಾಂಧಿ ತಾಯಿ ಕಮಲಾ ನೆಹರು ಬಹಳ ದಿನದ ಹೆಣಗಾಟದ ನಂತರ 1936ರಲ್ಲಿ ಕ್ಷಯ ರೋಗಕ್ಕೆ ಬಲಿಯಾದರು. ಇಂದಿರಾಗೆ ಆಗಿನ್ನೂ 18 ವರ್ಷ. ಹೀಗಾಗಿ ಇವರು ಬಾಲ್ಯದಲ್ಲಿ ಸುಭದ್ರ ಕುಟುಂಬ ಜೀವನದ ಸುಖವನ್ನು ಅನುಭವಿಸಲಿಲ್ಲ. ಇಂಗ್ಲೆಂಡ್ನ, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸೊಮರ್ವಿಲ್ಲೆ ಕಾಲೇಜಿನಲ್ಲಿ 1930ರ ಉತ್ತರಾರ್ಧದಲ್ಲಿ ವ್ಯಾಸಂಗ ನಿರತರಾಗಿದ್ದಾಗ ಅವರು ಲಂಡನ್ ಮೂಲದ ತೀವ್ರಗಾಮಿ ಸ್ವಾತಂತ್ರ-ಪರವಾದ ಇಂಡಿಯಾ ಲೀಗ್ (= ಭಾರತೀಯ ಒಕ್ಕೂಟ)ನ ಸದಸ್ಯರಾಗಿದ್ದರು.[2]
1940ರ ಆರಂಭದಲ್ಲಿ ಇಂದಿರಾ ಅವರು ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಗುಣಮುಖರಾಗಲು ಸ್ವಿಜರ್ಲ್ಯಾಂಡ್ನ ಮನೆಯೊಂದರಲ್ಲಿ ಕೆಲವು ದಿನ ತಂಗಿದರು. ಇವರು ದೂರದಲ್ಲಿದ್ದ ತಂದೆಯೊಂದಿಗೆ ಉದ್ದುದ್ದ ಪತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಇದು ಬಾಲ್ಯದಲ್ಲೇ ಅವರು ರೂಢಿಸಿಕೊಂಡಿದ್ದರ ಮುಂದುವರಿಕೆ. ತಂದೆ ಮಗಳ ಮಧ್ಯೆ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿತ್ತು.[3] ಅವರು ಯುರೋಪ್ ಖಂಡ ಮತ್ತು UKಯಲ್ಲಿದ್ದಾಗ, ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದ ಪಾರ್ಸಿ ತರುಣ ಫಿರೋಜ್ ಗಾಂಧಿಯನ್ನು ಭೇಟಿಯಾದರು (ಅವರು ಮೋಹನ್ದಾಸ್ ಗಾಂಧಿಅವರ ದತ್ತುಪುತ್ರ).[4] ಭಾರತಕ್ಕೆ ಹಿಂದಿರುಗಿದ ನಂತರ, ಫಿರೋಜ್ ಗಾಂಧಿಯವರು ನೆಹರು ಕುಟುಂಬಕ್ಕೆ ತುಂಬಾ ಹತ್ತಿರವಾದರು, ವಿಶೇಷವಾಗಿ ಇಂದಿರಾರವರ ತಾಯಿ ಕಮಲಾ ನೆಹರುರವರಿಗೆ ಮತ್ತು ಇಂದಿರಾರವರಿಗೂ ಸಹ.
ಇಂದಿರಾ ಮತ್ತು ಫಿರೋಜ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿದಾಗ, ಪರಸ್ಪರ ಪ್ರೀತಿಸುತ್ತಿದ್ದರು. ವೈದ್ಯರ ಸೂಚನೆಯನ್ನೂ ಮೀರಿ ಅವರು ಮದುವೆಯಾಗಲು ನಿರ್ಧರಿಸಿದರು.[5] ಫಿರೋಜ್ ಗಾಂಧಿಯವರಲ್ಲಿದ್ದ ಮುಕ್ತ ಮನೋಭಾವ, ಹಾಸ್ಯ ಪ್ರಜ್ಞೆ ಮತ್ತು ಆತ್ಮ-ವಿಶ್ವಾಸವನ್ನು ಇಂದಿರಾ ಇಷ್ಟಪಟ್ಟರು. ತಮ್ಮ ಮಗಳು ಅಷ್ಟು ಬೇಗ ಮದುವೆಯಾಗುವ ಆಲೋಚನೆ ನೆಹರುಗೆ ಇಷ್ಟವಾಗಲಿಲ್ಲ. ಈ ಪ್ರೇಮ ವಿವಾಹವನ್ನು ತಪ್ಪಿಸಲು ಮಹಾತ್ಮಾಗಾಂಧಿಯವರ ಸಹಾಯವನ್ನು ಪಡೆಯಲು ಅವರು ಪ್ರಯತ್ನಿಸಿದರು. ಇಂದಿರಾ ಹಠ ಹಿಡಿದರು. 1942 ಮಾರ್ಚ್ನಲ್ಲಿ ಹಿಂದು ಆಚರಣೆಯಂತೆ ಮದುವೆ ನೆರವೇರಿತು.[6] ಫಿರೋಜ್ ಮತ್ತು ಇಂದಿರಾ ಇಬ್ಬರೂ ಸಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದರು. 1942ರಲ್ಲಿ ನಡೆದ 'ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಬ್ಬರೂ ಬಂಧನಕ್ಕೊಳಗಾದರು.[7] ಸ್ವಾತಂತ್ರ್ಯಾ ನಂತರ, ಫಿರೋಜ್ ಚುನಾವಣಾ ಕಣಕ್ಕೆ ಇಳಿದರು. ಉತ್ತರ ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರ ಇಬ್ಬರು ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹುಟ್ಟಿದ ನಂತರ, ಬಿಗಡಾಯಿಸಿದ ಅವರ ಸಂಬಂಧ ಬೇರ್ಪಡುವಷ್ಟರ ಮಟ್ಟಿಗೆ ಬಂತು. ಮರು-ಚುನಾಯಿತರಾದ ಸ್ವಲ್ಪ ದಿನಗಳಲ್ಲೇ ಫಿರೋಜ್ ಹೃದಯಾಘಾತಕ್ಕೆ ಈಡಾದರು. ಇದರಿಂದ ಮತ್ತೆ ರಾಜಿಯಾದರು. ಇವರಿಬ್ಬರ ಸಂಬಂಧ ಫಿರೋಜ್ ಗಾಂಧಿ 1960ರ ಸೆಪ್ಟೆಂಬರ್ನಲ್ಲಿ ನಿಧನರಾಗುವ ಕೆಲವು ವರ್ಷಗಳ ಮುಂದಿನವರೆಗೆ ಉಳಿದಿತ್ತು.
1959 ಮತ್ತು 1960ರಲ್ಲಿ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಚುನಾವಣೆಗೆ ನಿಂತು ಅಧ್ಯಕ್ಷರಾಗಿ ಚುನಾಯಿತರಾದರು. ಅವರ ಅಧಿಕಾರಾವಧಿಯಲ್ಲಿ ವಿಶೇಷ ಘಟನೆಗಳೇನೂ ಸಂಭವಿಸಲಿಲ್ಲ. ತಮ್ಮ ತಂದೆಯ ಸಿಬ್ಬಂದಿ ವರ್ಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ ರು. ನೆಹರುರವರು ಸ್ವಜನ ಪಕ್ಷಪಾತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದರು. ಗಾಂಧಿಯವರು 1962ರ ಚುನಾವಣೆಯಲ್ಲಿ ಭಾಗವಹಿಸಲಿಲ್ಲ.
1964 ಮೇ 27ರಂದು ನೆಹರು ನಿಧನರಾದರು. ನೂತನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಒತ್ತಾಯಕ್ಕೆ ಮಣಿದ ಇಂದಿರಾ ಚುನಾವಣೆಯಲ್ಲಿ ಸ್ಫರ್ಧಿಸಿದರು ಮತ್ತು ಸರಕಾರವನ್ನು ಸೇರಿದರು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಅವರು ನೇಮಕಗೊಂಡರು.[8] ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದ್ದರ ಪರಿಣಾಮವಾಗಿ ತಮಿಳುನಾಡಿನಲ್ಲಿ ದೊಂಬಿಯೆದ್ದಿತು. ಹಿಂದಿ ಮಾತನಾಡದ ತಮಿಳುನಾಡು ರಾಜ್ಯದ ರಾಜಧಾನಿ ಮದ್ರಾಸ್ಗೆ ಆ ಸಂದರ್ಭದಲ್ಲಿ ಅವರು ಭೇಟಿ ನೀಡಿದ್ದರು.ಅಲ್ಲಿ ಅವರು ಸರಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮುದಾಯ ಮುಖಂಡರ ಕೋಪವನ್ನು ಶಮನಗೊಳಿಸಿದರು. ಗಲಭೆಯಿಂದಾಗಿ ಹಾನಿಗೀಡಾದ ಪ್ರದೇಶಗಳ ಮರು-ನಿರ್ಮಾಣದ ಮೇಲ್ವಿಚಾರಣೆ ವಹಿಸಿದರು. ಇಂಥ ಉಪಕ್ರಮಕ್ಕೆ ಹೆಜ್ಜೆ ಇಡದ ಶಾಸ್ತ್ರಿ ಮತ್ತು ಅವರ ಸಂಪುಟದ ಹಿರಿಯ ಸಚಿವರು ಮುಜುಗರಕ್ಕೆ ಒಳಗಾದರು. ಗಾಂಧಿಯವರ ಈ ಕ್ರಿಯಾಶೀಲತೆ ಬಹುಶಃ ನೇರವಾಗಿ ಶಾಸ್ತ್ರಿಯವರಿಗೇ ಗುರಿ ಇಟ್ಟಿದ್ದಾಗಲೀ ಅಥವಾ ತಮ್ಮ ಸ್ವಂತ ರಾಜಕೀಯ ಉನ್ನತಿಯನ್ನು ಬಯಸಿದ್ದಾಗಲೀ ಆಗಿರಲಿಲ್ಲ. ತಮ್ಮ ಸಚಿವಾಲಯದ ನಿತ್ಯದ ಕೆಲಸ-ಕಾರ್ಯಗಳಲ್ಲಿ ಅವರು ಆಸಕ್ತಿ ಕಳೆದುಕೊಂಡರು ಎಂಬ ವರದಿಗಳೂ ಇವೆ. ಮಾಧ್ಯಮದ ಅರಿವಿದ್ದ ಅವರು ರಾಜಕಾರಣದ ಕಲೆ ಮತ್ತು ವ್ಯಕ್ತಿತ್ವ-ರೂಪಿಸುವ ನೈಪುಣ್ಯ ಹೊಂದಿದ್ದರು.
