ಅರಬ್ಬೀ ಸಾಹಿತ್ಯ
From Wikipedia, the free encyclopedia
ಅರಬ್ಬೀ ಸಾಹಿತ್ಯ : ಪ್ರಪಂಚದ ಎಲ್ಲ ಶೇಷ್ಠ ಸಾಹಿತ್ಯಗಳಂತೆ, ಇಸ್ಲಾಮಿಗೆ ಹಿಂದಿನ ಅರಬ್ಬರ ಬೌದ್ಧಿಕ ಜೀವನ ಕಾವ್ಯರೂಪದಲ್ಲಿ ಪ್ರಕಟವಾಯಿತು. ಧರ್ಮಬಾಹಿರರು ತಮ್ಮ ಆವೇಶಕಾಲದಲ್ಲಿ ಉಚ್ಚರಿಸುತ್ತಿದ್ದ ಅಶರೀರವಾಣಿಗಳ ಪ್ರಾಸಬದ್ಧ ಗದ್ಯದಲ್ಲಿ ಅರಬೀ ಕಾವ್ಯ ಪ್ರಾರಂಭವಾಯಿತು. ಕಾಲಕ್ರಮದಲ್ಲಿ ಅದು ಹೆಚ್ಚು ಛಂದೋಬದ್ಧ ರೂಪ ಪಡೆಯಿತು. ತದನಂತರ ಅದು 16 ಮುಖ್ಯ ಛಂದಸ್ಸುಗಳಾಗಿವರ್ಗೀಕೃತವಾಯಿತು. ಅರಬ್ಬರ ಪ್ರತಿಭಾಸಂಪನ್ನ ಸಾಹಿತ್ಯ ಈ ಛಂದಸ್ಸುಗಳ ಚೌಕಟ್ಟಿನಲ್ಲಿ ಮೈದೋರಿತು. ಕಾಲಕ್ಕೆ ವಶವಾಗಿ ನಾಶಹೊಂದದೆ ಉಳಿದಿರುವ ಈ ಕಾವ್ಯದ ತುಣುಕುಗಳು ಪ್ರ.ಶ. 5ನೆಯ ಶತಮಾನಕ್ಕೆ ಈಚಿನವು . ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಪದ್ಯ ಗಳು ಆ ಕವಿಗಳಿಗಿದ್ದ ಭಾಷಾಪ್ರಭುತ್ವ ಮತ್ತು ಉಕ್ತಿಕೌಶಲವನ್ನು ತೋರುತ್ತವೆ. ಉಕಾಜ್ ಮತ್ತು ಮೆಕ್ಕ ಪಟ್ಟಣಗಳಲ್ಲಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗಳು ಕಲೆತು ಕವಿತ್ವದಲ್ಲಿ ಒಬ್ಬರೊಡನೊಬ್ಬರು ಸ್ಪರ್ಧಿಸುತ್ತಿದ್ದುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಸ್ಥಳೀಯವಾದ ಅನೇಕ ಉಪಬಾಷೆಗಳಿದ್ದರೂ ಅರೇಬಿಯದ ಎಲ್ಲ ಭಾಗಗಳ ಕವಿಗಳೂ ತಮ್ಮ ಕವಿತ್ವಕ್ಕೆ ಒಂದೇ ವಿಧವಾದ ಭಾಷೆಯನ್ನು ಉಪಯೋಗಿಸಿರುವ ಅಂಶ ಒಂದು ಒಗಟಾಗಿಯೇ ಉಳಿದಿದೆ. ಇವರು ರಚಿಸಿದ ಕವಿತೆಗಳಿಗೆ ಕಾಸಿಡ (ಪ್ರಗಾಥ) ಗಳೆಂದು ಹೆಸರು. ಅವುಗಳ ಪ್ರಮಾಣ 60 ಸಾಲುಗಳಿಂದ ಹಿಡಿದು 100 ಸಾಲುಗಳವರೆಗೆ, ಅತ್ಯಂತ ಪ್ರಾಚೀನ ಕಾಲದಿಂದಲೂ ಪ್ರಗಾಥಕ್ಕೆ ಒಂದು ಸಾಂಪ್ರದಾಯಿಕವಾದ ಕವಿತಾ ತಂತ್ರವಿದೆ. ಅದು ಸಾಮಾನ್ಯವಾಗಿ, ಪಾಂಥನೊಬ್ಬ ತನ್ನ ಮಿತ್ರರೂಂದಿಗೆ ಸುಖಜೀವನ ನಡೆಸಿ ಸ್ವಗ್ರಾಮಕ್ಕೆ ಹಿಂದಿರುಗಿ ಬಂದು, ಅದು ಪಾಳು ಬಿದ್ದಿರುವುದನ್ನೂ, ಮಿತ್ರರಿಂದ ತಾನು ಅಗಲಿದುದನ್ನೂ ನೆನೆದುಕೊಂಡು ಪರಿತಪಿಸುವುದರ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಬಳಿಕ ಆತ ಅದರ ಹಿಂದಿನ ನಿರ್ಮಲ ಸೌಂದರ್ಯವನ್ನು ಈಗಣ ಅದರ ಉಳಿಕೆಯ ಹಾಳುತನ ದೊಂದಿಗೆ ಹೋಲಿಸುತ್ತಾನೆ; ಅಂದಿನ ಸುಖಗಳನ್ನು ನೆನೆಯುತ್ತಾನೆ, ಕಾಸಿಡದಲ್ಲಿ ಮರಳು ಗಾಡಿನ ಮತ್ತು ಬೆದೂಯಿನ್ ಸಮಾಜದ ವಿವಿಧ ಮುಖಗಳು, ಪಾಂಥನ ಒಂಟೆ ಅಥವಾ ಕುದುರೆ, ಇತರ ಪ್ರಾಣಗಳ ಜೀವೋಲ್ಲಾಸ, ಮೃಗಯಾವಿನೋದ, ಇಲ್ಲದಿದ್ದರೆ ಚಂಡಮಾರುತದ ಕುಶಲವರ್ಣನೆಇತ್ಯಾದಿ ಚಿತ್ರಗಳು ಸಾಲುಸಾಲಾಗಿ ಬರುತ್ತವೆ. ಕಥೆಯ ಮುಖ್ಯ ವಿಷಯವೇನೇ ಇರಲಿ ಈ ನಿಯತಪ್ರಸಂಗಗಳನ್ನು (ಅಥವಾ ಪ್ರಣಯ ಪೀಠಿಕೆಯನ್ನು) ಬಿಡದೆ ಹೇಳುತ್ತಾನೆ. ಈ ಕಾಸಿಡಗಳಲ್ಲಿ ಕೆಲವು (ಅವುಗಳ ಸಂಖ್ಯೆ 7 ಅಥವಾ 10) ಅವುಗಳ ಆಂತರಿಕ ಸೌಂದರ್ಯಕ್ಕಾಗಿಯೂ ಕ¯ಗಾಗಿಯೂ ಸಾಹಿತ್ಯ ಸಮ್ಮೇಳನಗಳಲ್ಲಿ ಬಹುಮಾನಿತವಾದವೆಂದು ಊಹಿಸಲಾಗಿದೆ. ಅವನ್ನು ಮು ಅಲ್ಲಾಕತ್ (ಎಂದರೆ ತಮ್ಮ ಅಮೋಘವಾದ ಗುಣದ ದೆಸೆಯಿಂದ ಕಾಬಾದ ಮೇಲೆ ನೇತು ಹಾಕಿದ ಪದ್ಯಗಳು) ಎಂದು ಕರೆಯಲಾಗಿದೆ. ಇಸ್ಲಾಮಿಗೆ ಪೂರ್ವಭಾವಿಯಾಗಿ ಅರೇಬಿಯದ ಕೆಲವು ಆದರ್ಶಕವಿಗಳಲ್ಲಿ ಪ್ರಥಮ ಸ್ಥಾನ ಇಮ್-ರಉಲ್-ಕೈಸ್ಗೆ (560) ದೊರೆತಿದೆ. ಆತ ದೇಶಭ್ರಷ್ಟನಾದ ದೊರೆಯೊಬ್ಬನ ಮಗ; ಜೀವಮಾನದ ಕೊನೆಯ ವರ್ಷಗಳನ್ನು ತಂದೆಯ ಮರಣಕ್ಕೆ ಮುಯ್ಯಿ ತೀರಿಸುವ ಉದ್ಯಮದಲ್ಲಿ ಕಳೆದ ಅವನ ಮು ಅಲ್ಲಾಕತ್ (ಪ್ರಗಾಥ) ಮರಳುಗಾಡಿನ ವರ್ಣನೆಗಾಗಿಯೂ ಮುಚ್ಚುಮರೆಯಿಲ್ಲದ ಪ್ರಣಯ ಪೀಠಿಕೆಗಾಗಿಯೂ ಪ್ರಸಿದ್ಧವಾಗಿದೆ. ಇವರಂತೆ ಲಬೀದ್ (675), ತರಾಫ (550), ತ’ಅಬ್ಬತ ಷರ್ರ (530), ಅಷ್-ಷನ್ಫಾರ (510) ಅನರ (615), ಮೊದಲಾದ ದರೋಡೆಕಾರ (ರಾಬರ್) ಕವಿಗಳು ಮರಳುಗಾಡಿನ ಜೀವನದ ಚಿತ್ರಗಳನ್ನು ಕಳಕಳಿಸುವಂತೆ ವರ್ಣಿಸಿದ್ದಾರೆ. ಅಮ್ರ್-ಬ್-ಕುಲ್ತುಮ್ (600), ಹರಿತ್-ಬ್-ಹಿಲ್ಲಿಜ್ಜ (580) ಎಂಬುವರು ತಮ್ಮ ಕುಲದವರ ಮಹತ್ ಕಾರ್ಯಗಳನ್ನು ಕುರಿತು ಹಾಡುಗಳನ್ನು ಕಟ್ಟಿದ್ದಾರೆ. ಜುಹೇರ್ನಿಗೆ (631) ಉಪದೇಶ ಮಾಡುವುದರಲ್ಲೂ ಧರ್ಮವನ್ನು ಕುರಿತು ಹೇಳುವುದರಲ್ಲೂ ಇಷ್ಟ. ಆತ ತನ್ನ ಪದ್ಯಗಳನ್ನು ತಮ್ಮ ಭ್ರಾತೃಘಾತಕ ವೈರವನ್ನು ಬಗೆಹರಿಸಿಕೊಂಡ ಇಬ್ಬರು ಕುಲನಾಯಕರ ಪ್ರಶಂಸೆಗೆ ಮೀಸಲಿಟ್ಟಿದ್ದಾನೆ. ಇಸ್ಲಾಮಿಗೆ ಪೂರ್ವದ ಅರೇಬಿಯದಲ್ಲಿ ಅರಬ್ಬರ ಎರಡು ರಾಜಾಸ್ಥಾನಗಳಿದ್ದುವು. ಫಸ್ಸನಿದ್ ವಂಶದವರು ಆಳುತ್ತಿದ್ದ ಪ್ರದೇಶ ಅರೇಬಿಯದ ಈಶಾನ್ಯ ಭಾಗಗಳಲ್ಲಿ ಹಬ್ಬಿತ್ತು. ಲಖ್ಮಿದ್ ವಂಶದವರು ಆಳುತ್ತಿದ್ದ ಪ್ರದೇಶ ಯೂಫಟೀಸ್ ನದಿಯ ಪಶ್ಚಿಮಕ್ಕೆ ಹರಡಿತ್ತು. ಫಸ್ಸನಿದ್ ಭಾಗದ ಸಂಸ್ಕೃತಿಯಿಂದ ಪ್ರಭಾವಿತವಾಯಿತು. ಎರಡು ದರ್ಬಾರುಗಳೂ ರೋಮ್ ಮತ್ತು ಪರ್ಷಿಯಗಳ ನಡುವೆ ಜರುಗಿದ ಯುದ್ಧದಲ್ಲಿ ಮುಖ್ಯ ಪಾತ್ರವನ್ನು ವಹಿಸಿದವು . ಈ ರಾಜ್ಯಗಳು ತಮ್ಮ ರಾಜಸಭೆಗೆ ಬರುತ್ತಿದ್ದ ಅನೇಕ ಕವಿಗಳನ್ನು ಪೋತ್ಸಾಹಿಸು ತ್ತಿದ್ದುವು. ಈ ರೀತಿಯಲ್ಲಿ ಪ್ರಗಾಥ ಬೆದೂಯಿನ್ ಜನಾಂಗದ ಉತ್ತಮ ಕಾವ್ಯವಾಗಿ ಬೆಳೆದುದಲ್ಲದೆ ರಾಜಸಭೆಗೆ ಯೋಗ್ಯವಾದ ರಚನೆಯೂ ಆಯಿತು. ಈ ಕಾರಣದಿಂದ ಮೆಸಪೊಟೇಮಿಯ ಅರಸರ ಪ್ರಭಾವಕ್ಕೊಳಗಾದ ಕವಿಗಳ ಒಂದು ಪಂಗಡವೂ ಕ್ರೈಸ್ತರಾದ ಸಿರಿಯ ದೇಶದ ಫಸ್ಸನಿದ್ ದೊರೆಗಳ ಆಶಯಕ್ಕೆ ಸೇರಿದ ಕವಿಗಳ ಮತೊಂದು ಪಂಗಡವೂ ಏರ್ಪಟ್ಟುವು. ಈ ಕವಿಗಳ ಪ್ರಭಾವದಿಂದ ಬೈಜಾಂಟೈನ್ ಮತ್ತು ಅರಾಮೇಯಿಕ್ ಸಂಸ್ಕೃತಿ ದ£ಗಾಹಿ ಅಲೆಮಾರಿ ಜನರ ಕೈಸೇರಿತು. ಈ ಕವಿಗಳ ಪೈಕಿ ಜುಬ್ಬಿಯನ್ನರ ಆನ್-ನಬಿಘ (604), ಅಲ್ಅಷ (629) ಮುಖ್ಯರು. ಆನ್-ನಬಿಘನ ಕವಿತೆಯಲ್ಲಿ ಆತನಿದ್ದ ರಾಜಾಸ್ಥಾನದ ಪ್ರಭಾವಗಳು ಎದ್ದು ಕಾಣುತ್ತವೆ. ಅವುಗಳಲ್ಲಿ ಕಂಡುಬರುವ ನೀತಿ ಮತ್ತು ಉಪದೇಶಗಳ ಧ್ವನಿಗಾಗಿ ಆತ ತುಂಬ ಪ್ರಸಿದ್ಧನಾಗಿದ್ದಾನೆ. ಗಾಯಕ ವೃತ್ತಿಯ ಅಲ್’ಅಷನ ಯಶಸ್ಸು ಆತನ ವಿಡಂಬನ ಮತ್ತು ವಿಲಾಸ ಗೀತಗಳನ್ನವಲಂಬಿಸಿದೆ. ಇಸ್ಲಾಮಿಗೆ ಪೂರ್ವದ ಪದ್ಯಗಳಲ್ಲಿ ಕಂಡುಬರುವ ಹಾಗೆ, ಈ ಮರಳುಗಾಡಿನ ಮಕ್ಕಳು ತಾವು ತಂಗಲು ಅನುಕೂಲವಾದ ಹುಲ್ಲುಗಾವಲುಗಳನ್ನೂ ಫಲವತ್ತಾದ ಭೂಮಿಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ಅವರು ಪ್ರಕೃತಿಯನ್ನು ಬಹಳ ಸೂಕ್ಷ್ಮ ದೃಷ್ಟಿಯಿಂದ ನೋಡತಕ್ಕವರು ಮತ್ತು ಇದ್ದುದನ್ನು ಇದ್ದ ಹಾಗೆ ಗ್ರಹಿಸುವುದು ಅವರ ಸಹಜ ಮನೋಧರ್ಮ. ಮರಳುಗಾಡಿನ ಏಕಪ್ರಕಾರದ ಜೀವನವನ್ನು ಮುಚ್ಚುಮರೆಯಿಲ್ಲದೆ ಹೇಳಿ, ಮನುಷ್ಯ ಮತ್ತು ಪ್ರಾಣಿಗಳ ಸಹಜ ಪ್ರವೃತ್ತಿಗಳನ್ನು ವರ್ಣಿಸುವುದರಲ್ಲಿ ಬಹಳ ಆಸಕ್ತಿಯನ್ನು ತೋರಿದ ಬೆದೂಯಿನ್ ಕವಿಗಳ ಬಗೆಗೆ ಅವರದೆಲ್ಲ ಒಂದೇ ರಾಗವೆಂದೂ ಭಾಷಾಪಂಡಿತರಿಗೆ ಮಾತ್ರ ರುಚಿಸಬಲ್ಲ ಶಬ್ದಪ್ರಯೋಗಗಳಿಂದ ತುಂಬಿವೆ ಎಂದೂ ಮುಂದಿನ ತಲೆಮಾರಿನವರು ಭಾವಿಸಿದರು. ಇಸ್ಲಾಮಿಗೆ ಹಿಂದಿನ ಕವಿತೆಗಳಲ್ಲಿ ಯಾವ ತಾತ್ತ್ವಿಕ ವಿಚಾರವಾಗಲಿ ದೈವನಿಷ್ಠೆಯಾಗಲಿ ಇಲ್ಲವೆಂಬುದು ನಿಜ. ಬೆದೂಯಿನ್ ಅರಬ್ಬರು ನೀತಿಯಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಕುಲಾಚಾರಕ್ಕೆ ತುಂಬ ಮರ್ಯಾದೆ ಕೊಡುತ್ತಿದ್ದರು. ಅವರನ್ನು ಆಕರ್ಷಿಸಿದ ಕೆಲವು ಜನಪ್ರಿಯ ವಿಷಯಗಳೆಂದರೆ ಶೌರ್ಯ, ಪ್ರಣಯ, ಶೋಕ, ಅವಮಾನ, ಪ್ರತಿಷ್ಠಾ ವೈಭವ, ಆತಿಥ್ಯ - ಮೊದಲಾದುವು. ಅವರು ಧಾರ್ಮಿಕ ಕ್ರಿಯಾವಿಧಿಗಳನ್ನು ಆಚರಿಸುತ್ತಿದ್ದುದು ಶೃದ್ಧಾಸಕ್ತಿಯಿಂದಲ್ಲ; ಬರಿಯ ಕುಲಾಚಾರವೆಂದು. ಯಾವ ದೇವರೇ ಆಗಲಿ ಅವನಿದಿರು ದೀನಬಾವವನ್ನು ತೋರುವುದು ಅವರ ಸಹಜಪ್ರವೃತ್ತಿಗೆ ಸರಿಹೊಂದುತ್ತಿರಲಿಲ್ಲ. ಆದರೆ ದಕ್ಷಿಣ ಅರಬ್ಬರ ವರ್ತನೆ ತದ್ವಿರುದ್ಧವಾದುದು. ಅವರ ಜೀವನದ ಸ್ಥಿತಿಗತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕುಲದೇವತೆಗಳಿಗೆ ಅಂಟಿಕೊಂಡಿದ್ದವು. ಉತ್ತರ ಅರಬ್ಬರು ಸ್ವೇಚ್ಛಾಪ್ರವೃತ್ತಿಯುಳ್ಳವರು, ಚಪಲರು, ತಿಂದು ಕುಡಿದು ವಿಲಾಸಮಗ್ನರಾಗುವುದೇ ಅವರ ಜೀವನದ ಗುರಿ. ಸದ್ಧರ್ಮ ಮಾರ್ಗದಿಂದ ತಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಅವರಿಗೆಷ್ಟರಮಟ್ಟಿಗೂ ಸೇರುತ್ತಿರಲಿಲ್ಲವೆಂಬುದು ಪ್ರವಾದಿಗಳಾದ ಮಹಮ್ಮದರ ಉಪದೇಶಗಳನ್ನು ಪರಿಗ್ರಹಿಸುವುದರಲ್ಲಿಅವರು ತೋರಿದ ಶುದ್ಧ ಮೂರ್ಖಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಒಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಾಚೀನ ಅರೇಬಿಯದ ಕವಿತೆ ಅರಬ್ಬರ ಎಲ್ಲ ರಾಗೋದ್ರೇಕಗಳನ್ನೂ ಕುಲಾಚಾರಗಳನ್ನೂ ಒಳಗೊಂಡ ಅವರ ಕುಲಜೀವನವನ್ನು ಪ್ರತಿಫಲಿಸುತ್ತ್ತದೆ. ಕುದುರೆ ಜೂಜಿನ ಯಾವುದೋ ಒಂದು ಸಣ್ಣ ನಿಯಮಭಂಗದಂಥ ಅಲ್ಪ ವಿಷಯಗಳು ಹೇಗೆ ಕುಲಗಳಲ್ಲಿ ತಳಮಳ ಎಬ್ಬಿಸಿ ವರ್ಷಗಟ್ಟಲೆ ನಡೆಯುವ ಯುದ್ಧಗಳನ್ನು ಪ್ರೇರಿಸುತ್ತಿದ್ದವು , ಅವು ಹೇಗೆ ಕಾವ್ಯ ವಸ್ತುಗಳಾಗುತ್ತಿದ್ದವು ಎಂಬುದವನ್ನು ಈ ಕವಿತೆ ತಿಳಿಸಿಕೊಡುತ್ತದೆ. ಆದರೂ ಇಸ್ಲಾಂ ಪೂರ್ವದ ಕವಿತೆಗಳಲ್ಲಿ ಕುಲಗಳೊಳಗಿನ ಯುದ್ಧ ಸಾಹಸಗಳು, ಆತಿಥ್ಯಕ್ಕೆ ಹೆಸರಾದ ಮನುಷ್ಯರ ಪ್ರಶಂಸೆಗಳು, ಲೋಭಿಗಳು ಮತ್ತು ಹೇಡಿಗಳನ್ನು ಕುರಿತ ನಿಂದೆಗಳುಇವುಗಳ ವರ್ಣನೆಗಳಿವೆ. ಹೀಗೆ ಅವು ಅರಬ್ಬರ ಕುಲಜೀವನ, ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಆಕರಗ್ರಂಥಳಾಗಿವೆ. ಯುದ್ಧಕಾಲದಲ್ಲಿ ಆತ್ಮಗೌರವ ಸಂರಕ್ಷಕರಾಗಿರುತ್ತ ಶಾಂತಿಸಮಯದಲ್ಲಿ ಜ್ಞಾನಿಗಳಂತೆ ಇದ್ದ ಈ ಕವಿಗಳ ಸುತ್ತಲೂ ಕುಲಗಳ ಮಹತ್ಕಾರ್ಯಗಳ ಚರಿತ್ರೆ ಹಬ್ಬಿಕೊಂಡಿತು. ಮುಂದೆ ಇದು ಕುಲದೊಳಗಿನ ಕಾಳUಗಳ ಇತಿಹಾಸವಾಗಿ ಬೆಳೆಯಿತು. ಜನಜನಿತವಾಗಿ, ಜನರ ಕಲ್ಪನೆಯಲ್ಲಿ ಅದ್ಭುತ ನಾಟಕೀಯ ಪ್ರಸಂಗಗಳೆನಿಸಿದ ಈ ಕಥಾನಕಗಳು, ಅವುಗಳಲ್ಲಿನ ಕೆಲವು ಭಾಷಣಗಳು, ಕಣಿ ಹೇಳುವವರ ಪ್ರಾಸಬದ್ಧ ರಚನೆಗಳು - ಇವು ಹೊರತು ಇಸ್ಲಾಮಿಗೆ ಹಿಂದಿನ ಕಾಲದಲ್ಲಿ ಗದ್ಯ ಸಾಹಿತ್ಯವಿದ್ದುದರ ಕುರುಹು ಕಂಡುಬರುವುದಿಲ್ಲ. ಆದರೆ ಖಗೋಳ, ವಾಯುಗುಣ, ಸಾಮುದ್ರಿಕ ವಂಶಾನುಕ್ರಮಣಿಕೆ - ಇವುಗಳ ತಿಳಿವಳಿಕೆ ಇಸ್ಲಾಮಿಗೆ ಹಿಂದಿನ ಅರೇಬಿಯದಲ್ಲಿ ಇದ್ದಿತೆಂಬುದು ತಿಳಿದು ಬಂದಿದೆ. ಲೇಖನಕಲೆ ಅರೇಬಿಯದ ಜನಕ್ಕೆ ತಿಳಿದೇ ಇರದಿರಲಿಲ್ಲವೆಂದು ಹೇಳಲಾಗದಿದ್ದರೂ ಅಷ್ಟಾಗಿ ಜನರಲ್ಲಿ ಹರಡದಿದ್ದುದು ಅಲ್ಲಿನ ಗದ್ಯ ಸಾಹಿತ್ಯದ ಕ್ಷಾಮಕ್ಕೆ ಕಾರಣವಿರಬಹುದು. ಇದು ಹೇಗಾದರೂ ಇರಲಿ, ಅರೇಬಿಯದ ಸಾಹಿತ್ಯದಲ್ಲಿ ನಮ್ಮ ಕಣ್ಣಿಗೆ ಬೀಳುವ ಪ್ರಥಮ ಪುಸಕ ಯಾವುದೆಂದರೆ - ಜೀವನವನ್ನು ಶೃದ್ಧಾಸಕ್ತಿಗಳಿಂದ ಋಜುಮಾರ್ಗದಲ್ಲಿ ನಡೆಸಿಕೊಳ್ಳಲು ಅನುಕೂಲವಾಗುವಂತೆ ಧಾರ್ಮಿಕ ನೀತಿಗಳನ್ನೂ ಸಾಮಾಜಿಕ ನಿಯಮಗಳನ್ನೂ ವಿಧಿಸಿರುವ ಕುರಾನು-ಇಸ್ಲಾಂ ಮತದ ಪವಿತ್ರಶಾಸನ, ಸಮಸ್ತ ಜನಕ್ಕೂ ಉಪದೇಶಿಸಲೆಂದು ಪ್ರವಾದಿ ಮಹಮ್ಮದನಿಗೆ ದೇವರೇ ವಿಶದಗೊಳಿಸಿದ ಶಾಶ್ವತ ವಚನವಿದೆಂದು ಮುಸ್ಲಿಮರು ಭಾವಿಸುತ್ತಾರೆ ಅದನ್ನು ಸಾಹಿತ್ಯದ ಮಹಾಕೃತಿಯೆಂದು ಪರಿಭಾವಿಸುವುದಾದರೆ ಅದೊಂದು ಅಸದೃಶಗ್ರಂಥ; ಶೈಲಿಯೊಂದರಲ್ಲೇ ಅಲ್ಲದೆ ವಿಷಯದಲ್ಲೂ ಅದು ಅನುಕರಣೀಯವೆಂದು ಎಲ್ಲ ಕಾಲದ ಅರಬ್ಬರೂ ಏಕಕಂಠದಿಂದ ಸಾರಿದ್ದಾರೆ. ಅರಬ್ಬೀ ಸಾಹಿತ್ಯದ ಬೆಳವಣಿಗೆಯ ಮೇಲೆ ಅದು ಬೀರಿರುವ ಪ್ರಭಾವ ಬಹುವಿಸ್ತೃತವೂ ಬಹುಮುಖವೂ ಆದದ್ದು, ಕುರಾನು ಆವಿರ್ಭವಿಸುವುದಕ್ಕೆ ಬಹಳ ಹಿಂದೆಯೇ ಇಸ್ಲಾಮ್ ಪೂರ್ವದ ಕವಿಗಳು ಅರಬೀ ಸಾಹಿತ್ಯಕ್ಕೇ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದ ರೂ ಮುಸ್ಲಿಮರಿಗೆ ದಿವ್ಯ ಹಾಗೂ ಪ್ರಥಮ ಧರ್ಮಶಾಸ್ರ್ತವೆನಿಸಿದ್ದ ಕುರಾನಿನ ಸ್ಥಾನಮಾನದ ದೆಸೆಯಿಂದ ಅರಬ್ಬೀ ವಿಶ್ವಭಾಷೆಯಾಯಿತು; ಅಲ್ಲದೆ ಎಲ್ಲರೂ ಬಳಸುವಂಥ ಸಾಹಿತ್ಯಮಾಧ್ಯಮವಾಯಿತು. ತಾನು ಹುಟ್ಟಿ ಹರಡಿದ ನೂರು ವರ್ಷಗಳೂಳಗೆ ಪಶ್ಚಿಮಕ್ಕೆ ಬೈಜಾಂಟೈನ್ ಸಾಮ್ರಾಜ್ಯದ ಪ್ರಾಂತ್ಯಗಳನ್ನೂ ಪೂರ್ವಕ್ಕೆ ಸಸ್ಸೇನಿಯನ್ ಚಕ್ರಾದಿಪತ್ಯವನ್ನೂ ಒಳಗೊಂಡು ಪಿರನೀಸಿನಿಂದ ಪಾಮಿರ್ ವರೆಗೆ ಹಬ್ಬಿದ ಇಸ್ಲಾಮಿನ ಹರಹು ಮುಸ್ಲಿಮರ ದೈವ ಜ್ಞಾನವನ್ನೂ ಸಂಸ್ಕೃತಿಯನ್ನೂ ಆಶ್ಚರ್ಯಕರವಾದ ರೀತಿಯಲ್ಲಿ ಪ್ರವರ್ಧಮಾನಕ್ಕೆ ತಂದಿತು. ಅರಬ್ಬರ ವಿಜಯಗಳ ಸಾರತಮಪರಿಣಾಮ ಯಾವುದೆಂದರೆ, ತಾವು ಗೆದ್ದ ಜನಗಳನ್ನು ಕ್ರಮೇಣ ಇಸ್ಲಾಮಿನ ಭ್ರಾತೃವರ್ಗದಲ್ಲಿ ಸೇರಿಹೋಗುವಂತೆ ಮಾಡುವುದು. ಅವರು ತಮ್ಮೊಂದಿಗೆ ತಮ್ಮ ವಿಶಿಷ್ಟ ಸಂಸ್ಕೃತಿಗಳ ಅನುಭವಗಳನ್ನೂ ನಡವಳಿಕೆಗಳನ್ನೂ ತಂದರು. ಆ ಕಾರಣದಿಂದ ಸಾಹಿತ್ಯವನ್ನು ಮೇಲುಮಟ್ಟಕ್ಕೇರಿಸಿ ಅಭಿವೃದ್ಧಿಗೊಳಿಸಿದರು; ಜೊತೆಗೆ ಅರಬ್ಬರೂ ಅರಬ್ಬರಲ್ಲದವರೂ ಅರಬ್ಬೀ ಜ್ಞಾನಭಂಡಾರವನ್ನು ಬೆಳೆಸಲು ಕಲಿತರು. ಪ್ರವಾದಿಗಳ ಜೀವಿತಕಾಲದಲ್ಲಿ ಇಸ್ಲಾಮಿನ ಪವಿತ್ರ ಗ್ರಂಥದ ರಚನೆಯಾಗುತ್ತಿರುವಾಗ ಅರಬೀ ಅಕ್ಷರಮಾಲಿಕೆ ಅಸಮಗ್ರವಾಗಿತ್ತು. ಸಮಗ್ರವಾದ ಅಕ್ಷರಮಾಲಿಕೆಯನ್ನೂ ವ್ಯಾಕರಣ ಸೂತ್ರಗಳನ್ನೂ ರಚಿಸಿ ಗ್ರಂಥವನ್ನು ಅದರ ಪಾಠ ಕೆಡದ ಹಾಗೆ ಸಂರಕ್ಷಿಸುವುದು ಕ್ಷಿಪ್ರವಾಗಿ ನಡೆಯಬೇಕಾದ ಕೆಲಸª£ಸಿತು. ಕುರಾನನ್ನು ವಾಖ್ಯಾನಿಸುವುದಕ್ಕೆ ಶಬ್ದಕೋಶ ಮತ್ತು ವ್ಯಾಕರಣಗಳನ್ನು ಎಚ್ಚರಿಕೆಯಿಂದ ಕಲಿಯುವುದು ಅಗತ್ಯ ವಾಯಿತು. ಇಸ್ಲಾಮಿಗೆ ಪೂರ್ವದ ಕವಿಗಳ ಪ್ರಯೋಗಗಳನ್ನು ನೋಡಿಕೊಂಡು ಶಬ್ದಗಳಿಗೆ ಖಚಿತವಾದ ಅರ್ಥಗಳು ನಿರ್ಣೀತ ವಾದವು. ಈ ಕೆಲಸದ ನಿಮಿತವಾಗಿ ಇಸ್ಲಾನ್ ಪೂರ್ವದ ಕವಿಗಳ ಕೃತಿಗಳ ಸಂಗ್ರಹಣೆ ಅವಶ್ಯಕವಾಯಿತು. ಈ ರೀತಿಯಲ್ಲಿ ಭಾಷಾವಿಜ್ಞಾನ ಮತ್ತು ಶಬ್ದಕೋಶ ರಚನೆವಿಧಾನಗಳು ಪರಿಷ್ಕೃತವಾದವು. ಪ್ರವಾದಿಗಳ ಸದಾಚಾರಗಳನ್ನೂ ಸೂಕ್ತಿಗಳನ್ನೂ ಕ್ರೋಢೀಕರಿಸುವುದರ ಮೂಲಕ ಕುರಾನಿನ ತತ್ತ್ವಗಳ ಅನುಸಂಧಾನ ಸ್ಥಿರೀಕೃತವಾಯಿತು. ಈ ಮೇರೆಗೆ ಪವಿತ್ರ ಸಂಪ್ರದಾಯ ಶಾಸ್ರ್ತ (ಹಾಡಿತ್) ಜನ್ಮ ತಾಳಿತು. ಕುರಾನ್ ಮತ್ತು ಸಂಪ್ರದಾಯಗಳ ಕಲಿಕೆ ದೈವ ಮತ್ತು ಧರ್ಮಶಾಸ್ರ್ತ ಗಳ ನಿರ್ಮಾಣಕ್ಕೆ ಒಳ್ಳೆ ತ¼ಪಾಯವನ್ನು ಒದಗಿಸಿತು. ಭಾಷಾವಿಜ್ಞಾನದ ವ್ಯಾಸಂಗಗಳು ಇಸ್ಲಾಮ್ ಪೂರ್ವದ ಅರೇಬಿಯದ ಚರಿತ್ರೆಯ ವಿಷಯ ದಲ್ಲೂ ಕುಲಗಳ ವಂಶಾನುಕ್ರಮಣಿಕೆಗಳ ವಿಚಾರದಲ್ಲೂ ಸಂಶೋಧನೆ ನಡೆಸಲು ದಾರಿ ತೋರಿದವು. ಇಸ್ಲಾಮ್ ಪೂರ್ವದ ಅರೇಬಿಯದ ಪೌರಾಣಿಕ ಕxಗಳನ್ನು ಸಂಗ್ರಹಿಸುವಲ್ಲಿ ಬೈಬಲ್ ಮತ್ತು ಜೂಡೋ ಕ್ರಿಶಿಯನ್ ಮೂಲಗಳಿಂದ ಅನೇಕ ವಿಷಯಗಳನ್ನು ಎರವಲು ತಂದುಕೊಳ್ಳಲಾಗಿದೆ. ಅಂದಿನ ಎಳೆಯ ಗದ್ಯ , ಮುಂದಿನ ಎಲ್ಲ ಗದ್ಯ ದ ಬರೆಹಳಿಗೂ ಒಳ್ಳೆ ಮಾದರಿಯ ಮೇಲುಪಂಕ್ತಿಯನ್ನು ಹಾಕಿಕೊಟ್ಟ ಕುರಾನಿನ ಶೈಲಿಯನ್ನು ಅವಲಂಬಿಸಿ ಬೆಳೆಯತೊಡಗಿತು. ದೇವನೊಬ್ಬ, ಜನಾಂಗವೊಂದು, ಮನಸ್ಸೂ ಗೆಯ್ಮೆಯೂ ಭಿನ್ನ ವಾಗಿರಕೂಡದು - ಹೀಗೆ ಐಕ್ಯವನ್ನೇ ಒತ್ತಿ ಒತ್ತಿ ಹೇಳುತ್ತಿದ್ದ ಇಸ್ಲಾಂ ಧರ್ಮ, ಕುಲ ಕುಲಗಳಲ್ಲಿಯೂ ಕಲಹವನ್ನು ಹಬ್ಬಿಸುವುದರಲ್ಲಿಯೇ ತನ್ನ ಮೇಲ್ಮೆಯನ್ನು ಕಾಣುತ್ತಿದ್ದ ಕಾಲಿಕ ಧ್ಯೇಯಕ್ಕೆ ಭಾರಿ ಪೆಟ್ಟು ಕೊಟ್ಟಿತು. ದೈವವನ್ನು ಕುರಿತ ಚರ್ಚೆ, ಧರ್ಮವನ್ನು ಕುರಿತ ಉಪನ್ಯಾಸಗಳಿಗೆ ಪದ್ಯ ಕ್ಕಿಂತ ಗದ್ಯವೇ ತಕ್ಕುದಾಗಿತ್ತು. ಆದ್ದರಿಂದ ಪ್ರವಾದಿಗಳ ಜೀವಿತಕಾಲದಲ್ಲೂ ನಿಷ್ಠಾವಂತ ರಾದ ಕಲೀಫರ ಕಾಲದಲ್ಲೂ ಪದ್ಯ ದ ಬೆಳವಣಿಗೆಗೆ ಸದವಕಾಶವಿರಲಿಲ್ಲ. ಆ ಕಾಲದಲ್ಲಿ ಮುಸ್ಲಿಂ ಕವಿಗಳೂ ಮುಸ್ಲಿಮೀತರ ಕವಿಗಳೂ ಇದ್ದರು, ಕಾಅಬ್ಬ ಜುಹೇರ್ ಮತ್ತು ಹಸನ್ ಬ್-ಢಬ್ಬಿತ್ ಮುಂತಾದ ಮತೋತ್ಸಾಹವುಳ್ಳ ಕವಿಗಳಿಗೆ ಮಾತ್ರ ಹೆಚ್ಚು ಪ್ರೋತ್ಸಾಹ ಆದರಗಳು ದೊರೆಯುತ್ತಿದ್ದುವು. ಹಿಂದಿನ ನಾಲ್ವರು ಕಲೀಫರ ಕಾಲ ಮುಗಿದ ಬಳಿಕ ಇಸ್ಲಾಮಿನ ವಿದ್ಯಾಕೇಂದ್ರ ಆ ಶ್ರದ್ಧಾಳುಗಳ ರಾಜಧಾನಿಯಾದ ಮದೀನದಿಂದ ದಮಾಸ್ಕಸ್ಗೆ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ ಮೆಕ್ಕದ ಒಂದು ಮನೆತನವಾದ ಉಮಾಯಿದ್ರು ಹಿಂದಿನ ಗಣತಂತ್ರದ ಆಡಳಿತವನ್ನು ತಪ್ಪಿಸಿ ದೊರೆಮನೆತನದ ಆಳಿಕೆಯ ಕ್ರಮವನ್ನು ಜಾರಿಗೆ ತಂದಿದ್ದರು. ಅವರೆಲ್ಲ ಲೌಕಿಕರು. ಉಮಾಯಿದ್ ಮನೆತನದವರು ಪಟ್ಟಕ್ಕೇರಲು ಇಸ್ಲಾಂ ಪೂರ್ವದ ಆಚಾರಗಳು ಮತ್ತು ಧ್ಯೇಯಗಳು ಮತ್ತೆ ಹರಡಲಾರಂಭಿಸಿದುವು. ಪೂರ್ವದ ಶೃದ್ಧಾಜೀವನ ಭೋಗವಿಲಾಸಕ್ಕೆಡೆ ಗೊಟ್ಟಿತು. ಗೆದ್ದ ರಾಜ್ಯಗಳಿಂದ ಅರೇಬಿಯಕ್ಕೆ ಹೊಳೆಯಂತೆ ಹರಿಯುತ್ತಿದ್ದ ಐಶ್ವರ್ಯ, ಒಂದು ಕಡೆ ಬಿಜಾಂಟೀಯನ್ ಸಂಸ್ಕೃತಿಯೊಂದಿಗೂ ಮತೊಂದು ಕಡೆ ಇರಾನಿ ನಾಗರಿಕತೆ ಯೊಂದಿಗೂ ಅವರಿಗಿದ್ದ ಸಂಪರ್ಕ, ಇವುಗಳ ದೆಸೆಯಿಂದ ಅವರಿಗೆ ಭೋಗರಾಗಗಳ ವಿಷಯಲಂಪಟತನದ ರೂಢಿ ಬೆಳೆಯಿತು. ಶ್ರದ್ಧಾಳುವಾದ ಮೂರನೆಯ ಕಲೀಫನ ಕೊಲೆಯಾದ ಬಳಿಕ ತಲೆದೋರಿದ ರಾಜಕೀಯ ಕ್ರಾಂತಿ ಮತ್ತು ಅಂತರ್ಯುದ್ಧಗಳ ವಾತಾವರಣದಲ್ಲಿ ಹಳೆಗಾಲದ ಪಂಥಾಭಿಮಾನಗಳು ಹುಲುಸಾಗಿ ಬೆಳೆಯಲು ಪ್ರಾರಂಭಿಸಿ ದುವು. ಈ ಆಳ್ವಿಕೆಯಲ್ಲಿ ಕುಲಕಲಹಗಳಿಗೆ ರಾಜಕೀಯ ಬಣ್ಣ ಬಂದು ಅರಬ್ಬರ ಸಮಾಜ ರಾಜಕೀಯ ಬಣಗಳಾಗಿ ಒಡೆದು ಹೋಯಿತು. ಕಿಲಾಫತ್ತಿಗೆ ವಾರಸುದಾರಾದ ಬನುಹಷೀಂ ಮತ್ತು ಬನು ಉಮಯ್ಯ ಎಂಬುವರು ಪರಸ್ಪರ ಯುದ್ಧದಲ್ಲಿ ತೊಡಗಿದ್ದರು. ಉತ್ತರದ ಮತ್ತು ದಕ್ಷಿಣದ ಕುಲಗಳಲ್ಲಿ ಅಲ್ಲದೆ, ಅರಬ್ಬರು ಮತ್ತು ಅರಬ್ಬರಲ್ಲದವರು ಹಾಗೂ ಷಿಯ, ಜುಬೈರಿದ್ ಮತ್ತು ಖವಾರಿಜ್ ಮುಂತಾದ ರಾಜಕೀಯ ಮತ್ತು ಧಾರ್ಮಿಕ ಪ್ರತಿಪಕ್ಷಗಳಲ್ಲೂ ಪರಸ್ಪರರ ವೈಷಮ್ಯ ಬಹಳ ತೀವ್ರವಾಯಿತು. ಬನು ಹಷೀಂನ ಕಡೆಯವರು ಷಿಯ ಪಂಥದವರು. ಅಬ್ದುಲ-ಬ್-ಜುಬೈರ್ನ ಕಡೆಯವರು ಜುಬೈರಿದ್ ಎಂಬ ಪಕ್ಷದವರು. ಇಸ್ಲಾಮಿನ ವೀರನಿಷ್ಠೆಯನ್ನು ಉತ್ಸಾಹದಿಂದ ಎತ್ತಿ ಹಿಡಿಯುವ ಪಂಥದವರಾದ ಖವಾರಿಜ್ ಪಕ್ಷದವರು ಮತೊಂದು ಪಂಗಡದವರು, ಕುರಾನು ಮತ್ತು ಸಂಪ್ರದಾಯಗಳಿಗೆ ತಮ್ಮದೇ ಆದ ಒಂದು ವಿಶಿಷ್ಟಾರ್ಥವನ್ನು ಕೊಡುತ್ತಿದ್ದ ಈ ಪಂಥದವರಿಗೆ ಈ ಲೋಕದಲ್ಲೂ ಇದರ ಸುಖಗಳ ವಿಷಯದಲೂ ಆಸಕ್ತಿಯಿರಲಿಲ್ಲ. ಇವರ ಪ್ರಕಾರ ಕೌಲಿಕ ಸಂಬಂಧವೊಂದೂ ಇಲ್ಲದೆ ಜನ ಮತದಿಂದ ಆರಿಸಿಬಂದ ಕಲೀಫರ ದೈವನಿಷ್ಠವಾದ ಆಳ್ವಿಕೆಯನ್ನು ಸ್ಥಾಪಿಸುವ ಒಂದೇ ಗುರಿಗಾಗಿ ಅವರು ಬಾಳಿದರು ಮತ್ತು ಮಡಿದರು. ಹೀಗೆ ಹುರುಡುಗಟ್ಟಿ ನಿಂತ ರಾಜಕೀಯ ಪಕ್ಷಗಳ ಒಳಜಗಳಗಳು ಬೆದೂಯಿನ್ ಅರಬರಿಗೆ ನಾಗರಿಕ ಜನರ ಸಂಪರ್ಕವನ್ನು ತಂದವು. ಅವರೊಂದಿಗೆ ಬೆದೂಯಿನ್ ಕಾವ್ಯದ ಹಳೆಯ ಪ್ರವೃತ್ತಿಗಳೂ ಪಟ್ಟಣಕ್ಕೆ ಬಂದವು. ಆವೇಗ ಮತ್ತು ಉದ್ರೇಕಗಳನ್ನು ಉದ್ದೀಪನಗೊಳಿಸುವುದೇ ಈ ಕಾವ್ಯಗಳ ಉದ್ದೇಶವಾದುದರಿಂದ ಅವು ಸಂವರ್ದಿಸಲು ಅಲ್ಲಿ ಅನುಕೂಲ ವಾತಾವರಣ ಸಿಕ್ಕಿತು. ಆದರೆ ಆ ವಿಧರ್ಮಿಗಳ ವ್ಯಂಗ್ಯ (ಹಿಜ) ಮತ್ತು ಸ್ತುತಿ ವಚನಗಳು (ಮಧ್) ರಾಜಕೀಯ ವಿಷಯಗಳಿಗೆ ಎಡೆಕೊಟ್ಟವು. ಈ ಕಾಲದಲ್ಲಿ ರಾಜಕೀಯ ಕವಿತೆಗಳೂ ವಿಡಂಬನೆಗಳೂ ಹುಟ್ಟಿಕೊಂಡವು. ಪ್ರತಿಯೊಂದು ಪಕ್ಷವೂ ಧ್ಯೇಯ ಧೋರಣೆಗಳನ್ನು ಪ್ರಚುರಪಡಿಸಲು ತನ್ನದೇ ಆದ ಕವಿಗಳನ್ನು ಹೊಂದಿತ್ತು. ಈ ಧ್ಯೇಯಗಳಿಗನುಸಾರವಾಗಿ ಅರೇಬಿಯ, ಸಿರಿಯ, ಕೂಫ, ಇರಾಕ್ ಮತ್ತು ಮೆಕ್ಕ ಮುಂತಾದವುಗಳ ರಾಜಕೀಯ ಪಂಗಡಗಳಲ್ಲಿ ಹಂಚಿಹೋಯಿತು. ಭೋಗಜೀವನ ರಹಸ್ಯಪ್ರಣಯದ ಮತ್ತು ಶೃಂಗಾರರಸದ ಕವಿಗಳನ್ನು ಹುಟ್ಟು ಹಾಕಿತು. ಮುಖ್ಯವಾಗಿ ಮರಳುಕಾಡಿನ ವಸತಿಗಳಲ್ಲಿ (ವಸಾಹತುಗಳಲ್ಲಿ) ಕೇವಲ ನಿಷ್ಕಾಮ ಪ್ರೇಮಕ್ಕೆ ಹತ್ತಿರ ಬರುವ ಶುದ್ಧ ಪ್ರಣಯ ಕವಿತೆಗಳ ಬೆಳಸು ಬೆಳೆಯುತ್ತಿತ್ತು. ನಾಗರಿಕರ ಪ್ರಣಯದ ರೀತಿಗಳಿಗೆ ಇದಿರಾಗಿ ಮರಳುಕಾಡಿನ ಕವಿಯ ಪ್ರಣಯಾನುಭವವನ್ನು ಅದು ವಿವರವಾಗಿ ನಿರೂಪಿಸುತ್ತದೆ. ಬೂಥೈನ್ ಎಂಬುವಳ ಪ್ರಿಯ, ಜಾಮಿಲ್-ಬ್-ಮಾ ಮಾರ್ (ಸ್ವರ್ಗಸ್ಥ 701) ಲುಬ್ನ ಎಂಬುವಳ ಪ್ರಿಯ ಕೈಯಸ್-ಬ್-ಜಾರಿಹ್, ಲೈಲಾ ಎಂಬುವಳ ಪ್ರಿಯ ಮಜ್ನನ್ ಇವರು ಶುದ್ಧ ಪ್ರೇಮಕವಿತೆಗಳ ಕೆಲವು ಪತಿನಿಧಿಗಳು. ಈ ಕವಿಗಳ ಪ್ರಣಯ ಪ್ರಸಂಗಗಳು ಗಾದೆಯ ಮಾತಾಗಿವೆ ಮತ್ತು ಅರಬ್ಬೀ ಕವಿತೆಯನ್ನಲ್ಲದೆ, ಪರ್ಷಿಯನ್ ಮತ್ತು ತುರ್ಕಿ ಕವಿತೆಗಳನ್ನೂ ಎಲ್ಲ ಮುಸ್ಲಿಮರ ಪುರಾತನ ಆಖ್ಯಾಯಿಕೆಗಳನ್ನೂ ಪ್ರಭಾವಿಸಿವೆ. ಅನೈತಿಕವಾದ ಪ್ರಣಯಕವಿತೆಯನ್ನು ಬರೆವವರಲ್ಲಿ ಅಗ್ರಗಣ್ಯರೆಂದರೆ ಕುರೈಷಿ ಕುಲದ ಉಮರ್-ಬ್-ಅಬ ರಬಿಯ (8ನೆಯ ಶತಮಾನ). ಇವನ ಪ್ರಣಯಗೀತೆಗಳನ್ನು ದಿವಾನ್ ಒಂದರಲ್ಲಿ ಸಂಗ್ರಹಿಸಲಾಗಿದೆ. ಶುದ್ಧ ಮತ್ತು ಅನೈತಿಕ ಪ್ರಣಯಗೀತೆಗಳೆಂಬ ಎರಡು ಪ್ರಕಾರಗಳೂ ವಿಧರ್ಮಿಗಳ ಪ್ರಣಯ ಪದ್ಯಗಳಿಗಿಂತ ಮುಂದುವರಿದವೆಂದು ಹೇಳಬೇಕು. ಇಸ್ಲಾಂ ಮತ ಉದಿಸುವುದಕ್ಕೂ ಮುಂಚಿನ ದಿನಗಳಲ್ಲಿ ಘಜಲ್ (ಅಷ್ಟಷಟ್ಪದಿ) ಎಂಬ ಕವಿತಾಪ್ರಕಾರ ಪ್ರಗಾಥದ ಒಂದು ಸಾಂಪ್ರದಾಯಿಕ ಅಂಗವಾಗಿತ್ತು. ಅದಕ್ಕೆ ಪ್ರತ್ಯೇಕವಾದ ಅಸ್ತಿತ್ವ ಇರಲಿಲ್ಲ. ಆದರೆ ಉಮಯಿದ್ ಕಾಲದಲ್ಲಿ ಪ್ರತ್ಯೇಕ ಪ್ರಕಾರವಾಗಿ ನಿಂತಿತು. ಮೇಲೆ ಹೇಳಿದ ಹಾಗೆ, ಈ ಕಾಲದ ಹಿರಿಯ ಕವಿಗಳು ಶೋಕಗೀತೆ ಮತ್ತು ಪ್ರಶಂಸಾಪದ್ಯಗಳನ್ನು ಕೈಬಿಡದೆ ಅಭಿರುಚಿಯಂತೆ ವಿಡಂಬನೆಗಳನ್ನೂ (ಹಿಜ) ರಚಿಸುತ್ತಿದ್ದರು. ವಿಡಂಬನಾತ್ಮಕವಾದ ಕಾವ್ಯರಚನೆಯಲ್ಲಿ ಅತ್ಯಂತ ಪ್ರಸಿದ್ಧರಾದವರೆಂದರೆ ಡಾರಿಂ ಕುಲದ ಅಲ್-ಫರಾಜದಕ್ (ಸ್ವ 728), ಕುಲಾಯಬ್ ಕುಲದ ಜಾರಿರ್ (728) ಮತ್ತು ತಘಿಬ್ ಎಂಬ ಕ್ರಿಶಿಯನ್ ಕುಲದ ಅಲ್-ಅರ್ತಲ್, ಕೊನೆಯವ. ಉಮಾಯಿದ್ ಕಲೀಫರನ್ನು ಕುರಿತು ಆಸ್ಥಾನದಲ್ಲಿ ಹೇಳಿದ ಪ್ರಶಂಸಾಪದ್ಯಗಳು ಈಗಲೂ ಪ್ರಸಿದ್ಧವಾಗಿವೆ. ಜರೀರ್ ಮತ್ತು ಅಲ್ಫರಾಜ್ದಕ್ ಎಂಬುವರ ನಡುವೆ ಜರುಗಿದ ಕವಿತಾ ಸರ್zಗಳಿಗೆ ನಕಾಯಿದ್ ಎಂದು ಹೆಸರು. ಇವು ಉಮಾಯಿದ್ ಕಾಲದ ಸ್ವರೂಪವನ್ನು ಬಹಳ ನೈಜವಾಗಿ ತೋರಿಕೊಡುತ್ತವೆಯೆಂದು ಹೇಳುತ್ತಾರೆ. ಉಮಾಯಿದ್ ಕವಿತೆ ಆ ಕಾಲದ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಕ್ಕನುಸಾರ ವಾಗಿ ಬದಲಾವಣೆ ಹೊಂದಿದ್ದರೂ ಸಾಮಾನ್ಯವಾಗಿ ಅದರ ರೂಪ ಮತ್ತು ಭಾವಗಳೆರಡರ ಮೇಲೂ ವಿಧರ್ಮಿಗಳ ಒತ್ತಡ ಬಿದ್ದಿದೆ. ಇದರಲ್ಲಿ ಪ್ರಾಚೀನ ಕವಿತೆಯ ಶೈಲಿ ಉಳಿದುಕೊಂಡು ಬಂದಿರುವುದಕ್ಕೆ ಕಾರಣವೆಂದರೆ, ಉಮಾಯಿದ್ ಕಲೀಫರು ಈ ತೆರದ ಕವಿತೆಯಲ್ಲಿ ಹೊಂದಿದ್ದ ಆಸಕ್ತಿ , ಕೊಟ್ಟ ಪೋತ್ಸಾಹ. ಇಸ್ಲಾಂ ಪೂರ್ವದ ಕವಿತದಲ್ಲಿ ಜನಗಳ ಆಸಕ್ತಿಗೆ ಮತೊಂದು ಕಾರಣವುಂಟು. ದಾರ್ಶನಿಕ ವ್ಯಾಸಂಗ, ಕೆಲವು ಕುರಾನಿನ ಶಬ್ದಗಳಿಗಿರುವ ಅರ್ಥಛಾಯೆಗಳ ವಿಶದೀಕರಣಗಳಿಗೆ ಅವು ಬೇಕಾದವು. ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಗೆ ಇಸ್ಲಾಂ ಕೊಟ್ಟ ಪೋತ್ಸಾಹದ ಪರಿಣಾಮವಾಗಿ ವಿದ್ವಾಂಸರು ಪ್ರಾಚೀನ ಕಾವ್ಯಗಳ ಸಂಗ್ರಹಣೆಗೆ ತೊಡಗಿದರು. ಕವಿತೆಗಳನ್ನು ಕಲಿತು ಹಾಡುವುದನ್ನೇ ಕಸುಬಾಗಿಟ್ಟುಕೊಂಡಿದ್ದ ರೂವಾತ್ ಎಂಬ ಗಮಕಿಗಳು ಈ ಕಾರ್ಯವನ್ನು ತಮ್ಮ ಕೈಗೆ ತೆಗೆದುಕೊಂಡರು. ಪ್ರಾಚೀನ ಕಾವ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪ್ರಮುಖರಾದವರ ಪೈಕಿ ಅತ್ಯಂತ ಪ್ರಸಿದ್ಧರಾದವರು ಹಮ್ಮದ್ - ಅರ್-ರವಿಯಾ ಮತ್ತು ಕಲಾಫ್-ಅಲ್-ಅಹ್ಮರ್(800) ಎಂಬುವರು. ಈ ಜನಪದ ಸಾಹಿತ್ಯ ಪ್ರಚಾರಕರು ಈ ಹಳೆ ಕವನಗಳನ್ನು ಪ್ರೇರಿಸಿದ ಕದನಗಳನ್ನು ಸಹ ವರ್ಣಿಸುತ್ತಿದ್ದರು. ಈ ಐತಿಹ್ಯಗಳು ಆ ಬಳಿಕ ಆಯಾ ಕುಲಗಳ ಸಾಂಪ್ರದಾಯಿಕ ಇತಿಹಾಸಗಳಾಗಿ ಪರಿಣಮಿಸಿದ ಸವು. ಬೆದೂಯಿನ್ ಕುಲಗಳಲ್ಲಿ ಬಳಕೆಯಲ್ಲಿದ್ದ ಗಾದೆಗಳನ್ನು ಕೂಡ ಅವರು ಸಂಗ್ರಹಿಸಿದರು. ಪ್ರಾಚೀನ ಅರಬೀ ಕಾವ್ಯಗಳನ್ನು ವ್ಯಾಖ್ಯಾನಿಸುವುದರಲ್ಲಿ ನೆರವಾದರು. ಇದೇ ಕಾಲದಲ್ಲಿಯೆ ಧರ್ಮಪ್ರವರ್ತಕರ ಆಚಾರವಿಚಾರಗಳ ಸಂಗ್ರಹಣ, ಸಂಪಾದನ ಆಗಿ ಅವನ್ನು ಬರಹಕ್ಕೆ ಇಳಿಸುವ ಕಾರ್ಯ ಇನ್ನೂ ಹೆಚ್ಚಿನ ಹುರುಪಿನಿಂದ ಜರುಗಿತು. 750ರಿಂದ 1258ರ ವgಗಿನ ಅರಬ್ಬೀ ಸಾಹಿತ್ಯದ ಲಕ್ಷಣ: ಅರಬ್ಬರ ರಾಷ್ಟ್ರಾಭಿಮಾನದ ಪುನರುಜ್ಜೀವನ,ಸಾಮಾನ್ಯವಾಗಿ ಎಲ್ಲೆಡೆಯೂ ಹಬ್ಬಿದ್ದ ಅಶಾಂತಿಗಳ ದೆಸೆಯಿಂದ ಮುಸ್ಲಿಂ ಚಕ್ರಾಧಿಪತ್ಯದಲ್ಲಿ ಉಮಾಯಿದ್ ವಂಶದವರಿಗೆ ವಿರುದ್ಧವಾಗಿದ್ದ ಶಕ್ತಿಗಳು ಪ್ರಬಲವಾಗಿ ಕ್ರಮೇಣ ಆ ವಂಶದವರನ್ನು ಪದಚ್ಯುತರನ್ನಾಗಿ ಮಾಡಿದವು. 