From Wikipedia, the free encyclopedia
ಸಾಮಾನ್ಯವಾಗಿ ಫ್ರಾಂಕೆನ್ಸ್ಟೈನ್ ಎಂದು ಕರೆಯುವ ಫ್ರಾಂಕೆನ್ಸ್ಟೈನ್; ಅಥವಾ ದ ಮಾಡರ್ನ್ ಪ್ರಮೀತಿಯಸ್ ಮೇರಿ ಶೆಲ್ಲಿ ಬರೆದ ಒಂದು ಕಾದಂಬರಿ. ಶೆಲ್ಲಿ 18 ವರ್ಷ ವಯಸ್ಸಿನವಳಾಗಿದ್ದಾಗಲೇ ಕಥೆ ಬರೆಯಲು ಆರಂಭಿಸಿದ್ದಳು. ಈ ಕಾದಂಬರಿ ಅವಳು 20 ವರ್ಷ ವಯಸ್ಸಿನವಳಾಗಿದ್ದಾಗ ಪ್ರಕಟಗೊಂಡಿತು. ಮೊದಲ ಆವೃತ್ತಿಯು ಲಂಡನ್ನಲ್ಲಿ 1818ರಲ್ಲಿ ಅನಾಮಧೇಯವಾಗಿ ಪ್ರಕಟವಾಯಿತು. ಶೆಲ್ಲಿಯ ಹೆಸರು ಫ್ರಾನ್ಸ್ನಲ್ಲಿ ಬಿಡುಗಡೆಯಾದ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿತು.ಕಾದಂಬರಿಯ ಶೀರ್ಷಿಕೆಯು ವಿಕ್ಟರ್ ಫ್ರಾಂಕೆನ್ಸ್ಟೈನ್ ಎಂಬ ವಿಜ್ಞಾನಿಯೊಬ್ಬನನ್ನು ಸೂಚಿಸುತ್ತದೆ. ಅವನು ಕಾದಂಬರಿಯಲ್ಲಿ ಜೀವನವನ್ನು ಹೇಗೆ ರೂಪಿಸುವುದು ಹಾಗೂ ಸರಾಸರಿಗಿಂತ ದೊಡ್ಡದಾಗಿ ಮತ್ತು ಅಧಿಕ ಪ್ರಬಲವಾಗಿ ಮಾನವನಂತೆ ಜೀವಿಯೊಂದನ್ನು ರಚಿಸುವುದು ಹೇಗೆ ಎಂಬುದನ್ನು ಕಲಿಯುತ್ತಾನೆ. ಜನಪ್ರಿಯ ಸಂಸ್ಕೃತಿಯಲ್ಲಿ ಜನರು ದೈತ್ಯ ರೂಪವನ್ನು ನಿರೂಪಿಸಲು "ಫ್ರಾಂಕೆನ್ಸ್ಟೈನ್"ಅನ್ನು ತಪ್ಪಾಗಿ ಸೂಚಿಸುತ್ತಾರೆ. ಫ್ರಾಂಕೆನ್ಸ್ಟೈನ್ ಗಾತಿಕ್ ಕಾದಂಬರಿ ಮತ್ತು ರೊಮ್ಯಾಂಟಿಕ್ ಮುನ್ನಡೆಯ ಕೆಲವು ಅಂಶಗಳನ್ನು ಒಳಗೊಂಡಿದೆ. ಕಾದಂಬರಿಯ ಉಪಶೀರ್ಷಿಕೆ ದ ಮಾಡರ್ನ್ ಪ್ರಮೀತಿಯಸ್ ನಲ್ಲಿ ಪರೋಕ್ಷವಾಗಿ ಸೂಚಿಸಲಾದ, ಕೈಗಾರಿಕಾ ಕ್ರಾಂತಿಯಲ್ಲಿನ ಆಧುನಿಕ ಮಾನವನ ವಿಸ್ತರಣೆಯ ವಿರುದ್ಧ ಎಚ್ಚರಿಕೆಯೂ ಇದೆ. ಕಥೆಯು ಸಾಹಿತ್ಯ ಮತ್ತು ಜನಪ್ರಿಯ ಸಂಸ್ಕೃತಿಯಾದ್ಯಂತದ ಪ್ರಭಾವವನ್ನು ಹೊಂದಿದೆ ಮತ್ತು ಭಯಾನಕ ಕಥೆ ಮತ್ತು ಚಿತ್ರಗಳ ಒಂದು ಸಂಪೂರ್ಣ ಶೈಲಿಯನ್ನು ನೀಡಿದೆ.
ಫ್ರಾಂಕೆನ್ಸ್ಟೈನ್ ಕ್ಯಾಪ್ಟನ್ ರಾಬರ್ಟ್ ವಾಲ್ಟನ್ ಮತ್ತು ಅವನ ಸಹೋದರಿ ಮಾರ್ಗರೇಟ್ ವಾಲ್ಟನ್ ಸ್ಯಾವಿಲ್ಲೆ ನಡುವಿನ ಪತ್ರವ್ಯವಹಾರದ ಬಗ್ಗೆ ತಿಳಿಸುವ ಪತ್ರಗಳ ರೂಪದಲ್ಲಿ ಆರಂಭವಾಗುತ್ತದೆ. ವಾಲ್ಟನ್ ಪ್ರಸಿದ್ಧಿ ಮತ್ತು ಸ್ನೇಹವನ್ನು ಗಳಿಸುವ ಆಶಯದಿಂದ ಉತ್ತರ ಧ್ರುವವನ್ನು ಪರಿಶೋಧಿಸಲು ಮತ್ತು ಅವನ ವೈಜ್ಞಾನಿಕ ಜ್ಞಾನವನ್ನು ವಿಸ್ತರಿಸಲು ಉದ್ದೇಶಿಸುತ್ತಾನೆ. ಅವನ ಹಡಗು ಮಂಜುಗಡ್ಡೆಯಲ್ಲಿ ಸಿಕ್ಕಿಬೀಳುತ್ತದೆ. ನಂತರ ಒಂದು ದಿನ ನಾವಿಕ ತಂಡವು ದೂರದಲ್ಲಿ ಒಂದು ನಾಯಿ-ಜಾರುಬಂಡಿಯನ್ನು ನೋಡುತ್ತದೆ. ಅದರಲ್ಲಿ ಒಬ್ಬ ಭಾರಿಗಾತ್ರದ ಮನುಷ್ಯನಿರುತ್ತಾನೆ. ಕೆಲವು ಗಂಟೆಗಳ ನಂತರ ಆ ನಾವಿಕ ತಂಡವು, ಫ್ರಾಂಕೆನ್ಸ್ಟೈನ್ ನಿಶ್ಯಕ್ತನಾಗಿದ್ದು ಆಹಾರದ ಅವಶ್ಯಕತೆಯಲ್ಲಿದ್ದಾನೆಂಬುದನ್ನು ತಿಳಿಯುತ್ತದೆ. ಫ್ರಾಂಕೆನ್ಸ್ಟೈನ್ ಅವನ ದೈತ್ಯರೂಪದ ಅನ್ವೇಷಣೆಯಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅವನ ನಾಯಿಗಳಲ್ಲಿ ಒಂದು ಸತ್ತುಹೋಗುತ್ತದೆ. ಅವನು ನಾಯಿ-ಜಾರುಬಂಡಿಯನ್ನು ಒಡೆದು ಹುಟ್ಟನ್ನು ಮಾಡಿ, ಮಂಜಿನ-ತೆಪ್ಪವನ್ನು ಆ ಹಡಗಿನೆಡೆಗೆ ನಡೆಸುತ್ತಿರುತ್ತಾನೆ. ಫ್ರಾಂಕೆನ್ಸ್ಟೈನ್ ಅವನ ಪರಿಶ್ರಮದಿಂದ ಚೇತರಿಸಿಕೊಂಡ ನಂತರ, ವಾಲ್ಟನ್ಗೆ ಅವನ ಕಥೆಯನ್ನು ವಿವರವಾಗಿ ಹೇಳಲು ಆರಂಭಿಸುತ್ತಾನೆ. ಅವನ ಕಥೆಯನ್ನು ಆರಂಭಿಸುವ ಮೊದಲು ಫ್ರಾಂಕೆನ್ಸ್ಟೈನ್ ವಾಲ್ಟನ್ಗೆ, ಸಾಧಿಸಲು ಸಾಧ್ಯವಾಗುವ ಗುರಿಯನ್ನು ಮೀರಿದ ಮಹದಾಶೆಯನ್ನು ಹೊಂದುವುದರ ಶೋಚನೀಯ ಪರಿಣಾಮಗಳ ಬಗ್ಗೆ ಮುನ್ಸೂಚನೆ ನೀಡುತ್ತಾನೆ.
ವಿಕ್ಟರ್ ಫ್ರಾಂಕೆನ್ಸ್ಟೈನ್ ಅವನ ಬಾಲ್ಯದ ಬಗ್ಗೆ ವಾಲ್ಟನ್ಗೆ ಹೇಳಲು ಆರಂಭಿಸುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಫ್ರಾಂಕೆನ್ಸ್ಟೈನ್ ಅವನ ಸುತ್ತಲಿರುವ ಪ್ರಪಂಚದ ಬಗ್ಗೆ ಹೆಚ್ಚು ತಿಳಿಯಬೇಕೆಂಬ (ವಿಜ್ಞಾನದಲ್ಲಿ) ಪ್ರಚೋದನೆಗೊಳಗಾಗುತ್ತಾನೆ. ಅವನು ಪ್ರೀತಿಸುವ ಕುಟುಂಬ ಮತ್ತು ಸ್ನೇಹಿತರ ಸುರಕ್ಷಿತ ಪರಿಸರದಲ್ಲಿ ಬೆಳೆಯುತ್ತಾನೆ.
ಫ್ರಾಂಕೆನ್ಸ್ಟೈನ್ ಅವನ ಅನಾಥ ಸೋದರಸಂಬಂಧಿ ಎಲಿಜಾಬೆತ್ ಲ್ಯಾವೆಂಜಾಳೊಂದಿಗೆ ಹೆಚ್ಚು ನಿಕಟವಾಗಿರುತ್ತಾನೆ. ಎಲಿಜಾಬೆತ್ಳ ತಾಯಿ ತೀರಿಕೊಂಡ ನಂತರ ಅವಳನ್ನು ಫ್ರಾಂಕೆನ್ಸ್ಟೈನ್ನ ಕುಟುಂಬವು ಕರೆದುಕೊಂಡು ಬರುತ್ತದೆ. ಹುಡುಗನಾಗಿದ್ದಾಗ ಫ್ರಾಂಕೆನ್ಸ್ಟೈನ್ ನಿಸರ್ಗದ ಅದ್ಭುತಗಳನ್ನು ಕೇಂದ್ರೀಕರಿಸುವ ವಿಜ್ಞಾನದ ಅಧ್ಯಯನಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದನು. ಅವನು ಜರ್ಮನಿಯ ಇಂಗೋಲ್ಸ್ಟ್ಯಾಡ್ಟ್ನ ವಿಶ್ವವಿದ್ಯಾನಿಲಯಕ್ಕೆ ಹೋಗಲು ಆಲೋಚಿಸುತ್ತಾನೆ. ಆದರೆ ಅವನು ಹೊರಡುವುದಕ್ಕಿಂತ ಒಂದು ವಾರ ಮೊದಲು ಫ್ರಾಂಕೆನ್ಸ್ಟೈನ್ನ ತಾಯಿ ಮತ್ತು ಸೋದರಸಂಬಂಧಿ ಎಲಿಜಾಬೆತ್ ಕೆಂಬರ(ಸ್ಕಾರ್ಲಟೀನ, ತೀವ್ರವಾದ ಸೋಂಕುಜ್ವರ)ದಿಂದ ಅಸ್ವಸ್ಥರಾಗುತ್ತಾರೆ. ಎಲಿಜಾಬೆತ್ ಗುಣಮುಖಳಾಗುತ್ತಾಳೆ. ಆದರೆ ಫ್ರಾಂಕೆನ್ಸ್ಟೈನ್ನ ತಾಯಿ ಆ ರೋಗದಿಂದ ಸಾವನ್ನಪ್ಪುತ್ತಾಳೆ. ಸಂಪೂರ್ಣ ಕುಟುಂಬ ದುಃಖಕ್ಕೀಡಾಗುತ್ತದೆ. ತಾಯಿಯ ಸಾವನ್ನು ಫ್ರಾಂಕೆನ್ಸ್ಟೈನ್ ಅವನ ಜೀವನದ ಮೊದಲ ದುರದೃಷ್ಟವಾಗಿ ಕಾಣುತ್ತಾನೆ. ವಿಶ್ವವಿದ್ಯಾನಿಲಯದಲ್ಲಿ ಅವನು ರಾಸಾಯನಿಕ ವಿಜ್ಞಾನ ಮತ್ತು ಇತರ ವಿಜ್ಞಾನಗಳಲ್ಲಿ ಹೆಚ್ಚು ಮಿಂಚುತ್ತಾನೆ. ಜೀವನವು ಹೇಗೆ ನಶಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದರೊಂದಿಗೆ ಜೀವನದಲ್ಲಿ ಅಜೀವವಾಗಿರುವುದನ್ನು ಪರ್ಯಾಪ್ತಗೊಳಿಸುವ ರಹಸ್ಯವನ್ನು ಕಂಡುಹಿಡಿಯುತ್ತಾನೆ. 1790ರ ದಶಕದಲ್ಲಿ ಕಂಡುಹಿಡಿಯಲಾದ ಒಂದು ತಂತ್ರಜ್ಞಾನ ನೇರ ವಿದ್ಯುತ್ ಪ್ರಯೋಗದಲ್ಲೂ ಅವನು ಆಸಕ್ತಿ ಹೊಂದಿರುತ್ತಾನೆ.
ದೈತ್ಯ ರೂಪಗಳ ರಚನೆಯ ಸ್ಪಷ್ಟ ವಿವರಗಳು ಅನಿಶ್ಚಿತವಾಗಿದ್ದುದರಿಂದ, ಫ್ರಾಂಕೆನ್ಸ್ಟೈನ್ ಹೆಣಮಾಳಿಗೆಗಳಿಂದ ಮೂಳೆಗಳನ್ನು ಸಂಗ್ರಹಿಸಿದನು ಮತ್ತು "ಮಾನವ ರಚನೆಯ ಅದ್ಭುತ ರಹಸ್ಯವಾದ ಲೌಕಿಕ ಬೆರಳಿನಿಂದ ಹೆಚ್ಚು ಗೊಂದಲಕ್ಕೊಳಗಾದನು" ಎಂದು ವಿವರಿಸುತ್ತಾನೆ. ಕೊಠಡಿ ಮತ್ತು ಕೊಲೆಮನೆಯನ್ನು ಕೂಲಂಕಷವಾಗಿ ಪರಿಶೀಲಿಸುವಾಗ ಅವನ ಅನೇಕ ವಸ್ತುಗಳನ್ನು ನೀಡಿದನು, ಎಂದೂ ಹೇಳುತ್ತಾನೆ. ಫ್ರಾಂಕೆನ್ಸ್ಟೈನ್, ಮಾನವ ದೇಹದ ಸಣ್ಣ ಭಾಗಗಳನ್ನು ಪುನರಾವರ್ತಿಸಲು ಕಷ್ಟ ಇರುವುದರಿಂದ ಅವನ ಭಾಗದಿಂದಲೇ ಸಾಮಾನ್ಯ ಮನುಷ್ಯನಿಗಿಂತ ಅತಿದೊಡ್ಡದಾದ ಸುಮಾರು ಎಂಟು ಅಡಿ ಎತ್ತರದ ದೈತ್ಯ ರೂಪವನ್ನು ಬಲವಂತವಾಗಿ ಮಾಡಲ್ಪಟ್ಟನು ಎಂದು ವಿವರಿಸುತ್ತಾನೆ. ದೈತ್ಯ ರೂಪ ರಚನೆಯಾದ ನಂತರ, ಅದರ ಭಯದಿಂದಾಗಿ ಫ್ರಾಂಕೆನ್ಸ್ಟೈನ್ ಅಡಗಿಕೊಳ್ಳುತ್ತಾನೆ. ಫ್ರಾಂಕೆನ್ಸ್ಟೈನ್ ಆ ಪ್ರದೇಶವನ್ನು ಬಿಟ್ಟು ಓಡಿಹೋಗುತ್ತಾನೆ.