"1965ರ ನಂತರ ಗಾಂಧಿ ಮತ್ತು ಅವರ ಪ್ರತಿಸ್ಫರ್ಧಿಗಳ ನಡುವೆ ಹೋರಾಟವೇ ನಡೆಯಿತು. ಅನೇಕ ರಾಜ್ಯಗಳಲ್ಲಿ ಮೇಲ್ಜಾತಿಗೆ ಸೇರಿದ ಮುಖಂಡರನ್ನು ಕೆಳಕ್ಕಿಳಿಸಿ ಆ ಸ್ಥಾನಗಳಲ್ಲಿ ಹಿಂದುಳಿದ ಜಾತಿಯ ನಾಯಕರನ್ನು ನೇಮಿಸಲು ಕೇಂದ್ರೀಯ ಕಾಂಗ್ರೆಸ್ (ಪಕ್ಷ) ಮುಖಂಡತ್ವವು ಮುಂದಾಯಿತು. ಜೊತೆಗೆ, ಪ್ರತಿಪಕ್ಷ ಮತ್ತು ತಮ್ಮ ಎದುರಾಳಿಗಳನ್ನು ಸೋಲಿಸಲು ಹಿಂದುಳಿದವರ ಮತ ಸಂಗ್ರಹಿಸುವಲ್ಲಿ ಕಾರ್ಯೊನ್ಮುಖರಾದರು. ಇಂಥ ಹಸ್ತಕ್ಷೇಪ ಕೆಲವೊಮ್ಮೆ ಸಾಮಾಜಿಕ ಪ್ರಗತಿಪರ ಹೆಜ್ಜೆಯಂತೆ ಕಂಡರೂ ಪ್ರಾದೇಶಿಕವಾದ ಮತ್ತು ಜನಾಂಗೀಯವಾದ ಸಂಘರ್ಷ ಗಾಢವಾಗಿ ಬೆಳೆಯಲು ಕಾರಣವಾಯಿತು.[9]
1965ರ ಭಾರತ-ಪಾಕಿಸ್ಥಾನ ಯುದ್ಧ ನಡೆಯುತ್ತಿದ್ದಾಗ, ಗಾಂಧಿ ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು. ಪಾಕಿಸ್ಥಾನಿ ದಂಗೆಕೋರರು ನಗರದ ಹತ್ತಿರಕ್ಕೆ ನುಸುಳಿ ಬಂದಿದ್ದಾರೆ ಎಂದು ಸೇನೆಯು ಎಚ್ಚರಿಕೆ ನೀಡಿದರೂ ಸಹ, ಅದನ್ನು ಲೆಕ್ಕಿಸದ ಅವರು ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿದರು. ಬದಲಿಗೆ ಸ್ಥಳೀಯ ಆಡಳಿತ ಯಂತ್ರವನ್ನು ಪುನಶ್ಚೇತನಗೊಳಿಸುತ್ತಾ ಮಾಧ್ಯಮದ ಗಮನವನ್ನು ತಮ್ಮತ್ತ ಸೆಳೆದರು. ಪಾಕಿಸ್ಥಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸ ಲಾಯಿತು, ಮತ್ತು ಪ್ರಧಾನ ಮಂತ್ರಿ ಶಾಸ್ತ್ರಿಯವರು 1966 ಜನವರಿಯಲ್ಲಿ ಪಾಕಿಸ್ಥಾನದ ಆಯೂಬ್ ಖಾನ್ರೊಂದಿಗೆ ತಾಷ್ಕೆಂಟ್ನಲ್ಲಿ, ಸೋವಿಯತ್ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಇದಾದ ಕೆಲವೇ ಗಂಟೆಗಳ ನಂತರ, ಶಾಸ್ತ್ರಿ ಹೃದಯಾಘಾತಕ್ಕೀಡಾಗಿ ನಿಧನರಾದರು.[10] ಮೊರಾರ್ಜಿ ದೇಸಾಯಿಯವರ ವಿರೋಧದ ನಡುವೆಯೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಕೆ. ಕಾಮರಾಜ್ ಅವರು ಇಂದಿರಾ ಗಾಂಧಿಯನ್ನು ಪ್ರಧಾನ ಮಂತ್ರಿ ಗದ್ದುಗೆಗೆ ಏರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು.ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಜಯಶೀಲರಾದರು. ಮೊರಾರ್ಜಿ ದೇಸಾಯಿಯವರ 169 ಮತಕ್ಕೆ ಎದುರಾಗಿ ಇವರು 355 ಮತಗಳನ್ನು ಪಡೆಯುವ ಮೂಲಕ ಭಾರತದ ಐದನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನ ರಾದರು.
1966ರಲ್ಲಿ ಗಾಂಧಿ ಪ್ರಧಾನ ಮಂತ್ರಿಯಾದಾಗ ಕಾಂಗ್ರೆಸ್ ಎರಡು ಹೋಳಾಯಿತು. ಒಂದು ಬಣ ಗಾಂಧಿ ನೇತೃತ್ವದ ಸಮಾಜವಾದಿಗಳದ್ದು ಮತ್ತೊಂದು ಬಣ ಮೊರಾರ್ಜಿ ದೇಸಾಯಿ ನೇತೃತ್ವದ ಸಂಪ್ರದಾಯವಾದಿಗಳದ್ದು.ರಾಮ್ಮನೋಹರ್ ಲೋಹಿಯ ಇವರನ್ನು ಗುಂಗಿ ಗುಡಿಯ ಅಂದರೆ 'ಮೂಕಬೊಂಬೆ' ಎಂದು ಕರೆದರು.[11] ಆಂತರಿಕ ಸಮಸ್ಯೆಗಳಿಂದಾದ ಪರಿಣಾಮ, 1967ರ ಚುನಾವಣೆ ಫಲಿತಾಂಶದಲ್ಲ್ಲಿಕಾಣಿಸಿಕೊಂಡಿತು. ಲೋಕಸಭೆಯ 545 ಸ್ಥಾನ ಗಳಲ್ಲಿ ಕಾಂಗ್ರೆಸ್ 297 ಸ್ಥಾನಗಳನ್ನು ಗೆದ್ದಿತಾದರೂ ಸುಮಾರು 60 ಸ್ಥಾನಗಳನ್ನು ಕಳೆದುಕೊಂಡಿತು. ಅವರು ದೇಸಾಯಿಯವರಿಗೆ ಭಾರತದ ಉಪಪ್ರಧಾನ ಮಂತ್ರಿ ಹುದ್ದೆ ಮತ್ತು ಹಣಕಾಸು ಖಾತೆ ಮಂತ್ರಿಯಾಗುವ ಅವಕಾಶ ನೀಡಬೇಕಾದ ಸಂದರ್ಭ ಒದಗಿ ಬಂತು. ದೇಸಾಯಿ ಅವರೊಂದಿಗೆ ಹಲವು ಭಿನ್ನಾಭಿಪ್ರಾಯದ ನಂತರ 1969ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಭಜನೆಗೆ ಈಡಾಯಿತು. ಅವರು ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಬೆಂಬಲದಿಂದ ಮುಂದಿನ ಎರಡು ವರ್ಷ ಆಡಳಿತ ನಡೆಸಿದರು. ಅದೇ ವರ್ಷ ಅಂದರೆ, 1969 ಜುಲೈನಲ್ಲಿ ಅವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು.
ಪೂರ್ವ ಪಾಕಿಸ್ಥಾನದ ನಾಗರಿಕರ ವಿರುದ್ಧ ಪಾಕಿಸ್ಥಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತು.[12][13] ಸುಮಾರು 10 ದಶಲಕ್ಷ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಸಿದರು ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣರಾದರು. ರಿಚರ್ಡ್ ನಿಕ್ಸನ್ ನೇತೃತ್ವದ ಅಮೆರಿಕ ಸಂಯುಕ್ತ ಸಂಸ್ಥಾನ ಪಾಕಿಸ್ಥಾನಕ್ಕೆ ಬೆಂಬಲ ನೀಡಿತು ಮತ್ತು ಯುದ್ಧ ಮಾಡದ ಹಾಗೆ ಭಾರತಕ್ಕೆ ಎಚ್ಚರಿಕೆ ನೀಡುವ UN ನಿರ್ಣಯ ಕೈಗೊಂಡಿತು. ನಿಕ್ಸನ್ಗೆ ಇಂದಿರಾರನ್ನು ಕಂಡರೆ ವೈಯಕ್ತಿಕವಾಗಿ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ರಾಜ್ಯದ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಜೊತೆಗಿನ ಖಾಸಗಿ ಸಂಪರ್ಕದಲ್ಲಿ ಇಂದಿರಾರನ್ನು "ಮಾಟಗಾತಿ" ಮತ್ತು "ಚತುರ ಗುಳ್ಳೆನರಿ" ಎಂದು ಟೀಕಿಸಿದ್ದಾರೆ (ಈ ಸಂಗತಿ ರಾಜ್ಯ ಆಡಳಿತ ವಿಭಾಗದಿಂದ ಈಗ ಹೊರಬಿದ್ದಿದೆ).[14] ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಇಂದಿರಾ ಸಹಿ ಹಾಕಿದರು. ಇದರಿಂದ ರಾಜಕೀಯ ಬೆಂಬಲ ಮತ್ತು UNನಲ್ಲಿ ಸೋವಿಯತ್ ನಿರಾಕರಣಾಧಿಕಾರ ಸಿಕ್ಕಿತು. 1971ರ ಯುದ್ಧದಲ್ಲಿ ಭಾರತ ಜಯಗಳಿಸಿತು ಹಾಗೂ ಬಾಂಗ್ಲಾದೇಶ ಹುಟ್ಟಿಕೊಂಡಿತು.
