ಅಲೆಕ್ಸಾಂಡರ್
From Wikipedia, the free encyclopedia
ಅಲೆಕ್ಸಾಂಡರ್ ದಿ ಗ್ರೇಟ್(ಪ್ರ.ಶ.ಪೂ. 356-323.) ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜನಾದ ಇತ ಅರಿಸ್ಟಾಟಲ್ ಎಂಬ ತತ್ವಜ್ನ್ಯಾನಿಯ ಶಿಷ್ಯ.. ಈತ ಇತಿಹಾಸದ ಒಂದು ಬಹುದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು. ಇವನ ಸಾಮ್ರಾಜ್ಯ ಗ್ರೀಸಿನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು. ಪರ್ಷಿಯ ಸಾಮ್ರಾಜ್ಯವನ್ನು ಸೋಲಿಸಿ ಭಾರತದವರೆಗೂ ದಂಡೆತ್ತಿ ಬಂದ ಮಹಾನಾಯಕ. ತಂದೆ ಫಿಲಿಪ್, ರಾಜನಾಗಿ ದೇಶವನ್ನು ಸುಭದ್ರ ತಳಹದಿಯ ಮೇಲೆ ಸತತವಾಗಿ ದುಡಿದು ಮಗನ ಪ್ರಗತಿಗೆ ಕಾರಣನಾದ. ತಂದೆಯ ಮರಣಾನಂತರ ಪ್ರ.ಶ.ಪೂ. 336ರಲ್ಲಿ ತನ್ನ 20ನೆಯ ವಯಸ್ಸಿನಲ್ಲಿ ಅಲೆಕ್ಸಾಂಡರ್ ಪಟ್ಟಕ್ಕೆ ಬಂದು ದೇಶದಲ್ಲಿ ತಲೆ ಎತ್ತುತ್ತಿದ್ದ ಅಶಾಂತಿ ಅನಾಯಕತೆಗಳನ್ನು ನಿವಾರಿಸಿದ. ತಂದೆಯಂತೆ ರಾಜ್ಯವಿಸ್ತರಣೆಗೆ ಮನಸ್ಸು ಮಾಡಿದ. ಬಾಲ್ಯದಲ್ಲೇ ತಂದೆಯ ನೇತೃತ್ವದಲ್ಲಿ ಪಡೆದ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಇವನಲ್ಲಿದ್ದ ಪ್ರತಿಭೆಯೂ ಸೇರಿ ಯುವಕ ಅಲೆಕ್ಸಾಂಡರನ ವ್ಯಕ್ತಿತ್ವ ಪ್ರಜ್ವಲಿಸತೊಡಗಿತು. ಈತ ಎತ್ತರವಾದ ಆಳು, ಸ್ಫುರದ್ರೂಪಿ, ದೇಹದಾರ್ಢ್ಯವುಳ್ಳ, ಸಂಕಲ್ಪದಂತೆ ಗುರಿಸಾಧಿಸುವ ದೃಢಬುದ್ಧಿ ಹೊಂದಿದ್ದ ಈತನಲ್ಲಿ ತಾಯಿಯ ಬುದ್ಧಿವಿಚಾರ, ಅಹಂಕಾರ, ಉದ್ರೇಕಗಳು ಸೇರಿಕೊಂಡಿದ್ದವು.
ಅಲೆಕ್ಸಾಂಡರ್ ದಿ ಗ್ರೇಟ್ | |
---|---|
ಮೆಸಿಡೊನ್ನ ಬೆಸಿಲಿಯುಸ್, ಈಜಿಪ್ಟ್ನ ಫೆರೊಹ್ (ಚಕ್ರವರ್ತಿ), ಪರ್ಷಿಯದ ಶಹಂಷಾ | |
ಅಲೆಕ್ಸಾಂಡರ್ ದಿ ಗ್ರೇಟ್ | |
ರಾಜ್ಯಭಾರ | ೩೩೬–೩೨೩ ಕ್ರಿಪೂ |
ಹುಟ್ಟು | ೨೦ ಜುಲೈ ೩೫೬ ಕ್ರಿಪೂ |
ಹುಟ್ಟುಸ್ಥಳ | ಪೆಲ್ಲ, ಮೆಸಿಡೊನ್ ಗ್ರೀಸ್ |
ಸಾವು | ೧೦ ಜೂನ್ ಅಥವಾ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨) |
ಸಾವಿನ ಸ್ಥಳ | ಬೆಬಿಲಾನ್ |