ಮಾನವ ಜೀವವನ್ನು ರಚಿಸುವ ಅವನ ರಹಸ್ಯ ಪ್ರಯತ್ನಗಳ ಮತ್ತು ಬಳಕೆಯ ನಂತರ ಫ್ರಾಂಕೆನ್ಸ್ಟೈನ್ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ನಂತರ ಅವನ ಬಾಲ್ಯ ಸ್ನೇಹಿತ ಹೆನ್ರಿ ಕ್ಲೆರ್ವಲ್ನಿಂದಾಗಿ ಗುಣಮುಖನಾಗುತ್ತಾನೆ. ಅನಾರೋಗ್ಯದಿಂದ ಪುನಃಚೇತರಿಸಿಕೊಳ್ಳಲು ಫ್ರಾಂಕೆನ್ಸ್ಟೈನ್ಗೆ ನಾಲ್ಕು ತಿಂಗಳು ಹಿಡಿಯುತ್ತದೆ. ಐದು ವರ್ಷ ವಯಸ್ಸಿನ ತಮ್ಮ ವಿಲಿಯಂ ಕೊಲೆಯಾಗಿದ್ದಾನೆ ಎಂಬುದನ್ನು ತಿಳಿದ ಅವನು ಮನೆಗೆ ಹಿಂದಿರುಗಬೇಕೆಂದು ನಿರ್ಧರಿಸುತ್ತಾನೆ. ವಿಲಿಯಂಗೆ ತಾಯಿಯ ಲಾಕೆಟ್ಟನ್ನು ಧರಿಸಲು ತಾನು ಅನುಮತಿ ನೀಡಿದುದರಿಂದ ಅವನ ಸಾವಿಗೆ ತಾನೇ ಕಾರಣವಾಗಿದ್ದೇನೆ ಎನ್ನುತ್ತಾ ಎಲಿಜಾಬೆತ್ ತನ್ನನ್ನು ತಾನು ದೂರಿಕೊಳ್ಳುತ್ತಾಳೆ. ವಿಲಿಯಂನ ಕೊಲೆಯ ನಂತರ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಫ್ರಾಂಕೆನ್ಸ್ಟೈನ್ನ ತಾಯಿಯ ಲಾಕೆಟ್ಟು, ವಿಲಿಯಂನ ದಾದಿ ಜಸ್ಟಿನ್ಳ ಜೇಬಿನಲ್ಲಿ ಕಂಡುಬಂದುದರಿಂದ ಅವಳನ್ನು ಗಲ್ಲಿಗೇರಿಸಲಾಗುತ್ತದೆ. ವಿಲಿಯಂನನ್ನು ಜೀವಿಯೊಂದು ಕೊಂದು, ಲಾಕೆಟ್ಟನ್ನು ಜಸ್ಟಿನ್ಳ ಕೋಟಿನಲ್ಲಿ ಇಟ್ಟಿರುತ್ತದೆ, ಎಂಬುದು ಬಯಲಾಗುತ್ತದೆ. ವಿಲಿಯಂನನ್ನು ಆ ಜೀವಿ ಕೊಂದುದರ ಹಿನ್ನೆಲೆ ಕಥೆಯನ್ನು ನೀಡಲಾಗಿದೆ.
ಮಾನವರೊಂದಿಗಿನ ಅನೇಕ ಕಠಿಣ ಹೋರಾಟಗಳ ನಂತರ ಫ್ರಾಂಕೆನ್ಸ್ಟೈನ್ನ ದೈತ್ಯ ರೂಪವು ಅವರಿಂದ ಭಯಭೀತಗೊಳ್ಳುತ್ತದೆ. ನಂತರ ಅದು ಕುಟುಂಬವೊಂದು ಜೀವಿಸುತ್ತಿದ್ದ ಗುಡಿಸಲಿನ ಹತ್ತಿರ ಬಂದು ಒಂದು ವರ್ಷ ಕಳೆಯುತ್ತದೆ. ಆ ಕುಟುಂಬವು ಶ್ರೀಮಂತವಾಗಿರುತ್ತದೆ. ಆದರೆ ಫೆಲಿಕ್ಸ್ ಡಿ ಲ್ಯಾಸಿಯು ಅಪರಾಧವೊಂದರಲ್ಲಿ ಆಪಾದಿತನಾಗಿ ತಪ್ಪಾಗಿ ಮರಣದಂಡನೆಗೆ ಒಳಗಾದ ಟರ್ಕಿಯ ವ್ಯಾಪಾರಿಯೊಬ್ಬನನ್ನು ರಕ್ಷಿಸಿದುದಕ್ಕಾಗಿ ಅವನ ಕುಟುಂಬವು ಗಡೀಪಾರಾಗಿರುತ್ತದೆ. ಫೆಲಿಕ್ಸ್ನಿಂದ ಕಾಪಾಡಲ್ಪಟ್ಟವನು ಅವನು ಪ್ರೀತಿಸಿದ ಹುಡುಗಿ ಸೇಫೈಳ ತಂದೆಯಾಗಿರುತ್ತಾನೆ. ಪಾರು ಮಾಡಿದುದಕ್ಕಾಗಿ ಅವನು ಫೆಲಿಕ್ಸ್ನಿಗೆ ಸೇಫೈಳನ್ನು ವಿವಾಹವಾಗಲು ಅನುಮತಿ ನೀಡುತ್ತಾನೆ. ಆದರೂ ಅವನ ಪ್ರೀತಿಯ ಮಗಳು ಒಬ್ಬ ಕ್ರೈಸ್ತ ಹುಡುಗನನ್ನು ಮದುವೆಯಾಗುವ ಯೋಚನೆಯನ್ನು ಅವನಿಂದ ಸಹಿಸಿಕೊಳ್ಳಲು ಸಾಧ್ಯವಾಗದಿದ್ದುದರಿಂದ ಮಗಳೊಂದಿಗೆ ಊರುಬಿಟ್ಟು ದೂರ ಹೋಗುತ್ತಾನೆ. ಆದರೆ ಯುರೋಪಿನ ಮಹಿಳೆಯರ ಸ್ವಾತಂತ್ರ್ಯದ ತೀವ್ರತೆಯಿಂದಾಗಿ ಸೇಫೈ ಹಿಂದಿರುಗುತ್ತಾಳೆ.
ಡಿ ಲ್ಯಾಸಿಯ ಕುಟುಂಬವನ್ನು ವೀಕ್ಷಿಸುವ ಮೂಲಕ, ಫ್ರಾಂಕೆನ್ಸ್ಟೈನ್ನ ದೈತ್ಯ ರೂಪವು ಸಂಸ್ಕಾರ ಕಲಿತುಕೊಳ್ಳುತ್ತದೆ. ಅಲ್ಲದೆ ಆತ್ಮಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತದೆ. ಗಮನಿಸುವ ಎಲ್ಲಾ ಮಾನವರಿಗಿಂತ ತಾನು ದೈಹಿಕವಾಗಿ ಭಿನ್ನವಾಗಿದ್ದೇನೆ ಎಂಬುದನ್ನು ಅರಿತುಕೊಳ್ಳುತ್ತದೆ. ಒಡನಾಡಿಗಳಿಲ್ಲದಿದ್ದುದರಿಂದ ಅದು ಡಿ ಲ್ಯಾಸಿಯ ಸ್ನೇಹಿತನಾಗಲು ಪ್ರಯತ್ನಿಸುತ್ತದೆ. ಕುಟುಂಬದೊಂದಿಗೆ ಸ್ನೇಹಿತನಾಗಲು ಪ್ರಯತ್ನಿಸುವಾಗ ಅದರ ದೈತ್ಯ ರೂಪದ ಬಗ್ಗೆ ಅವರಿಗಿದ್ದ ಭಯದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಈ ನಿರಾಕರಣೆಯು ಅದರ ದೈತ್ಯ ರೂಪವನ್ನು ಸೃಷ್ಟಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಮಾಡುತ್ತದೆ.
ಫ್ರಾಂಕೆನ್ಸ್ಟೈನ್ನ ದೈತ್ಯ ರೂಪವು ಜಿನೇವಾಕ್ಕೆ ಹೋಗುತ್ತದೆ. ಅಲ್ಲಿ ಕಾಡಿನಲ್ಲಿ ಒಬ್ಬ ಸಣ್ಣ ಹುಡುಗನನ್ನು ಭೇಟಿ ಮಾಡುತ್ತದೆ. ಆ ಹುಡುಗನು ಇನ್ನೂ ಚಿಕ್ಕವನಾಗಿದ್ದುದರಿಂದ ಮತ್ತು ಅದರ ಭೀಕರತೆಯ ಬಗೆಗಿನ ಹಿರಿಯರ ಅರಿವಿನ ಪ್ರಭಾವಕ್ಕೊಳಗಾಗಿಲ್ಲದಿದ್ದುದರಿಂದ ಅವನು ತನಗೆ ಉತ್ತಮ ಸಂಗಾತಿಯಾಗುತ್ತಾನೆ, ಎಂಬ ಆಶಯದಿಂದ ಫ್ರಾಂಕೆನ್ಸ್ಟೈನ್ನ ದೈತ್ಯ ರೂಪವು ಆ ಮಗುವನ್ನು ಅಪಹರಣ ಮಾಡಲು ಯೋಚಿಸುತ್ತದೆ. ಆದರೆ ಫ್ರಾಂಕೆನ್ಸ್ಟೈನ್ನೊಂದಿಗಿನ ಸಂಬಂಧದಿಂದಾಗಿ ಆ ಹುಡುಗನಿಗೆ ಅರಿವಿಗೆ ಬಂದು, ದೈತ್ಯ ರೂಪವನ್ನು ನೋಡಿ ಕಿರಿಚಿಕೊಳ್ಳುತ್ತಾನೆ, ಮೂದಲಿಸುತ್ತಾನೆ, ರೇಗಿಸುತ್ತಾನೆ. ಹುಡುಗನಿಗೆ ಕಾರಣವನ್ನು ಬಿಡಿಸಿ ಹೇಳುವ ಪ್ರಯತ್ನದಲ್ಲಿ ದೈತ್ಯ ರೂಪವು ಮೌನವಾಗಿಸಲು ಅವನ ಬಾಯಿಯನ್ನು ಮುಚ್ಚುತ್ತದೆ. ಇದರಿಂದಾಗಿ ದೈತ್ಯ ರೂಪವು ಹುಡುಗನ ಉಸಿರುಕಟ್ಟಿಸಿ ಸಾಯಿಸಿದಂತಾಗುತ್ತದೆ. ಮೂಲ ಉದ್ದೇಶ ಅದಾಗಿರದಿದ್ದರೂ, ದೈತ್ಯ ರೂಪವು ತನ್ನನ್ನು ರಚಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನು ಅದರ ಮೊದಲ ಕ್ರಿಯೆಯಾಗಿ ತೆಗೆದುಕೊಳ್ಳುತ್ತದೆ. ದೈತ್ಯ ರೂಪವು ಸತ್ತ ಹುಡುಗನ ಕತ್ತಿನಿಂದ ಹಾರವನ್ನು ತೆಗೆದು, ನಿದ್ರಿಸುತ್ತಿದ್ದ ಮಹಿಳೆ ಜಸ್ಟಿನ್ಳಲ್ಲಿ ಇರಿಸುತ್ತದೆ. ಜಸ್ಟಿನ್ ಕತ್ತಿನ ಹಾರವನ್ನು ಹೊಂದಿರುವುದು ಕಂಡುಬಂದು, ಅವಳನ್ನು ವಿಚಾರಣೆಗೆ ಒಳಪಡಿಸಿ, ಅಪರಾಧಿಯಾಗಿ ಮಾಡಲಾಗುತ್ತದೆ. ಈ ವಿಚಾರಣೆಯ ನ್ಯಾಯಾಧೀಶರು, ವ್ಯಕ್ತಿಗೆ ಮರಣದಂಡನೆ ವಿಧಿಸುವಲ್ಲಿ ಯಾವುದೇ ಸಂದೇಹವಿದ್ದರೆ ಅದನ್ನು ನಿರಾಕರಿಸುತ್ತಿದ್ದ ಕಾರ್ಯಕ್ಕೆ ಪ್ರಸಿದ್ಧರಾಗಿದ್ದರು; ಆದರೆ ಬಹಿಷ್ಕರಣದ ಭಯದಿಂದಾಗಿ, ಕೊಲೆ ಮಾಡಿದ ಅಪರಾಧದಲ್ಲಿ ಜಸ್ಟಿನ್ಳನ್ನು ಗಲ್ಲಿಗೇರಿಸುತ್ತಾರೆ.
ಫ್ರಾಂಕೆನ್ಸ್ಟೈನ್ ಅವನ ತಮ್ಮನ ಸಾವಿನ ಬಗ್ಗೆ ತಿಳಿದು, ಅವನ ಕುಟುಂಬದೊಂದಿಗೆ ಇರುವುದಕ್ಕಾಗಿ ಜಿನೇವಾಕ್ಕೆ ಹಿಂದಿರುಗುತ್ತಾನೆ. ಫ್ರಾಂಕೆನ್ಸ್ಟೈನ್ ದೈತ್ಯ ರೂಪವನ್ನು ಅವನ ತಮ್ಮ ಕೊಲ್ಲಲ್ಪಟ್ಟ ಕಾಡಿನಲ್ಲಿ ನೋಡುತ್ತಾನೆ ಮತ್ತು ಆ ದೈತ್ಯ ರೂಪವೇ ವಿಲಿಯಂನ ಕೊಲೆಗಾರ ಎಂಬುದು ಅವನಿಗೆ ಮನದಟ್ಟಾಗುತ್ತದೆ. ತುಂಬಾ ಹಾನಿಯನ್ನು ಮಾಡಿದ ದೈತ್ಯ ರೂಪವನ್ನು ರಚಿಸಿದುದಕ್ಕೆ ದುಃಖ ಪಟ್ಟು ತಪ್ಪಿತಸ್ಥ ಮನೋಭಾವದಿಂದ ಫ್ರಾಂಕೆನ್ಸ್ಟೈನ್ ಶಾಂತಿಯನ್ನರಸುತ್ತಾ ಪರ್ವತಗಳ ಏಕಾಂತ ಸ್ಥಳದಲ್ಲಿ ಅವಿತುಕೊಳ್ಳುತ್ತಾನೆ. ಏಕಾಂತತೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ, ದೈತ್ಯ ರೂಪವು ಫ್ರಾಂಕೆನ್ಸ್ಟೈನ್ನನ್ನು ತಲುಪುತ್ತದೆ. ದೈತ್ಯ ರೂಪವನ್ನು ಕೊಲ್ಲುವ ಉದ್ದೇಶದಿಂದ ಮತ್ತು ಆರಂಭದ ರೋಷಾವೇಶದಿಂದ ಫ್ರಾಂಕೆನ್ಸ್ಟೈನ್ ಅದರ ಮೇಲೆ ಆಕ್ರಮಣ ಮಾಡುತ್ತಾನೆ. ಅದರ ರಚನೆಗಾರನಿಗಿಂತ ಅತಿದೊಡ್ಡದಾದ ಮತ್ತು ಹೆಚ್ಚು ಚುರುಕುಬುದ್ಧಿಯ ದೈತ್ಯ ರೂಪವು ಫ್ರಾಂಕೆನ್ಸ್ಟೈನ್ನಿಂದ ಉಪಾಯದಿಂದ ತಪ್ಪಿಸಿಕೊಳ್ಳುತ್ತದೆ ಮತ್ತು ಅವನಿಗೆ ಸಾವರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ದೈತ್ಯ ರೂಪವು ಅದರ ರಚನೆಯಿಂದ ಪ್ರಾರಂಭಿಸಿ, ಆರಂಭದಲ್ಲಿ ನಿರುಪದ್ರವ ಅಮಾಯಕನಾಗಿದ್ದವನನ್ನು ಮಾನವರು ಶೋಚನೀಯ ಸ್ಥಿತಿಗೆ ತಳ್ಳಿದವರೆಗೆ ಅದರ ಅಲ್ಪದಿನದ ಜೀವನದ ಬಗ್ಗೆ ಉದ್ದ ಕಥೆ ಹೇಳುತ್ತದೆ. ದೈತ್ಯ ರೂಪವು ಏಕಾಂಗಿಯಾಗಿರುವುದರಿಂದ ಹಾಗೂ ಅದರ ಅಸ್ತಿತ್ವವನ್ನು ಮತ್ತು ಗುಣವನ್ನು ಯಾವ ಮಾನವನೂ ಸ್ವೀಕರಿಸುವುದಿಲ್ಲವಾದ್ದರಿಂದ, ಫ್ರಾಂಕೆನ್ಸ್ಟೈನ್ ಅದಕ್ಕೆ ಒಂದು ಹೆಣ್ಣು ಸಂಗಾತಿಯನ್ನು ಸೃಷ್ಟಿಸಬೇಕೆಂಬ ಬೇಡಿಕೆಯೊಂದಿಗೆ ಅದರ ಕಥೆಯನ್ನು ಪೂರ್ಣಗೊಳಿಸುತ್ತದೆ. ಒಂದು ಜೀವಿಸುವ ಜೀವಿಯಾಗಿ ತನಗೆ ಸಂತೋಷದಿಂದಿರುವ ಹಕ್ಕಿದೆ ಮತ್ತು ತನ್ನ ಸೃಷ್ಟಿಕರ್ತನಾಗಿ ಫ್ರಾಂಕೆನ್ಸ್ಟೈನ್ ಸಹಾಯ ಮಾಡುವ ಕರ್ತವ್ಯವನ್ನು ಹೊಂದಿದ್ದಾನೆ ಎಂದು ದೈತ್ಯ ರೂಪವು ವಾದಿಸುತ್ತದೆ. ಫ್ರಾಂಕೆನ್ಸ್ಟೈನ್ ಅದಕ್ಕೆ ಸಂಗಾತಿಯನ್ನು ಸೃಷ್ಟಿದರೆ ಮತ್ತೆ ಎಂದಿಗೂ ಪುನಃಕಾಣಿಸಿಕೊಳ್ಳುವುದಿಲ್ಲವೆಂದು ಭರವಸೆ ಕೊಡುತ್ತದೆ.