ಹೊಸ ಪಾಕಿಸ್ಥಾನಿ ಅಧ್ಯಕ್ಷ ಜುಲ್ಫಿಕಾರ್ ಆಲಿ ಭುಟ್ಟೊ ಅವರನ್ನು ಇಂದಿರಾ ವಾರಾವಧಿಯ ಶಿಮ್ಲಾ ಶೃಂಗ ಸಭೆಗೆ ಆಮಂತ್ರಿಸಿದರು. ಮಾತುಕತೆ ವಿಫಲವಾಯಿತಾದರೂ, ರಾಜ್ಯದ ಇಬ್ಬರು ಮುಖಂಡರು ಶಿಮ್ಲಾ ಒಪ್ಪಂದಕ್ಕೆ ಅಂತಿಮವಾಗಿ ಸಹಿ ಹಾಕಿದರು. ಮಾತುಕತೆ ಮತ್ತು ಶಾಂತಿ ಸಂಧಾನದ ಮೂಲಕ ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅದು ಎರಡೂ ದೇಶಗಳನ್ನು ಪರಿಮಿತಿಯಲ್ಲಿಟ್ಟಿತು. ನಿಕ್ಸನ್ ಜೊತೆಗಿನ ಇವರ ಬದ್ಧ ದ್ವೇಷದಿಂದಾಗಿ, ಯುನೈಟೆಡ್ ಸ್ಟೇಟ್ಸ್ ಸಂಬಂಧವು ದೂರವಾಗುತ್ತಾ ಹೋಯಿತು ಮತ್ತು ಸೋವಿಯತ್ ಒಕ್ಕೂಟದೊಂದಿಗಿನ ಸಂಬಂಧವು ನಿಕಟವಾಯಿತು. ಗಡಿ ನಿಯಂತ್ರಣ ರೇಖೆಯನ್ನು ಶಾಶ್ವತ ಎಲ್ಲೆ ಎಂದು ಮಾಡದೇ ಇದ್ದುದಕ್ಕಾಗಿ ಕೆಲವರಿಂದ ಇಂದಿರಾ ಗಾಂಧಿ ಟೀಕೆಗೊಳಗಾದರು ಹಾಗೂ ಪಾಕಿಸ್ತಾನದಿಂದ ಆಕ್ರಮಿತವಾದ ಕಾಶ್ಮೀರದ ಭಾಗವನ್ನು ಪಾಕಿಸ್ಥಾನದಿಂದ ಹಿಂಪಡೆಯಬೇಕಿತ್ತು ಎಂದು ಇನ್ಕೆಲವರು ಅಭಿಪ್ರಾಯ ಪಟ್ಟರು. ಪಾಕಿಸ್ಥಾನದ 93,000 ಯುದ್ಧ ಕೈದಿಗಳು ಭಾರತದ ವಶದಲ್ಲಿದ್ದರು. ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆಯಾಗಲೀ ಅಥವಾ ಹೊರಗಿನವರು ಯಾರೇ ಆಗಲಿ ಮೂಗುತೂರಿಸುವುದನ್ನು ಒಪ್ಪಂದವು ತಕ್ಷಣವೇ ನಿವಾರಿಸಿತು. ಪಾಕಿಸ್ಥಾನ ಸದ್ಯದಲ್ಲೇ ಮಾಡಬಹುದಾದ ಭಾರೀ ದಾಳಿಯ ಸಂಭವನೀಯತೆಯನ್ನು ಇದು ತಗ್ಗಿಸಿತು. ಸಮಸ್ಯೆಯು ಸೂಕ್ಷ್ಮದ್ದಾದ್ದರಿಂದ ಸಂಪೂರ್ಣ ಶರಣಾಗತಿಯನ್ನು ಭುಟ್ಟೊರಿಂದ ಕೋರದೆ, ಅವರು ಪಾಕಿಸ್ಥಾನ ತಹಬಂದಿಗೆ ಬರಲು ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಅನುಮತಿಸಿದರು. ವ್ಯವಹಾರ ಸಂಬಂಧಗಳು ಮುಂದುವರಿಯಿತಾದರೂ ಹೆಚ್ಚಿನ ಸಂಪರ್ಕ-ಸಂಬಂಧಕ್ಕೆ ಎಷ್ಟೋ ವರ್ಷಗಳವರೆಗೆ ಬಾಗಿಲು ಮುಚ್ಚಿತ್ತು.
ಇಂದಿರಾ ಆಡಳಿತ 1960ರ ಉತ್ತರಾರ್ಧದಲ್ಲಿ US ಡಾಲರ್ ಎದುರು ರುಪಾಯಿ ಮೌಲ್ಯವನ್ನು 40% ನಷ್ಟು ಇಳಿಸಿತು. ಒಂದು ಡಾಲರ್ಗೆ ಇದ್ದ ರೂ.4ರ ಬೆಲೆ ರೂ.7 ಆಯಿತು. ವಾಣಿಜ್ಯ ವರ್ಧನೆ ಇದರ ಉದ್ದೇಶವಾಗಿತ್ತು.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (=ಚೀನಾ ಗಣತಂತ್ರ) ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತ ರಕ್ಷಣೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಗಾಂಧಿ ಪ್ರಾರಂಭಿಸಿದರು. 1974ರಲ್ಲಿ ಭಾರತವು ರಾಜಸ್ಥಾನದ ಪೊಖ್ರಾನ್ನ ಬಂಜರು ಹಳ್ಳಿಯಲ್ಲಿ 'ಸ್ಮೈಲಿಂಗ್ ಬುದ್ಧ'(="ಹಸನ್ಮುಖಿ ಬುದ್ಧ") ಎಂಬ ಅನಧಿಕೃತ ಕೋಡ್ ಹೆಸರು ಹೊಂದಿದ್ದ ರಹಸ್ಯ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು. ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ಧೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು.
ಕೃಷಿ ಕ್ಷೇತ್ರದಲ್ಲಿನ ವಿಶೇಷ ಹಾಗೂ ನವೀನ ಯೋಜನೆಗಳು ಮತ್ತು 1960ರಲ್ಲಿ ಬಿಡುಗಡೆಯಾದ ಸರಕಾರದ ಹೆಚ್ಚಿನ ಬೆಂಬಲ ಭಾರತವು ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ನೀಗಿಸಿತು. ಜೊತೆಗೆ ಗೋಧಿ, ಭತ್ತ, ಹತ್ತಿ ಮತ್ತು ಹಾಲಿನ ಉತ್ಪಾದನೆಗೆ ಬೇಡಿಕೆಗಿಂತಲೂ ಅಧಿಕವಾಯಿತು. ಗಾಂಧಿಯವರು ನಿಕ್ಸನ್ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ (ನಿಕ್ಸನ್ ಪಾಲಿಗೆ ಇಂದಿರಾ "ಮಾಟಗಾತಿ ಮುದುಕಿ",[15] ಇಬ್ಬರದ್ದೂ ಪರಸ್ಪರ ಇಂಥ ಭಾವನೆಯೇ), ಯುನೈಟೆಡ್ ಸ್ಟೇಟ್ಸ್ ಅನ್ನು ಆಹಾರದ ನೆರವಿಗಾಗಿ ಅವಲಂಬಿಸುವ ಬದಲಿಗೆ ರಾಷ್ಟ್ರವು ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ವಾಣಿಜ್ಯ ಬೆಳೆ ಉತ್ಪಾದನೆಯ ವೈವಿಧ್ಯೀಕರಣವನ್ನೂ ಸಾಧಿಸಲಾ ಯಿತು. ಈ ಸಾಧನೆಯನ್ನು "ಹಸಿರು ಕ್ರಾಂತಿ" ಎಂದು ಕರೆಯಲಾಯಿತು. ನಂತರ ಕ್ಷೀರೋತ್ಪಾದನೆಯ ಸರದಿ. ಅಧಿಕ ಹಾಲಿನ ಉತ್ಪಾದನೆ ಆಯಿತಾದ್ದರಿಂದ ಈ ಸಂದರ್ಭವನ್ನು 'ಶ್ವೇತಕ್ರಾಂತಿ' ಎನ್ನಲಾಯಿತು. ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳ ಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಇದು ನೆರವಾಯಿತು. 'ಆಹಾರ ಭದ್ರತೆ' ಎಂದು ಕರೆಯಲಾದ ಮತ್ತೊಂದು ಯೋಜನೆ ಗಾಂಧಿ ಅಧಿಕಾರ ಅವಧಿಯನ್ನು 1975ರವರೆಗೆ ಕೊಂಡೊಯ್ಯಲು ಮತ್ತೊಂದು ಬೆಂಬಲದ ಮೂಲವಾಗಿತ್ತು.[16] 1960ರ ಆರಂಭದಲ್ಲಿ ಪ್ರಾರಂಭವಾದ ತೀವ್ರಗತಿ ಕೃಷಿ ಜಿಲ್ಲಾ ಯೋಜನೆ (IADP)ಗೆ ಅನಧಿಕೃವಾಗಿ ನೀಡಿದ ಹೆಸರು 'ಹಸಿರು ಕ್ರಾಂತಿ'. ನಗರ ವಾಸಿಗಳಿಗೆ ಅಗ್ಗದ ಬೆಲೆಗೆ ಯಥೇಚ್ಛ ಆಹಾರ ಧಾನ್ಯ ಪೂರೈಸುವುದು ಇಂದಿರಾರ ಯೋಜನೆಯಾಗಿತ್ತು. ಯಾಕೆಂದರೆ ಬೇರೆಲ್ಲ ಭಾರತದ ರಾಜಕಾರಣಿಗಳಂತೆ ಇವರೂ ಕೂಡಾ ನಗರ ವಾಸಿಗಳ ಮೇಲೆ ಭಾರೀ ಅವಲಂಬಿತರಾಗಿದ್ದರು.[17] ಈ ನಾಲ್ಕು ಆಧಾರ ಸ್ತಂಭಗಳ ಮೇಲೆ ಯೋಜನೆಯನ್ನು ರೂಪಿಸಲಾಗಿತ್ತು:
