ಜೇನುಪ್ರಪಂಚ
From Wikipedia, the free encyclopedia
ಮಾನವನಿಗಿಂತಲು ಮೊದಲಾಗಿ ಜೇನು ನೊಣಗಳು ಪ್ರಪಂಚದ ಮೇಲೆ ಕಾಣಸಿಕೊಂಡವು ಎಂಬುದನ್ನು ಪಳಿಯುಳಿಕೆಗಳು ಕಾಣಿಸಿರುವ ಆಧಾರದಿಂದ ಅರಿಯಬಹುದು.ಸ್ಪೇನ್ ದೇಶದ ವೆಲಾಸಿಯಾ ಸೆರ್ಬಿಯದಲ್ಲಿ ಮಾನವ ಆಕೃತಿಯೊಂದು ಮರದಿಂದ ಜೇನು ಎರಿಗಳನ್ನು ಇಳಿಸಿ ತರುವ ಕುರುಹುಗಳು ಇವೆ. ಇದರಿಂದ ಮಾನವನು ಬಹು ಹಿಂದೆಯೇ ಜೇನು ಸವಿ ಅರಿತಿರಬಹುದು ಎನ್ನಬಹುದು ಮತ್ತು ಜೇನು ಸಿಹಿಗಾಗಿ ಆಸೆಪಡುತ್ತಿದ್ದನು ಎನ್ನಲೂಬಹುದು. ಎಂಟು ಸಾವಿರ ವರ್ಷಗಳಷ್ಟು ಮೊದಲೇ ಮಾನವ ಜನಾಂಗ ಜೇನು ಉತ್ಪತ್ತಿಗಳ ಆಕರ್ಷಣೆ ಹೊಂದಿರುವ ಪುರಾವೆಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಜೇನು ನೊಣಗಳ ವೈಜ್ಞಾನಿಕ ಅಧ್ಯಯನ ಹದಿನೆಂಟನೇ ಶತಮಾನದಲ್ಲಿ ಪ್ರಾರಂಭವಾಯಿತೆನ್ನಬಹುದು. ಅದುವರೆಗೂ ಜೇನು ಪ್ರಪಂಚದಲ್ಲಿ ಅಡಗಿದ ಜೀವವೈಜ್ಞಾನಿಕ ಹಾಗೂ ಕೌಟುಂಬಿಕ ಅಧ್ಯಯನದ ಅರಿವು ಹೊಂದುವ ಯತ್ನಗಳು ಹೆಚ್ಚಾಗಿ ಪ್ರಾರಂಭ ಆಗಿರಲಿಲ್ಲ ಎನ್ನಬಹುದು. ಮಾನವನ ಅರಿವು ಮತ್ತು ಸಾಮರ್ಥ್ಯ ಅಭಿವೃದ್ಧಿಯಾದಂತೆ ಜೇನು ಕುಟುಂಬದ ಬಗ್ಗೆ ಕುತೂಹಲ ಮತ್ತೂ ಅದರಿಂದ ಹೊಂದಬಹುದಾದ ಪ್ರಯೋಜನಗಳ ಬಗ್ಗೆಯೂ ಆಸಕ್ತಿ ಬೆಳೆಯತೊಡಗಿತು. ಈಜಿಪ್ಟ ದೇಶದಲ್ಲಿ ಜೇನು ನೊಣಗಳ ಚಿತ್ರಗಳನ್ನು ರಾಜರ ಕಿರೀಟಗಳಲ್ಲಿ ಮತ್ತು ಸಾಹಸ ಕಾರ್ಯ ಗೈದವರಿಗೆ ಚಿನ್ನದ ಜೇನುನೊಣಗಳನ್ನು ನೀಡಿ ಬಹುಮಾನಿಸಲಾಗುತ್ತಿತ್ತು. ಈ ಹಿಂದಿನ ಕಾಲದಲ್ಲಿ ಸತ್ತು ಕೊಳೆತ ಪ್ರಾಣಿಗಳ ದೇಹದಿಂದ ಜೇನುನೊಣಗಳು ಹುಟ್ಟುತ್ತವೆಂದು ನಂಬಿದ್ದರು ಮತ್ತು ಜೇನು ಹುಳುಗಳನ್ನು (ಲಾರ್ವ) ಹೂವುಗಳಿಂದ ಸಂಗ್ರಹಿಸುತ್ತವೆಂದು ನಂಬಿದ್ದರು. ಅರಿಸ್ಟಾಟಲ್ನು ( 322 ಬಿ.ಸಿ.) ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು. ನಂತರದ ಕಾಲದಲ್ಲಿ ಪಲಾದಿಯಸ್, ಪ್ಲಿನಿ, ಮೋಲೇ, ಮೊದಲಾದ ಮಹನೀಯರು ಜೇನು ಕುರಿತು ಬರೆದು ಜನರಿಗೆ ಹೆಚ್ಚಿನ ಅರಿವು ಮೂಡಿಸಿದರು.
ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು.ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ ದಿವೋ ರಜಸ ಪೃಥಿವ್ಯಾಃ. ಸಹಸ್ರಂ ಶಂಸಾ ಎತಯೇ ಗವಿಷ್ಟೌ ಸರ್ವಾಂ ಇತ ತಾಂ ಉಪಯತಾ ಪಿಬದ್ದ್ಯೆ..
ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ನೊಣಗಳ ಪಾಲನೆ ಮತ್ತು ಅಧ್ಯಯನ ಪ್ರಾರಂಭಿಸಿದ ಪಾಶ್ಚಾತ್ಯರಲ್ಲಿ ಸಾಮರ್ದಾಮ್, ಆಂಟೋನಿ, ಪಿ-ಡಿ-ರಿಯೋಮರ್, ಚಾರ್ಲ್ಸಬಾನೆಟ್ ಮತ್ತು ಅಂಧ ಸ್ವಿಸ್ ವಿಜ್ಞಾನಿ ಪ್ರಾನ್ಸಕೋಯಿಸ್ ಹ್ಯೂಬರ್ ಇನ್ನೂ ಮುಂತಾದ ಅನೇಕರನ್ನು ಹೆಸರಿಸಬಹುದು. 18-19 ನೇ ಶತಮಾನದ ಮಧ್ಯಂತರದಲ್ಲಿ ಜೇನು ಪಾಲನಾ ಸಹಕಾರಿಯಾಗಿರುವ ಆವಿಷ್ಕಾರಗಳನ್ನು ಕಾಣಬಹುದು.ಆ ವೇಳೆಗಾಗಲೇ ಬುಟ್ಟಿಗೆ ಮಣ್ಣು ಲೇಪಿಸಿ ಜೇನು ದಾರಿಯನ್ನೂ ಕಲ್ಪಿಸಿ ಪಾಲನೆ ಮಾಡುವ ತಂತ್ರ ಅರಿಯಲಾಗಿತ್ತು.1768-70 ರಲ್ಲಿ ಥಾಮಸ್ ವೈಲ್ಡಮ್ಯಾನ್ ಬುಟ್ಟಿಯಲ್ಲಿ ಸಾಕಾಣಿಕೆ ಮಾಡುತ್ತಿದ್ದ ಜೇನು ಕುಟುಂಬದಲ್ಲಿ ಬುಟ್ಟಿಯ ಒಳ ಮೇಲುಭಾಗದಲ್ಲಿ ಮರದ ಚಿಕ್ಕ ಕಡ್ಡಿಗಳನ್ನು ಒಂದರ ಪಕ್ಕ ಇನ್ನೊಂದರಂತೆ ಇರಿಸಿದಾಗ ಜೇನು ನೊಣಗಳು ಮರದ ಕಡ್ಡಿಗಳಲ್ಲಿ ಎರಿಗಳು ರಚಿಸುತ್ತವೆ ಎಂಬುದನ್ನು ಅದೇ ರೀತಿ ಅಂತಸ್ತು ಕಲ್ಪಿಸಿದಾಗಲೂ ಹಾಗೆ ಎರಿ ರಚಿಸುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಇದು ಮುಂದಿನ ದಿನಗಳಲ್ಲಿ ಚಲಿಸುವ ಚೌಕಟ್ಟುಗಳಿರುವ ಜೇನು ಪೆಟ್ಟಿಗೆಗಳ ಹೊಸ ಆವಿಷ್ಕಾರಕ್ಕೆ ಮಾರ್ಗವಾಯಿತು. ಲ್ಯಾರೆಂಜೊ ಲೋರೆಯಾನ್ ಲ್ಯಾಂಗಸ್ಟ್ರೊತ್ 1810-1895 ಇವರೊಬ್ಬ ರೈತಕುಟುಂಬದಿಂದ ಬಂದವರು.ಇವರು ಸಂಯುಕ್ತಸಂಸ್ತಾನದಿಂದ ಯಾರ್ಖಶೈರ್ ಗ್ರಾಮಕ್ಕೆ ವಲಸೆ ಬಂದವರು. ಇವರು ಹ್ಯೊಬರನು ಮೊದಲು ಮಾಡಿದ್ದ ಅನ್ವೇಷಣೆಗಳನ್ನು ಪ್ರಾಯೋಗಿಕ ಸ್ತರದಿಂದ ನೈಜ ಆಚರಣೆಗೆ ಒಳಪಡಿಸಿದರು. ಜೇನುನೊಣಗಳ ಚಲನ ವಲನದ ದಾರಿಗಾಗಿ ಎರಿಗಳ ಮಧ್ಯದಲ್ಲಿ ಅಂತರವನ್ನು ಕಾಪಾಡುವುದು ಹಾಗೂ ಚಲಿಸುವ ಚೌಕಟ್ಟುಗಳಿಂದ ಕೂಡಿದ ಒಂದು ಪೆಟ್ಟಿಗೆಯ ಆಕಾರ ಮತ್ತು ಅಳತೆಯನ್ನು ನಿರೂಪಿಸಿ ನಿರ್ಮಿಸಿದರು. ಇವರು ತಾವು ಸಂಶೋಧಿಸಿ ನಿರ್ಮಿಸಿದ ಜೇನು ಪೆಟ್ಟಿಗೆಗೆ 1853ರಲ್ಲಿ ಸರ್ಕಾರದಿಂದ ಸ್ವಾಮಿತ್ವದ ಅನುಮೋದನೆ ಗಳಿಸಿದರು.( ಹಕ್ಕುಸ್ವಾಮ್ಯತೆ) ಇದೇ ಲ್ಯಾಂಗ್ ಸ್ಟ್ರೋತ್ ಮಾದರಿ ಜೇನು ಪೆಟ್ಟಿಗೆ ಎಂಬುದಾಗಿ ಇಂದಿಗೂ ಆಚರಣೆಯಲ್ಲಿರುವುದು. ಈ ಮಾದರಿಯನ್ನು ಅಳವಡಿಸಿಕೊಂಡು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಸ್ಥಳೀಯ ಪರಿವರ್ತನೆ ಹಾಗೂ ಸ್ಥಳೀಯ ಹೆಸರೊಂದಿಗೆ ಮುಖ್ಯ ಲಕ್ಷಣಗಳನ್ನು ಉಳಿಸಿಕೊಂಡು ವ್ಯಾಪಕವಾಗಿ ಬಳಕೆಗೆ ಬಂದಿತು. ಈ ತೆರನಾದ ಚಲಿಸುವ ಮಾದರಿಯ ಜೇನು ಪೆಟ್ಟಿಗೆಗಳು ಜೇನು ಕೃಷಿಯ ಕ್ಷಿಪ್ರ ಬೆಳವಣಿಗೆಗೆ ಹೆದ್ದಾರಿಯಾಯಿತು. ಆದ್ದರಿಂದ ಶ್ರಿಯುತ ಎಲ್ಎಲ್ ಲ್ಯಾಂಗ್ ಸ್ಟ್ರೋತ್ ರವರನ್ನು ಆಧುನಿಕ ಜೇನು ಕೃಷಿಯ ಪಿತಾಮಹ ಎನ್ನಲಾಗುತ್ತದೆ. ಅಮೆರಿಕದಲ್ಲಿ ಲ್ಯಾಂಗ್ ಸ್ಟ್ರೋತ್ ಹಾಗೂ ಡ್ಯಾಡೆಂಟ್, ಇಂಗ್ಲೆಂಡಿನಲ್ಲಿ ಬ್ರಿಟಿಷ್-ಸ್ಟಾಂಡರ್ಡ್ ಮತ್ತು ಸುಧಾರಿತ ಡ್ಯಾಡಂಟ್ ಮತ್ತು ನ್ಯಾಷನಲ್, ಭಾರತದಲ್ಲಿ ಸುಧಾರಿತ ಲ್ಯಾಂಗ್ ಸ್ಟ್ರೋತ್ ಮತ್ತು ನ್ಯೊಟನ್ ಹೆಸರುಗಳಲ್ಲಿ ಚಾಲ್ತಿಗೆ ಬಂದವು. ನಮ್ಮ ದೇಶದಲ್ಲಿ ಸುಮಾರು 50 ವರುಷಗಳ ತರುವಾಯ ಅಂದರೆ ೧೯೧೧ರಲ್ಲಿ ಜೇನು ಪೆಟ್ಟಿಗೆಗಳು ಪರಿಚಯಿಸಲ್ಪಟ್ಟವು. ಈಗ ನಮ್ಮ ದೇಶದಲ್ಲಿ ಸರ್ಕಾರವು ಐ.ಎಸ್.ಐ.- ಎ ಮತ್ತು ಬಿ, ಮಾದರಿಯಲ್ಲಿರುವ ಜೇನು ಪೆಟ್ಟಿಗೆಗಳನ್ನೇ ಬಳಸುವಂತೆ ಸೂಚಿಸಿದೆ. ಜೇನು ಕುಟುಂಬದಲ್ಲಿರುವ ನೊಣಗಳ ಸಂಖ್ಯಾಬಲವನ್ನು ಲಕ್ಷ್ಯದಲಿರಿಸಿಕೊಂಡು ಉತ್ತರ ಮತ್ತು ದಕ್ಷಿಣ ಭಾರತದ ಅಗತ್ಯಕ್ಕೆ ಅನುಗುಣವಾಗಿ ಇವು ರೂಪಿಸಲ್ಟಿವೆ. ಈಗಿತ್ತಲಾಗಿ ಮರದ ಬದಲು ಪಾಲಿಸ್ಟ್ರಿನ್ ಉಪಯೋಗಿಸಿದ ಪೆಟ್ಟಿಗೆಯೂ ಬಳಸಲ್ಪಡುತ್ತಿದೆ.