ಅವನ ಕುಟುಂಬಕ್ಕಾಗಿ ಹೆದರಿ ಫ್ರಾಂಕೆನ್ಸ್ಟೈನ್ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪುತ್ತಾನೆ ಮತ್ತು ಆ ಕೆಲಸವನ್ನು ಮಾಡುವುದಕ್ಕಾಗಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸುತ್ತಾನೆ. ಕ್ಲೆರ್ವಲ್ ಸಹ ಫ್ರಾಂಕೆನ್ಸ್ಟೈನ್ನೊಂದಿಗೆ ಬರುತ್ತಾನೆ. ಆದರೆ ಸ್ಕಾಟ್ಲ್ಯಾಂಡ್ನಲ್ಲಿ ಅವರಿಬ್ಬರು ಬೇರ್ಪಡುತ್ತಾರೆ. ಆರ್ಕ್ನಿ ದ್ವೀಪದಲ್ಲಿ ಮತ್ತೊಂದು ದೈತ್ಯ ರೂಪವನ್ನು ಸೃಷ್ಟಿಸುವಾಗ ಫ್ರಾಂಕೆನ್ಸ್ಟೈನ್ ಇನ್ನೊಂದು ದೈತ್ಯ ರೂಪವು ಮಾಡಬಹುದಾದ ಕಗ್ಗೊಲೆಯ ಕಳವಳದಿಂದ ದುಃಖಕ್ಕೊಳಗಾಗುತ್ತಾನೆ. ಫ್ರಾಂಕೆನ್ಸ್ಟೈನ್ ಅಪೂರ್ಣವಾಗಿದ್ದ ಕಾರ್ಯವನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತಾನೆ. ಇದನ್ನು ದೈತ್ಯ ರೂಪವು ನೋಡುತ್ತದೆ. ಫ್ರಾಂಕೆನ್ಸ್ಟೈನ್ನ ಮುಂಬರುವ ಮದುವೆಯ ದಿನದ ರಾತ್ರಿ ಅವನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತದೆ. ಫ್ರಾಂಕೆನ್ಸ್ಟೈನ್ ಐರ್ಲ್ಯಾಂಡ್ಗೆ ಹಿಂದಿರುಗುವ ಮೊದಲು, ದೈತ್ಯ ರೂಪವು ಕ್ಲೆರ್ವಲ್ನನ್ನು ಕೊಲ್ಲುತ್ತದೆ. ಐರ್ಲ್ಯಾಂಡ್ ತಲುಪಿದ ನಂತರ ಫ್ರಾಂಕೆನ್ಸ್ಟೈನ್ನನ್ನು ಕೊಲೆಯ ಆಪಾದನೆಯಲ್ಲಿ ಜೈಲಿಗೆ ಹಾಕಲಾಗುತ್ತದೆ. ಅಲ್ಲಿ ಅವನು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಬಂಧನದಿಂದ ಬಿಡುಗಡೆಯಾಗಿ, ಆರೋಗ್ಯವು ಪುನಃಚೇತರಿಸಿಕೆಯಾಗಿ ಫ್ರಾಂಕೆನ್ಸ್ಟೈನ್ ಅವನ ತಂದೆಯೊಂದಿಗೆ ಮನೆಗೆ ಹಿಂದಿರುಗುತ್ತಾನೆ.
ಮನೆಗೆ ಮರಳಿದ ನಂತರ ಫ್ರಾಂಕೆನ್ಸ್ಟೈನ್ ಅವನ ಸೋದರಸಂಬಂಧಿ ಎಲಿಜಾಬೆತ್ಳನ್ನು ಮದುವೆಯಾಗುತ್ತಾನೆ. ದೈತ್ಯ ರೂಪದ ಅಪಾಯದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದುದರಿಂದ, ಅದರೊಂದಿಗಿನ ಸಾವಿನ ಕಾದಾಟಕ್ಕೆ ತಯಾರಾಗುತ್ತಾನೆ. ದೈತ್ಯ ರೂಪವನ್ನು ನೋಡಿ ಎಲಿಜಾಬೆತ್ ಭಯಭೀತಳಾಗದಿರಲೆಂದು ಅವಳಿಗೆ ಫ್ರಾಂಕೆನ್ಸ್ಟೈನ್ ಆ ರಾತ್ರಿ ಅವಳ ಕೊಠಡಿಯಲ್ಲಿಯೇ ಮಲಗಿಕೊಳ್ಳುವಂತೆ ಹೇಳುತ್ತಾನೆ. ದೈತ್ಯ ರೂಪವು ಮರೆಸಿಟ್ಟ ಎಲಿಜಾಬೆತ್ಳನ್ನು ಸಾಯಿಸುತ್ತದೆ. ಪತ್ನಿ, ವಿಲಿಯಂ, ಜಸ್ಟಿನ್, ಕ್ಲೆರ್ವಲ್ ಮತ್ತು ಎಲಿಜಾಬೆತ್ ಮೊದಲಾದವರ ಮರಣದಿಂದ ಅತೀವ ದುಃಖಕ್ಕೊಳಗಾದ ಫ್ರಾಂಕೆನ್ಸ್ಟೈನ್ನ ತಂದೆ ಸಾವನ್ನಪ್ಪುತ್ತಾನೆ. ಫ್ರಾಂಕೆನ್ಸ್ಟೈನ್ ಇಬ್ಬರಲ್ಲಿ ಒಬ್ಬರು ಮತ್ತೊಬ್ಬರನ್ನು ಸಾಯಿಸುವವರೆಗೆ ದೈತ್ಯ ರೂಪವನ್ನು ಬೆನ್ನಟ್ಟಿಕೊಂಡು ಹೋಗುವ ಪ್ರತಿಜ್ಞೆ ಮಾಡುತ್ತಾನೆ. ಅನೇಕ ತಿಂಗಳ ಕಾಲ ಬೆಂಬತ್ತಿ ಹೋಗಿ ಇಬ್ಬರೂ ಉತ್ತರ ಧ್ರುವದ ಹತ್ತಿರ ಆರ್ಕಟಿಕ್ ಸರ್ಕಲ್ನಲ್ಲಿ ಕೊನೆಗಾಣುತ್ತಾರೆ.
ಫ್ರಾಂಕೆನ್ಸ್ಟೈನ್ನ ನಿರೂಪಣೆಯು ಕೊನೆಯಾದಾಗ, ಕ್ಯಾಪ್ಟನ್ ವಾಲ್ಟನ್ ಕಥೆ ಹೇಳಲು ಪ್ರಾರಂಭಿಸುತ್ತಾನೆ. ಫ್ರಾಂಕೆನ್ಸ್ಟೈನ್ ಅವನ ಕಥೆಯನ್ನು ಹೇಳಿ ಮುಗಿಸಿದ ಕೆಲವು ದಿನಗಳ ನಂತರ ವಾಲ್ಟನ್ ಮತ್ತು ನಾವಿಕ ತಂಡವು, ಮಂಜುಗಡ್ಡೆಯನ್ನು ಭೇದಿಸಿ ಮುಂದೆ ಹೋಗಲು ಸಾಧ್ಯವಿಲ್ಲದಿರುವುದರಿಂದ ಮನೆಗೆ ಹಿಂದಿರುಗಬೇಕೆಂದು ನಿರ್ಧರಿಸುತ್ತಾರೆ. ಫ್ರಾಂಕೆನ್ಸ್ಟೈನ್ ಸತ್ತಾಗ, ದೈತ್ಯ ರೂಪವು ಅವನ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತದೆ. ತನ್ನ ಅಸ್ತಿತ್ವದ ಬಗ್ಗೆ ಯಾರೂ ತಿಳಿಯದಂತೆ ಮಾಡಲು ತನ್ನನ್ನು ತಾನು ಚಿತೆಯಲ್ಲಿ ನಾಶಮಾಡಿಕೊಳ್ಳಲು ಹಡಗನ್ನು ಬಿಟ್ಟು ಧ್ರುವದೆಡೆಗೆ ಪ್ರಯಾಣಿಸುವುದಕ್ಕಿಂತ ಮೊದಲು ದೈತ್ಯ ರೂಪದ ಸೇಡಿನ ಮತ್ತು ತೀವ್ರ ಪಶ್ಚಾತಾಪದ ದೃಢವಾದ ಸಮರ್ಥನೆಯನ್ನು ವಾಲ್ಟನ್ ಕೇಳಿಸಿಕೊಳ್ಳುತ್ತಾನೆ.
How I, then a young girl, came to think of, and to dilate upon, so very hideous an idea?[2]
"ಬೇಸಿಗೆಯೇ ಇಲ್ಲದ ವರ್ಷ"ವಾದ 1816ರಲ್ಲಿ, 1815ರಲ್ಲಿ ಮೌಂಟ್ ತಾಂಬೋರದಲ್ಲಿ ಉಂಟಾದ ಸ್ಫೋಟದಿಂದಾಗಿ ಪ್ರಪಂಚವು ದೀರ್ಘಕಾಲದ ಅತಿಶೀತ ಜ್ವಾಲಾಮುಖಿಯ ಚಳಿಗಾಲವನ್ನು ಅನುಭವಿಸಿತು.[3] 18 ವರ್ಷದ ಮೇರಿ ವೋಲ್ಸ್ಟೋನ್ಕ್ರಾಫ್ಟ್ ಗಾಡ್ವಿನ್ ಮತ್ತು ಅವಳ ಪ್ರೇಮಿ (ಮತ್ತು ನಂತರದ ಪತಿ) ಪರ್ಸಿ ಬಿಶ್ಶೆ ಶೆಲ್ಲಿ ಸ್ವಿಟ್ಜರ್ಲ್ಯಾಂಡ್ನ ಲೇಕ್ ಜಿನೇವಾದ ಮೂಲಕ ವಿಲ್ಲಾ ಡಿಯೋಡಟಿಯ ಲಾರ್ಡ್ ಬೈರಾನ್ನನ್ನು ಭೇಟಿಮಾಡಿದರು. ಬೇಸಿಗೆಯ ರಜಾದಿನಗಳನ್ನು ಹೊರಗಡೆ ಆನಂದಿಸಲೆಂದು ಯೋಜಿಸಿದವರು ವಾಯುಗುಣವು ಹೆಚ್ಚು ತಂಪಾಗಿದ್ದುದ್ದರಿಂದ ಮತ್ತು ಕತ್ತಲು ಕವಿದಂತಿದ್ದುದರಿಂದ ಬೆಳಕು ಹರಿಯುವವರಗೆ ಒಳಗೆ ಇರುವುದಾಗಿ ನಿರ್ಧರಿಸಿದರು.
ಇತರ ವಿಷಯಗಳ ನಂತರ ಮಾತುಕತೆಯು ನೇರ ವಿದ್ಯುತ್ ಪ್ರಯೋಗದೆಡೆಗೆ ಮತ್ತು ಹೆಣಕ್ಕೆ ಅಥವಾ ಒಟ್ಟುಗೂಡಿದ ದೇಹದ ಭಾಗಗಳಿಗೆ ಜೀವ ನೀಡುವುದರ ಕಾರ್ಯಸಾಧ್ಯತೆಯೆಡೆಗೆ ತಿರುಗಿತು. ಸತ್ತ ಜೀವಿಗಳಿಗೆ ಜೀವಕೊಡುವ ಬಗ್ಗೆ ಹೇಳಿದ 18ನೇ ಶತಮಾನದ ಪ್ರಕೃತಿ ತತ್ವಶಾಸ್ತ್ರಜ್ಞ ಮತ್ತು ಕವಿ ಎರಾಸ್ಮಸ್ ಡಾರ್ವಿನ್ನ ಪ್ರಯೋಗಗಳ ಬಗ್ಗೆ ಮಾತನಾಡಿದನು.[4] ಬೈರಾನ್ನ ಯಾತ್ರಿನಿವಾಸದಲ್ಲಿ ಬೆಂಕಿಯ ಮುಂದೆ ಕುಳಿತುಕೊಂಡು ಆ ಗುಂಪು ಜರ್ಮನಿನ ದೆವ್ವದ ಕಥೆಗಳನ್ನೂ ಓದಿಕೊಂಡು ತಮಾಷೆಯಲ್ಲಿ ಕಾಲ ಕಳೆಯಿತು. ಇದು ಎಲ್ಲರೂ ಸ್ವಂತವಾಗಿ ಅಪ್ರಾಕೃತ ಕಥೆಯನ್ನು ಬರೆಯಬೇಕೆಂದು ಬೈರಾನ್ ಸೂಚಿಸುಂತೆ ಪ್ರೇರೇಪಿಸಿತು. ಸ್ವಲ್ಪ ಕಾಲದ ನಂತರ ಮೇರಿ ಗಾಡ್ವಿನ್ ಕನಸಿನಲ್ಲಿ ಫ್ರಾಂಕೆನ್ಸ್ಟೈನ್ ನ ಯೋಚನೆಯನ್ನು ರೂಪಿಸಿದಳು:
I saw the pale student of unhallowed arts kneeling beside the thing he had put together. I saw the hideous phantasm of a man stretched out, and then, on the working of some powerful engine, show signs of life, and stir with an uneasy, half vital motion. Frightful must it be; for SUPREMELY frightful would be the effect of any human endeavour to mock the stupendous mechanism of the Creator of the world.[5]
ಸಣ್ಣ ಕಥೆಯಾಗಬಹುದೆಂದು ಊಹಿಸಿದುದನ್ನು ಅವಳು ಬರೆಯಲು ಆರಂಭಿಸಿದಳು. ಪರ್ಸಿ ಶೆಲ್ಲಿಯ ಪ್ರೋತ್ಸಾಹದೊಂದಿಗೆ ಅವಳು ಈ ಕಥೆಯನ್ನು ಸಂಪೂರ್ಣ ಕಾದಂಬರಿಯಾಗಿ ವಿಸ್ತರಿಸಿದಳು.[6] ನಂತರ ಅವಳು ಸ್ವಿಟ್ಜರ್ಲ್ಯಾಂಡ್ನ ಬೇಸಿಗೆಯನ್ನು "ನಾನು ಮೊದಲ ಬಾರಿಗೆ ಬಾಲ್ಯದಿಂದ ಜೀವನಕ್ಕೆ ಕಾಲಿಟ್ಟ ಗಳಿಗೆ" ಎಂದು ವಿವರಿಸಿದ್ದಾಳೆ.[7] ಬೈರಾನ್ ಅವನು ಬಾಲ್ಕಾನ್ಸ್ಗೆ ಪ್ರಯಾಣಿಸುವಾಗ ಕೇಳಿದ ರಕ್ತಪಿಶಾಚಿಗಳ ಕಥೆಗಳನ್ನು ಆಧರಿಸಿದ ಅಂಶಗಳನ್ನು ಮತ್ತು ರೋಮಾಂಚಕಾರಿ ರಕ್ತಪಿಶಾಚಿ ಸಾಹಿತ್ಯ ಶೈಲಿಯ ಮೂಲಪ್ರತಿ ಜಾನ್ ಪಾಲಿಡರಿ ಬರೆದ ದ ವ್ಯಾಂಪೈರ್ ಅನ್ನು (1819) ಆಧರಿಸಿ ಬರೆಯುವಂತೆ ಹೇಳಿದನು. ಆದ್ದರಿಂದ ಈ ಒಂದು ಸಂದರ್ಭದಿಂದ ಎರಡು ಪೌರಾಣಿಕ ಭಯಾನಕ ಕಥೆಗಳು ಮೂಡಿಬಂದವು.