1971ರ ಜನಾದೇಶದ ನಂತರ ಇಂದಿರಾ ಸರಕಾರವು ಮಹತ್ತರವಾದ ಸಮಸ್ಯೆಗಳನ್ನು ಎದುರಿಸಿತು. ಆಂತರಿಕ ಸ್ವರೂಪದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಡಕುಂಟಾಯಿತು. ಅನೇಕ ಭಾಗಗಳಾಗಿ ವಿಭಜಿತಗೊಂಡ ಕಾಂಗ್ರೆಸ್ಗೆ ಚುನಾವಣಾ ದೃಷ್ಟಿಯಿಂದ ಇವರ ಸಂಪೂರ್ಣ ಮುಖಂಡತ್ವದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಗರೀಬಿ ಹಟಾವೊ (=ಬಡತನ ನೀಗಿಸಿ) ಎಂದು 1971ರಲ್ಲಿ ಗಾಂಧಿ ಘೋಷಿಸಿದರು. ಗ್ರಾಮೀಣ ಮತ್ತು ನಗರ ಬಡತನದ ಆಧಾರದ ಮೇಲೆ ಗಾಂಧಿಗೆ ಸ್ವತಂತ್ರ ರಾಷ್ಟ್ರೀಯ ಬೆಂಬಲ ನೀಡುವ ಉದ್ದೇಶದೊಂದಿಗೆ ಬಡತನ ನಿರ್ಮೂಲನಾ ಯೋಜನೆ ಮತ್ತು ಗರೀಬಿ ಹಟಾವೊ ಘೋಷಣೆ ವಿನ್ಯಾಸಗೊಂಡಿದ್ದವು. ರಾಜ್ಯದಲ್ಲಿನ ಪ್ರಬಲ ಗ್ರಾಮೀಣ ಜಾತಿಗಳನ್ನು, ಸ್ಥಳೀಯ ಸರಕಾರವನ್ನು ಮತ್ತು ನಗರ ಪ್ರದೇಶದ ವಾಣಿಜ್ಯ ವರ್ಗದವರನ್ನೂ ಉಪೇಕ್ಷಿಸಲು ಇದು ಅವರಿಗೆ ಇಂಬು ನೀಡಿತು. ಧ್ವನಿ ಅಡಗಿದ್ದ ಬಡ ಜನತೆಗೆ ರಾಜಕೀಯವಾಗಿ ಬೆಲೆ ಸಿಕ್ಕಿತು ಮತ್ತು ರಾಜಕೀಯ ಸ್ಥಿತಿ ದಕ್ಕಿತು. ಗರೀಬಿ ಹಟಾವೊ ಆಂದೋಳನದ ಯೋಜನೆಗಳು, ಸ್ಥಳೀಯವಾಗಿ ಕಾರ್ಯರೂಪಕ್ಕೆ ಬಂದರೂ ಸಹ, ನವದೆಹಲಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಧಿ ನೆರವು ಪಡೆದು ಅಭಿವೃದ್ಧಿ ಗಳಿಸಿ, ಮೇಲ್ವಿಚಾರಣೆ ಮಾಡಲ್ಪಟ್ಟವು ಮತ್ತು ಸಿಬ್ಬಂದಿವರ್ಗವನ್ನು ಪಡೆದವು. "ರಾಷ್ಟ್ರಾದ್ಯಂತ ವಿನಿಯೋಗಿಸುವ ಬಹುದೊಡ್ಡ ಸಂಪನ್ಮೂಲಗಳೊಂದಿಗೆ ಈ ಯೋಜನೆಗಳು ಕೇಂದ್ರ ರಾಜಕೀಯ ನಾಯಕತ್ವವನ್ನು ಒದಗಿಸಿದವು.[19] ಗರೀಬಿ ಹಟಾವೊ ಬಡತನ ನೀಗಿಸುವಲ್ಲಿ ವಿಫಲವಾದುದನ್ನು ವಿದ್ವಾಂಸರು ಮತ್ತು ಇತಿಹಾಸಜ್ಞರು ಈಗ ಒಪ್ಪಿದ್ದಾರೆ - ಆರ್ಥಿಕ ಅಭಿವೃದ್ಧಿಗಾಗಿ ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ 4% ಮಾತ್ರ ಮೂರು ಪ್ರಮುಖ ಬಡತನ ನಿರ್ಮೂಲನಾ ಕಾರ್ಯಕ್ರಮಕ್ಕೆ ಮೀಸಲಾಯಿತು. ವಿನಿಯೋಗವಾದ ಇದರಲ್ಲಿ 'ಕಡುಬಡವರಿಗೆ' ತಲಪಿದ್ದು ಅತ್ಯಲ್ಪ. ಗಾಂಧಿ ಮರು-ಚುನಾವಣೆಗೆ ಜನರ ಬೆಂಬಲವನ್ನು ಹುಟ್ಟುಹಾಕಲು ಪ್ರಮುಖವಾಗಿ ಬಳಸಲ್ಪಟ್ಟ ಈ ಘೋಷಣೆಯು ಬರೀ ಪೊಳ್ಳಾಯಿತು.
ಇಂದಿರಾ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿ "ನನ್ನ ಕೊನೆಯ ಉಸಿರಿರುವವರೆಗೆ" ನಾನು ಜನಸೇವೆಯಲ್ಲಿ ತೊಡಗಿರುತ್ತೇನೆ" ಎಂದು ಘೋಷಿಸಿದರು. ಈ ಸಂದರ್ಭವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಪ್ರತಿ ಪಕ್ಷಗಳು ಮತ್ತು ಅವರ ಬೆಂಬಲಿಗರು ಒಟ್ಟಾಗಿ ಈ ಘೋಷಣೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದವು. ಈ ಪ್ರತಿಭಟನೆಯಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಪಾಲ್ಗೊಂಡ ಕಾರಣ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಿರಾಯುಧ ಜನಜಂಗುಳಿಯ ಮೇಲೆ ಗುಂಡುಹಾರಿಸುವ ಆದೇಶಗಳನ್ನು ಧಿಕ್ಕರಿಸುವಂತೆ J.P. ನಾರಾಯಣ್ ಪೋಲೀಸರಿಗೆ ಕರೆ ನೀಡಿದ್ದರಿಂದ ಆಂದೋಲನ ಮತ್ತಷ್ಟು ಬಲಯುತವಾಯಿತು. ಗಾಂಧಿ ಸರಕಾರದೊಂದಿಗೆ ಸಾರ್ವಜನಿಕರ ಭ್ರಮನಿರಸನದ ಜೊತೆ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡು ಸಂಸತ್ ಭವನ ಮತ್ತು ದೆಹಲಿಯ ಅವರ ಮನೆಯ ಸುತ್ತ ಜನ ಜಮಾಯಿಸಿ ಪ್ರತಿಭಟಿಸಿದರು ಮತ್ತು ರಾಜೀನಾಮೆಗಾಗಿ ಒತ್ತಾಯಿಸಿದರು.
ಈ ಹೊತ್ತಿಗಾಗಲೇ ಇಂದಿರಾ ನಿರಂಕುಶಾಧಿಕಾರಿ ಧೋರಣೆಯ ಆಪಾದನೆಗೊಳಗಾಗಿದ್ದರು.ಸಂಸತ್ತಿನಲ್ಲಿ ಅವರಿಗಿದ್ದ ಭಾರೀ ಬಹುಮತವನ್ನು ಬಳಸಿಕೊಂಡು, ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ತಿದ್ದುಪಡಿ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಸಮತೋಲನವನ್ನು ಮಾರ್ಪಡಿಸಿದ ತಿದ್ದುಪಡಿಯಲ್ಲಿ ಕೇಂದ್ರ ಸರಕಾರದ ಕೈಗೆ ಅಧಿಕ ಅಧಿಕಾರ ಇರುವಂತೆ ನೋಡಿಕೊಂಡಿತು. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳನ್ನು ಸಂವಿಧಾನದ 356ನೇ ನಿಬಂಧನೆಯನ್ನು ಬಳಸಿ ಅವರು ಎರಡು ಬಾರಿ, "ರಾಷ್ಟ್ರಪತಿ ಆಡಳಿತ"ವನ್ನು ಹೇರಿದರು ಮತ್ತು ನಿಯಂತ್ರಣವೆಲ್ಲವನ್ನೂ ತಮ್ಮ ವಶದಲ್ಲಿ ಇಟ್ಟುಕೊಂಡರು. ಈ ರಾಜ್ಯಗಳಲ್ಲಿ "ಕಾನೂನು ಕುಸಿದು ಬಿದ್ದಿದೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ" ಎಂಬ ಸಬೂಬು ನೀಡಿದರು. ಗಾಂಧಿ ಅಧಿಕಾರಕ್ಕೆ ಏರಲು ಕಾರಣ ಕರ್ತರಾಗಿದ್ದ ಅವರ ನಿಕಟ ರಾಜಕೀಯ ಸಲಹೆಗಾರ P. N. ಹಕ್ಸರ್ ಅವರಂಥ ಕೆಲವರನ್ನು ದೂರ ತಳ್ಳಿ ಇಂದಿರಾರ ರಾಜಕೀಯ ಸಲಹೆಗಾರರಾಗಿ ಬೆಳೆದ ಸಂಜಯ್ ಗಾಂಧಿಯ ಉಸ್ತುವಾರಿಕೆ ಚುನಾಯಿತ ಅಧಿಕಾರಿಗಳ ಮತ್ತು ಆಡಳಿತಾತ್ಮಕ ಸೇವಾ ವಿಭಾಗದ ಅಸಮಾಧಾನಕ್ಕೆ ಕಾರಣವಾಯಿತು. ಸರ್ವಾಧಿಕಾರೀ ಆಡಳಿತದ ಬಯಕೆಯ ಅವರ ಹೊಸ ಪ್ರವೃತ್ತಿಗೆ ಪ್ರತ್ಯುತ್ತರವಾಗಿ, ಜಯ ಪ್ರಕಾಶ್ ನಾರಾಯಣ್, ಸತ್ಯೇಂದ್ರ ನಾರಾಯಣ್ ಸಿನ್ಹ ಮತ್ತು ಆಚಾರ್ಯ ಜೀವತ್ರಾಮ್ ಕೃಪಾಲನಿಯಂತಹ ಮೇಧಾವಿಗಳು ಮತ್ತು ಸ್ವಾತಂತ್ರ್ಯ-ಹೋರಾಟಗಾರರು ಗಾಂಧಿಯವರ ವಿರುದ್ಧ ಮತ್ತು ಅವರ ಸರಕಾರದ ವಿರುದ್ಧ ಟೀಕಾ ಪ್ರಹಾರದ ಭಾಷಣ ಮಾಡುತ್ತಾ ಭಾರತಾದ್ಯಂತ ಸಂಚರಿಸಿದರು.
