From Wikipedia, the free encyclopedia
ಮೌರ್ಯ ಸಾಮ್ರಾಜ್ಯ (Sanskrit: मौर्य साम्राज्यम:) ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೪ ರಿಂದ ಕ್ರಿ.ಪೂ. ೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುತ್ತ ತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲ ಎಂದು ವಿ.ಎ. ಸ್ಮಿತ್ ಹೇಳಿದ್ದಾರೆ.
| ||
ಸ್ಥಾಪಕ: | ಚಂದ್ರಗುಪ್ತ ಮೌರ್ಯ | |
ಸ್ಥಾಪನೆ: | ಕ್ರಿ.ಪೂ. ೩೨೪ | |
ಅವನತಿ | ಕ್ರಿ.ಪೂ. ೧೮೦ | |
ರಾಜಧಾನಿ: | ಪಾಟಲಿಪುತ್ರ | |
ಲಾಂಛನ: | ಧರ್ಮಚಕ್ರ | |
ಧರ್ಮಗಳು | ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮ | |
ಆಡಳಿತ ಭಾಷೆ | ಸಂಸ್ಕೃತ, ಪ್ರಾಕೃತ ಮತ್ತು ಪಾಳಿ |
ಮಗಧ(ಇಂದಿನ ಬಿಹಾರದ ಭಾಗ) ಪ್ರದೇಶದಲ್ಲಿ ಇದ್ದ ೧೬ ಜನಪದವನ್ನು(ಅಥವಾ ಗಣರಾಜ್ಯವನ್ನು) ಸೋಲಿಸಿ ಹರ್ಯಂಕ ವಂಶದವರು ಪ್ರಬಲ ಸಾಮ್ರಾಜ್ಯ ಕಟ್ಟಿದರು. ನಂತರ, ಮಗಧವನ್ನು ನಂದವಂಶದವರು ಸುಮಾರು ೬೦ ವರ್ಷಗಳ ಕಾಲ ಆಳಿದರು. ಅಲೆಗ್ಸಾಂಡರನ ದಂಡಯಾತ್ರೆ ನಂದವಂಶದವರನ್ನು ಎದುರಿಸುವ ಮುನ್ನವೇ ಹಿಂತಿರುಗಿತು. ಅಲೆಕ್ಸಾಂಡರ್ ಭಾರತದಿಂದ ಹಿಂದಿರುಗಿ ಕ್ರಿ.ಪೂ. ೩೨೪ರಲ್ಲಿ ನಿಧನನಾದ ನಂತರ ಭಾರತದಲ್ಲಿನ ಆತನ ಸಾಮ್ರಾಜ್ಯ ಹಂಚಿಹೋಗಲಾರಂಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದು ಚಂದ್ರಗುಪ್ತ ಮೌರ್ಯ. ಗ್ರೀಕರ ದಾಳಿಯಿಂದ ಅಸ್ತವ್ಯಸ್ಥಗೊಂಡ ಪಂಜಾಬನ್ನು ಚಂದ್ರಗುಪ್ತ ಮೌರ್ಯ ತನ್ನ ಅಧಿಪತ್ಯವನ್ನು ಪ್ರಾರಂಭಿಸಿದ. ಸುಮಾರು ಕ್ರಿ.ಪೂ. ೩೨೩ರಲ್ಲಿ ಅಲೆಗ್ಸಾಂಡರನ ಭಾರತದ ಭಾಗಗಳನ್ನು ಗೆದ್ದು, ೩೨೧ರಲ್ಲಿ ಪಾಟಲಿಪುತ್ರವನ್ನು ಗೆದ್ದ. ನಂದರ ದುರಾಡಳಿತವೂ ಅವರ ಪತನಕ್ಕೆ ಕಾರಣವಾಗಿ, ಚಂದ್ರಗುಪ್ತನಿಗೆ ಸಹಾಯವಾಯಿತು.
ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವೇ ತಕ್ಷಶಿಲೆಯ ಅರ್ಥಶಾಸ್ತ್ರಜ್ಞ (ಚಾಣಕ್ಯ) ಕೌಟಿಲ್ಯ.ತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ.ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ(ಚಾಣಕ್ಯ)ಕೌಟಿಲ್ಯನ ಸಹಾಯದೊಂದಿಗೆ ಮಗಧ ರಾಜ್ಯದ ನಂದವಂಶದ ಆಗಿನ ದೊರೆಯಾಗಿದ್ದ ಧನಾನಂದನನ್ನು ಅಧಿಕಾರದಿಂದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ. ನಂತರ ಇಂದಿನ ಪಂಜಾಬವನ್ನು ಸಹ ಗೆದ್ದು ತಕ್ಷಶಿಲೆಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.
ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿಂದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚಂದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್).
ಚಾಣಕ್ಯನ ಮಂತ್ರಿತ್ವದ ಅಡಿಯಲ್ಲಿ ಚಂದ್ರಗುಪ್ತ ಕೇಂದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇಂದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವಂತೆ, ಮರದ ಕೋಟೆಯನ್ನು ಹೊಂದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊಂದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಜ್ಞನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿಂದ ಕಾಪಾಡಲು. ಚಂದ್ರಗುಪ್ತನು ಒಳ್ಳೆಯ ಆಡಳಿತಗಾರನಾಗಿದ್ದ
ಚಂದ್ರಗುಪ್ತನ ಮಗ ಬಿಂದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಹುಟ್ಟುವಾಗಲೆ ಇವನ ಹಣೆಯ ಮೆಲೆ ಇದ್ದ ವಿಷದ ಬಿಂದುವಿನಿಂದಲೆ ಅವನಿಗೆ ಬಿಂದುಸಾರ ಎಂದು ಹೆಸರು, ಆತನ ಮಗನೇ ಅಶೋಕ.
ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲಂಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ" ಅಂದರೆ ದೇವರಿಗೆ ಪ್ರೀತಿಯಾದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು. ಬೌದ್ದ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲಂಕಾಗೆ ಅಶೋಕನು ಕಳುಹಿಸಿದನು.
ಮೆಗಸ್ತನೀಸ್-ನ "ಇಂಡಿಕಾ" ಮತ್ತು "ಕೌಟಿಲ್ಯನ ಅರ್ಥಶಾಸ್ತ್ರ"ಗಳು ಹೇಳುವಂತೆ, ಕೇಂದ್ರ ಸರಕಾರವು ಪ್ರಬಲ ಮತ್ತು ಸುಭದ್ರವಾಗಿತ್ತು. ಮೌರ್ಯರ ಆಡಳಿತ, ಮುಘಲರ ಆಡಳಿತಕ್ಕಿಂತಲೂ ಉತ್ತಮವಾಗಿತ್ತೆಂದು ವಿನ್ಸ್ಂಟ್ ಸ್ಮಿಥ್ (ವಿ.ಎ. ಸ್ಮಿತ್) ಹೇಳಿದ್ದಾರೆ.
ಪಾಟಲಿಪುತ್ರದ ವ್ಯವಹಾರಗಳನ್ನು ನೋಡಿಕೊಳ್ಳಲು ಹಲವು ಸಮಿತಿಗಳಿದ್ದವು.
ಚಂದ್ರಗುಪ್ತನ ಕಾಲದಲ್ಲಿ ೪ ಪ್ರಾಂತಗಳು:
ಅಶೋಕನು, ೫ನೇ ಪ್ರಾಂತವನ್ನಾಗಿ, "ಕಳಿಂಗ"ವನ್ನು ಸೇರಿಸಿದ.
ಪ್ರಾಂತಗಳ ಕೆಳಗೆ ಜನಪದಗಳಿದ್ದವು.
ಇವರಷ್ಟೇ ಅಲ್ಲದೇ, ರಾಜರಿಗೆ ವರದಿ ಮಾಡುವ ಗುಪ್ತಚರರ ಜಾಲವೇ ಇತ್ತು.
ಅಶೋಕನ ಆಡಳಿತದ ನಂತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿಂದ ಆಳಲ್ಪಟ್ಟಿತು. ಮೌರ್ಯ ವಂಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. ೧೮೦ ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿ ಶುಂಗ ವಂಶವನ್ನು ಸ್ಥಾಪಿಸಿದ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.