1818ರ ಮೇರಿಯ ಮತ್ತು ಪರ್ಸಿ ಬಿಶ್ಶೆ ಶೆಲ್ಲಿಯ ಮೊದಲ ಮೂರು-ಆವೃತ್ತಿಯ ಸಂಪುಟದ ಹಸ್ತಪ್ರತಿಗಳು (1816–1817ರಲ್ಲಿ ಬರೆದ) ಮತ್ತು ಮೇರಿ ಶೆಲ್ಲಿಯ ಪ್ರಕಟಗೊಂಡ ತಪ್ಪಿಲ್ಲದ ಪ್ರತಿಗಳು ಈಗ ಆಕ್ಸ್ಫರ್ಡ್ನ ಬಾಡ್ಲಿಯನ್ ಗ್ರಂಥಾಲಯದಲ್ಲಿವೆ. ಬಾಡ್ಲಿಯನ್ ಗ್ರಂಥಾಲಯವು ಆ ಪ್ರತಿಗಳನ್ನು 2004ರಲ್ಲಿ ಪಡೆಯಿತು ಮತ್ತು ಈಗ ಅವು ಅಬಿಂಗರ್ ಕಲೆಕ್ಷನ್ಗೆ ಸೇರಿವೆ.[8] ಅಕ್ಟೋಬರ್ 1ರ 2008ರಲ್ಲಿ ಬಾಡ್ಲಿಯನ್ ಫ್ರಾಂಕೆನ್ಸ್ಟೈನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿತು. ಅದು ಮೇರಿ ಶೆಲ್ಲಿಯ ಮೂಲ ಪ್ರತಿಗಳು ಹಾಗೂ ಪರ್ಸಿ ಶೆಲ್ಲಿಯ ಸೇರಿಕೆಗಳ ಮತ್ತು ಮಧ್ಯಸ್ಥಿಕೆಗಳ ನಡುವಿನ ಹೋಲಿಕೆಗಳನ್ನು ಹೊಂದಿದೆ. ಹೊಸ ಆವೃತ್ತಿಯನ್ನು ಪರಿಷ್ಕರಿಸಿದ್ದು ಚಾರ್ಲ್ಸ್ E. ರಾಬಿನ್ಸನ್: ದ ಒರಿಜಿನಲ್ ಫ್ರಾಂಕೆನ್ಸ್ಟೈನ್ (ISBN 978-1851243969).[9]
ಮೇರಿ ಶೆಲ್ಲಿ ಅವಳ ಬರವಣಿಗೆಯನ್ನು 1817ರ ಮೇಯಲ್ಲಿ ಪೂರ್ಣಗೊಳಿಸಿದಳು ಮತ್ತು ಫ್ರಾಂಕೆನ್ಸ್ಟೈನ್; ಅಥವಾ ದ ಮಾಡರ್ನ್ ಪ್ರಮೀತಿಯಸ್ 1818ರ ಜನವರಿ 1ರಲ್ಲಿ ಲಂಡನ್ನ ಸಣ್ಣ ಪ್ರಕಾಶನ ಕೇಂದ್ರ ಹಾರ್ಡಿಂಗ್, ಮೇವರ್ ಮತ್ತು ಜೋನ್ಸ್ನಿಂದ ಪ್ರಕಟಗೊಂಡಿತು. ಇದು ಮೇರಿಗಾಗಿ ಪರ್ಸಿ ಬಿಶ್ಶೆ ಶೆಲ್ಲಿ ಬರೆದ ಮುನ್ನುಡಿಯೊಂದಿಗೆ ಮತ್ತು ಅವಳ ತಂದೆ ತತ್ವಶಾಸ್ತ್ರಜ್ಞ ವಿಲಿಯಂ ಗಾಡ್ವಿನ್ಗೆ ಅರ್ಪಣೆಯಾಗಿ ಅನಾಮಧೇಯವಾಗಿ ಪ್ರಕಟವಾಯಿತು. ಇದು ಮೂರು ಸಂಪುಟಗಳಲ್ಲಿ ಕೇವಲ 500 ಪ್ರತಿಗಳ ಒಂದು ಆವೃತ್ತಿಯಾಗಿ, ಪ್ರಮಾಣಿತ "ಮೂರು ಸಂಪುಟಗಳ" ಗಾತ್ರದಲ್ಲಿ 19ನೇ ಶತಮಾನದ ಮೊದಲ ಆವೃತ್ತಿಯಾಗಿ ಬಿಡುಗಡೆಯಾಯಿತು. ಈ ಕಾದಂಬರಿಯು ಆರಂಭದಲ್ಲಿ ಪರ್ಸಿ ಬಿಶ್ಶೆ ಶೆಲ್ಲಿಯ ಪ್ರಕಾಶಕ ಚಾರ್ಲ್ಸ್ ಓಲ್ಲಿಯರ್ ಮತ್ತು ಬೈರಾನ್ನ ಪ್ರಕಾಶಕ ಜಾನ್ ಮುರ್ರೆಯಿಂದ ನಿರಾಕರಿಸಲ್ಪಟ್ಟಿತು.
ಫ್ರಾಂಕೆನ್ಸ್ಟೈನ್ 2ನ ಎರಡನೇ ಆವೃತ್ತಿ 1823ರ ಆಗಸ್ಟ್ 11ರಲ್ಲಿ ಎರಡು ಸಂಪುಟಗಳಲ್ಲಿ (G. ಮತ್ತು W. B. ವಿಟ್ಟಾಕರ್ನಿಂದ) ಪ್ರಕಟಗೊಂಡಿತು. ಇದರಲ್ಲಿ ಮೇರಿ ಶೆಲ್ಲಿಯನ್ನು ಲೇಖಕಿಯಾಗಿ ನಿರೂಪಿಸಲಾಗಿತ್ತು.
ಅಕ್ಟೋಬರ್ 31ರ 1831ರಲ್ಲಿ ಮೊದಲ "ಜನಪ್ರಿಯ" ಆವೃತ್ತಿಯು ಒಂದು ಸಂಪುಟದಲ್ಲಿ ಹೆನ್ರಿ ಕಾಲ್ಬರ್ನ್ ಮತ್ತು ರಿಚಾರ್ಡ್ ಬೆಂಟ್ಲಿಯಿಂದ ಪ್ರಕಟವಾಯಿತು. ಈ ಆವೃತ್ತಿಯನ್ನು ಮೇರಿ ಶೆಲ್ಲಿಯು ಹೆಚ್ಚಾಗಿ ಪರಿಷ್ಕರಿಸಿದ್ದಳು ಮತ್ತು ಒಂದು ಹೊಸ ದೀರ್ಘವಾದ ಮುನ್ನುಡಿಯನ್ನು ಸೇರಿಸುವ ಮೂಲಕ ಕಥೆಯನ್ನು ಇನ್ನಷ್ಟು ಅಂದಗೊಳಿಸಿದ ಆವೃತ್ತಿಯಾಗಿ ಮಾಡಿದ್ದಳು. 1818ರ ಮೂಲಕಥೆಯನ್ನು ಹೊಂದಿದ ಅನೇಕ ಆವೃತ್ತಿಗಳು ಇನ್ನೂ ಪ್ರಕಟಗೊಳ್ಳುತ್ತಿದ್ದರೂ, ಈ ಆವೃತ್ತಿಯು ಈಗ ಹೆಚ್ಚು ಓದಲ್ಪಡುತ್ತಿರುವ ಕಾದಂಬರಿಯಾಗಿದೆ. ವಾಸ್ತವವಾಗಿ ಹೆಚ್ಚಿನ ಪಂಡಿತರು 1818ರ ಆವೃತ್ತಿಯನ್ನು ಇಷ್ಟಪಡುತ್ತಾರೆ. ಇದು ಶೆಲ್ಲಿಯ ಮೂಲ ಪ್ರಕಟಣೆಯ ಅಂಶವನ್ನು ಉಳಿಸಿಕೊಂಡಿದೆ ಎಂದು ಅವರು ವಾದಿಸುತ್ತಾರೆ (ಆನ್ K. ಮೆಲ್ಲರ್ನ "ಚೂಸಿಂಗ್ ಎ ಟೆಕ್ಸ್ಟ್ ಆಫ್ ಫ್ರಾಂಕೆನ್ಸ್ಟೈನ್ ಟು ಟೀಚ್"ಅನ್ನು W.W. ನಾರ್ಟನ್ ಕ್ರಿಟಿಕಲ್ ಎಡಿಷನ್ನಲ್ಲಿ ಗಮನಿಸಿ).
ಅವನ ರಚನೆಯ ಬಗ್ಗೆ ಫ್ರಾಂಕೆನ್ಸ್ಟೈನ್ನ ನಿರಾಕರಣೆಗೆ ಕಾರಣ ಅವನು ಅದಕ್ಕೆ ಹೆಸರು ನೀಡಲಿಲ್ಲ ಎಂಬುದು. ಇದರಿಂದಾಗಿ ಅದನ್ನು ಗುರುತಿಸಲು ಕಷ್ಟವಾಗಿದೆ. ಬದಲಿಗೆ ಅದನ್ನು "ದೈತ್ಯರೂಪ", "ಭೂತ", "ದೆವ್ವ", "ದರಿದ್ರ" ಮತ್ತು "ಇದು" ಮೊದಲಾದ ಪದಗಳಿಂದ ಸೂಚಿಸಲಾಗುತ್ತದೆ. ಫ್ರಾಂಕೆನ್ಸ್ಟೈನ್ ದೈತ್ಯ ರೂಪದೊಂದಿಗೆ ಚ್ಯಾಪ್ಟರ್ 10ರಲ್ಲಿ ಸಂಭಾಷಣೆ ಮಾಡುವಾಗ ಅದನ್ನು "ಕೆಟ್ಟ ಕ್ರಿಮಿ", "ಅಸಹ್ಯ ದೈತ್ಯ ರೂಪ", "ದೆವ್ವ", "ದರಿದ್ರ ಭೂತ" ಮತ್ತು "ಅಸಹ್ಯ ಭೂತ" ಮೊದಲಾದ ಹೆಸರುಗಳಿಂದ ಕರೆಯುತ್ತಾನೆ.
ಫ್ರಾಂಕೆನ್ಸ್ಟೈನ್ ಕಥೆ ಹೇಳುವಾಗ ಶೆಲ್ಲಿಯು ದೈತ್ಯ ರೂಪವನ್ನು "ಆಡಮ್" ಎಂದು ಕರೆದಿದ್ದಾಳೆ.[11] ಶೆಲ್ಲಿಯು ಈಡನ್ನ ಉದ್ಯಾನದ ಮೊದಲ ಮಾನವನನ್ನು ಅವಳ ಸಾರೋಕ್ತಿಯಲ್ಲಿ ಹೀಗೆಂದು ಸೂಚಿಸಿದ್ದಾಳೆ:
ದೈತ್ಯ ರೂಪವನ್ನು ಕೆಲವೊಮ್ಮೆ ತಪ್ಪಾಗಿ "ಫ್ರಾಂಕೆನ್ಸ್ಟೈನ್" ಎಂದು ಕರೆಯಲಾಗುತ್ತಿತ್ತು. 1908ರಲ್ಲಿ ಒಬ್ಬ ಲೇಖಕ ಹೀಗೆ ಹೇಳಿದ್ದಾನೆ - "ಕೆಲವು ಭೀಕರ ದೈತ್ಯ ರೂಪಗಳನ್ನು ವಿವರಿಸಲು "ಫ್ರಾಂಕೆನ್ಸ್ಟೈನ್" ಪದವನ್ನು ಎಷ್ಟು ಸಾರ್ವತ್ರಿಕವಾಗಿ ಅದೂ ಸಹ ಬುದ್ಧಿವಂತ ಜನರು ತಪ್ಪಾಗಿ ಬಳಸುತ್ತಿರುವುದನ್ನು ನೋಡುವಾಗ ತುಂಬಾ ಆಶ್ಚರ್ಯಕರವಾಗುತ್ತದೆ".[12] ಎಡಿತ್ ವಾರ್ಟನ್ನ ದ ರೀಫ್ (1916) ಅಶಿಸ್ತಿನ ಮಗುವೊಂದನ್ನು "ಶಿಶು ಫ್ರಾಂಕೆನ್ಸ್ಟೈನ್" ಎಂದು ವರ್ಣಿಸುತ್ತದೆ.[13] 1844ರ ಜೂನ್ 12ರಲ್ಲಿ ದ ರೋವರ್ ನಲ್ಲಿ ಪ್ರಕಟಗೊಂಡ ಡೇವಿಡ್ ಲಿಂಡ್ಸೇಯ "ದ ಬ್ರೈಡಲ್ ಆರ್ನಮೆಂಟ್" "ಫ್ರಾಂಕೆನ್ಸ್ಟೈನ್ನ ಸೃಷ್ಟಿಕರ್ತನ" ಬಗ್ಗೆ ಸೂಚಿಸಿದೆ. ಜೇಮ್ಸ್ ವೇಲ್ನ 1931ರ ಜನಪ್ರಿಯ ಚಲನಚಿತ್ರ ಫ್ರಾಂಕೆನ್ಸ್ಟೈನ್ ಬಿಡುಗಡೆಯಾದ ನಂತರ, ಸಾರ್ವಜನಿಕರು ದೈತ್ಯ ರೂಪವನ್ನೇ "ಫ್ರಾಂಕೆನ್ಸ್ಟೈನ್" ಎಂಬುದಾಗಿ ಹೇಳಲು ಆರಂಭಿಸಿದರು. ಇದರ ಉಲ್ಲೇಖವು ಬ್ರೈಡ್ ಆಫ್ ಫ್ರಾಂಕೆನ್ಸ್ಟೈನ್ ನಲ್ಲಿ (1935) ಮತ್ತು ಆನಂತರದ ಅನೇಕ ಚಲನಚಿತ್ರಗಳಲ್ಲಿ ಕಂಡುಬರುತ್ತದೆ. ಅಲ್ಲದೆ ಅಬ್ಬೋಟ್ ಆಂಡ್ ಕಾಸ್ಟೆಲ್ಲೊ ಮೀಟ್ ಫ್ರಾಂಕೆನ್ಸ್ಟೈನ್ ನಂತಹ ಚಿತ್ರ ಶೀರ್ಷಿಕೆಗಳಲ್ಲಿಯೂ ಕಾಣಸಿಗುತ್ತದೆ.
ಮೇರಿ ಶೆಲ್ಲಿಯು "ಫ್ರಾಂಕೆನ್ಸ್ಟೈನ್" ಹೆಸರನ್ನು ಕನಸಿನಲ್ಲಿ ಕಂಡ ಬಿಂಬದಿಂದ ಪಡೆದಿರುವುದೆಂದು ಹೇಳಿಕೊಂಡಿದ್ದಾಳೆ. ಅವಳ ಸ್ವಂತಿಕೆಯ ಸಾರ್ವಜನಿಕ ಸಮರ್ಥನೆಯ ಹೊರತಾಗಿ, ಹೆಸರಿನ ಅರ್ಥವು ಊಹೆಯ ಮೂಲವಾಗಿದೆ. ಅಕ್ಷರಾರ್ಥದಂತೆ ಜರ್ಮನ್ ಭಾಷೆಯಲ್ಲಿ ಫ್ರಾಂಕೆನ್ಸ್ಟೈನ್ ಅಂದರೆ "ಫ್ರ್ಯಾಂಕ್ನ ಕಲ್ಲು". ಈ ಹೆಸರು ಮೇರಿ ಶೆಲ್ಲಿ ಕಾದಂಬರಿಯನ್ನು ಬರೆಯುವ ಮೊದಲು ಹಡಗಿನ ಪ್ರಯಾಣದ ಸಂದರ್ಭದಲ್ಲಿ ಕಂಡ ಕ್ಯಾಸಲ್ ಫ್ರಾಂಕೆನ್ಸ್ಟೈನ್ (ಬರ್ಗ್ ಫ್ರಾಂಕೆನ್ಸ್ಟೈನ್ )ನಂತಹ ಅನೇಕ ಸ್ಥಳಗಳಿಗೂ ಸಂಬಂಧಿಸಿದೆ. ಫ್ರಾಂಕೆನ್ಸ್ಟೈನ್ ಪ್ಯಾಲಟಿನೇಟ್ ಪ್ರದೇಶದಲ್ಲಿರುವ ಒಂದು ನಗರವೂ ಹೌದು; 1946ಕ್ಕಿಂತ ಮೊದಲು ಪೋಲ್ಯಾಂಡ್ನ ಸಿಲೇಶಿಯಾನಲ್ಲಿರುವ ಒಂದು ನಗರ ಜ್ಯಾಬ್ಕೊವೈಸ್ ಸ್ಲ್ಯಾಸ್ಕಿಯನ್ನು ಫ್ರಾಂಕೆನ್ಸ್ಟೈನ್ ಇನ್ ಸ್ಕ್ಲೆಸೀನ್ ಎಂದು ಕರೆಯಲಾಗುತ್ತಿತ್ತು.
ಇತ್ತೀಚೆಗೆ ರ್ಯಾದು ಫ್ಲೋರೆಸ್ಕ್ಯು ಅವನ ಪುಸ್ತಕ ಇನ್ ಸರ್ಚ್ ಆಫ್ ಫ್ರಾಂಕೆನ್ಸ್ಟೈನ್ ನಲ್ಲಿ ಹೀಗೆಂದು ವಾದಿಸಿದ್ದಾನೆ - ಮೇರಿ ಮತ್ತು ಪರ್ಸಿ ಶೆಲ್ಲಿ ಸ್ವಿಟ್ಜರ್ಲ್ಯಾಂಡ್ಗೆ ಹೋಗುವಾಗ ದಾರಿಯಲ್ಲಿ ಡಾರ್ಮ್ಸ್ಟ್ಯಾಡ್ಟ್ನ ಹತ್ತಿರ ರೈನ್ ನದಿಯಾದ್ಯಂತವಿರುವ ಕ್ಯಾಸಲ್ ಫ್ರಾಂಕೆನ್ಸ್ಟೈನ್ಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಹೆಸರಾಂತ ರಸವಿದ್ಯಾತಜ್ಞ ಕೊನ್ರ್ಯಾಡ್ ಡಿಪ್ಪೆಲ್ ಮಾನವನ ದೇಹದ ಮೇಲೆ ಪ್ರಯೋಗ ಮಾಡುವುದನ್ನು ನೋಡುತ್ತಾರೆ. ಆದರೆ ಮೇರಿ ಅವಳ ಸ್ವಂತಿಕೆಯ ಸಾರ್ವಜನಿಕ ಸಮರ್ಥನೆಯನ್ನು ನಿರ್ವಹಿಸುವುದಕ್ಕಾಗಿ ಈ ಭೇಟಿಯನ್ನು ಸೂಚಿಸದೆ ಮುಚ್ಚಿಟ್ಟಿದ್ದಳು. A.J. ಡೇಯ ಇತ್ತೀಚಿನ ಸಾಹಿತ್ಯಕ ಪ್ರಬಂಧವೊಂದು[14] ಫ್ಲೋರೆಸ್ಕ್ಯುನ ವಿವರಣೆಗೆ, ಮೇರಿ ಶೆಲ್ಲಿ ಅವಳ ಕಾದಂಬರಿಯನ್ನು ಆರಂಭಿಸುವ ಮೊದಲು ಕ್ಯಾಸಲ್ ಫ್ರಾಂಕೆನ್ಸ್ಟೈನ್[15] ಬಗ್ಗೆ ತಿಳಿದಿದ್ದಳು ಮತ್ತು ಅಲ್ಲಿಗೆ ಭೇಟಿ ನೀಡಿದ್ದಳು ಎಂಬುದಾಗಿ ಬೆಂಬಲ ನೀಡುತ್ತದೆ. ಮೇರಿ ಶೆಲ್ಲಿಯ 'ಕಳೆದುಹೋದ' ದಿನಚರಿಯಲ್ಲಿ ಹೇಳಲಾಗಿರುವ ಫ್ರಾಂಕೆನ್ಸ್ಟೈನ್ ಕೋಟೆಯ ಬಗೆಗಿನ ವಿವರಣೆಯನ್ನು ಡೇ ಸೇರಿಸಿದ್ದಾನೆ. ಆದರೂ ಈ ವಾದವು ವಿಮರ್ಶೆಯನ್ನು ಪಡೆಯಲಿಲ್ಲ; ಫ್ರಾಂಕೆನ್ಸ್ಟೈನ್ ಪರಿಣಿತ ಲಿಯೊನಾರ್ಡ್ ವೋಲ್ಫ್ ಇದನ್ನು "ಒಪ್ಪಲಾಗದ ಪಿತೂರಿಯ ವಾದ"[16] ಎಂದು ಹೇಳಿದ್ದಾನೆ. 'ಕಳೆದುಹೋದ ದಿನಚರಿ'ಗಳು ಮತ್ತು ಫ್ಲೋರೆಸ್ಕ್ಯುನ ದೂರುಗಳನ್ನು ಪರಿಶೀಲಿಸಲಾಗಿಲ್ಲ.[17]
Expression error: Unexpected < operator. ಜಾನ್ ಮಿಲ್ಟನ್ನ ಪ್ಯಾರಡೈಸ್ ಲಾಸ್ಟ್ ನಿಂದ ಪಡೆದ ವಿಕ್ಟರ್ ಹೆಸರಿನ ಅರ್ಥ ವಿವರಣೆಯು ಶೆಲ್ಲಿಯ ಮೇಲೆ ಗಾಢ ಪರಿಣಾಮ ಬೀರಿದ ಅಂಶವಾಗಿದೆ (ಪ್ಯಾರಡೈಸ್ ಲಾಸ್ಟ್ ನ ಉಲ್ಲೇಖನವೊಂದು ಫ್ರಾಂಕೆನ್ಸ್ಟೈನ್ ನ ಆರಂಭಿಕ ಪುಟದಲ್ಲಿದೆ ಮತ್ತು ಶೆಲ್ಲಿಯು ದೈತ್ಯ ರೂಪವೂ ಅದನ್ನು ಓದುವಂತೆ ಕಥೆಯಲ್ಲಿ ನಿರೂಪಿಸಿದ್ದಾಳೆ). ಮಿಲ್ಟನ್ ಪ್ಯಾರಡೈಸ್ ಲಾಸ್ಟ್ ನಲ್ಲಿ "ವಿಕ್ಟರ್"ನನ್ನು ದೇವರಾಗಿ ನಿರೂಪಿಸಿದ್ದಾನೆ. ವಿಕ್ಟರ್ ಜೀವಿಯನ್ನು ಸೃಷ್ಟಿಸುತ್ತಾ ದೇವರ ಪಾತ್ರವನ್ನು ನಿರ್ವಹಿಸುವುದನ್ನು ಶೆಲ್ಲಿಯು ಗಮನಿಸುತ್ತಾಳೆ. ಶೆಲ್ಲಿಯ ದೈತ್ಯ ರೂಪದ ಚಿತ್ರಣವು ಪ್ಯಾರಡೈಸ್ ಲಾಸ್ಟ್ ನ ಸೈತಾನನ ಪಾತ್ರವನ್ನು ಹೆಚ್ಚು ಹೋಲುತ್ತದೆ; ಕಥೆಯಲ್ಲಿ ದೈತ್ಯ ರೂಪವು ಮಹಾಕಾವ್ಯದ ಕವಿತೆಯನ್ನು ಓದಿದ ನಂತರ ತಾನು ಸೈತಾನನ ಪಾತ್ರದೊಂದಿಗೆ ತಾದಾತ್ಮಾನುಭವವನ್ನು ಪಡೆದಿದ್ದೇನೆಂದು ಹೇಳುತ್ತದೆ.
ವಿಕ್ಟರ್ ಮತ್ತು ಮೇರಿಯ ಪತಿ ಪರ್ಸಿ ಶೆಲ್ಲಿಯ ನಡುವೆ ಅನೇಕ ಹೋಲಿಕೆಗಳಿವೆ. ಪರ್ಸಿ ಶೆಲ್ಲಿಯು ಅವನ ಸಹೋದರಿ ಎಲಿಜಾಬೆತ್ಳೊಂದಿಗೆ ಬರೆದ ಕಾವ್ಯದ ಸಂಗ್ರಹ ಒರಿಜಿನಲ್ ಪೊಯೆಟ್ರಿ ಬೈ ವಿಕ್ಟರ್ ಆಂಡ್ ಕ್ಯಾಜಿರೆ ಯಲ್ಲಿರುವಂತೆ ವಿಕ್ಟರ್ ಎಂಬುದು ಅವನ ಅಂಕಿತನಾಮವಾಗಿದೆ.[18] ಪರ್ಸಿಯು ಮೇರಿ ಶೆಲ್ಲಿಯ ವಿಕ್ಟರ್ ಫ್ರಾಂಕೆನ್ಸ್ಟೈನ್ನ ಮಾದರಿಗಳಲ್ಲಿ ಒಬ್ಬನಾಗಿದ್ದಾನೆ ಎಂದು ಊಹಿಸಲಾಗಿದೆ. ಪರ್ಸಿಯು ಎಟನ್ನಲ್ಲಿ "ವಿದ್ಯುತ್ ಮತ್ತು ಕಾಂತೀಯತೆ ಮಾತ್ರವಲ್ಲದೆ ಬಂದೂಕು ಸಿಡಿಮದ್ದು ಮತ್ತು ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ಪ್ರಯೋಗ ನಡೆಸುತ್ತಿದ್ದನು" ಹಾಗೂ ಅವನ ಆಕ್ಸ್ಫರ್ಡ್ನಲ್ಲಿದ್ದ ಕೊಠಡಿಗಳು ವೈಜ್ಞಾನಿಕ ಪರಿಕರಗಳಿಂದ ತುಂಬಿದ್ದವು.[19] ಪರ್ಸಿ ಶೆಲ್ಲಿಯು ಪ್ರಬಲ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದ ಶ್ರೀಮಂತ ಜಮೀನ್ದಾರನ ಮೊದಲ ಮಗ ಮತ್ತು ಕ್ಯಾಸಲ್ ಗೋರಿಂಗ್ನ 1ನೇ ಬ್ಯಾರನೆಟ್ ಸರ್ ಬಿಶ್ಶೆ ಶೆಲ್ಲಿಯ ಮತ್ತು 10ನೇ ಅರ್ಲ್ ಆಫ್ ಅರುಂದೆಲ್ ರಿಚಾರ್ಡ್ ಫಿಟ್ಜಲಾನ್ ಸಂತತಿಯವ.[20] ವಿಕ್ಟರ್ನ ಕುಟುಂಬವು ಹೆಚ್ಚು ಹೆಸರು ಗಳಿಸಿದ ಕುಟುಂಬವಾಗಿದೆ ಹಾಗೂ ಅವನ ಪೂರ್ವಜರು ಸಲಹೆಗಾರರು ಮತ್ತು ಸರ್ಕಾರಿ ಅಧಿಕಾರಿಗಳಾಗಿದ್ದರು. ಪರ್ಸಿಗೆ ಎಲಿಜಾಬೆತ್ ಎಂಬ ಹೆಸರಿನ ಒಬ್ಬಳು ಸಹೋದರಿ ಇದ್ದಳು. ವಿಕ್ಟರ್ಗೆ ಎಲಿಜಾಬೆತ್ ಹೆಸರಿನ ದತ್ತುತೆಗೆದುಕೊಂಡ ಒಬ್ಬಳು ಸೋದರಿ ಇದ್ದಳು. ಫೆಬ್ರವರಿ 22ರ 1815ರಲ್ಲಿ ಮೇರಿ ಶೆಲ್ಲಿಯು ಎರಡು-ತಿಂಗಳ ಬೆಳೆಯದ ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗು ಎರಡು ವಾರಗಳ ನಂತರ ಸಾಯುತ್ತದೆ. ಪರ್ಸಿಯು ಈ ಅಕಾಲಿಕ ಜನನದ ಮಗುವಿನ ಸ್ಥಿತಿಯ ಬಗ್ಗೆ ಹೆಚ್ಚು ಗಮನ ವಹಿಸದೆ, ಮೇರಿಯ ಮಲಸಹೋದರಿ ಕ್ಲಾರೆಯೊಂದಿಗೆ ಬಿಟ್ಟು ಆಡಂಬರ-ಜೀವನದ ವ್ಯವಹಾರಗಳಲ್ಲಿ ಮುಳುಗಿಹೋಗುತ್ತಿದ್ದನು.[21] ಮಗು ಜೀವ ಪಡೆದುಕೊಂಡುದುದನ್ನು ನೋಡಿ ವಿಕ್ಟರ್ ಮನೆ ಬಿಟ್ಟು ದೂರ ಹೋಗುತ್ತಾನೆ. ಆದರೆ ಮಗುವಿಗೆ ಪೋಷಕರ ಅವಶ್ಯಕತೆ ಇರುವುದರಿಂದ, ನವಜಾತ ಶಿಶು ಅವನನ್ನು ಸೇರುತ್ತದೆ. ಮಗುವಿನ ಬಗೆಗಿನ ವಿಕ್ಟರ್ನ ಜವಾಬ್ದಾರಿಯು ಪುಸ್ತಕದ ಒಂದು ಮುಖ್ಯ ವಿಷಯವಾಗಿದೆ.
ದ ಮಾಡರ್ನ್ ಪ್ರಮೀತಿಯಸ್ ಎಂಬುದು ಕಾದಂಬರಿಯ ಉಪಶೀರ್ಷಿಕೆಯಾಗಿದೆ (ಆದರೆ ಕೆಲವು ಆಧುನಿಕ ಪ್ರಕಟಣೆಗಳು ಈ ಉಪಶೀರ್ಷಿಕೆಯನ್ನು ಕೈಬಿಟ್ಟಿವೆ. ಕೇವಲ ಪೀಠಿಕೆಯಲ್ಲಿ ಮಾತ್ರ ಇದನ್ನು ಸೂಚಿಸುತ್ತವೆ). ಪ್ರಮೀತಿಯಸ್ ಎಂಬುದು ಗ್ರೀಕ್ ಪುರಾಣದ ಕೆಲವು ನಿರೂಪಣೆಗಳಲ್ಲಿ ಮಾನವರನ್ನು ಸೃಷ್ಟಿಸಿದ ಟೈಟಾನ್ ಆಗಿದೆ. ಸ್ವರ್ಗದಿಂದ ರಹಸ್ಯವಾಗಿ ಬೆಂಕಿಯನ್ನು ಪಡೆದುಕೊಂಡು ಮಾನವನಿಗೆ ನೀಡಿದವನೂ ಪ್ರಮೀತಿಯಸ್ ಹೌದು. ಸ್ಯೂಸ್(ಗ್ರೀಕರ ದೇವರಾಜ) ಇದನ್ನು ಕಂಡುಹಿಡಿದು ಪ್ರಮೀತಿಯಸ್ನನ್ನು ಶಿಲೆಯೊಂದಕ್ಕೆ ಕಟ್ಟಿ ಪ್ರತಿ ದಿನ ಪರಭಕ್ಷಕಕ ಹಕ್ಕಿಯೊಂದು ಅವನ ಪಿತ್ತಜನಕಾಂಗವನ್ನು ತಿಂದುಹಾಕುವಂತಹ ಶಾಶ್ವತ ಶಿಕ್ಷೆಯನ್ನು ಅವನಿಗೆ ನೀಡುತ್ತಾನೆ. ಹೆರಾಕ್ಲೆಸ್(ಹರ್ಕ್ಯುಲೀಸ್) ಅವನನ್ನು ಬಿಡುಗಡೆ ಮಾಡುವವರೆಗೆ, ಪ್ರತಿದಿನ ಮತ್ತೆ ಹುಟ್ಟಿಕೊಳ್ಳುತ್ತಿದ್ದ ಅವನ ಪಿತ್ತಜನಕಾಂಗಕ್ಕಾಗಿ ಆ ಹಕ್ಕಿಯು ಬರುತ್ತಿತ್ತು.
ಪ್ರಮೀತಿಯಸ್ ಸಹ ಲ್ಯಾಟಿನ್ ಭಾಷೆಯಲ್ಲಿ ಹೇಳಲಾದ ಒಂದು ಪುರಾಣ ಕಥೆ. ಆದರೆ ಇದು ತೀರ ಭಿನ್ನವಾಗಿದೆ. ಈ ಕಥನದಲ್ಲಿ ಪ್ರಮೀತಿಯಸ್ ಮಣ್ಣು ಮತ್ತು ನೀರಿನಿಂದ ಮನುಷ್ಯನನ್ನು ಮಾಡುತ್ತಾನೆ. ಇದು ಫ್ರಾಂಕೆನ್ಸ್ಟೈನ್ ಕಥೆಯಲ್ಲಿನ ವಿಕ್ಟರ್ ನಿಸರ್ಗದ ರೀತಿನೀತಿಯ (ನೈಸರ್ಗಿಕವಾಗಿ ಜೀವ ನೀಡುವುದರ) ವಿರುದ್ಧ ಪ್ರತಿಭಟಿಸುವುದು ಮತ್ತು ಅದರ ಪರಿಣಾಮವಾಗಿ ಅವನು ಸೃಷ್ಟಿಸಿದುದರಿಂದ ಶಿಕ್ಷೆಗೊಳಗಾಗುವುದು ಮೊದಲಾದವುಗಳಿಗೆ ಹೆಚ್ಚು ಪ್ರಸಕ್ತವಾಗಿ ಸಂಬಂಧಿಸಿದೆ.
ಗ್ರೀಕ್ ಪುರಾಣದಲ್ಲಿನ ಟೈಟಾನ್ ಪ್ರಮೀತಿಯಸ್, ವಿಕ್ಟರ್ ಫ್ರಾಂಕೆನ್ಸ್ಟೈನ್ನನ್ನು ಹೋಲುತ್ತಾನೆ. ಹೊಸ ವಿಧಾನದಿಂದ ಮನುಷ್ಯನನ್ನು ಸೃಷ್ಟಿಸುವ ವಿಕ್ಟರ್ನ ಕೆಲಸವು ಟೈಟಾನ್ನ ಮಾನವರನ್ನು ಸೃಷ್ಟಿಸುವ ಹೊಸ ರೀತಿಯ ಕಾರ್ಯವನ್ನು ಪ್ರತಿಬಿಂಬಿಸುತ್ತದೆ. ಟೈಟಾನ್ ಸ್ವರ್ಗದಿಂದ ಮಾನವನಿಗೆ ನೀಡುವುದಕ್ಕಾಗಿ ಬೆಂಕಿಯನ್ನು ಕದಿಯುವಂತೆ ವಿಕ್ಟರ್ ದೇವರಿಂದ ಸೃಷ್ಟಿಯ ರಹಸ್ಯವನ್ನು ಕಳವು ಮಾಡುತ್ತಾನೆ. ಟೈಟಾನ್ ಮತ್ತು ವಿಕ್ಟರ್ ಇಬ್ಬರೂ ಅವರ ಈ ಕೆಲಸಕ್ಕಾಗಿ ಶಿಕ್ಷೆಗೆ ಒಳಗಾಗುತ್ತಾರೆ. ವಿಕ್ಟರ್ ಆಪ್ತರನ್ನು ಕಳೆದುಕೊಂಡು ತುಂಬಾ ದುಃಖಪಡುತ್ತಾನೆ ಮತ್ತು ಅವನ ಸೃಷ್ಟಿಯಿಂದಲೇ ಕೊಲೆಗೀಡಾಗುವ ಭೀತಿಗೊಳಗಾಗುತ್ತಾನೆ.