ಆಂದೋಲನದಲ್ಲಿ ಭಾಗವಹಿಸಿದ ಎದುರಾಳಿಗಳನ್ನು ಬಂಧಿಸುವಂತೆ ಗಾಂಧಿ ಆದೇಶ ನೀಡುವ ಮೂಲಕ ಸಹಜ ವಾತಾವರಣ ಪುನಃಸ್ಥಾಪಿಸಲು ಮುಂದಾದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾನೂನು ಕುಸಿತ ಮತ್ತು ಅವ್ಯವಸ್ಥೆ ಭುಗಿಲೆದ್ದಿದ್ದನ್ನು ಗಮನಿಸಿದ ಅವರ ಸಚಿವ ಸಂಪುಟ ಮತ್ತು ಸರಕಾರವು ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟಾಧ್ಯಕ್ಷ ಫಕ್ರುದ್ದೀನ್ ಆಲಿ ಅಹಮದ್ ಅವರಿಗೆ ಶಿಫಾರಸು ಮಾಡಿತು.ತತ್ಪರಿಣಾಮವಾಗಿ, ಅಹಮದ್ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು.
ಕೆಲವೇ ತಿಂಗಳುಗಳಲ್ಲಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ಗುಜರಾತ್ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು ಈ ಮೂಲಕ ಇಡೀ ರಾಷ್ಟ್ರವನ್ನು ನೇರ ಕೇಂದ್ರ ಆಡಳಿತದ ಹಿಡಿತಕ್ಕೆ ತರಲಾಯಿತು.[24] ಕರ್ಫ್ಯೂ ವಿಧಿಸಲು ಮತ್ತು ನಾಗರಿಕರನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿಡಲು ಪೊಲೀಸರಿಗೆ ಅಧಿಕಾರ ನೀಡಲಾಯಿತು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಾಲಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಿತು. ತಮ್ಮ ಕೆಲಸಕಾರ್ಯಗಳಲ್ಲಿ ಸಂಜಯ್ ಗಾಂಧಿಯವರ ಹಸ್ತಕ್ಷೇಪವನ್ನು ಸಹಿಸಲಾಗದೇ ಪ್ರತಿಭಟಿಸಿ, ಭವಿಷ್ಯದ ಪ್ರಧಾನ ಮಂತ್ರಿ ಎಂದು ಬಿಂಬಿತರಾಗಿದ್ದ ಇಂದರ್ ಕುಮಾರ್ ಗುಜ್ರಾಲ್ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಹೊರಬಂದರು. ಅಂತಿಮವಾಗಿ, ರಾಜ್ಯ ರಾಜಪಾಲರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರವನ್ನು ವಜಾಗೊಳಿಸಲು ಅನುಮತಿಸುವ ಸಂವಿಧನಾತ್ಮಕ ನಿಬಂಧನೆಯ ಪ್ರಕಾರ ವಿರೋಧಪಕ್ಷ ಆಡಳಿತ ನಡೆಸುತ್ತಿದ್ದ ರಾಜ್ಯ ಸರಕಾರಗಳನ್ನು ತೆಗೆದುಹಾಕುವುದರೊಂದಿಗೆ, ಸನಿಹದಲ್ಲೇ ಜರುಗಬೇಕಿದ್ದ ವಿಧಾನ ಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಲಾಯಿತು. ಸ್ವತಃ ತಮಗೆ ವಿಶೇಷ ಅಧಿಕಾರಗಳನ್ನು ನೀಡುವಂತೆ ತುರ್ತುಪರಿಸ್ಥಿತಿ ನಿಯಮಾವಳಿಯನ್ನು ಇಂದಿರಾ ಪರಿವರ್ತಿಸಿದರು.
"ಶಾಸಕಾಂಗ ಪಕ್ಷಗಳ ಅಧೀನದಲ್ಲಿ ಬಲಿಷ್ಠರಾದ ಹಾಗೂ ಪ್ರಾದೇಶಿಕ ಪಕ್ಷಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ಮತ್ತು ಆದ್ಯತೆ ನೀಡುತ್ತಿದ್ದ ಅವರ ತಂದೆಯವರ (ನೆಹರು) ಮಾರ್ಗಕ್ಕಿಂತ ಭಿನ್ನವಾಗಿ ವರ್ತಿಸಿದರು. ಶ್ರೀಮತಿ| ಇಂದಿರಾ ಸ್ವತಂತ್ರ ನೆಲೆಯನ್ನು ಹೊಂದಿದ್ದ ಪ್ರತೀ ಕಾಂಗ್ರೆಸ್ ಮುಖ್ಯ ಮಂತ್ರಿಗಳನ್ನು ತೆಗೆದುಹಾಕಲು ಮತ್ತು ಆ ಸ್ಥಾನಕ್ಕೆ ಅವರಿಗೆ ವೈಯಕ್ತಿಕ ನಿಷ್ಠೆ ತೋರುವ ಮಂತ್ರಿಗಳನ್ನು ನೇಮಿಸಲು ಮುಂದಾದರು...ಆದರೂ ಸಹ, ರಾಜ್ಯಗಳಲ್ಲಿ ಸ್ಥಿರತೆಯನ್ನು ಉಳಿಸಿಕೊಂಡು ಹೋಗಲಾಗಲಿಲ್ಲ..."[25]
ಸಂಸತ್ತಿನಲ್ಲಿ ಚರ್ಚಿಸುವ ಅವಶ್ಯಕತೆಯೇ ಇಲ್ಲದಂತೆ ಶಾಸನಗಳನ್ನು ರೂಪಿಸುವ ಮತ್ತು 'ತಾನು ಹೇಳಿದ್ದೇ ಕಾನೂನು' ಮತ್ತು ಅದು ಕಾಯಿದೆ ಬದ್ಧ ಎಂಬಂಥ ಸುಗ್ರೀವಾಜ್ಞೆ ಹೊರಡಿಸುವಂತೆ ಅವರು ರಾಷ್ಟ್ರಪತಿ ಅಹಮದ್ ಅವರನ್ನು ಒತ್ತಾಯಿಸಿದರು ಎಂಬ ಆಪಾದನೆಯೂ ಅವರ ಮೇಲಿದೆ. ಅದೇ ಸಮಯದಲ್ಲಿ, ಗಾಂಧಿ ಸರಕಾರವು ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದ ಸಾವಿರಾರು ರಾಜಕೀಯ ಮುಖಂಡರನ್ನು ಬಂಧನಕ್ಕೆ ಈಡು ಮಾಡಿತು, ಮುಂದೊಮ್ಮೆ ದೆಹಲಿಯ Lt. ಗವರ್ನರ್ ಆದ, ಜಗ ಮೋಹನ್ರ, ಮೇಲ್ವಿಚಾರಣೆಯಲ್ಲಿ ದೆಹಲಿಯ ಜಮಾ ಮಸೀದಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಸಂಜಯ್ ಆರಂಭಿಸಿದರು, ಇದರಿಂದ ಸಾವಿರಾರು ಜನ ಮನೆಮಠ ಕಳೆದುಕೊಂಡರು, ನೂರಾರು ಮಂದಿ ಸಾವನ್ನಪ್ಪಿದರು, ಮತ್ತು ರಾಷ್ಟ್ರದ ರಾಜಧಾನಿಯ ಆ ಪ್ರದೇಶದಲ್ಲಿ ಪ್ರಾಂತೀಯ ವೈಮನಸ್ಸು ಬೆಳೆಯಿತು-ಎಂದು ಆರೋಪಿಸಲಾಗಿದೆ. ಸಾವಿರಾರು ಮಂದಿಯ ಮೇಲೆ ಬಲವಂತವಾಗಿ ಕುಟುಂಬ ಯೋಜನೆಯನ್ನು ಅನುಷ್ಠಾನಗೊಳಿಸಿ ಸಂತಾನಹರಣಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ಹೀನಾಯವಾಗಿ ನಿರ್ವಹಿಸಲಾಯಿತು.
ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ಇಂದಿರಾ ಗಾಂಧಿ ತಮ್ಮ ಆಡಳಿತವನ್ನು ಸಮರ್ಥಿಸಲು ಮತದಾರರಿಗೆ ಒಂದು ಅವಕಾಶ ನೀಡುವುದಕ್ಕಾಗಿ 1977ರಲ್ಲಿ ಚುನಾವಣೆ ಘೋಷಿಸಿದರು. ಅತಿಯಾದ ನಿಯಂತ್ರಣಕ್ಕೆ ಒಳಪಟ್ಟ ಪತ್ರಿಕಾ ಲೇಖನಗಳನ್ನು ಓದಿದ ಇಂದಿರಾ ಇದು ತಮ್ಮ ಜನಪ್ರಿಯತೆಯ ಪರಾಕಾಷ್ಠೆ ಎಂದು ತಪ್ಪಾಗಿ ಗ್ರಹಿಸಿದರು. ಇವರ ಪ್ರತಿಯೊಂದು ಹೆಜ್ಜೆಯನ್ನೂ ಜನತಾ ಪಕ್ಷ ವಿರೋಧಿಸಿತು. ಜಯ ಪ್ರಕಾಶ್ ನಾರಾಯಣ್ರನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ಇಂದಿರಾರ ದೀರ್ಘಕಾಲೀನ ದ್ವೇಷಿಯಾದ ದೇಸಾಯಿ ನೇತೃತ್ವದ ಜನತಾ ಪಕ್ಷವು "ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ" ಎರಡರ ನಡುವಿನ ಆಯ್ಕೆಗೆ ಈ ಚುನಾವಣೆ ಕಟ್ಟ ಕಡೆಯ ಅವಕಾಶ ಎಂದು ಸಾರಿತು. ಇಂದಿರಾರ ಕಾಂಗ್ರೆಸ್ ಪಕ್ಷ ಭಾರೀ ಸೋಲುಂಡಿತು. ಇಂದಿರಾ ಮತ್ತು ಸಂಜಯ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ 153 (ಹಿಂದಿನ ಲೋಕಸಭೆಗೆ 350ಕ್ಕೆ ಹೋಲಿಸಿದಾಗ) ಸ್ಥಾನಗಳಿಗೆ ಇಳಿಯಿತು. ಇದರಲ್ಲಿನ 92 ಸ್ಥಾನ ದಕ್ಷಿಣ ರಾಜ್ಯಗಳಿಗೆ ಸೇರಿದ್ದು.