750ರಿಂದ ಪ್ರವಾದಿಗಳ ಚಿಕ್ಕಪ್ಪ ಅಬ್ಬಾಸನ ಪೀಳಿಗೆ ಪರ್ಷಿಯನ್ ಜನರ ಮತ್ತು ಅರಬ್ಬರಲ್ಲದ ಇತರರ ನೆರವಿನಿಂದ ಪಟ್ಟಕ್ಕೆ ಬಂತು. ಅಬ್ಬಾಸನ ವಂಶದವರು ದೊರೆಗಳಾದ ಮೇಲೆ ಅರಬ್ಬರ ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಮೂಲಭೂತವಾದ ಬದಲಾವಣೆಗಳು ಉಂಟಾದವು. ಕಲೀಫರ ರಾಜಧಾನಿ ಡಮಾಸ್ಕಸಿನಿಂದ ಬಾಗ್ದಾದಿಗೆ ಹೋಯಿತು. ಅಲ್ಲಿ ಆಡಳಿತ ಕ್ರಮದಲ್ಲೂ ಸಾಂಸ್ಕೃತಿಕ ನಡವಳಿಕೆಯಲ್ಲೂ ಪರ್ಷಿಯನ್ನರ ಪ್ರಭಾವ ಮೇಲುಗೈಯಾಗಲು ಪ್ರಾರಂಭಿಸಿತು. ಹೀಗೆ ಹೊಸ ಬಗೆಯ ಸಾಹಿತ್ಯದ ಬೆಳವಣಿಗೆಗೆ ಒಂದು ಸ್ಥಾನ ಸಿದ್ಧವಾಯಿತು. ಅಬ್ಬಾಸನ ಪೀಳಿಗೆಯವರು ಅರಬ್ಬರ ರಾಜ್ಯಭಾರದ ಹಳೆ ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದಕ್ಕೆ ಬದಲಾಗಿ ಗದ್ಯಪದ್ಯಗಳೆರಡಕ್ಕೂ ಆಶ್ರಯಕೊಟ್ಟುದಲ್ಲದೆ ಅಪಾರವಾದ ವೈಜ್ಞಾನಿಕ ಸಾಹಿತ್ಯವನ್ನೂ ಬೆಳೆಸಿ ಸಂಸ್ಕೃತಿಯ ವಿಕಾಸಕ್ಕೆ ಬಹಳ ಪೋತ್ಸಾಹ ಕೊಟ್ಟರು. ಈ ಕಾಲದ ಸಾಹಿತ್ಯವನ್ನು ಆಧ್ಯಾತ್ಮಿಕ ಶಾಸ್ರ್ತ, ಶಬ್ದವಿಜ್ಞಾನ, ಗದ್ಯ ಮತ್ತು ಪದ್ಯ , ಚರಿತ್ರೆ ಮತ್ತು ಭೂಗೋಳವಿಜ್ಞಾನಗಳು, ದರ್ಶನ ಮತ್ತು ಪ್ರಕೃತಿ ವಿಜ್ಞಾನಗಳುಈ ರೀತಿಯಾಗಿ ವಿಂಗಡಿಸಬಹುದು. ಕುರಾನಿನ ಜೊತೆಗೆ ಮುಸ್ಲಿಮರ ಮುಖ್ಯ ಆಸಕ್ತಿ ಪ್ರವಾದಿಗಳ ಎಲ್ಲ ಮಾತುಗಳನ್ನೂ ನಡವಳಿಕೆಗಳನ್ನೂ ಸಂಗ್ರಹಿಸುವುದರಲ್ಲಿತ್ತು. ಏಕೆಂದರೆ ಶ್ರದ್ಧೆ ಮತ್ತು ನಿಷ್ಠೆಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಯಾವುದು ಸಾಧು ಯಾವುದನ್ನು ಮಾಡಲೇಬೇಕು ಎಂಬುದನ್ನು ತಿಳಿಯಲು ಈ ಸಂಪ್ರದಾಯಗಳೇ ಆಧಾರ. ದೈನಂದಿನ ಜೀವನಕ್ಕೆ ಕುರಾನಿನ ತತ್ವವನ್ನು ಅನ್ವಯಗೊಳಿಸು ವುದು ಹೇಗೆಂಬುದನ್ನು ಈ ಸಂಪ್ರದಾಯಗಳು ಮಾತ್ರ ನಿರ್ಧರಿಸತಕ್ಕವು. ಕಾಲ ಕಳೆದಂತೆ, ಹಾದಿತ್ತಿನ (ಸತ್ಸಂಪ್ರದಾಯದ) ವಸ್ತು ದೊಡ್ಡದಾಗುತ್ತ ಬಂದಿತು. ಅನಧಿಕೃತವಾದ ಎಷ್ಟೋ ಅಂಶಗಳು ಅದರೂಳಕ್ಕೆ ತೂರಿಕೊಂಡುವು. ಆದ್ದರಿಂದ ಅವುಗಳನ್ನೆಲ್ಲ ಬಹು ಸೂಕ್ಮವಾದ ಪರಿಶೀಲನೆಗೆ ಒಳಪಡಿಸಿ ಯಾವುದನ್ನು ಪ್ರಮಾಣವೆಂದು ನಂಬಬಹುದು ಯಾವುದನ್ನ ಲ್ಲ ಎಂಬುದನ್ನು ವಿಂಗಡಿಸಬೇಕಾಯಿತು. ಇದರಲ್ಲಿಯಾರ ಮಾತು ನಂಬಿಕೆಗೆ ಅರ್ಹ ಯಾರದು ಅಲ್ಲ ಎಂಬುದನ್ನು ಗೊತ್ತು ಮಾಡುವುದಕ್ಕಾಗಿ ಸಂಪ್ರದಾಯವಾಹಕರೆಲ್ಲರ ಜೀವನಚರಿತ್ರೆಯನ್ನು ಪರಾಮರ್ಶಿಸಲು ಈ ವಿಮರ್ಶಾತ್ಮಕ ಸಂಶೋಧನೆಗಳು ಹಾದಿ ಹಾಕಿ ಕೊಟ್ಟವು. 1. ಅಲ್-ಬುಖಾರಿ (870). 2. ಮುಸ್ಲಿಂ (878). 3. ಅಬು ದಾವುದ್ (885), 4. ಅಬು ಈಸ ತಿರ್ ಮಿಧಿ (892), 5. ನಸಾಯಿ, 6. ಇಬ್ನ್-ಮಜ (896)-ಈ ವ್ಯಕ್ತಿಗಳು ಮಾಡಿರುವ ಸಂಗ್ರಹಗಳು ಬಹು ಪ್ರಾಮಾಣಿಕವೆನಿಸಿವೆ. ಇನ್ನೂ ಮುಂದಿನ ಕಾಲದಲ್ಲಿ ಪ್ರಮಾಣವಾಕ್ಯಗಳು ಸುಲಭವಾಗಿ ದೊರೆಯುವ ಸೌಕರ್ಯವನ್ನು ಒದಗಿಸುವುದಕ್ಕಾಗಿಯೂ ನ್ಯಾಯಕ್ಕೆ ಸಂಬಂಧಪಟ್ಟ ಸಂಪ್ರದಾಯಗಳನ್ನು ನೀತಿಗೆ ಸಂಬಂಧಪಟ್ಟವುಗಳಿಂದ ಪ್ರಮಾಣ ವಾಕ್ಯಗಳನ್ನು ಅಪ್ರಾಮಾಣಿಕವಾದುವುಗಳಿಂದ ಪ್ರತ್ಯೇಕಿಸುವುದಕ್ಕಾಗಿಯೂ ಕೆಲವು ಸಂಕಲನ ಗಳನ್ನು ರಚಿಸಲಾಯಿತು. ಇದೇ ರೀತಿ ಸಂಪ್ರದಾಯಗಳು ಯಾರಿಂದ ಲಬ್ಧವಾದವೋ ಅವರ ಜೀವನಚರಿತ್ರೆಯ ಪರಾಮರ್ಶೆಯೂ ನಡೆಯುತ್ತಲೇ ಇತ್ತು. ಅಂಥ ಸಂಶೋಧನೆಗಳ ಫಲಿತಾಂಶಗಳನ್ನೆಲ್ಲ 1. ಅಬ್ದುಲ್ ಬರ್ರ್ ಅನ್-ನಮಾರಿಯ (1070), ಕಿತಾಬ್-ಅಲ್ ಇಸ್ತಿಅಬ್, 2. ಇಬ್ನ್-ಅಲ್-ಅಧೀರ್ ಅಲ್ಜ ಅಜ್ರಿಯ (1232), ಉಸದಲ್-ಘಬ (5 ಸಂಪುಟಗಳು), 3. ಅಲ್-ಧಹಬಿಯ (1374), ತಜಿದ್, 4. ಇಬ್ನ್ ಹಜರ್ ಅಲ್ ಅಸ್ಕಲಾನಿಯ (1448), ಅಲ್ ಇಸಾಬಾ ಎಂಬ ಸುದೀರ್ಘಕೃತಿಗಳಲ್ಲಿ ಅಳವಡಿಸಲಾಗಿದೆ. ಇಂಥ ದೇವತಾಶಾಸ್ರ್ತ ಸಾಹಿತ್ಯದ ವರ್ಗಕ್ಕೆ ಕುರಾನಿನ ಭಾಷ್ಯ ಸೇರಿದೆ. ಗ್ರಂಥದಲ್ಲಿ ಬರುವ ಐತಿಹಾಸಿಕ ಮತ್ತು ಇತರ ವಿಷಯಗಳ ಸಂದರ್ಭ ವಿವರಣೆ , ಅದರ ವ್ಯಾಕರಣ ವ್ಯಾಖ್ಯೆಗಳು, ಅಲಂಕಾರಗಳ ಗುಣವಿಮರ್ಶೆ, ಮತತತ್ವ ಸಿದ್ಧಾಂತ ಮತ್ತು ನ್ಯಾಯವ್ಯವಹಾರದ ಶ್ರೇಷ್ಠತೆ ಅಲ್ಲಿನ ಬೋಧನೆಗಳ ದೈವಿಕvಯ ಬಗ್ಗೆ ವ್ಯಾಖ್ಯೆಗಳು - ಇವೇ ಕುರಾನಿನ ಅಭ್ಯಾಸದಲ್ಲಿ ಮುಖ್ಯ ವಿಷಯಗಳು. ಪ್ರಾರಂಭದಲ್ಲಿ ಅದು ಹಾದಿತ್ತನ (ಸತ್ಸಂಪ್ರದಾಯ) ಸಾಹಿತ್ಯದ ಒಂದು ಅಂಗವಾಗಿದ್ದು ಆಮೇಲೆ ಸ್ವತಂತ್ರವೂ ಕ್ರಮಬದ್ಧವೂ ಆದ ಶಾಸ್ರ್ತವಾಗಿ ಬೆಳೆಯಿತು. ಹಿಂದಿನ ಸಂಶೋಧನೆಗಳನ್ನೆಲ್ಲ ಒಂದು ದೊಡ್ಡ ಸಂಕಲನದಲ್ಲಿ ಶೇಖರಿಸಿದ ಬಹುಪ್ರಖ್ಯಾತ ಪಂಡಿತನಾರೆಂದರೆ ಇಬ್ನ್ ಜರೀರ್ ಅಲ್-ತಬಾರಿ (922). ಆ ಬಳಿಕ ಭಾಷ್ಯಸಾಹಿತ್ಯ ಗಾತ್ರದಲ್ಲಿ ಬೆಳೆಯಿತು. ಬೇರೆ ಬೇರೆ ದೃಷ್ಟಿಕೋನಗಳಿಂದ ಈ ವ್ಯಾಖ್ಯಾನಗಳು ಸಂಕಲಿತವಾ ದುವು. ಉದಾಹರಣೆಗೆ ಫಕ್ರುದ್ದೀನರ್ ರಜಿ (1209) ಕುರಾನಿನ ದೈವಿಕತೆ ಮತ್ತು ದಾರ್ಶನಿಕ ತತ್ತ್ವಗಳ ಹಿನ್ನೆಲೆಯಲ್ಲಿ ಖುರಾನಿನ ವಾಕ್ಯಗಳನ್ನು ವಿವರಿಸುತ್ತ ಮುಫತೀಹ್-ಅಲ್ಘಯಿಬ್ ಎಂಬ ಗ್ರಂಥ ಬರೆದರು. ಹಾಗೆಯೇ ಅಜ್ಜಮಕರಿ (1143) ಮತ್ತು ಅಲ್ಬೈದಾವಿ (1288) ದಾರ್ಶನಿಕದೃಷ್ಟಿಯಿಂದಲೂ ಇಬ್ನ್ ಅರಾಬಿ ಅತೀಂದ್ರಿಯನುಭೂತಿಯ (ಸೂಫಿ) ದೃಷ್ಟಿಯಿಂದಲೂ ಕುರಾನಿನ ವ್ಯಾಖ್ಯಾನಗಳನ್ನು ಬರೆದರು. ಇಸ್ಲಾಮಿನ ಪಶ್ಚಿಮ ಭಾಗದಲ್ಲಿ ಧಾರ್ಮಿಕ ಸಾಹಿತ್ಯವನ್ನು ಪತಿನಿಧಿಸಿದವರು ಅಲ್ ಸುಹೈಲಿ (1185), ಅಲ್-ಕುರ್ತುಬಿ (1272), ಅನ್-ನವಾವಿ, ಕುರಾನಿನ ಆಧಾರದ ಮೇಲೆ ಕರ್ತವ್ಯಕರ್ಮಗಳ ನಿಯಮಗಳು ರಚಿತವಾದುವು. ತತ್ಪರಿಣಾಮವಾಗಿ ನ್ಯಾಯತತ್ವಶಾಸ್ರ್ತ ಬೆಳೆಯಿತು. ಇದರ ಫಲವಾಗಿ ಷಿಯ ಪಂಥದ ಜೊತೆಗೆ ನಾಲ್ಕು ಬೇರೆ ಬೇರೆ ನ್ಯಾಯಶಾಸ್ರ್ತ ಪಂಥಗಳು ಕವಲೊಡೆದವು; 1. ಅಬು ಹನೀಫನಿಂದ ಪ್ರವೃತ್ತವಾದ ಹನಾಫೈಟ್ ಪಂಥ, 2. ಮಲಿಕ್-ಬ್-ಅನಾಸ್ನ ಮುಖಂಡತ್ವದಲ್ಲಿ ಪ್ರಾರಂಭವಾದ ಮಲಿಕೈಟ್ ಪಂಥ, 3. ಆಷ್-ಷಫೆನ ಮುಂದಾಳುತನದಲ್ಲಿ ಷಫೈಟ್ ಪಂಥ, 4. ಇಬ್ ಹನ್ಬಲ್ನ ಯಾಜಮಾನ್ಯದಲ್ಲಿ ಬೆಳೆದ ಹನಾಫೈಟ್ ಪಂಥ ಇವು ಎಲ್ಲ ಮುಸ್ಲಿಂ ದೇಶಗಳ ಹರಹಿನಲ್ಲಿ ಭೌಗೋಲಿಕವಾಗಿ ವಿಂಗಡಗೊಂಡಿವೆ. ತಮ್ಮ ತಮ್ಮ ಪರಿಚಿಂತನ ರೀತಿಗಳಲ್ಲೂ ಮತ್ತು ನ್ಯಾಯದ ಮೂಲಗಳನ್ನು ಕುರಿತ ವ್ಯಾಖ್ಯಾನ ಕ್ರಮಗಳಲ್ಲೂ ಈ ನಾಲ್ಕು ಪಂಥಗಳೂ ಭಿನ್ನ ಭಿನ್ನ ವಾಗಿವೆ. ಪರಿಣಾಮವಾಗಿ ಇಸ್ಲಾಮಿನ ನ್ಯಾಯ ಮೂಲಗಳು ಕುರಾನು ಮತ್ತು ಸಂಪ್ರದಾಯಗಳಿಗೇ ಮಿತಿಗೊಳ್ಳಲಿಲ್ಲ. ಆದರೆ ಕಿಯಾಸ್ (ಸಾಮ್ಯ) ಮತ್ತು ಇಜ್ಮ (ಒಟ್ಟಭಿಪ್ರಾಯ) ಇವೇ ಮೊದಲಾದ ಆತ್ಮಪ್ರೇರಣೆ ಮತ್ತು ಪರಿಚಿಂತನೆಯ ಕ್ರಮಗಳನ್ನು ಕೂಡ ನ್ಯಾಯನಿಯಮದ ರಚನೆಗಳಿಗೆ ಅಳವಡಿಸಿ ಕೊಳ್ಳಲಾಯಿತು. ನ್ಯಾಯತತ್ವಕ್ಕೆ ಸಂಬಂಧಿಸಿದ ಸಾಹಿತ್ಯದಂತೆ ಧರ್ಮಶಾಸ್ರ್ತಕ್ಕೆ ಹಾಕಬೇಕಾದ ತಾತ್ತ್ವಿಕ ತಳಹದಿ ಕೂಡ ವಿಸ್ತಾರವಾದ ಸಾಹಿತ್ಯವನ್ನು ಉತ್ಪಾದಿಸಿದೆ. ಉಸುಲ್ ಫಿಖ್ (ನ್ಯಾಯತತ್ತ್ವ ಸೂತ್ರಗಳು) ಎಂಬುದರ ಮೇಲೆ ಅನೇಕ ಗ್ರಂಥಗಳನ್ನು ಷಫೈ ಮತ್ತು ಹನಾಫಿ ಪಂಥಗಳು ರಚಿಸಿವೆ. ನ್ಯಾಯತತ್ವ ಸೂತ್ರಗಳ ಜೊತೆಗೆ, ಮತಕ್ಕೆ ಸಂಬಂಧಪಟ್ಟ್ಟ ಧರ್ಮಶಾಸ್ತ್ರವೂ ಉದ್ಭವಿಸಿತು. ಅಬ್ಬಾಸಿದ್ ಕಾಲದ ಪ್ರಾರಂಭದಿಂದಲೂ ಅತೀಂದ್ರಿಯಜ್ಞಾನ (ರೆವೆಲೇಷನ್) ಪ್ರಾಪ್ತಿ, ಸ್ವಪ್ರೇರಣೆ , ದಿವ್ಯ ಕಲ್ಯಾಣಗುಣಸಂಪತ್ತಿ ಇತ್ಯಾದಿ ಮತ ಸಿದ್ಧಾಂತಗಳು ಕ್ರಿಶಿಯನ್ನರ ದೇವತಾಶಾಸ್ರ್ತ ಮತ್ತು ಬೃಹದ್ದರ್ಶನದೂಡನೆ ಚರ್ಚೆಗೂ ವಾದ ವಿವಾದಕ್ಕೂ ಒಳಗಾಗಿ ತನ್ಮೂಲಕ ಸಾಂಪ್ರದಾಯಿಕತೆಗೆ ವಿರೋಧವಾದ ಮುತಾಜಿಲಿಸಂ ಎಂಬ ತರ್ಕಪಾರಮ್ಯವಾದದ ಬೆಳವಣಿಗೆಗೆ ಎಡೆಗೊಟ್ಟವು. ಮೇಲೆ ಹೇಳಿದ ಎರಡು ಗುಂಪುಗಳೊಳಗಿನ ವಿವಾದಗಳು ಅಬುಲ್ ಹಸನ್ ಅಲ್ ಅಷಾರಿ (953), ಅಬು ಮನ್ ಸೂರ್ ಅಲ್-ಮತುರಿದಿ (944) ಎಂಬಿಬ್ಬರು ವಿದ್ವಾಂಸರ ನೇತೃತ್ವದಲ್ಲಿ ರೂಪುಗೊಂಡ ಹೊಸದೊಂದು ತಾತ್ವಿಕ ಪಂಥಕ್ಕೆ ದಾರಿ ಮಾಡಿಕೊಟ್ಟವು. ಈ ವಿದ್ವಾಂಸರು ಮುತಜಿಲೈಟರ ತರ್ಕಪಾರಮ್ಯವಾದಕ್ಕೂ ಸಂಪ್ರದಾಯನಿಷ್ಠೆಗೂ ನಡುವೆ ಮಧ್ಯ ಸ್ಥಿಕೆವಹಿಸಿ ಜಯಶೀಲರಾದರು. ಇದು ಕಲಾಂ (ತಾರ್ಕಿಕ ಪದ್ಧತಿ) ಎಂಬ ದಾರ್ಶನಿಕ ಜಿಜ್ಞಾಸಾಕ್ರಮದ ಬೆಳವಣಿಗೆಗೆ ಕಾರಣವಾಯಿತು. ಅದರ ಉದ್ದೇಶ ಮತ ಸಿದ್ಧಾಂತಗಳಿಗೆ ದಾರ್ಶನಿಕ ರೂಪರೇಖೆಗಳನ್ನು ಕೊಡುವುದು ಕಲಾಮಿನ. ಸಾಹಿತ್ಯ ಪತಿನಿಧಿಗಳು ಯಾರೆಂದರೆ. ಅಬುಬಕರ್ ಅಲ್-ಬಾಕಿಲ್ಲಾನಿ (1085) ಮತ್ತು ಅಬುಲ್ ಮ ಅಲಿ ಮತ್ತು ಆ ಕಾಲದ ದೈವಶಾಸ್ರವೇತ್ತರಲ್ಲಿ ಶ್ರೇಷ್ಠತಮನೆಂದು ಪರಿಗಣಿತನಾಗಿ ಅಲ್ಗಜ್ಜಾಲಿಯ ಗುರುವಾಗಿದ್ದ ಇಮಾಂ ಅಲ್- ಹರ್ಮಾಯನ್ ಅಲ್-ಜುವೈನಿ (1085). ಇವರಲ್ಲದೆ, ಆ ಕಾಲದಲ್ಲಿ ಪ್ರಚಲಿತವಾಗಿದ್ದ ಎಲ್ಲ ಮತ ಮತ್ತು ದರ್ಶನ ಪ್ರಕಾರಗಳನ್ನೂ ಇಸ್ಲಾಮಿನ ಸಮಸ್ತ ಪಂಥಗಳನ್ನೂ ತಮ್ಮ ಕಿತಾಬ್ ಅಲ್-ಮಿಲಾಲ್ವಾನ್ನಿಹಾಲ್ ಎಂಬ ಮಹಾಗ್ರಂಥದಲ್ಲಿ ವಿವರಿಸಿರುವ ಅಬುಲ್ ಫಾತ್ ಅಷ್ ಷರಸ್ತಾನಿ (1153) ಬಾಗ್ದಾದಿಗೆ ಬಂದ ವಿದ್ವಾಂಸರ ಪೈಕಿ ಅತ್ಯಂತ ಪ್ರಭಾವಶಾಲಿ. ಇದೇ ಕಾಲದಲ್ಲಿ ಅತೀಂದ್ರಿಯ ಜ್ಞಾನದಲ್ಲಿ (ಅನುಭಾವ) ಶ್ರದ್ಧೆಯುಳ್ಳ ಅಲ್ಹಾರೀತ್ ಅಲ್-ಮುಹಾಸಿಬಿ(828), ಧುನ್ ನನ್ ಅಲ್-ಮಿಸ್ರಿ (859), ಅಲ್ ಜುನೈದ್ (900) ಮುಂತಾದವರು ಕಲಾಂ ಅನ್ನೂ ಮತಾಚರಣೆಯ ಬಾಹ್ಯನಿಷ್ಠೆಯನ್ನೂ ಖಂಡಿಸಲು ತೊಡಗಿದ್ದರು. ಇವರು ನೀತಿಗಳ ವಿಷಯದಲ್ಲಿ ಸಣ್ಣ ಸಣ್ಣ ಪ್ರಬಂಧಗಳನ್ನು ರಚಿಸಿದುದಲ್ಲದೆ ತಪಸ್ವೀಜೀವನವನ್ನು ನಡೆಸಿ ತಮ್ಮ ಆತ್ಮಗಳನ್ನು ಪರಿಪಕ್ವಗೊಳಿಸಲು ಪ್ರಯತ್ನಿಸಿದರು. ಅಲ್-ಕುಷೈರಿ (1072) ಬರೆದ ಪ್ರಸಿದ್ಧವಾದ ರಿಸಾಲ ಎಂಬ ಗ್ರಂಥ ಈ ಪ್ರವೃತ್ತಿಗಳ ಸಾರಾಂಶವನ್ನೂ ಕೊಡುತ್ತದೆ. ಈ ಕಾಲದ ಅಲ್-ತಸವ್ವುಫ್ ನ (ಅನುಭಾವ) ಪ್ರತಿನಿಧಿಗಳಲ್ಲಿ ಅತಿ ಪ್ರಮುಖರಾರೆಂದರೆ, ಅಲ್-ಕದರಿಯ ಎಂಬ ವರ್ಗವೊಂದನ್ನು ಸ್ಥಾಪಿಸಿದ ಷೇಕ್ ಅಬ್ದುಲ್ ಖಾದರ್ ಅಲ್-ಗಿಲನಿ, ಷಿಹಾಬುದ್ದೀನ್ ಉಮರ್ ಅಸ್-ಸಹ್ರವರ್ದಿ (1234) ಮತ್ತು ಮುಹಿಯುದ್ದೀನ್ ಇಬ್ನ್ ಅರಾಬಿ (1240). ಷೇಕ್ ಅಬ್ದುಲ್ ಖಾದರ್ ಮತ ನಿಷ್ಠೆಗಳ ತಳಹದಿಯ ಮೇಲೆ ತನ್ನ ಪಂಥವನ್ನು ರೂಪಿಸಿರುವ ತಪಸ್ವಿ. ಆದರೆ ಈ ಕಾಲದ ಸೂಫೀ ದಾರ್ಶನಿಕರಲ್ಲಿ ಅತ್ಯಂತ ಶ್ರೇಷ್ಠನಾದ ಅಲ್-ಗಜ್ಜಾಲಿ (1111) ಎಂಬಾತ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಅನೇಕ ಪಂಥಗಳಲ್ಲಿನ ಪರಸ್ಪರ ವಿರೋಧವನ್ನು ತೀವ್ರವಾಗಿ ವ್ಯಾಸಂಗಮಾಡಿ, ಬಹಳ ಕೌಶಲದಿಂದ ಅಧ್ಯಾತ್ಮ ಜೀವನ ನಡೆಸುವುದೇ ಎಲ್ಲ ದೈವಶಾಸ್ರ್ತಗಳ ಅಂತಿಮ ಫಲವೆಂಬುದನ್ನು ಕಂಡುಕೊಂಡ, ಈತನ ಪ್ರಖ್ಯಾತವಾದ ಇಹ್ಯ ಅಲ್ಉಲೂಮುದ್ದೀನ್ ಎಂಬ ಗ್ರಂಥ ಆತನ ಸಿದ್ಧಾಂತದ ಸಾರವನ್ನು ಸಮಗ್ರವಾಗಿ ಕೊಡುತ್ತದೆ. ಅದರಲ್ಲಿ ಇಸ್ಲಾಮಿನ ಧ್ಯೇಯಕ್ಕೆ ಸೂಫೀತತ್ವದ ಆಧ್ಯಾತ್ಮಿಕತೆ ವ್ಯಾಪಿಸಿದೆ. ಈ ಶಾಖೆಯ ಪಶ್ಚಿಮ ಭಾಗದ ಪತಿನಿಧಿ ಇಬ್ನ್ ಹಜಮ್ (1063) ಆಲ್ ಮಿಲಾಲ್ ಅಲ್ ನಿಹಾಲ್ ಎಂಬ ಗ್ರಂಥದಲ್ಲಿ ಮುಸಲ್ಮಾನ ಮತ್ತು ಇತರ ಮತ ಪಂಥಗಳ ವಿಷಯದಲ್ಲಿ ಆತ ತೋರಿಸಿರುವ ತೀವ್ರ ಅಸಹನೆ ಅನೇಕರಿಗೆ ಅಸಮಾಧಾನ ತಂದಿದೆ. ಭಾಷಾವಿಜ್ಞಾನ : ಅರಬ್ಬರಲ್ಲದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದಾಗ, ಮುಸ್ಲಿಮ್ ರಾಷ್ಟ್ರಗಳ ದೂರಪ್ರಾಂತ್ಯಗಳಲ್ಲಿ ಅರಬ್ಬರು ನೆಲೆಸಲು ಮೊದಲು ಮಾಡಿದಾಗ, ಭಾಷೆ ಬಾರದ ಜನ ಕುರಾನನ್ನು ತಪ್ಪಿಲದಂತೆತೆ ಓದಲು ಬೇಕಾದ ಶಾಸ್ರ್ತ ಸಹಾಯವನ್ನೊದಗಿಸುವ ಕೆಲಸ ಮೊದಲಾಯಿತು. ಸ್ಪೇನಿನಂಥ ಪಾಶ್ಚಾತ್ಯ ಇಸ್ಲಾಮ್ ಪ್ರದೇಶಗಳಲ್ಲಿ ಅಲ್-ದನಿ ಮತ್ತು ಅಲ್-ಷಾತಿಬಿ ಎಂಬುವರು ಧ್ವನಿ ಜ್ಞಾನ, ಕುರಾನಿನ ಓದುಗಾರಿಕೆಗಳ ಮೇಲೆ ಗ್ರಂಥಗಳನ್ನು ಬರೆದರು. ಅಲಿ ಎಂಬ ಕಲೀಫನ ನಿರ್ದೇಶನದಂತೆ ಅಬುಲ್ ಅಸವಾದ್ ಅದ್ ದು ಅಲಿ (685) ವ್ಯಾಕರಣದ ಮೂಲತತ್ವಗಳನ್ನು ಮೊದಲು ವಿಮರ್ಶಿಸಿದ. ಕೂಫ ಮತ್ತು ಬಸ್ರ ಎಂಬ ಇರಾಕಿನ ಎರಡು ಪಟ್ಟಣಗಳಲ್ಲಿ ಅರಬ್ಬೀ ಭಾಷೆಯ ವ್ಯಾಕರಣಶಾಸ್ರ್ತದ ವ್ಯಾಸಂಗ ನಡೆಯುತ್ತಿತ್ತು. ಭಾಷೆಯ ಸೂತ್ರ, ಜಾಯಮಾನಗಳ ವಿಚಾರದಲ್ಲಿದ್ದ ದೃಷ್ಟಿಭೇದದ ದೆಸೆಯಿಂದ ಅಲ್ಲಿ ಎರಡು ವ್ಯಾಕರಣ ಪಂಥಗಳು ಏರ್ಪಟ್ಟವು. ವೈಯಾಕರಣರಲ್ಲಿ ಅತ್ಯಂತ ಪ್ರಸಿದ್ಧರಾದವರು; ಛಂದಶ್ಶಾಸ್ತ್ರ ಪ್ರವರ್ತಕ ಖಲೀಲ್-ಬ್-ಅಹಮದ್(786), ಅಲ್ ಕಿತಾಬ್ನ ಕರ್ತೃ ಅಬು ಬಿಷ್ರ್ ಅಮ್ರ್ ಉ ಥ್ಮನ್ ಸಿಬ್ವೈಯ (796). ಭಾಷೆಗೂ ನಿಘಂಟಿಗೂ ಸಂಬಂಧಪಟ್ಟ್ಟ ವಿಷಯಗಳನ್ನು ಬೆದೂಯಿನ್ ಜನರಿಂದ ಶೇಖರಿಸಲಾಯಿತು. ಕಾಡುಮೃಗಗಳು, ಕುದುರೆಗಳು, ಒಂಟೆಗಳು, ಮಳೆ ಮತ್ತು ಮನುಷ್ಯನ ವಾಸಸ್ಥಾನಗಳು-ಇತ್ಯಾದಿ ವಿಷಯಗಳ ಮೇಲಿನ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಲಾಯಿತು. ಈ ಪುಸ್ತಕಗಳನ್ನು ಅವಕ್ಕಿಂತಲೂ ದೊಡ್ಡವೂ ಕ್ರಮಬದ್ಧವೂ ಆದ ನಿಘಂಟುಗಳಲ್ಲಿ ಸೇರಿಸಿಕೊಳ್ಳಲಾಯಿತು. ಬಸ್ರ ಪಂಥಕ್ಕೆ ಸೇರಿದ ಅಬುಬಕರ್ ಇಬ್ನ್ ದುರೈದನು ಜಂಹರ ಎಂಬ ದೊಡ್ಡ ಪ್ರಮಾಣದ ನಿಘಂಟನ್ನೂ ಶಬ್ದಗಳ ಮೂಲರೂಪ, ನಿಷ್ಪನ್ನ ರೂಪಗಳನ್ನು ವಿವರಿಸುವ ಕಿತಾಬ್-ಅಲ್-ಇಷ್ತಿಕಾಕ್ ಎಂಬ ಗ್ರಂಥವನ್ನು ರಚಿಸಿದ ಈ ವರ್ಗಕ್ಕೆ ಸೇರಿದವನಾದ ಅಲ್ ಮುಬರ್ರಾದ್ (898) ಭಾಷೆ ಮತ್ತು ಸಾಹಿತ್ಯಗಳನ್ನಲ್ಲದೆ ಪ್ರಾಚೀನ ಇತಿಹಾಸ ಮತ್ತು ಸಂಪ್ರದಾಯಗಳನ್ನೂ ಒಳಗೊಂಡಿರುವ ಕಿತಾಬ್-ಅಲ್-ಕಮೀಲ್ ಎಂಬ ವಿಶ್ವಕೋಶವನ್ನು ರಚಿಸಿದ. ಮತೊಂದು ಕಡೆಯಲ್ಲಿ ಕೂಫ ನಗರದ ಪಂಥವನ್ನು ಪ್ರತಿನಿಧಿಸುವ ಕಿಸಾಯಿ, ಫರ್ರ ಇಬ್ನ್ ಅಸ್ ಸಿಕ್ಕಿತ್ ಶಾಸ್ರ್ತಜರ ಇಸ್ಲಾಹ್ ಅಲ್ ಮನ್ತಿಕ್, ಕಿತಬ್ ಅಲ್ ಅಲ್ಫಿಜ್ ಕೃತಿಗಳು ಮುಖ್ಯವಾಗಿವೆ. ಅಲ್-ಮುಬರ್ರಾದ್ನಷ್ಟೇ ಮುಖ್ಯನಾದ ಥ ಅಲಬ್ (903) ತನ್ನ ಕಿತಾಬ್-ಅಲ್-ಫನೀಷ್ ಗ್ರಂಥದಿಂದ ಪ್ರಸಿದ್ಧನಾದ. ಈತನ ಶಿಷ್ಯ ಇಬ್ನ್ ಅಲ್-ಅನ್ಬರಿ ವಿರೋಧಾರ್ಥಕ ಶಬ್ದಗಳ ಮೇಲೆ ಒಂದು ಪುಸ್ತಕವನ್ನು ಬರೆದ. ದಿವಾನಗಳನ್ನು ಸಂಗ್ರಹಿಸಿದ; ಅವುಗಳ ಮೇಲೆ ವ್ಯಾಖ್ಯಾನ ಬರೆದ. ಬಾಗ್ದಾದಿನಲ್ಲಿ ಇಬ್ನ್-ಖಲವೈಯ, ಇಬ್ನ್ಅಬ್ಬಾದ್, ಇಬ್ನ್ ಫಾರಿಸ್ ಎಂಬುವರು ಗಣ್ಯರಾಗಿದ್ದರು. ಸ್ಪೇನಿನಲ್ಲಿ ಭಾಷಾಶಾಸ್ರ್ತ ವನ್ನು ಪ್ರಾರಂಭಗೊಳಿಸಿದವ ಅಬು ಅಲಿ ಅಲ್-ಕಾಲಿ (966). ಆತನ ಅಮಾಲಿ ಎಂಬ ಪುಸ್ತಕ ವಿಷಯದಲ್ಲೂ ಉದ್ದೇಶದಲ್ಲೂ ಅಲ್-ಮುಬರ್ರಾದಾನ ಕಾಮಿಲ್ ಎಂಬ ಗ್ರಂಥವನ್ನು ಹೋಲುತ್ತದೆ. ಇಬ್ನ್ಸಿದ (1065) ಎಂಬಾತ ಬರೆದ ಅಲ್-ಮುಖಸ್ಸಾಸ್ ಎಂಬ ಗ್ರಂಥ ಸ್ಪೇನ್ ದೇಶದಲ್ಲಿ ಬರೆದ ಭಾಷಾಶಾಸ್ತ್ರ ಗ್ರಂಥದಲ್ಲಿ ಬಹಳ ದೊಡ್ಡದು. ನಿಘಂಟುಗಳ ರಚನೆಯಲ್ಲಿ ಇಂಥ ಪಯತ್ನಗಳಿಗೆ ಕಿರೀಟಪ್ರಾಯವಾಗಿರು ವುದು ಅಲ್-ಚೌಹರಿಯ ಸಹಾಹ್ (1002) ಎಂಬ ಪುಸ್ತಕ. ಈಜಿಪ್ಟಿನ ವಿದ್ವಾಂಸ ಇಬ್ನ್ ಮನ್ಜುರ್ (1311) ಈ ಗ್ರಂಥಕ್ಕೆ ಇತರ ನಿಘಂಟುಗಳ ವಿಷಯಗಳನ್ನು ಅಳವಡಿಸಿ ನಿಸಾನ್ ಅಲ್ ಅರಬ್ ಎಂಬ ಹೆಸರಿನಲ್ಲಿ 20 ಸಂಪುಟಗಳಿಗೆ ವಿಸ್ತರಿಸಿದ. ವ್ಯಾಕರಣ ಮತ್ತು ಭಾಷಾಶಾಸ್ರ್ತಗಳಲ್ಲಿ ಮತೊಬ್ಬ ಗಣ್ಯವ್ಯಕ್ತಿ ಜಮಕರಿ. ಈತ ಬರೆದ ಫೈಖ್ ನಿಘಂಟು, ವ್ಯಾಕರಣಕ್ಕೆ ಕೈಪಿಡಿಯೆನಿಸಿರುವ ಅಲ್-ಮುಫಾಸಲ್ಗಳು ಈಗಲೂ ಜನಪ್ರಿಯವಾಗಿವೆ. ಆದರೆ ಇಬ್ನ್ಮಾಲಿಕ್ಕ್ನ ಅಲ್ಫಿಯ ಎಂಬುದು ಅರಬೀ ಭಾಷೆಯನ್ನು ಕಲಿಸುವೆಡೆಯಲ್ಲೆಲ್ಲ ವ್ಯಾಕರಣಕ್ಕೆ ಪಠ್ಯ ಪುಸ್ತಕವಾಗಿದೆ.