ಮೇರಿ ಶೆಲ್ಲಿಯ ಕಥೆಗೆ ಪ್ರಮೀತಿಯಸ್ ನಾಯಕನಲ್ಲದಿದ್ದರೂ, ಮಾನವನಿಗೆ ಬೆಂಕಿಯನ್ನು ನೀಡಿ ಮಾಂಸ ತಿನ್ನುವುದಕ್ಕಾಗಿ ಪಾಪ ಅಪರಾಧಗಳಿಗೆ ಉತ್ತೇಜಿಸಿದ (ಮಾನವನು ಬೆಂಕಿಯಿಂದಾಗಿ ಬೇಯಿಸುವುದನ್ನು ಕಲಿತನು. ಅದಕ್ಕಾಗಿ ಬೇಟೆಯಾಡಿ ಕೊಲ್ಲಲು ಆರಂಭಿಸಿದನು) ಒಂದು ಭೂತವೇ ಪ್ರೇರೇಪಣೆ.[22] ಈ ವಾದಕ್ಕೆ ಬೆಂಬಲವಾಗಿ ಕಾದಂಬರಿಯ ಚ್ಯಾಪ್ಟರ್ 17ರಲ್ಲಿ ಪ್ರತಿಬಿಂಬಿತವಾಗಿದೆ. ಅದರಲ್ಲಿ "ದೈತ್ಯ ರೂಪ"ವು ವಿಕ್ಟರ್ ಫ್ರಾಂಕೆನ್ಸ್ಟೈನ್ನೊಂದಿಗೆ ಹೀಗೆ ಮಾತನಾಡುತ್ತದೆ: "ನನ್ನ ಆಹಾರ ಮನುಷ್ಯರಲ್ಲ. ಹಸಿವನ್ನು ತೀರಿಸಲು ನಾನು ಮುಗ್ಧರನ್ನು ಮತ್ತು ಅಮಾಯಕರನ್ನು ನಾಶ ಮಾಡುವುದಿಲ್ಲ. ಅಕಾರ್ನ್ ಮತ್ತು ಬೆರಿ ಹಣ್ಣುಗಳು ನನಗೆ ಸಾಕಷ್ಟು ಆಹಾರವನ್ನು ಒದಗಿಸುತ್ತವೆ." ರೊಮ್ಯಾಂಟಿಕ್ ಯುಗದ ಕಲಾವಿದರ ಪ್ರಕಾರ, ಮಾನವನಿಗೆ ಪ್ರಮೀತಿಯಸ್ ನೀಡಿದ ಕೊಡುಗೆಯು 18ನೇ ಶತಮಾನದ ಎರಡು ಶ್ರೇಷ್ಠ ಆದರ್ಶದೃಷ್ಟಿಯ ಸುಧಾರಣಾವಾದಿ ಭರವಸೆಗಳಲ್ಲಿ ಪ್ರತಿಧ್ವನಿಸಿದೆ: ಶ್ರೇಷ್ಠ ಭರವಸೆ ಮತ್ತು ಪ್ರಬಲ ಭೀಕರತೆಗಳೆರಡನ್ನೂ ಹೊಂದಿರುವ ಕೈಗಾರಿಕಾ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿ.
ಬೈರಾನ್ ವಿಶೇಷವಾಗಿ ಆಸ್ಕಿಲಸ್ನ ಪ್ರಮೀತಿಯಸ್ ಬೌಂಡ್ ನಾಟಕವನ್ನು ಹೆಚ್ಚು ಹಚ್ಚಿಕೊಂಡಿದ್ದಾನೆ. ಪರ್ಸಿ ಶೆಲ್ಲಿಯು ಅವನ ಸ್ವಂತ ಪ್ರಮೀತಿಯಸ್ ಅನ್ಬೌಂಡ್ (1820)ಅನ್ನು ಸಧ್ಯದಲ್ಲೇ ಬರೆಯಲಿದ್ದಾನೆ. "ಮಾಡರ್ನ್ ಪ್ರಮೀತಿಯಸ್" ಪದವನ್ನು ನಿಜವಾಗಿ, ಬೆಂಜಮಿನ್ ಫ್ರ್ಯಾಂಕ್ಲಿನ್ ಮತ್ತು ಅವನ ನಂತರದ ಇತ್ತೀಚಿನ ವಿದ್ಯುತ್ನೊಂದಿಗಿನ ಪ್ರಯೋಗಗಳನ್ನು ಸೂಚಿಸುವ ಮೂಲಕ ಇಮಾನ್ಯುಯೆಲ್ ಕ್ಯಾಂಟ್ ರಚಿಸಿದನು.[23]
ಶೆಲ್ಲಿಯು ಅವಳ ಕಾದಂಬರಿ ರಚನೆಗೆ ಅನೇಕ ಆಕರ ಗ್ರಂಥಗಳನ್ನು ಸಂಯೋಜಿಸಿದ್ದಾಳೆ. ಅವುಗಳಲ್ಲಿ ಒಂದು ಆವಿಡ್ನ ಪ್ರಮೀತಿಯಸ್ ಕಥೆ. ಜಾನ್ ಮಿಲ್ಟನ್ನ ಪ್ಯಾರಡೈಸ್ ಲಾಸ್ಟ್ , ಮತ್ತು ಸ್ಯಾಮ್ಯುಯೆಲ್ ಟೈಲರ್ ಕೊಲೆರಿಡ್ಜ್ನ ದ ರೈಮ್ ಆಫ್ ದ ಏನ್ಶಿಯೆಂಟ್ ಮ್ಯಾರಿನರ್ ಮೊದಲಾದ ಸೃಷ್ಟಿಕರ್ತನನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವ ಪುಸ್ತಕಗಳ ಪ್ರಭಾವವೂ ಅವಳ ಕಾದಂಬರಿಗೆ ಸ್ಪಷ್ಟವಾಗಿ ಆಧಾರವಾಗಿವೆ. ಇಬ್ಬರು ಶೆಲ್ಲಿಗಳೂ ವಿಲಿಯಂ ಥಾಮಸ್ ಬೆಕ್ಫೋರ್ಡ್ನ ಗಾತಿಕ್ ಕಾದಂಬರಿ ವ್ಯಾಥೆಕ್ ಅನ್ನು ಓದಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಫ್ರಾಂಕೆನ್ಸ್ಟೈನ್ , ಅವಳ ತಾಯಿ ಮೇರಿ ವೋಲ್ಸ್ಟೋನ್ಕ್ರಾಫ್ಟ್ ಬಗ್ಗೆ ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಶಿಕ್ಷಣದ ಕೊರತೆಯ ಬಗ್ಗೆ ವಿವರಿಸುವ ಅವಳ ಪ್ರಮುಖ ಕೃತಿ ಎ ವಿಂಡಿಕೇಶನ್ ಆಫ್ ದ ರೈಟ್ಸ್ ಆಫ್ ವುಮೆನ್ ಬಗ್ಗೆ ಹಲವು ಉಲ್ಲೇಖಗಳನ್ನು ಒಳಗೊಂಡಿದೆ. ಅವಳ ಕೃತಿಯಲ್ಲಿನ ತಾಯಿಯ ಕಲ್ಪನೆಯ ಸೇರಿಕೆಯು ಕಾದಂಬರಿಯಲ್ಲಿ ಸೃಷ್ಟಿಯ ಮತ್ತು ಮಾತೃತ್ವದ ವಿಷಯಕ್ಕೆ ಸಂಬಂಧಿಸಿದೆ. ಮೇರಿಯು ಫ್ರಾಂಕೆನ್ಸ್ಟೈನ್ನ ಪಾತ್ರಕ್ಕಾಗಿ ಹಂಫ್ರಿ ಡೇವಿಯ ಪುಸ್ತಕ ಎಲಿಮೆಂಟ್ಸ್ ಆಫ್ ಕೆಮಿಕಲ್ ಫಿಲಾಸಫಿ ಯಿಂದ ಕೆಲವು ಅಂಶಗಳನ್ನು ಪಡೆದಿರಬಹುದು. ಅದರಲ್ಲಿ ಅವನು ಹೀಗೆಂದು ಬರೆದಿದ್ದಾನೆ - "ವಿಜ್ಞಾನವು ಮಾನವ ಶಕ್ತಿಗೆ ಸೃಜನಶೀಲತೆಯನ್ನು ಕೊಟ್ಟಿದೆ. ಅದು ಅವನ ಸುತ್ತಲಿರುವುದನ್ನು ಬದಲಾಯಿಸಲು ಮತ್ತು ಮಾರ್ಪಡಿಸಲು ಪ್ರೇರಣೆ ನೀಡಿದೆ".
ಅವಳ ತಂದೆ ವಿಲಿಯಂ ಗಾಡ್ವಿನ್ನ ತೀವ್ರಗಾಮಿ ರಾಜಕಾರಣದ ಬಗೆಗಿನ ಅವಳ ಸಮಜಾಯಿಷಿಯೊಂದಿಗೆ, ಶೆಲ್ಲಿಯೇ ಸೂಚಿಸಿದ ಅವಳ ಕಾದಂಬರಿಯ ಅರ್ಥ ವಿವರಣೆಯು ಹೀಗಿದೆ:
The giant now awoke. The mind, never torpid, but never rouzed to its full energies, received the spark which lit it into an unextinguishable flame. Who can now tell the feelings of liberal men on the first outbreak of the French Revolution. In but too short a time afterwards it became tarnished by the vices of Orléans — dimmed by the want of talent of the Girondists — deformed and blood-stained by the Jacobins.[24]
ಶೆಲ್ಲಿ ಕಾದಂಬರಿಯ ಒಂದು ಭಾಗದಲ್ಲಿ ದೈತ್ಯ ರೂಪವು ಒಂದು ಹಿಮನದಿಯಲ್ಲಿ ವಿಕ್ಟರ್ನನ್ನು ಭೇಟಿಯಾಗುತ್ತದೆ. ಆ ದೈತ್ಯ ರೂಪವು ಏಕಾಂತತೆ ಮತ್ತು ಸ್ವಚ್ಛಂದ ನಡವಳಿಕೆಯ ಅದರ ಭಾವನೆಗಳನ್ನು ವಿವರಿಸುತ್ತದೆ. ಈ ದೈತ್ಯ ಜೀವಿಯನ್ನು ತೊರೆದವನು ತಾನೆ ಮತ್ತು ತಾನು ಮಗುವಾಗಿದ್ದಾಗ ಪೋಷಕರು ಮಾಡಿದಂತೆ ಅದಕ್ಕಾಗಿ ತನ್ನ ಸಮಯವನ್ನು ಮೀಸಲಿಡಲು ಮತ್ತು ಪ್ರೀತಿಸಲು ಜವಾಬ್ದಾರನಾಗಿರುವವನು ತಾನು ಎಂಬುದನ್ನು ವಿಕ್ಟರ್ ಕಂಡುಕೊಳ್ಳುವುದಿಲ್ಲ. ವಿಕ್ಟರ್ಗೆ ಅಂತಹ ನಿರ್ಲಿಪ್ತತೆ ಏಕಿರುತ್ತದೆ? ಅವನು ಏಕೆ ತನ್ನನ್ನು ತಾನು ಪೋಷಕನಾಗಿ ನೋಡುವುದಿಲ್ಲ? ದ ನೈಟ್ಮೇರ್ ಆಫ್ ರೊಮ್ಯಾಂಟಿಕ್ ಐಡಿಯಲಿಸಮ್ ಪ್ರಬಂಧದಲ್ಲಿ ಲೇಖಕ ಹೀಗೆಂದು ಹೇಳಿದ್ದಾನೆ - “ಫ್ರಾಂಕೆನ್ಸ್ಟೈನ್ ತಂದೆಯಾಗುವ ಸಂದರ್ಭದಲ್ಲಿ ಪೋಷಕರ ಕರ್ತವ್ಯಗಳನ್ನು ನಿರಾಯಾಸವಾಗಿ ಮರೆತು ಬಿಡುತ್ತಾನೆ. ಒಬ್ಬ ಸೃಷ್ಟಿಕರ್ತನಾಗಿ ಅವನಿಗೆ ಕೊರತೆಯಾಗಿರುವ ಒಂದು ಗುಣವೆಂದರೆ ಪೋಷಕರು ಜನ್ಮ ನೀಡಿದ ಮಗುವಿನ ಕಡೆಗೆ ತೋರಿಸುವ ತೀವ್ರ ಜಾಗೃತಿಯ ಬಗೆಗಿನ ಹೊಗಳುವಿಕೆ.” (ಶೆಲ್ಲಿ 391) ಈ ಲೇಖಕ ಹೀಗೆಂದೂ ಹೇಳಿದ್ದಾನೆ - “ಜೀವನದಲ್ಲಿ ಪ್ರೌಢ ಪಾತ್ರವನ್ನು ಸ್ವೀಕರಿಸುವ ಬಗೆಗಿನ ಫ್ರಾಂಕೆನ್ಸ್ಟೈನ್ನ ನಿರಾಕರಣೆಯಿಂದಾಗಿ ಅವನು ಸೃಷ್ಟಿಸುವ ಶಕ್ತಿಯನ್ನು ಉಳಿಸಿಕೊಳ್ಳುತ್ತಾನೆ. ಆದರೆ ಅದೇ ಸಂದರ್ಭದಲ್ಲಿ ಅವನು ಸಂಪೂರ್ಣವಾಗಿ ಬೇಜವಾಬ್ದಾರಿಯಾಗಿರುತ್ತಾನೆ ಮತ್ತು ಅವನ ಸಾಹಸ ಕಾರ್ಯಗಳ ಪರಿಣಾಮಗಳನ್ನು ಎದುರಿಸುವ ಧೈರ್ಯವನ್ನು ಹೊಂದಿರುವುದಿಲ್ಲ.”(ಶೆಲ್ಲಿ 391) ಈ ವಿವರಣೆಗಳು ಸೃಷ್ಟಿ ಮಾಡುವ ಬಗೆಗಿನ ವಿಕ್ಟರ್ನ ಮನಸ್ಥಿತಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತವೆ. ದುರದೃಷ್ಟವಶಾತ್ ವಿಕ್ಟರ್ನ ಮಂತ್ರಮುಗ್ಧನಾಗಿಸುವ ಬಾಲ್ಯವು ಅವನನ್ನು ನೈಜ ಪ್ರಪಂಚಕ್ಕೆ ಒಗ್ಗುವಂತೆ ಮಾಡಲಿಲ್ಲ. ಅವನ ಸ್ವಂತ ಚಟುವಟಿಕೆಗಳಿಗೆ ಅವನೇ ಜವಾಬ್ದಾರಿ ತೆಗೆದುಕೊಳ್ಳುವಷ್ಟು ಬೆಳೆಯಲಿಲ್ಲ. ಫ್ರಾಂಕೆನ್ಸ್ಟೈನ್ ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧವನ್ನು ಹಾಗೂ ಪೋಷಕರಿಂದ ಮತ್ತು ಸಮಾಜದಿಂದ ಸ್ವೀಕಾರವಾಗುವ ಮತ್ತು ಪ್ರೀತಿಸುವ ಅವಶ್ಯಕತೆಯನ್ನು ಪರಿಶೋಧಿಸುತ್ತದೆ. ವಿಕ್ಟರ್ನ ಸೃಷ್ಟಿಯ ಬಗೆಗಿನ ಅವನ ನಿರಾಕರಣೆಯು ದೈತ್ಯ ರೂಪಕ್ಕೆ ತಾನು ಭಿಕಾರಿಯೆಂಬ ಭಾವನೆ ಉಂಟಾಗಲು ಮತ್ತು ಸೃಷ್ಟಿಯ ಬಗ್ಗೆ ಕೋಪಿಸಿಕೊಳ್ಳಲು ಕಾರಣವಾಯಿತು. ಅದಕ್ಕಾಗಿ ವಿಕ್ಟರ್ ತಾನಾಗೆ ಸಾಯುವವರೆಗೆ ಅವನಿಗೆ ಪ್ರೀತಿಪಾತ್ರರಾಗಿರುವವರನ್ನು ಕೊಲ್ಲುವ ಮೂಲಕ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ದೈತ್ಯ ರೂಪವು ತನ್ನನ್ನು ತಾನು ಸಾಯಿಸಿಕೊಳ್ಳಲು ಬಿಟ್ಟು ಹೋಗುತ್ತದೆ.