ದೇಸಾಯಿಯವರು ಪ್ರಧಾನ ಮಂತ್ರಿಯಾದರು. 1969ರಲ್ಲಿ ಆಡಳಿತ ಪಕ್ಷದವರ ಆಯ್ಕೆಯಾಗಿದ್ದ ನೀಲಮ್ ಸಂಜೀವ ರೆಡ್ಡಿಯವರು ಗಣತಂತ್ರದ ರಾಷ್ಟ್ರಪತಿಯಾದರು. ಗಾಂಧಿ 1978ರಲ್ಲಿ ಚುನಾವಣೆಯಲ್ಲಿ ಮತ್ತೆ ಗೆಲ್ಲುವವರೆಗೆ ತಮಗೆ ಕೆಲಸ, ಆದಾಯ ಅಥವಾ ಮನೆ ಇಲ್ಲವೆಂದು ತೊಳಲಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು 1977ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಭಜನೆಗೆ ತುತ್ತಾಯಿತು.ಗಾಂಧಿ ಬೆಂಬಲಿಗರಾದ ಜಗಜೀವನ್ ರಾಮ್ ಮತ್ತು ಅವರಿಗೆ ಹೆಚ್ಚು ನಿಷ್ಠಾವಂತರಾಗಿದ್ದ ಬಹುಗುಣ ಮತ್ತು ನಂದಿನಿ ಸತ್ಪಥಿ-ಅಂಥ ಅನುಭವಿಗಳು ಅವರಿಂದ ದೂರ ಸರಿದರು. ಈ ಮೂವರೂ ಗಾಂಧಿಯವರಿಗೆ ಅತಿ ನಿಕಟರಾಗಿದ್ದರಾದರೂ ಸಂಜಯ್ ಗಾಂಧಿ ನಿರ್ಮಿತ ರಾಜಕೀಯ ಪರಿಸ್ಥಿತಿಯಿಂದಾಗಿ ಹೊರಬರುವಂತೆ ಅವರನ್ನು ಬಲವಂತಕ್ಕೊಳಪಡಿಸಿತು. ಇಂದಿರಾನ್ನು ಅಧಿಕಾರದಿಂದ ಉಚ್ಚಾಟನೆ ಮಾಡುವಂಥ ಉದ್ದೇಶ ಸಂಜಯ್ಗೆ ಇತ್ತು ಎಂಬ ವದಂತಿ ಹಬ್ಬಿತ್ತು. ಅಧಿಕೃತವಾಗಿ ಪ್ರತಿಪಕ್ಷ ಎಂಬ ಮನ್ನಣೆ ಇದ್ದರೂ ಕಾಂಗ್ರೆಸ್ ಇತರ ಸಣ್ಣ ಪಕ್ಷಗಳಂತಾಯಿತು. ಮೈತ್ರಿ ಕೂಟದ ಅಂಕೆಮೀರಿದ ಕಾದಾಟದಿಂದ ಆಡಳಿತ ನಡೆಸಲು ಸಾಧ್ಯವಾಗದಿದ್ದುರಿಂದ, ಜನತಾ ಸರಕಾರದ ಗೃಹ ಮಂತ್ರಿ ಚೌಧರಿ ಚರಣ್ ಸಿಂಗ್ ಭಾರತೀಯ ನ್ಯಾಯಾಲಯದಲ್ಲಿ ಸುಲಭವಾಗಿ ಸಾಬೀತುಪಡಿಸಲು ಸಾಧ್ಯವಾಗದಂತಹ ಅನೇಕ ನಿಯಮಗಳನ್ನು ಆಧಾರವನ್ನಾಗಿಸಿ ಇಂದಿರಾ ಮತ್ತು ಸಂಜಯ್ ಗಾಂಧಿಯವರ ಬಂಧನಕ್ಕೆ ಆದೇಶಿಸಿದರು. ಬಂಧನದಿಂದಾಗಿ ಗಾಂಧಿ ಸಂಸತ್ತಿನಿಂದ ಉಚ್ಚಾಟಿತರಾದಂತಾಯಿತು.ಅನುಸರಿಸಲಾದ ಈ ಕಾರ್ಯತಂತ್ರ ವಿಪತ್ಕಾರಕವಾಗಿ ಅವರಿಗೇ ತಿರುಗುಬಾಣವಾಯಿತು. ಎರಡು ವರ್ಷಗಳ ಹಿಂದಷ್ಟೇ ಅವರ ನಿರಂಕುಶಾಧಿಕಾರೀ ವರ್ತನೆಯಿಂದ ಬೇಸತ್ತಿದ್ದ ಜನತೆ ಅವರ ಮೇಲೆ ಅನುಕಂಪದ ಮಳೆ ಸುರಿದರು. ಬಂಧಿಸಿದ್ದು ಮತ್ತು ದೀರ್ಘಕಾಲೀನ ವಿಚಾರಣೆಗೆ ಅವರನ್ನು ಗುರಿಪಡಿಸಿದ್ದೇ ಈ ಅನುಕಂಪದ ಗಾಳಿ ಬೀಸಲು ಕಾರಣವಾಯಿತು. ಇಂದಿರಾರ (ಅಥವಾ "ಅದೊಂದು ಹೆಣ್ಣು" ಎಂದು ಕೆಲವರು ಅವರನ್ನು ಮೂದಲಿಸಿದರು) ವಿರುದ್ಧದ ದ್ವೇಷ ಮಾತ್ರ ಜನತಾ ಮಿತ್ರ ಪಕ್ಷಗಳನ್ನು ಒಂದುಗೂಡಿಸಿತ್ತು. ಸಮಾನ ಮನಸ್ಕತೆ ಎಂಬುದು ಮಾಯವಾಯಿತು. ಮಂದುವರೆದ ಈ ಅಂತಃಕಲಹವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಇಂದಿರಾ ಸಫಲರಾದರು. ಅವರು ಮತ್ತೆ ಭಾಷಣ ನೀಡಲು ಪ್ರಾರಂಭಿಸಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎಸಗಿದ "ತಪ್ಪುಗಳಿಗಾಗಿ" ಕ್ಷಮೆಯಾಚಿಸಿದರು. ದೇಸಾಯಿಯವರು 1979ರ ಜೂನ್ನಲ್ಲಿ ರಾಜಿನಾಮೆ ನೀಡಿದರು, ಮತ್ತು ಚರಣ್ ಸಿಂಗ್ ಅವರನ್ನು ರೆಡ್ಡಿಯವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಅವರ ಸರಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದಾಗಿ ಗಾಂಧಿ ಭರವಸೆ ನೀಡಿದರು. ಸ್ವಲ್ಪ ದಿವಸಗಳ ನಂತರ, ಅವರು ಆರಂಭದಲ್ಲಿ ನೀಡಿದ್ದ ಬೆಂಬಲವನ್ನು ಅಲ್ಪ ಕಾಲದಲ್ಲೇ ಹಿಂದೆಗೆದುಕೊಂಡರು. ರಾಷ್ಟ್ರಪತಿ ರೆಡ್ಡಿ 1979ರ ಚಳಿಗಾಲದಲ್ಲಿ ಸಂಸತ್ತನ್ನು ವಿಸರ್ಜಿಸಿದರು. ನಂತರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿತು. 1980ರಲ್ಲಿ, ಇಂದಿರಾ ಗಾಂಧಿ ಸರಕಾರವು ಶ್ರೀಲಂಕಾದಲ್ಲಿ LTTE ಮತ್ತು ಇತರ ತಮಿಳು ಉಗ್ರಗಾಮಿಗಳಿಗೆ ಹಣ, ಶಸ್ತ್ರಾಸ್ತ್ರ ಮತ್ತು ಸೇನಾ ತರಬೇತಿ ಒದಗಿಸಿತು.[26]
1980ರ ಆರಂಭದಲ್ಲಿ, US ಡಾಲರ್ ಎದುರು ರೂಪಾಯಿ ಮೌಲ್ಯ 40% ಕುಸಿದು, ಒಂದು ಡಾಲರ್ಗಿದ್ದ 7ರೂ. 12ಕ್ಕೆ ಜಿಗಿಯಿತು. ಕುಸಿತವನ್ನು ತಡೆಯಲು ಇಂದಿರಾ ಆಡಳಿತವು ವಿಫಲವಾಯಿತು.
