ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು . ಇದು ಮಹಾರಾಷ್ಟ್ರದ ಔರಂಗಾಬಾದಿನಿಂದ ೩೦ ಕಿ.ಮೀ., ವೆರೂಲಿನಿಂದ ೧೧ ಕಿ.ಮೀ.ದೂರದಲ್ಲಿದೆ. ಎಲ್ಲೋರಾ ಗುಹೆಗಳ ಅರ್ಧ ಕಿ.ಮೀ. ನಷ್ಟು ಸಮೀಪದಲ್ಲಿದೆ [1]. ಬೌದ್ಧ ಗುಹೆ ಎಂದು ಹೆಸರಾದ ಎಲ್ಲೋರಾದಲ್ಲಿರುವ ಕೈಲಾಸ ದೇವಾಲಯ ನೋಡಿಕೊಂಡು ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗವನ್ನು ನೋಡಲು ಹೋಗಬಹುದು.
ದೇವಾಲಯ ಬಹಳ ವಿಶಾಲವಾಗಿ ಭವ್ಯವಾಗಿದೆ. ಪುರಾತನ ಶೈಲಿಯ ಕೆತ್ತನೆಯಿಂದ ಕೂಡಿದೆ. ಪ್ರತಿಯೊಂದು ಕಲ್ಲೂ ಕೆತ್ತನೆಯಿಂದ ಕೂಡಿದೆ. ಆವರಣದಲ್ಲಿ ಸುಂದರವಾದ ಕೊಳವಿದೆ. ಕೆಂಪು ಕಲ್ಲಿನಿಂದ ನಿರ್ಮಿತವಾದ ದೇವಾಲಯ, ಐದು ಅಂತಸ್ತುಗಳುಳ್ಳ ಶಿಖರಹೊಂದಿದೆ. ಇದು ೧೮ ನೇ ಶತಮಾನದಲ್ಲಿ ಕಟ್ಟಿದ್ದು; ೨೪೦*೧೮೫ ಅಡಿ ವಿಸ್ತೀರ್ಣದ ಮೇಲೆ ಕಟ್ಟಿದೆ. .ಹಿಂದೂ ದೇವ ದೇವತೆಯರ ಕೆತ್ತನೆಗಳಿಂದ ಕೂಡಿದೆ.ಇದನ್ನು ಘೃಣೇಶ್ವರ ಎಂದೂ ಕರೆಯುತ್ತಾರೆ. ದೇವಾಲಯದ ಒಳಗೆ ಒಂದು ಪವಿತ್ರ ಜಲದ ಚಿಲುಮೆ ಇದೆ ಎಂದು ಹೇಳುತ್ತಾರೆ.
ಸದಾ ಭಕ್ತ ಸಮೂಹ ಇರುತ್ತದೆ.ಮಹಾ ಶಿವರಾತ್ರಿ ಯಲ್ಲಿ ಜಾತ್ರೆ ನಡೆಯುವುದು. ಪೂರ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಇರುವುದು. ಇಲ್ಲಿ ದಾಳಿಂಬೆ ಸೀತಾಫಲಗಳು ಹೇರಳವಾಗಿ ಸಿಗುತ್ತವೆ.
ವೆರೋಲದ ಪಾಳೇಗಾರ (ಪಟೇಲ) ಭೋಸಲೆ ಶಿವ ಭಕ್ತ; ಅವನು ಶಿವನ-ಗೃಷ್ಣೇಶ್ವರನ ಕೃಪೆಯಿಂದ ಒಂದು ಹುತ್ತದಲ್ಲಿದ್ದ ನಿಧಿಯನ್ನು ಕಂಡನು. ಆ ನಿಧಿಯಿಂದ ಈ ಶಿವ ಮಂದಿರವನ್ನು ಜೀರ್ಣೋದ್ಧಾರ ಮಾಡಿದನು. ಅಲ್ಲದೆ ನಂತರ ಶಿಖರಶಿಂಗನಾಪುರದಲ್ಲಿ ನಂತರ ಒಂದು ಕೆರೆಯನ್ನೂ ಕಟ್ಟಿಸಿದನು. ನಂತರ ಇಂದೂರಿನ ರಾಣಿ ಅಹಲ್ಯಾಬಾಯಿ ಹೋಲ್ಕರ್ ಮತ್ತು ಗೌತಮೀಬಾಯಿಯವರು ಈ ಗೃಷ್ಣೇಶ್ವರ ದೇವಾಲಯವನ್ನು ಮತ್ತೂ ಉತ್ತಮ ಪಡಿಸಿದರು. ೨೪೦ ಅಡಿ ×೧೮೫ ಅಡಿ ಯ ವಿಸ್ತೀರ್ಣದ ಮೇಲೆ ಕಟ್ಟಿದ ಐದು ಅಂತಸ್ತಿನ ಗೋಪುರದ ಕಟ್ಟಡ ಈಗಲೂ ಗಟ್ಟಿಮುಟ್ಟಾಗಿದೆ. ಕೆಂಪು ಕಲ್ಲಿನಲ್ಲಿ ಕೆತ್ತಿದ ದಶಾವತಾರದ ಮೂರ್ತಿಗಳಿವೆ. ಸುಂದರ ಕೆತ್ತನೆಗಳಿಂದ ಕೂಡಿದ ೨೪ ಕಂಬಗಳ ವಿಶಾಲ ಪ್ರಾಂಗಣವಿದೆ. ಅದರಲ್ಲಿ ಅಂದವಾದ ತೈಲ ಚಿತ್ರಗಳೂ ನಾನಾ ವಿಧದ ಮೂರ್ತಿಗಳೂ ಇವೆ. ಗರ್ಭಗುಡಿಯು ೧೭×೧೭ಅಡಿ ಇದ್ದು ಪೂರ್ವಾಭಿಮುಖವಾಗಿದೆ. ದೊಡ್ಡ ವಿಶಾಲ ಪ್ರಾಂಗಣದಲ್ಲಿ ಭವ್ಯವಾದ ನಂದಿಕೇಶ್ವರ ಇದೆ. ಮಹಾರಾಷ್ಟ್ರದಲ್ಲಿರುವ ಈ ದೇವಾಲಯ ಬಹಳ ಪವಿತ್ರವಾದುದೆಂದು ಪ್ರಸಿದ್ಧವಾಗಿದೆ[2] .
ಇಲ್ಲಿಂದ ೧೧ ಕಿ.ಮೀ. ದೂರವಿರವ ದೌಲತಾಬಾದನ್ನೂ ನೋಡಬಹುದು. ೩೦ಕಿ.ಮೀ.ದೂರದಲ್ಲಿರುವ ಔರಂಗಾಬಾದಿನಲ್ಲಿ ಮೊಗಲ್ ಬಾದಷಹ ಔರಂಗಜೇಬನು ಕಟ್ಟಿಸಿದ ಮಹಲ್ ಇದೆ. ಅದು ತಾಜಮಹಲ್ ರೀತಿಯಲ್ಲೇ ಕಟ್ಟಿದೆ. ಆದರೆ ಅಮೃತಶಿಲೆಯಿಂದ ಕಟ್ಟಿಲ್ಲ. ಆದರೂ ಒಮ್ಮೆ ನೋಡುವಂತಿದೆ.
(ರಾಜಸ್ಥಾನ ದಲ್ಲಿ ಘುಶ್ಮೇಶ್ವರ ಜೋತಿರ್ಲಿಂಗವೆಂದು ಹೆಸರಾದ ಇನ್ನೊಂದು ಜ್ಯೋತಿರ್ಲಿಂಗವೂ ಇದೆ)