ಫ್ರಾಂಕೆನ್ಸ್ಟೈನ್ ಕಥೆಯ ಮತ್ತೊಂದು ಹೆಚ್ಚು ಪ್ರಧಾನ ಅಂಶವೆಂದರೆ ಒಂಟಿತನ ಮತ್ತು ಒಂಟಿತನವು ಮಾನವರ ಮೇಲೆ ಬೀರುವ ಪರಿಣಾಮಗಳು. ಈ ಅಂಶವನ್ನು ಮೂರು ಪ್ರಮುಖ ಪಾತ್ರಗಳ ಆಲೋಚನೆ ಮತ್ತು ಅನುಭವಗಳ ಮೂಲಕ ಪರಿಶೋಧಿಸಲಾಗಿದೆ: ವಾಲ್ಟನ್, ಫ್ರಾಂಕೆನ್ಸ್ಟೈನ್ ಮತ್ತು ದೈತ್ಯ ರೂಪ. ಕಥೆಯ ಆರಂಭದಲ್ಲಿನ ಪತ್ರಗಳಲ್ಲಿ, ವಾಲ್ಟನ್ನ ಮಹತ್ವದ ಸಾಹಸವು ಅವನ ಕೀರ್ತಿ ಮತ್ತು ಆಕರ್ಷಣೆಯನ್ನು ಕಳೆದುಕೊಳ್ಳುವಂತೆ ಮಾಡಿದರಿಂದ ಬರಿಯ ಏಕಾಂಗಿತನದ ಭಾವನೆಗಳೇ ತುಂಬಿವೆ. ಕಥೆಯಾದ್ಯಂತ ವಿಕ್ಟರ್ ಭಯ ಮತ್ತು ಆತಂಕವನ್ನು ಅನುಭವಿಸುತ್ತಾನೆ. ಕಥೆಯ ಆರಂಭದಲ್ಲಿ ವಿಕ್ಟರ್ನ ಕೆಲಸವು ಅವನನ್ನು ಅವನ ಕುಟುಂಬದಿಂದ ಬೇರ್ಪಡುವಂತೆ ಮಾಡುತ್ತದೆ. ಅವನು ಪ್ರತ್ಯೇಕವಾಗಿ ಅನೇಕ ವರ್ಷಗಳನ್ನು ಕಳೆಯುತ್ತಾನೆ. ಕಥೆಯಲ್ಲಿ ನಂತರ ಅವನ ಕುಟುಂಬದವರು ಮತ್ತು ಸ್ನೇಹಿತರು ಸಾಯಲು ಆರಂಭವಾದಾಗ ಈ ಭಾವನೆಗಳು ಮತ್ತಷ್ಟು ತೀವ್ರಗೊಳ್ಳುತ್ತವೆ. ಅವನು ಹೇಳುತ್ತಾನೆ - “ಈ ರೀತಿಯ ಮನಸ್ಥಿತಿಯು ಮೊದಲ ಆಘಾತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತು. ನಾನು ಮನುಷ್ಯರ ಸಂಗದಿಂದ ದೂರವಿದ್ದೆ. ಎಲ್ಲಾ ರೀತಿಯ ಸುಖ ಸಂತೋಷಗಳು ನನಗೆ ಹಿಂಸೆಯಾಗಿದ್ದವು. ಗಾಢ, ಕತ್ತಲಿನ, ಸಾವಿನ-ರೀತಿಯ ಏಕಾಂತತೆ ಮಾತ್ರ ನನಗೆ ಸಮಾಧಾನ ತರುವ ವಿಷಯವಾಗಿದ್ದವು.” ಫ್ರಾಂಕೆನ್ಸ್ಟೈನ್ ಹೀಗೆ ಹೇಳುವಾಗ ಅದೇ ರೀತಿಯ ಭಾವನೆಗಳನ್ನು ತೋರ್ಪಡಿಸುತ್ತಾನೆ - “ಹೆಚ್ಚು ದ್ವೇಷ ಹುಟ್ಟಿಸುವ ಸ್ಥಳದಲ್ಲಿದ್ದಾಗ, ಏಕಾಂಗಿತನದಲ್ಲಿ ಮುಳುಗಿದ್ದಾಗ, ನಾನಿದ್ದ ಆ ನೈಜ ಚಿತ್ರಣದಿಂದ ನನ್ನನ್ನು ಹೊರಗೆಳೆದು ತರುವವರು ಯಾರೂ ಇಲ್ಲದಾಗ, ನನ್ನ ಅಂತರಂಗವು ವ್ಯತ್ಯಾಸವಾಗುತ್ತಾ ಹೋಯಿತು. ನಾನು ಚಂಚಲನಾಗಿ ಮತ್ತು ಅಸ್ಥಿರನಾಗಿ ಬೆಳೆದೆನು.” ದೈತ್ಯ ರೂಪದ ಏಕಾಂಗಿತನವು ಅದನ್ನು ಎಷ್ಟು ಕಟುವಾಗಿ ಬದಲಾಯಿಸಿತು ಎಂಬುದನ್ನು ಅದು ಹೀಗೆ ವಿವರಿಸಿದೆ - "ಒಂದು ಕಾಲದಲ್ಲಿ ನನ್ನ ಆಲೋಚನೆಗಳು ಸೌಂದರ್ಯದ ಭವ್ಯ ಮತ್ತು ಶ್ರೇಷ್ಠ ಕಲ್ಪನೆಗಳಿಂದ ಮತ್ತು ಒಳ್ಳೆಯತನದ ಹಿರಿಮೆಯಿಂದ ತುಂಬಿದ್ದವು ಎಂಬುದನ್ನು ನನಗೆ ನಂಬಲಾಗುವುದಿಲ್ಲ. ಸೋಲು ಕಂಡ ದೇವತೆಯು ಅತ್ಯುಗ್ರ ಭೂತವಾಗುವಂತಹ ಸ್ಥಿತಿ ನನ್ನದಾಗಿದೆ. ದೇವರ ಮತ್ತು ಮಾನವರ ವೈರಿಗಳೇ ಅವರ ಏಕಾಂತತೆಯಲ್ಲಿ ಸ್ನೇಹಿತರನ್ನು ಮತ್ತು ಸಂಬಂಧಿಗಳನ್ನು ಹೊಂದಿರುತ್ತಾರೆ. ಆದರೆ ನಾನು ಮಾತ್ರ ಏಕಾಂಗಿಯಾಗಿದ್ದೇನೆ.” ಶೆಲ್ಲಿಯು ಈ ಅಂಶವನ್ನು ಅವಳ ಮುಖ್ಯ ಪಾತ್ರಗಳಿಗೆ ಏಕಾಂಗಿತನವೇ ಪ್ರಮುಖ ಪ್ರೇರಣೆಯಾಗಿರುವಂತೆ ಕಣ್ಣಿಗೆ ಕಾಣುವಂತೆ ನಿರೂಪಿಸಿದ್ದಾಳೆ.
ನೈಟ್ಮೇರ್: ಬರ್ತ್ ಆಫ್ ಹಾರರ್ನಲ್ಲಿ ಕ್ರಿಸ್ಟೋಫರ್ ಫ್ರೇಯ್ಲಿಂಗ್, ಶೆಲ್ಲಿಯು ಸಸ್ಯಾಹಾರಿಯಾಗಿರುವುದರಿಂದ ಕಾದಂಬರಿಯಲ್ಲಿ ವ್ಯಕ್ತವಾದ ಸಜೀವಚ್ಛೇದನದ ವಿರುದ್ಧ ಚರ್ಚಿಸಿದ್ದಾನೆ. ಚ್ಯಾಪ್ಟರ್ 3ರಲ್ಲಿ ವಿಕ್ಟರ್ "ತಾನು ಜೀವವಿಲ್ಲದ ಮಣ್ಣಿಗೆ ಜೀವಕೊಡುವುದಕ್ಕಾಗಿ ಸಜೀವಿಗಳಿಗೆ ಹಿಂಸೆ ನೀಡಿದ್ದೇನೆ" ಎಂದು ಬರೆಯುತ್ತಾನೆ. ದೈತ್ಯ ರೂಪವು ಹೀಗೆ ಹೇಳುತ್ತದೆ: "ನನ್ನ ಆಹಾರ ಮನುಷ್ಯರಲ್ಲ. ಹಸಿವನ್ನು ತೀರಿಸಲು ನಾನು ಮುಗ್ಧರನ್ನು ಮತ್ತು ಅಮಾಯಕರನ್ನು ನಾಶ ಮಾಡುವುದಿಲ್ಲ."
ಕಡಿಮೆ ಅಭಿಪ್ರಾಯಗಳನ್ನು ಸೂಚಿಸುವ, ಆರ್ಥರ್ ಬೆರೆಫ್ಯಾಂಟ್ನ ಪುಸ್ತಕ ಫ್ರಾಂಕೆನ್ಸ್ಟೈನ್, ದ ಮ್ಯಾನ್ ಆಂಡ್ ದ ಮಾಂಸ್ಟರ್ ನಲ್ಲಿ (1999, ISBN 0-9629555-8-2), ದೈತ್ಯ ರೂಪವು ಅಸ್ತಿತ್ವದಲ್ಲಿರಲಿಲ್ಲ ಮತ್ತು ವಿಕ್ಟರ್ ಫ್ರಾಂಕೆನ್ಸ್ಟೈನ್ ಮೂರು ಕೊಲೆಗಳನ್ನು ಮಾಡಿದನು ಎಂಬುದನ್ನು ಓದುಗರಿಗೆ ತಿಳಿಸುವುದು ಮೇರಿ ಶೆಲ್ಲಿಯ ಉದ್ದೇಶವಾಗಿತ್ತು ಎಂಬುದನ್ನು ಅವನು ಒತ್ತಿಹೇಳಿದ್ದಾನೆ. ಈ ವಿವರಣೆಯ ಪ್ರಕಾರ, ಕಥೆಯು ವಿಕ್ಟರ್ನ ನೈತಿಕ ಅವನತಿಯ ಬಗೆಗಿನ ಅಧ್ಯಯನವಾಗಿದೆ ಮತ್ತು ಕಥೆಯ ವಿಜ್ಞಾನ ಕಲ್ಪನೆಯ ಅಂಶಗಳು ವಿಕ್ಟರ್ನ ಊಹೆಯಾಗಿದೆ.
ಮತ್ತೊಂದು ಅಲ್ಪ ಅಭಿಪ್ರಾಯವೆಂದರೆ ಸಾಹಿತ್ಯಕ ವಿಮರ್ಶಕ ಜಾನ್ ಲಾರಿಟ್ಸನ್ ಅವನ 2007ರ ಪುಸ್ತಕ "ದ ಮ್ಯಾನ್ ಹು ವ್ರೋಟ್ ಫ್ರಾಂಕೆನ್ಸ್ಟೈನ್ "[25]ನಲ್ಲಿ ವಾದಿಸಿದ ಮೇರಿಯ ಪತಿ ಪರ್ಸಿ ಬಿಶ್ಶೆ ಶೆಲ್ಲಿಯು ಕಾದಂಬರಿಯ ಲೇಖಕನೆಂಬುದು. ಲಾರಿಟ್ಸನ್ನ ಊಹೆಯು ಮೇರಿ ಶೆಲ್ಲಿಯನ್ನು ಬಲ್ಲವರಿಂದ[ಸೂಕ್ತ ಉಲ್ಲೇಖನ ಬೇಕು] ನಂಬಿಕೆಯನ್ನು ಪಡೆಯಲಿಲ್ಲ. ಆದರೆ ಆ ಪುಸ್ತಕವು ವಿಮರ್ಶಕ ಕ್ಯಾಮಿಲ್ಲೆ ಪಾಗ್ಲಿಯ[26] ನಿಂದ ಉತ್ಸಾಹಭರಿತವಾಗಿ ಹೊಗಳಿಕೆಯನ್ನು ಪಡೆಯಿತು ಮತ್ತು ಜರ್ಮೈನ್ ಗ್ರೀರ್ನಿಂದ ವಿಮರ್ಶೆಗೊಳಗಾಯಿತು.[27]
ದೆಲಾವರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕ ಚಾರ್ಲ್ಸ್ E. ರಾಬಿನ್ಸನ್ ಈ ವಿವಾದಾತ್ಮಕ ಬರಹವನ್ನು ಅವನ 2008ರ ಫ್ರಾಂಕೆನ್ಸ್ಟೈನ್ ಆವೃತ್ತಿಯಲ್ಲಿ ಸ್ವಲ್ಪಮಟ್ಟಿಗೆ ಬೆಂಬಲಿಸಿದ್ದಾನೆ. ರಾಬಿನ್ಸನ್ ಫ್ರಾಂಕೆನ್ಸ್ಟೈನ್ ಕಾದಂಬರಿಯ ಕೈಬರಹವನ್ನು ಪರಿಷ್ಕರಿಸಿ, ಆ ಕೈಬರಹದಾದ್ಯಂತ ಇದ್ದ ಪರ್ಸಿ ಶೆಲ್ಲಿಯ ಸಹಾಯವನ್ನು ಗುರುತಿಸುತ್ತಾನೆ.[ಸೂಕ್ತ ಉಲ್ಲೇಖನ ಬೇಕು]
ಪುಸ್ತಕದ ಆರಂಭಿಕ ವಿಮರ್ಶಾತ್ಮಕ ಪ್ರತಿಕ್ರಿಯೆಯು ಹೆಚ್ಚು ಪ್ರತಿಕೂಲವಾಗಿತ್ತು. ಲೇಖಕರ ಬಗೆಗಿನ ಅಸ್ಪಷ್ಟ ಊಹನೆಯಿಂದ ಸಂಯೋಜಿತವಾಗಿತ್ತು. ಸರ್ ವಾಲ್ಟರ್ ಸ್ಕಾಟ್, "ಆ ಕಾದಂಬರಿಯು ಸಂಪೂರ್ಣವಾಗಿ ಲೇಖಕರ ಭಾವನೆಗಳನ್ನು ವ್ಯಕ್ತ ಪಡಿಸುವ ವಿಶಿಷ್ಟ ಮತ್ತು ಅತ್ಯುತ್ತಮ ಕಲೆಯನ್ನು ಮನಗಾಣಿಸುತ್ತದೆ" ಎಂದು ಬರೆದಿದ್ದಾನೆ. ಆದರೆ ಹೆಚ್ಚಿನ ವಿಮರ್ಶಕರು "ಇದು ಭಯಾನಕ ಮತ್ತು ಅಸಹ್ಯವಾಗಿ ತೋರುವ ಅಸಂಬದ್ಧತೆ" ಎಂದು ಹೇಳಿದ್ದಾರೆ (ಕ್ವಾರ್ಟೆರ್ಲಿ ರಿವ್ಯೂ ).
ವಿಮರ್ಶೆಯ ಹೊರತಾಗಿ, ಫ್ರಾಂಕೆನ್ಸ್ಟೈನ್ ಹೆಚ್ಚುಕಡಿಮೆ ಅತಿಶೀಘ್ರದಲ್ಲಿ ಜನಪ್ರಿಯವಾಗಿ ಯಶಸ್ಸು ಗಳಿಸಿತು. ಇದು ವಿಶೇಷವಾಗಿ ಭಾವಾತಿರೇಕ ನಾಟಕದ ಹೊಂದಾವಣೆಗಳ ಮೂಲಕ ವ್ಯಾಪಕವಾಗಿ ಜನಪ್ರಿಯವಾಯಿತು. ಇದನ್ನು ರಿಚಾರ್ಡ್ ಬ್ರಿಂಸ್ಲೆ ಪೀಕ್ 1823ರಲ್ಲಿ ಪ್ರಿಸಂಪ್ಶನ್; ಆರ್ ದ ಫೇಟ್ ಆಫ್ ಫ್ರಾಂಕೆನ್ಸ್ಟೈನ್ ಎಂಬ ನಾಟಕವಾಗಿ ನಿರ್ಮಿಸಿದನು. ಇದರ ಫ್ರೆಂಚ್ ಅನುವಾದವೊಂದು 1821ರಲ್ಲ ಬಿಡುಗಡೆಯಾಯಿತು (ಜ್ಯುಲೆಸ್ ಸ್ಯಾಲಡಿನ್ ಅನುವಾದಿಸಿದ ಫ್ರಾಂಕೆನ್ಸ್ಟೈನ್: ಔ ಲಿ ಪ್ರಮೀತೀ ಮಾಡರ್ನೆ ).
1818ರಲ್ಲಿ ಅನಾಮಧೇಯವಾಗಿ ಪ್ರಕಟವಾದುದರಿಂದ ಫ್ರಾಂಕೆನ್ಸ್ಟೈನ್ ಉತ್ತಮ-ರೀತಿಯ ಮೆಚ್ಚುಗೆಯನ್ನೂ ಪಡೆಯಿತು ಮತ್ತು ಹಾಗೆಯೇ ಉಪೇಕ್ಷಿಸಲ್ಪಟ್ಟಿತು. ಆ ಸಂದರ್ಭದ ವಿಮರ್ಶಾತ್ಮಕ ಪ್ರತಿಕ್ರಿಯೆಗಳು ಈ ಎರಡು ರೀತಿಯ ವಿಮರ್ಶೆಗಳನ್ನು ಪ್ರಮಾಣೀಕರಿಸುತ್ತವೆ. ಬೆಲ್ಲೆ ಅಸೆಂಬ್ಲಿಯು ಕಾದಂಬರಿಯನ್ನು "ತುಂಬಾ ಪ್ರಭಾವಶಾಲಿ ಕಲ್ಪನೆ" (139) ಎಂದು ವಿವರಿಸಿದೆ. ಕ್ವಾರ್ಟೆರ್ಲಿ ರಿವ್ಯೂ "ಲೇಖಕರು ಕಲ್ಪನೆ ಮತ್ತು ಭಾಷೆ ಎರಡರ ಸಾಮರ್ಥ್ಯವನ್ನೂ ಹೊಂದಿದ್ದಾರೆ" (185) ಎಂದು ಹೇಳಿದೆ. ಸರ್ ವಾಲ್ಟರ್ ಸ್ಕಾಟ್ ಬ್ಲ್ಯಾಕ್ವುಡ್ಸ್ ಎಡಿನ್ಬರ್ಗ್ ಮ್ಯಾಗಜಿನ್ನಲ್ಲಿ, ದೈತ್ಯ ರೂಪವು ಪ್ರಪಂಚ ಮತ್ತು ಭಾಷೆಯ ಬಗ್ಗೆ ಜ್ಞಾನವನ್ನು ಪಡೆಯುವ ರೀತಿಯ ಬಗ್ಗೆ ಕಡಿಮೆ ಮನವರಿಕೆ ಮಾಡಿದ್ದರೂ "ಲೇಖಕರ ಭಾವನೆಗಳನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸುವ ವಿಶಿಷ್ಟ ಮತ್ತು ಅತ್ಯುತ್ತಮ ಕಲೆಯನ್ನು" ಅಭಿನಂದಿಸಿದ್ದಾನೆ (620).[28] ಎಡಿನ್ಬರ್ಗ್ ಮ್ಯಾಗಜಿನ್ ಮತ್ತು ಲಿಟೆರರಿ ಮಿಸ್ಕೆಲ್ಲನಿ "ಈ ಲೇಖಕರಿಂದ ಇನ್ನಷ್ಟು ಕೃತಿಗಳು ಬರಬಹುದೆಂದು" ಆಶಿಸಿದವು (253).