ಈ ಲೇಖನದ ತಟಸ್ಥ ದೃಷ್ಟಿ ಕೋನವನ್ನು ಪರೀಕ್ಷಿಸಲು ಸೂಚಿಸಲಾಗಿದೆ. ನಾಮಕರಣದ ಬಗ್ಗೆ ಮಾತುಕತೆಯನ್ನು ಚರ್ಚೆ ಪುಟದಲ್ಲಿ ನೋಡಿ. (May 2009) |
ಗಾಂಧಿಯವರ ಮುಂದಿನ ವರ್ಷಗಳು ಪಂಜಾಬ್ನ ಸಮಸ್ಯೆಗಳೊಂದಿಗೆ ನಾಶವಾದವು. 1984ರ ಜೂನ್ನಲ್ಲಿ, ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಸಿಖ್ ಪ್ರತ್ಯೇಕತಾ ವಾದಿ ಗುಂಪು ಸಿಖ್ ಧರ್ಮದ ಪವಿತ್ರ ಮಂದಿರ ಸ್ವರ್ಣ ದೇವಾಲಯದೊಳಗೆ ಬಿಡಾರ ಹೂಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಜಮಾಯಿಸುತ್ತಿತ್ತು.[27] ಸ್ವರ್ಣ ಮಂದಿರ ಮತ್ತು ಆಸುಪಾಸಿನ ಕಟ್ಟಡಗಳಲ್ಲಿ ಸಾವಿರಾರು ನಾಗರಿಕರಿದ್ದಾಗಲೇ ಸೇನೆಯು ಗುಂಡು ಹಾರಿಸಿತು. ಇದರಿಂದ ಅನೇಕ ನಾಗರಿಕರು ಅನಾಹುತಕ್ಕೆ ತುತ್ತಾದರು.'ಆಪರೇಶನ್ ಬ್ಲೂ ಸ್ಟಾರ್' ಕಾರ್ಯಾಚರಣೆಗೆ ಗಾಂಧಿ ನೀಡಿದ ಆದೇಶ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ತೀವ್ರ ಖಂಡನೆಗೆ ಒಳಗಾಯಿತು.ಸೇನೆ ಮತ್ತು ನಾಗರಿಕರಿಗೆ ಉಂಟಾದ ಅನಾಹುತ ಎಷ್ಟು ಎಂಬ ಅಂಕಿಸಂಖ್ಯೆಯಲ್ಲಿ ಸರಕಾರ ನೀಡಿದ್ದಕ್ಕೂ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೊಟ್ಟಿದ್ದಕ್ಕೂ ವ್ಯತ್ಯಾಸವಿದೆ. 79 ಸೈನಿಕರು, ಮತ್ತು 492 ಸಿಖ್ರು ಅನಾಹುತಕ್ಕೆ ಈಡಾದರು ಎಂದು ಸರಕಾರ ಅಂದಾಜು ನೀಡಿದರೆ, ಅನೇಕ ಮಹಿಳೆಯರು ಮತ್ತು ಮಕ್ಕಳೂ ಒಳಗೊಂಡಂತೆ, ಸ್ವಯಂ ಸೇವಾ ಸಂಸ್ಥೆಗಳು ನೀಡುವ ಲೆಕ್ಕದ ಪ್ರಕಾರ 500 ಅಥವಾ ಅದಕ್ಕಿಂತ ಹೆಚ್ಚು ಯೋಧರು ಮತ್ತು 3,000 ಸಿಖ್ರು ಕಷ್ಟನಷ್ಟಕ್ಕೆ ಸಿಲುಕಿದರು. ಜೊತೆಗೆ ಅನೇಕ ಮಕ್ಕಳು ಮಹಿಳೆಯರು ಚಕಮಕಿಯಲ್ಲಿ ಘಾಸಿಗೊಂಡರು.[28] ನಾಗರಿಕ ಅವಘಡಕ್ಕೆ ಸಂಬಂಧಿಸಿದ ನಿಖರ ಅಂಕಿಅಂಶ ವಿವಾದಕ್ಕೆ ಸಿಕ್ಕಿಬಿದ್ದರೆ, ಯೋಗ್ಯ ದಾಖಲೆಗಳ ಕೊರತೆ ಮತ್ತು ದಾಳಿ ನಡೆಸಿದ ಸಮಯ ಮತ್ತು ಅದಕ್ಕೆ ಅನುಸರಿಸಲಾದ ರೀತಿನೀತಿಯು ಕಟು ಟೀಕೆಗೆ ಒಳಗಾಯಿತು. ಇಂದಿರಾರ ಈ ಕಾರ್ಯಾಚರಣೆಯನ್ನು ಸಿಖ್ರ ವಿರುದ್ಧ ಅವರು ಮಾಡಿದ ವೈಯಕ್ತಿಕ ದಾಳಿ ಎಂದು ಖಂಡಿಸಲಾಯಿತು. 'ಸಿಖ್ರಿಗೆ ಸ್ವಾತಂತ್ರ್ಯನೀಡಿ,ಅವರಿಗಾಗಿಯೇ ಖಲಿಸ್ಥಾನ ಎಂಬ ಪ್ರತ್ಯೇಕ ರಾಜ್ಯವನ್ನು ರಚಿಸಿ' ಎಂಬಂಥ ಸರಕಾರ ವಿರೋಧೀ ನೀತಿಯನ್ನು ಬಿತ್ತುತ್ತಿದ್ದ ಉಗ್ರಗಾಮಿ ಭಿಂದ್ರನ್ವಾಲೆ ಮತ್ತು ಆತನ ಸಹಚರರನ್ನು ಹೊರದಬ್ಬುವುದೇ ಈ ಮುತ್ತಿಗೆಯ ಮೂಲ ಉದ್ದೇಶ ಎಂದು ಕಾರ್ಯಾಚರಣೆಯನ್ನು ಇಂದಿರಾ ಸಮರ್ಥಿಸಿಕೊಂಡರು. ಸಿಖ್ ಸಮುದಾಯಕ್ಕೆ ಸೇರಿದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಎಂಬ ಗಾಂಧಿಯ ಅಂಗರಕ್ಷಕರಿಬ್ಬರು 1984ರ ಅಕ್ಟೋಬರ್ 31ರಂದು,1984ರ ಅಕ್ಟೋಬರ್ 31ರಂದು,ಸೇವಾ ಬಳಕೆಗಾಗಿ ಇದ್ದ ಆಯುಧಗಳಿಂದ ಅವರನ್ನು ಹತ್ಯೆಗೈದರು. ಈ ಹತ್ಯೆ ನಡೆದದ್ದು ನವದೆಹಲಿಯ ಪ್ರಧಾನ ಮಂತ್ರಿ ನಿವಾಸವಾಗಿದ್ದ ನವೆಂಬರ್ 1, ಸಫ್ದರ್ಜಂಗ್ ರಸ್ತೆಯಲ್ಲಿನ ಉದ್ಯಾನದಲ್ಲಿ. ಐರಿಷ್ ದೂರದರ್ಶನಕ್ಕೆ ಸಾಕ್ಷ್ಯಚಿತ್ರ ಚಿತ್ರೀಕರಿಸುತ್ತಿದ್ದ ಬ್ರಿಟಿಷ್ ನಟ ಪೀಟರ್ ಉಸ್ತಿನೊವ್ ಅವರಿಗೆ ಸಂದರ್ಶನ ನೀಡುವುದಕ್ಕಾಗಿ, ಇಂದಿರಾ ಸತ್ವಂತ್ ಮತ್ತು ಬಿಯಾಂತ್ ಕಾವಲಿನಲ್ಲಿದ್ದ ಕಿರು ದ್ವಾರವನ್ನು ದಾಟುತ್ತಿದ್ದಂತೆಯೇ ಈ ದುಷ್ಕೃತ್ಯ ನಡೆಯಿತು. ಇವರ ಬೆಂಗಾವಲಿನಲ್ಲಿ ವಿಕೆಟ್ ಗೇಟ್ನ್ನು ದಾಟಿದ್ದರು. ಘಟನೆ ಆಧಾರಿಸಿ ಈ ದುರ್ಘಟನೆ ನಡೆದಾಕ್ಷಣ ಲಭ್ಯವಾದ ಮಾಹಿತಿಯಂತೆ ಬಿಯಾಂತ್ ಸಿಂಗ್ ಪಾರ್ಶ್ವಾಯುಧವನ್ನು ಬಳಸಿ ಅವರಿಗೆ ಮೂರು ಬಾರಿ ಗುಂಡುಹಾರಿಸಿದರೆ, ಸತ್ವಂತ್ ಸಿಂಗ್ ಸ್ಟೆನ್ ಸಬ್ಮೆಷಿನ್ ಗನ್ ಬಳಸಿ 30 ಸುತ್ತು[29] ಗುಂಡಿನ ಸುರಿಮಳೆಗರೆದ. ಕೂಡಲೇ ಬಿಯಾಂತ್ ಸಿಂಗ್ನನ್ನು ಗುಂಡಿಕ್ಕಿ ಕೊಂದ ಇನ್ನಿತರ ಅಂಗರಕ್ಷಕರು ಸತ್ವಂತ್ ಸಿಂಗ್ಗೂ ಗುಂಡು ಹಾರಿಸಿ ಬಂಧಿಸಿದರು. ಅವರ ಅಧಿಕೃತ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲ್ಲೇ ಇಂದಿರಾ ಕೊನೆಯುಸಿರೆಳೆದರಾದರೂ ಹಲವಾರು ಘಂಟೆಗಳ ಕಾಲ ಅವರ ಸಾವನ್ನು ಪ್ರಕಟಿಸಲಿಲ್ಲ.ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗೆ ಅವರನ್ನು ಕೊಂಡೊಯ್ಯಲಾಯಿತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. 29 ಗುಂಡುಗಳು ದೇಹದ ಒಳ ಹೊಕ್ಕು ಹೊರ ಬಂದ ಗಾಯಗಳು ಇದ್ದವು ಎಂದು ಅಧಿಕೃತ ಮೂಲಗಳು ಹೇಳಿದರೆ, 31 ಗುಂಡುಗಳನ್ನು ಅವರ ದೇಹದಿಂದ ಹೊರಗೆ ತೆಗೆಯಲಾಯಿತು ಎಂದು ಮಿಕ್ಕ ಕೆಲವು ವರದಿಗಳು ಹೇಳುತ್ತವೆ. ಅವರ ಪಾರ್ಥಿವ ಶರೀರವನ್ನು ರಾಜ್ ಘಟ್ ಸಮೀಪ ನವೆಂಬರ್ 3ರಂದು ದಹಿಸಲಾಯಿತು. ಅವರ ಮರಣದ ನಂತರ, ಇಂದಿರಾಗೆ ನಿಷ್ಠರಾಗಿದ್ದ ಕೆಲವು ಕಾಂಗ್ರೆಸ್ ರಾಜಕಾರಣಿಗಳಿಂದ[ಸೂಕ್ತ ಉಲ್ಲೇಖನ ಬೇಕು] ಮತಾಂಧ ಅಭಿಮಾನ ಉಕ್ಕೇರಿತು. ನವದೆಹಲಿ ಮತ್ತು ಭಾರತದ ಅನೇಕ ಇತರ ನಗರಗಳಲ್ಲಿ ಸಿಖ್-ವಿರೋಧೀ ದಂಗೆ ತಲೆ ಎತ್ತಿತು. ದಂಗೆ ಹಿಂಸಾಚಾರಕ್ಕೆ ಇಳಿಯಿತು. ಸಾವಿರಾರು ಮುಗ್ದ ಸಿಖ್ರು ಇದಕ್ಕೆ ಬಲಿಯಾದರು. ಅವರ ಮನೆಗಳಿಗೆ ಬೆಂಕಿ ಇಡಲಾಯಿತು. ಆಸ್ತಿ ಪಾಸ್ತಿ ಮತ್ತು ಸಂಪತ್ತು ಲೂಟಿಯಾದವು. ಆಪರೇಶನ್ ಬ್ಲೂ ಸ್ಟಾರ್ನ ಪರಿಣಾಮವಾಗಿ ಏನಾಗುತ್ತದೆಯೊ ಎಂಬ ಇಂದಿರಾಗೆ ಇದ್ದ ಆತಂಕ ಮತ್ತು ತಳಮಳವನ್ನು ಅವರ ಗೆಳೆಯ ಮತ್ತು ಜೀವನ ಚರಿತ್ರೆಕಾರ ಪುಪುಲ್ ಜಯಕರ್ ನಂತರ ಹೊರಗೆಡವಿದರು. ಪವಿತ್ರ ಸ್ವರ್ಣ ಮಂದಿರದ ಮೇಲೆ ನಡೆಸಲಾದ ದಾಳಿಗೆ ಎದುರಾಗಿ ಗಾಂಧಿ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಈ ರೀತಿ ಪ್ರತೀಕಾರ ತೀರಿಸಿಕೊಂಡರು.
