ಅಗಸ್ತ್ಯ
From Wikipedia, the free encyclopedia
ಅಗಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬನು. ಪ್ರಜಾಪತಿ ಬ್ರಹ್ಮನ ಪುತ್ರ ಮರೀಚಿ. ಈ ಮರೀಚಿಯ ಮಗ ಕಶ್ಯಪ. ಈ ಕಶ್ಯಪರಿಗೆ ಅದಿತಿಯಲ್ಲಿ ಮಿತ್ರಾವರುಣರೆಂಬ ಯಮಳರು ಜನಿಸಿದರು. ಒಮ್ಮೆ ಈ ಮಿತ್ರಾವರುಣರು ಭವ್ಯವಾದ ಯಜ್ಞವೊಂದನ್ನು ಮಾಡಲು ತೊಡಗಿದರು. ಅದಕ್ಕಾಗಿ ಎಲ್ಲ ದೇವತೆಗಳೂ, ಮುನಿಗಳೂ, ಪಿತೃದೇವತೆಗಳೂ ಬಂದು ಸೇರಿದ್ದರು. ಅಲ್ಲಿಗೆ ಅಪ್ಸರೆಯರಲ್ಲಿ ಅತಿ ಲಾವಣ್ಯವತಿಯಾದ ಊರ್ವಶಿಯು ಬಂದಳು. ದೀಕ್ಷಾಬದ್ಧರಾದ ಮಿತ್ರಾವರುಣರು ಈಊರ್ವಶಿಯನ್ನು ನೋಡಿದರು. ಅವಳನ್ನು ನೋಡುವ ಮಾತ್ರದಿಂದಲೇ ಅವರ ಮನಸ್ಸಿನಲ್ಲಿ ವಿಕಾರವುಂಟಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ ಅವರ ಬ್ರಹ್ಮಚರ್ಯ ಸಡಿಲಗೊಂಡಿತು. ಅವರಿಬ್ಬರಿಗೂ ವೀರ್ಯಸ್ಖಲನವಾಯಿತು. ಅದನ್ನು ಕುಂಭವೊಂದರಲ್ಲಿ ರಕ್ಷಿಸಿದರು. ಅದರಿಂದ ಎರಡು ಶಿಶುಗಳು ಹುಟ್ಟಿಬಂದವು. ಹಾಗೆ ಹುಟ್ಟಿದ ಮೊದಲ ಶಿಶುವೇ ಅಗಸ್ತ್ಯ. ಆದ್ದರಿಂದಲೇ ಇವರು ಕುಂಭಸಂಭವ. ಅಗಸ್ತ್ಯ ಮಹರ್ಷಿ ವಾತಾಪಿಯನ್ನು ಜೀರ್ಣಿಸಿಕೊಂಡವರು. ಇವರು ವಿಂಧ್ಯಪರ್ವತದ ಸೊಕ್ಕನ್ನು ಮುರಿದವರು. ಈ ಮಹರ್ಷಿಗಳು ಒಮ್ಮೆ ಇಡೀ ಸಮುದ್ರವನ್ನು ಕುಡಿದರು. ಶ್ರೀ ರಾಮ ರಾವಣನೊಂದಿಗೆ ಯುದ್ಧ ಮಾಡುತ್ತಿರುವಾಗ ಅಲ್ಲಿಗೆ ಅಗಸ್ತ್ಯ ಮಹರ್ಷಿ ಬಂದು ಶ್ರೀರಾಮನಿಗೆ ಆದಿತ್ಯ ಹೃದಯ ಸ್ತೋತ್ರವನ್ನು ಉಪದೇಶ ಮಾಡಿದರು.