ಪೂರ್ವಾಧಿಕಾರಿ | ಮೆಸಿಡೊನ್ನ ಫಿಲಿಪ್ ೨ |
ಉತ್ತರಾಧಿಕಾರಿ | ಮೆಸಿಡೊನ್ನ ಅಲೆಕ್ಸಾಂಡರ್ ೪ |
Consort to | ಬ್ಯಾಕ್ಟ್ರಿಯದ ರೊಕ್ಸಾನ, ಪರ್ಷಿಯಾದ ಸ್ಟೆಟೀರ |
ಸಂತತಿ | ಮೆಸಿಡೊನ್ನ ಅಲೆಕ್ಸಾಂಡರ್ ೪ |
ತಂದೆ | ಮೆಸಿಡೊನ್ನ ಫಿಲಿಪ್ ೨ |
ತಾಯಿ | ಎಪಿರಸ್ನ ಒಲಿಂಪಿಯಾಸ್ |
ಗ್ರೀಕ್ ನಾಗರಿಕತೆ ಸಂಸ್ಕೃತಿಗಳನ್ನು ಈತ ಬಹುವಾಗಿ ಮೆಚ್ಚಿದ. ಹೋಮರನ ಇಲಿಯಡ್ ಮಹಾಕಾವ್ಯ ಇವನ ತುದಿನಾಲಗೆಯಲ್ಲಿತ್ತು. ಪ್ರಸಿದ್ಧ ವಿದ್ವಾಂಸನಾದ ಅರಿಸ್ಟಾಟಲ್ ಇವನ ಗುರು. ತತ್ತ್ವಶಾಸ್ತ್ರ, ವೈದ್ಯ, ವಿಜ್ಞಾನಗಳಲ್ಲಿ ಅಪಾರ ಆಸಕ್ತಿಯುಳ್ಳವ. ಗ್ರೀಕ್ ರಾಜ್ಯಗಳನ್ನು ಸೋಲಿಸಿದನಾದರೂ ತಂದೆಯಂತೆ ಉದಾರ ನೀತಿಯನ್ನನುಸರಿಸಿ ಅವರ ಬೆಂಬಲವನ್ನು ಗಳಿಸಿಕೊಂಡ. ತಂದೆಯ ಕೊಲೆಗೆ ಕಾರಣರೆಂದು ಕಂಡುಬಂದ ಲೈಸೆಸ್ಟಿಸ್ನ ರಾಜರನ್ನು ತೀರಿಸಿ ತನ್ನ ವೈರಿಗಳೆನಿಸಿದ ಇತರರನ್ನೂ ನಿರ್ನಾಮ ಮಾಡಿದ. ಅನಂತರ ದಕ್ಷಿಣಕ್ಕೆ ತಿರುಗಿ ಥೆಸಲೆಯನ್ನು ಗಿಟ್ಟಿಸಿ ಗ್ರೀಕ್ ಒಕ್ಕೂಟದಲ್ಲಿ ಮುಂದಿನ ಏಷ್ಯ ದಿಗ್ವಿಜಯ ಕಾರ್ಯದ ಮಹಾದಂಡನಾಯಕನಾಗಿ ಆಯ್ಕೆಯಾದ. ಆದರೂ ಉತ್ತರ ಗ್ರೀಸಿನ ಇಲಿರಿಯ ಮತ್ತು ಥ್ರೇಸ್ ಪ್ರದೇಶಗಳಲ್ಲಿ ಅಲೆಕ್ಸಾಂಡರನಿಗೆ ವಿರುದ್ಧವಾಗಿ ದಂಗೆಗಳಾದುವು. ಆದರೆ ಅಲೆಕ್ಸಾಂಡರ್ ತತ್ಕ್ಷಣ ಆ ಪ್ರದೇಶಗಳಿಗೆ ಹೋಗಿ ದಂಗೆಗಳನ್ನು ಅಡಗಿಸಿದ. ಥ್ರೇಸ್ನಲ್ಲಿ ಯಾರೋ ಅಲೆಕ್ಸಾಂಡರನನ್ನು ಕೊಂದುಹಾಕಿದರೆಂಬ ಸುಳ್ಳು ಸಮಾಚಾರ ಥೀಬ್ಸ್ ನಗರದಲ್ಲಿ ಹರಡಿ ಥೀಬ್ಸನ್ನರು ಮ್ಯಾಸಿಡೋನಿಯದ ರಕ್ಷಣ ಸೈನ್ಯಗಳಿಗೆ ಮುತ್ತಿಗೆ ಹಾಕಿದರು. ಅಲೆಕ್ಸಾಂಡರ್ ಥೀಬ್ಸ್ ನಗರದ ಮೇಲೆ ದಾಳಿಮಾಡಿ ಆ ನಗರವನ್ನು ನಾಶ ಮಾಡಿದ. ಹೆಂಗಸರು, ಮಕ್ಕಳು ಎಂದು ಲಕ್ಷಿಸದೆ ಸು. 30,000 ಥೀಬ್ಸನ್ನರನ್ನು ಸೆರೆಹಿಡಿದು ಗುಲಾಮರನ್ನಾಗಿಸಿದ. ಗ್ರೀಕರ ಸೊಲ್ಲು ಅಡಗಿ ಅವರು ಅಲೆಕ್ಸಾಂಡರನನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳ ಬೇಕಾಯಿತು. ಗ್ರೀಸ್ ದೇಶ ಅಲೆಕ್ಸಾಂಡರನ ಹತೋಟಿಗೆ ಒಳಗಾಯಿತು.