ಆರಂಭದಲ್ಲಿ ಇಂದಿರಾರ ಉತ್ತರಾಧಿಕಾರಿ ಆಯ್ಕೆ ಸಂಜಯ್ಆಗಿತ್ತು. ಆದರೆ ಅವರು ವಿಮಾನ ಅಪಘಾತದಲ್ಲಿ ಸಾವಿಗೀಡಾದ ನಂತರ ಒಲ್ಲದ ಮನಃಸ್ಥಿತಿಯಲ್ಲಿದ್ದ ರಾಜೀವ್ ಗಾಂಧಿಯನ್ನು ಒತ್ತಾಯಿಸಿದರು. ಪೈಲೆಟ್ ಹುದ್ದೆ ತ್ಯಜಿಸಿ ರಾಜಕೀಯಕ್ಕೆ ಧುಮುಕುವಂತೆ 1981ರ ಫೆಬ್ರವರಿಯಲ್ಲಿ ರಾಜೀವ್ ಗಾಂಧಿಯ ಮನವೊಲಿಸಿದರು. ಇಂದಿರಾ ಗಾಂಧಿ ಮರಣಾನಂತರ, ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾದರು. 1991ರ ಮೇನಲ್ಲಿ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ ಭಯೋತ್ಪಾದಕರಿಂದ ಅವರೂ ಸಹ ಹತ್ಯೆಗೆ ತುತ್ತಾದರು. ರಾಜಿವ್ರ ಪತ್ನಿ ಸೋನಿಯಾ ಗಾಂಧಿ ಸಂಯುಕ್ತ ಪ್ರಗತಿಪರ ಒಕ್ಕೂಟದ ನೇತೃತ್ವ ವಹಿಸಿ 2004ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಚುನಾವಣಾ ಗೆಲುವನ್ನು ಸಾಧಿಸಿದರು. ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಹುದ್ದೆಗೇರುವ ಅವಕಾಶವನ್ನು ನಿರಾಕರಿಸಿದರು. ಆದರೆ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುವ ಪ್ರಮುಖ ರಾಜಕೀಯ ಚುಕ್ಕಾಣಿ ಅವರ ಕೈಗೆ ಬಂತು. ಮಾಜಿ ಹಣಕಾಸು ಸಚಿವರಾಗಿದ್ದ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಈಗ ದೇಶವನ್ನು ಮುನ್ನಡೆಸುತ್ತಿದ್ದಾರೆ. ರಾಜೀವ್ರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಡ್ರ ಅವರೂ ಸಹ ರಾಜಕೀಯ ಪ್ರವೇಶಿಸಿದ್ದಾರೆ. ಸಂಜಯ್ ಗಾಂಧಿ ಮರಣಾನಂತರ ಅವರ ಪತ್ನಿ ಮನೇಕಾ ಗಾಂಧಿ ಮತ್ತು ಇಂದಿರಾ ಮಧ್ಯೆ ಭಿನ್ನಾಭಿಪ್ರಾಯ ಕುಡಿಯೊಡೆಯಿತು. ಇದರಿಂದಾಗಿ ಮೇನಕಾರನ್ನು ಪ್ರಧಾನ ಮಂತ್ರಿ ನಿವಾಸದಿಂದ[30] ಹೊರದಬ್ಬಲಾಯಿತು. ಮೇನಕಾ ಜೊತೆ ಹೊರದೂಡಲ್ಪಟ್ಟ ಸಂಜಯ್ ಪುತ್ರ en:Varun Gandhiವರುಣ್ ಗಾಂಧಿ ಕೂಡ ಈಗ ಪ್ರಮುಖ ಪ್ರತಿ ಪಕ್ಷ BJPಯ ಸದಸ್ಯರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.
ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1970ರಲ್ಲಿ ಬಲವಂತ ಸಂತಾನ ಶಕ್ತಿಹರಣ ಯೋಜನೆಯನ್ನು ಜಾರಿಗೆ ತಂದರು.ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಪುರುಷರು ಸಂತಾನ ಶಕ್ತಿಹರಣ ಚಿಕಿತ್ಸೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕೆಂಬುದು ಅಧಿಕೃತವಾಯಿತು. ಆದರೆ ಮದುವೆಯಾಗದ ಹಲವಾರು ಯುವಕರು, ರಾಜಕೀಯ ವಿರೋಧಿಗಳು ಮತ್ತು ಅಮಾಯಕ ಪುರುಷರೂ ಸಹ ಇದಕ್ಕೆ ಈಡಾದರು ಎಂದು ನಂಬಲಾಗಿದೆ. ಈ ಯೋಜನೆ ಭಾರತದಲ್ಲಿ ಸಾರ್ವಜನಿಕ ಜಿಗುಪ್ಸೆಯನ್ನು ನಿರ್ಮಿಸಿದ ಪರಿ ಈಗಲೂ ನೆನಪಾಗುತ್ತದೆ ಮತ್ತು ಖಂಡಿಸಲಾಗುತ್ತದೆ. ಇದರಿಂದಾಗಿ ಕುಟುಂಬ ಯೋಜನೆಯ ಬಗ್ಗೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ದೂಷಿಸಲಾಗಿದೆ. ಸರಕಾರದ ಇಂಥ ಯೋಜನೆಗಳಿಗೆ ದಶಕಗಳ ಕಾಲ ಅಡಚಣೆ ಉಂಟಾಯಿತು.[31] ಇಂದಿರಾ ಗಾಂಧಿ ಭಾರತ ಸುಸಂತಾನಶಾಸ್ತ್ರ ಸಮಾಜ ಎಂಬ ಸಂಸ್ಥೆಯ ಸದಸ್ಯರಾಗಿ ಸುಸಂತಾನಶಾಸ್ತ್ರದ ಕಲ್ಪನೆಗೆ ಪ್ರಬಲ ದಾರ್ಶನಿಕ ಮತ್ತು ವೈಯಕ್ತಿಕ ಗಾಢನಂಬಿಕೆಯನ್ನು ಹೊಂದಿದ್ದರು ಎಂಬುದನ್ನು ಈ ಸಂಗತಿಗಳು ಪ್ರಬಲವಾಗಿ ಬಿಂಬಿಸುತ್ತವೆ[ಸೂಕ್ತ ಉಲ್ಲೇಖನ ಬೇಕು].
ಪ್ರಚಲಿತ ಪುರುಷ-ಪ್ರಧಾನ ಸಮಾಜದಲ್ಲಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಪ್ರಭಾವಿ ನಾಯಕಿಯಾಗಿ ಇಂದಿರಾ ಗಾಂಧಿ ಭಾರತದ ಸ್ತ್ರೀ ಸಮುದಾಯದ ಸಂಕೇತವಾಗಿದ್ದಾರೆ. ಗಾಂಧಿಯವರಿಂದ ಗಳಿಸಲ್ಪಟ್ಟ ಗ್ರಾಮೀಣ ಜನರ ಅಭಿಮಾನವು ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಹಾಗೂ ನೆಹರು-ಗಾಂಧಿ ಕುಟುಂಬಕ್ಕೆ ಜನ ನೀಡುತ್ತಿರುವ ಬೆಂಬಲದಲ್ಲಿಯೂ ಸಹ ಅದರ ಪ್ರಭಾವವನ್ನು ಹೊಂದಿದೆ. ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರನ್ನು ಪೂಜ್ಯ ಭಾವನೆಯಿಂದ ಇಂದಿರಾ-ಅಮ್ಮ (ಅನೇಕ ಭಾಷೆಗಳಲ್ಲಿ "ಅಮ್ಮ" ಅಂದರೆ "ತಾಯಿ" ಎಂದರ್ಥ) ಎಂದು ಜನ ನೆನೆಯುತ್ತಾರೆ. ಅವರ ಗರೀಬಿ ಹಟಾವೊ ಘೋಷಣೆಯನ್ನು ರಾಜಕೀಯ ಪ್ರಚಾರ ಸಂದರ್ಭದಲ್ಲೆಲ್ಲಾ ಈಗಲೂ ಕಾಂಗ್ರೆಸ್ ಬಳಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಸ್ತುತ ಅಧ್ಯಕ್ಷೆಯೂ ಹಾಗೂ ಇಂದಿರಾ ಗಾಂಧಿ ಸೊಸೆಯೂ ಆಗಿರುವ ಸೋನಿಯಾ ಗಾಂಧಿಯವರ ಶೈಲಿಯು ಇಂದಿರಾ ಶೈಲಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ. 'ಇಂದಿರಾ ಆವಾಸ್ ಯೋಜನೆ'-ಗ್ರಾಮೀಣ ಜನರಿಗೆ ಅಲ್ಪ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಕೇಂದ್ರ ಸರಕಾರದ ಈ ಯೋಜನೆಗೆ ಇಟ್ಟಿರುವ ಹೆಸರೂ ಅವರದ್ದೇ ಆಗಿದೆ. ಹೊಸದೆಹಲಿಯ ವಿಮಾನ ನಿಲ್ದಾಣಕ್ಕೆ 'ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ಹೆಸರಿಟ್ಟು ಇವರನ್ನು ಗೌರವಿಸಲಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.