ವಿಲಿಯಂ ಗಾಡ್ವಿನ್ನ ಮಗಳು ಲೇಖಕಳೆಂದು ಹೇಳಲಾದ ಮತ್ತೆರಡು ವಿಮರ್ಶೆಗಳಲ್ಲಿ, ಕಾದಂಬರಿಯ ಬಗೆಗಿನ ಟೀಕೆಯು ಮೇರಿ ಶೆಲ್ಲಿಯ ಸ್ತ್ರೀಸಹಜ ಗುಣದ ಬಗ್ಗೆ ಇದೆ. ಬ್ರಿಟಿಷ್ ವಿಮರ್ಶಕನೊಬ್ಬ ಕಾದಂಬರಿಯ ನ್ಯೂನತೆಯನ್ನು ಲೇಖಕರ ತಪ್ಪು ಎಂಬುದಾಗಿ ದೂರಿದ್ದಾನೆ: "ಈ ಕಾದಂಬರಿಯ ಬರಹಗಾರರು ಒಬ್ಬಳು ಮಹಿಳೆ. ಇದು ಕಾದಂಬರಿಯ ಪ್ರಧಾನ ಲೋಪದ ಒಂದು ಹೆಚ್ಚಳವಾಗಿದೆ. ಆದರೆ ಲೇಖಕಿಯು ಅವಳ ಲಿಂಗದ ಸೌಮ್ಯತೆಯನ್ನು ಮರೆತರೆ, ನಾವಿರುವುದಕ್ಕೆ ಕಾರಣವಿಲ್ಲ. ಆದ್ದರಿಂದ ನಾವು ಹೆಚ್ಚು ಪ್ರತಿಕ್ರಿಯೆ ಇಲ್ಲದೆ ಕಾದಂಬರಿಯನ್ನು ತಳ್ಳಿಹಾಕುತ್ತೇವೆ" (438). ಲಿಟರರಿ ಪನೋರಮ ಮತ್ತು ನ್ಯಾಷನಲ್ ರಿಜಿಸ್ಟರ್, ಈ ಕಾದಂಬರಿಯು "ಹೆಸರಾಂತ ಕಾದಂಬರಿಕಾರನ ಮಗಳಿಂದ" ನಿರ್ಮಾಣವಾದ "ಗಾಡ್ವಿನ್ನ ಕಾದಂಬರಿಗಳ ತಿರುಳಿಲ್ಲದ ಅನುಕರಣೆಯಾಗಿದೆ" ಎಂದು ಟೀಕಿಸುತ್ತದೆ(414).
ಈ ಆರಂಭಿಕ ತಳ್ಳಿಹಾಕುವಿಕೆಗಳ ಹೊರತಾಗಿ, ವಿಮರ್ಶಾತ್ಮಕ ಪ್ರತಿಕ್ರಿಯೆಗಳು 20ನೇ ಶತಮಾನದ ಮಧ್ಯದವರೆಗೆ ಧನಾತ್ಮಕವಾಗಿಯೇ ಇದ್ದವು.[29] M. A. ಗೋಲ್ಡ್ಬರ್ಗ್ ಮತ್ತು ಹ್ಯಾರೋಲ್ಡ್ ಬ್ಲೂಮ್ ಮೊದಲಾದ ಪ್ರಮುಖ ವಿಮರ್ಶಕರು ಕಾದಂಬರಿಯ "ಕಲಾತ್ಮಕತೆ ಮತ್ತು ನೈತಿಕತೆ"ಯನ್ನು ಹೊಗಳಿದ್ದಾರೆ[30]. ಇತ್ತೀಚಿನ ದಿನಗಳಲ್ಲಿ ಈ ಕಾದಂಬರಿಯು ಮನೋವಿಶ್ಲೇಷಕ ಮತ್ತು ಸ್ತ್ರೀಸಮಾನತಾವಾದಿ ವಿಮರ್ಶಾತ್ಮಕ ಲೇಖನಗಳಿಗೆ ಹೆಚ್ಚು ಪ್ರಸಿದ್ಧ ವಿಷಯವಾಗಿದೆ. ಈ ಕಾದಂಬರಿಯನ್ನು ಇಂದು ಸಾಮಾನ್ಯವಾಗಿ ರೊಮ್ಯಾಂಟಿಕ್ ಮತ್ತು ಗಾತಿಕ್ ಸಾಹಿತ್ಯದಲ್ಲಿ ಮಾತ್ರವಲ್ಲದೆ ವೈಜ್ಞಾನಿಕ ಕಲ್ಪನೆಯಲ್ಲಿ ಹೆಗ್ಗುರುತಿನ ಕೃತಿಯಾಗಿ ಪರಿಗಣಿಸಲಾಗುತ್ತದೆ.[31]
ಶೆಲ್ಲಿಯ ಫ್ರಾಂಕೆನ್ಸ್ಟೈನ್ ಅನ್ನು ಈಗ-ಜನಪ್ರಿಯವಾಗಿರುವ ಅತ್ಯಾಸಕ್ತಿಯ ವಿಜ್ಞಾನಿ ಶೈಲಿಯ ಮೊದಲ ಕಾದಂಬರಿ ಎಂದು ಕರೆಯಲಾಗುತ್ತದೆ.[32] ಆದರೆ ಜನಪ್ರಿಯ ಸಂಸ್ಕೃತಿಯು ನಿಷ್ಕಪಟ, ಉತ್ತಮ-ಗುಣದ ವಿಕ್ಟರ್ ಫ್ರಾಂಕೆನ್ಸ್ಟೈನ್ನನ್ನು ಅತ್ಯಂತ ದುಷ್ಟ ಪಾತ್ರವಾಗಿ ಬದಲಾಯಿಸಿದೆ. ಇದು ದೈತ್ಯ ರೂಪವನ್ನು ಮೂಲದಲ್ಲಿ ಚಿತ್ರಿಸಿರುವುದಕ್ಕಿಂತ ಹೆಚ್ಚು ಸಂವೇದನೆಯ, ಮಾನವೀಯತೆ ಕಳೆದುಕೊಂಡ ವ್ಯಕ್ತಿಯಾಗಿ ಪರಿವರ್ತಿಸಿದೆ. ಮೂಲ ಕಥೆಯಲ್ಲಿ ವಿಕ್ಟರ್ ಮಾಡಿದ ಅತ್ಯಂತ ಕೆಟ್ಟ ಕೆಲಸವೆಂದರೆ ಭಯದಿಂದಾಗಿ ದೈತ್ಯ ರೂಪವನ್ನು ನಿರ್ಲಕ್ಷಿಸಿದ್ದು. ಅವನು ಭಯಾನಕತೆಯನ್ನು ಸೃಷ್ಟಿಸಲು ಬಯಸುವುದಿಲ್ಲ. ದೈತ್ಯ ರೂಪವು ಆರಂಭದಲ್ಲಿ ಮುಗ್ಧವಾಗಿ, ಪ್ರೀತಿಸುವ ಗುಣವನ್ನು ಹೊಂದಿರುತ್ತದೆ. ಆದರೆ ಸುತ್ತಮುತ್ತಲಿನವರು ಅದಕ್ಕೆ ಹಿಂಸೆಯನ್ನು ನೀಡಿದರಿಂದಾಗಿ ದ್ವೇಷವನ್ನು ಬೆಳೆಸಿಕೊಳ್ಳುತ್ತದೆ. ವೈಜ್ಞಾನಿಕ ಜ್ಞಾನವು ಕೊನೆಯಲ್ಲಿ ವಿಕ್ಟರ್ನಿಂದ ಪ್ರಬಲ ಭೂತವಾಗಿ ಮತ್ತು ಅಪಾಯಕಾರಿ ಆಕರ್ಷಣೆಯಾಗಿ ಎದ್ದು ಕಾಣುತ್ತದೆ.[33]
ಪುಸ್ತಕವು ಪ್ರಕಟಗೊಂಡ ಸ್ವಲ್ಪದರಲ್ಲೇ ರಂಗಭೂಮಿಯ ನಿರ್ದೇಶಕರು ಕಥೆಯನ್ನು ನಾಟಕ ರೂಪಕ್ಕೆ ಪರಿವರ್ತಿಸಲು ಆರಂಭಿಸಿದಾಗ ತೊಂದರೆಯನ್ನು ಅನುಭವಿಸಿದರು. 1823ರಲ್ಲಿ ಕೆಲಸವನ್ನು ಆರಂಭಿಸಿದಾಗ ನಾಟಕಕಾರರು ಅದನ್ನು ನಾಟಕವಾಗಿ ಮಾಡಬೇಕಾದರೆ ವಿಜ್ಞಾನಿ ಮತ್ತು ದೈತ್ಯ ರೂಪದ ನೈಜ ತರ್ಕವನ್ನು ಬಿಟ್ಟು ಬಿಡಬೇಕೆಂಬುದನ್ನು ಗುರುತಿಸಿದರು. ದೈತ್ಯ ರೂಪವು ಅದರ ಹೆಚ್ಚು ಸಂವೇದನೆಯ ಮತ್ತು ಎದ್ದು ಕಾಣುವ ಹಿಂಸೆಯಿಂದಾಗಿ ನಾಟಕದ ಪ್ರಮುಖ ನಾಯಕನಾಗಿ ಮಿಂಚಿತು. ನಿಸರ್ಗದ ರಹಸ್ಯವನ್ನು ಒಳಹೊಕ್ಕು ಪರಿಶೀಲಿಸಿದುದಕ್ಕಾಗಿ ವಿಕ್ಟರ್ನನ್ನು ಮೂರ್ಖನಾಗಿ ಚಿತ್ರಿಸಲಾಯಿತು. ಕೆಲವು ಬದಲಾವಣೆಗಳ ಹೊರತಾಗಿ ನಾಟಕವು ನಂತರ ಬಂದ ಚಲನಚಿತ್ರಗಳಿಗಿಂತ ಮೂಲ ಕಥೆಗೆ ಹೆಚ್ಚು ಹತ್ತಿರವಾಗಿದೆ.[34] ಅದರ ಹಾಸ್ಯ ರೂಪಾಂತರಗಳನ್ನೂ ಬಿಡುಗಡೆ ಮಾಡಲಾಯಿತು. 1887ರಲ್ಲಿ ಲಂಡನ್ನಲ್ಲಿ ಫ್ರಾಂಕೆನ್ಸ್ಟೈನ್, ಆರ್ ದ ವ್ಯಾಂಪೈರ್ಸ್ ವಿಕ್ಟಿಮ್ ಎಂಬ ಸಂಗೀತಮಯ ವಿಡಂಬನಾತ್ಮಕ ರೂಪಾಂತರವನ್ನು ನಿರ್ಮಿಸಲಾಯಿತು.[35]
ಮೂಕ ಚಿತ್ರಗಳು ಕಥೆಯನ್ನು ಜೀವಂತವಾಗಿ ತೋರಿಸಲು ತುಂಬಾ ಪ್ರಯಾಸ ಪಟ್ಟವು. ಎಡಿಸನ್ ಕಂಪೆನಿಯ ಒಂದು-ರೀಲಿನ ಚಿತ್ರ ಫ್ರಾಂಕೆನ್ಸ್ಟೈನ್ (1910) ಮತ್ತು ದೀರ್ಘ ಚಿತ್ರ ಲೈಫ್ ವಿದೌಟ್ ಸೋಲ್ (1915) ಮೊದಲಾದ ಆರಂಭಿಕ ರೂಪಾಂತರಗಳು ಮೂಲ ಕಥೆಗೆ ಹೆಚ್ಚು ಹತ್ತಿರವಾಗಿರುವಂತೆ ನೋಡಿಕೊಂಡವು. ಆದರೆ 1931ರಲ್ಲಿ ಜೇಮ್ಸ್ ವೇಲ್ ನಿರ್ದೇಶಿಸಿದ ಒಂದು ಚಲನಚಿತ್ರವು ಮೂಲಕಥೆಯನ್ನು ತೀವ್ರವಾಗಿ ಬದಲಾವಣೆ ಮಾಡಿತು. ಯೂನಿವರ್ಸಲ್ ಪಿಕ್ಚರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ವೇಲ್ಸ್ನ ಚಿತ್ರವು ಮೂಲಕಥೆಗೆ ಈಗ ಆಧುನಿಕ ಪ್ರೇಕ್ಷಕರಿಗೆ ಚೆನ್ನಾಗಿ ತಿಳಿದಿರುವ ಅನೇಕ ಅಂಶಗಳನ್ನು ಸೇರಿಸಿತು: ಆರಂಭದಲ್ಲಿ ಮುಗ್ಧ, ಎಳೆಯ ವಿದ್ಯಾರ್ಥಿಯಾಗಿದ್ದ "ಡಾ." ಫ್ರಾಂಕೆನ್ಸ್ಟೈನ್ ಚಿತ್ರಣ; ದೇಹದ ಅಂಗಗಳನ್ನು ಒಟ್ಟುಗೂಡಿಸುವಾಗ ಅವನ ಗುರುವಾದ ಅಪರಾಧಿಯೊಬ್ಬನ ಮಿದುಳನ್ನು ತಂದು ತಪ್ಪು ಮಾಡುವ ಐಗರ್-ಮಾದರಿಯ ಪಾತ್ರದ (ಈ ಚಿತ್ರದಲ್ಲಿ ಫ್ರಿಟ್ಜ್ ಎಂದು ಕರೆಯಲಾಗುತ್ತದೆ) ಸೇರಿಸುವಿಕೆ; ರಾಸಾಯನಿಕ ಕ್ರಿಯೆಗಳ ಬದಲಿಗೆ ವಿದ್ಯುತ್ ಶಕ್ತಿಯನ್ನು ಕೇಂದ್ರೀಕರಿಸಿರುವ ಸಂವೇದನಾಶೀಲ ರಚನಾ ಚಿತ್ರಣ. (ಶೆಲ್ಲಿಯ ಮೂಲ ಕಥೆಯಲ್ಲಿ ಫ್ರಾಂಕೆನ್ಸ್ಟೈನ್ ನಿರೂಪಕನಾಗಿ, ದೈತ್ಯ ರೂಪಕ್ಕೆ ಜೀವ ನೀಡುವ ಕ್ರಿಯೆಯನ್ನು ಬೇರೆಯವರು ಯಾರಾದರೂ ಮತ್ತೆ ಮಾಡಬಹುದೆಂಬ ಭಯದಿಂದಾಗಿ ಅದನ್ನು ಉದ್ದೇಶಪೂರ್ವಕವಾಗಿ ವಿವರಿಸುತ್ತಾನೆ.) ಈ ಚಿತ್ರದಲ್ಲಿ ವಿಜ್ಞಾನಿಯು ಎಳೆಯ ವಯಸ್ಸಿನ ಏನೂ ತಿಳಿಯದವನಾಗಿರದೆ ಒಬ್ಬ ದುರಹಂಕಾರದ, ಬುದ್ಧಿವಂತ, ಪ್ರಬುದ್ಧ ಮನುಷ್ಯನಾಗಿದ್ದಾನೆ. ಚಿತ್ರದಲ್ಲಿ ದೈತ್ಯ ರೂಪವನ್ನು ನಾಶ ಮಾಡುವ ಮತ್ತೊಬ್ಬ ವಿಜ್ಞಾನಿಗೆ ಅವನ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಬಲವಂತ ಪಡಿಸಲಾಗುವುದಿಲ್ಲ. ವೇಲ್ನ ಉತ್ತರಭಾಗ ಬ್ರೈಡ್ ಆಫ್ ಫ್ರಾಂಕೆನ್ಸ್ಟೈನ್ (1935) ಮತ್ತು ನಂತರದ ಉತ್ತರಭಾಗಗಳು ಸನ್ ಆಫ್ ಫ್ರಾಂಕೆನ್ಸ್ಟೈನ್ (1939) ಮತ್ತು ಘೋಸ್ಟ್ ಆಫ್ ಫ್ರಾಂಕೆನ್ಸ್ಟೈನ್ (1942) ಎಲ್ಲವೂ ಡಾ. ಫ್ರಾಂಕೆನ್ಸ್ಟೈನ್ ಮತ್ತು ಇತರ ಪಾತ್ರಗಳನ್ನು ಇನ್ನಷ್ಟು ಕೆಟ್ಟದಾಗಿ ಮಾಡುವ ಸಂವೇದನ ಸಿದ್ಧಾಂತ, ಭಯಾನಕತೆ ಮತ್ತು ಉತ್ಪ್ರೇಕ್ಷೆಯ ಸಾಮಾನ್ಯ ಅಂಶವನ್ನೇ ಮುಂದುವರಿಸಿಕೊಂಡು ಹೋಗಿವೆ.[36]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.