ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶ ದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಅಲ್ಲಿಗೆ ಹೋಗಲು ಎಲ್ಲಾರೀತಿಯ ವಾಹನ ಸೌಕರ್ಯವಿದೆ. ಉಜ್ಜಯನಿ ಬಹಳ ಪುರಾತನವಾದ ಐತಿಹಾಸಿಕ ಮಹತ್ವ ಉಳ್ಳ ನಗರ. ಅದು ಕ್ಷಿಪ್ರಾನದಿಯ ದಡದ ಮೇಲಿದೆ. ಹಿಂದೆ ಬೇತಾಳ ಕಥೆಯ ನಾಯಕನಾದ ವಿಕ್ರಮಾದಿತ್ಯ , ಕವಿ ರತ್ನ ಕಾಳಿದಾಸ ನನ್ನು ಆಸ್ಥಾನ ಕವಿಯಾಗಿ ಹೊಂದಿದ್ದ ವಿಕ್ರಮಾದಿತ್ಯ; ಹೀಗೆ ಕಥೆ ಇತಿಹಾಸಗಳ ನಾಯಕ ವಿಕ್ರಮಾದಿತ್ಯ ಆಳಿದ ನಗರ ಉಜ್ಜಯಿನಿ.
ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯವು ವಿಶಾಲವಾದ ಆವರಣದಲ್ಲಿದೆ. ಅದಕ್ಕೆ ಬಹಳ ಎತ್ತರವಾದ ದೊಡ್ಡ ಗೋಪುರವಿದೆ . ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆ ಉದ್ದನೆಯ ಕ್ಯೂ ಇರುತ್ತದೆ . ಮಂದಿರದ ಮಧ್ಯದಲ್ಲಿ ಸುಂದರವಾದ ಕೊಳವಿದೆ. ನೀರಿನ ಕಾರಂಜಿ ಮನಸ್ಸಿಗೆ ಆನಂದವನ್ನೀಯುತ್ತದೆ. ಮಂದಿರದ ಒಳಗಡೆ ಅನೇಕ ದೇವ ದೇವಿಯರ ಮೂರ್ತಿಗಳಿವೆ . ದುರ್ಗ , ಅನ್ನಪೂರ್ಣೇಶ್ವರಿ,ಗಣಪತಿ,ಕಾರ್ತಿಕೇಯ ಮೊದಲಾದವು. ಮಂದಿರದ ಒಳಗಡೆ ಸ್ವಲ್ಪ ದೂರ ನಡೆದು ಸಣ್ಣ ಮೆಟ್ಟಿಲುಗಳನ್ನು ಇಳಿದು ಗರ್ಭಗುಡಿ ಬಳಿ ಸಾಲಿನಲ್ಲಿ ಬರಬೇಕು. ಗರ್ಭಗುಡಿ ಬಹಳ ಚಿಕ್ಕದಾಗಿದೆ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಸಹಾ ಚಿಕ್ಕದಾಗಿದೆ. ಸ್ವತಃ ಅಭಿಷೇಕ ಮಾಡಿ ಪೂಜೆ ಮಾಡಬಹುದು. ಶಿವಲಿಂಗವನ್ನು ಸ್ಪರ್ಶಿಸಿ ಪುಣ್ಯವನ್ನೂ ಆನಂದ ಪಡೆಯಬಹುದು. ಸಾಲು ಇರುವುದರಿಂದ ಹೆಚ್ಚು ಹೊತ್ತು ನಿಲ್ಲುವಂತಿಲ್ಲ -ತಕ್ಷಣ ಹೊರಬರಬೇಕು ಎರಡು ನಂದಾದೀಪಗಳು ನಿರಂತರವಾಗಿ ಉರಿಯುತ್ತಾ ಬಂದಿವೆ ಎಂದು ಹೇಳುತ್ತಾರೆ. ಬಹಳ ಶ್ರೀಮಂತವಾದ ದೇವಸ್ಥಾನ ನೋಡಿದರೇ ಗೊತ್ತಾಗುತ್ತದೆ. ಪೋಲೀಸರ ಬಲವಾದ ಕಾವಲಿದೆ. ಮಂದಿರದ ಮೇಲು ಭಾಗದಲ್ಲಿ ನಾಗ ಮಂದಿರವಿದೆ. ನೂರು ಕಿಲೋಗ್ರಾಂ ಬೆಳ್ಳಿ ಯಿಂದ ಮಾಡಿದ ರುದ್ರ ಯಂತ್ರವಿದೆ. ವಿಶೇಷಪೂಜೆ ಮಾಡಿಸಲು ಅಪೇಕ್ಷೆಯಿರುವವರಿಗೆ ಪೂಜೆ ಮಾಡಿಸಲು ಅರ್ಚಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿವಿಧರೀತಿಯ ಹೋಮ ಹವನಗಳು ಯಾವಾಗಲೂ ನಡೆಯುತ್ತಿರುತ್ತದೆ.
ಉಜ್ಜಯನಿಯಲ್ಲಿ ಇನ್ನೂಅನೇಕ ದೊಡ್ಡ ದೊಡ್ಡ ದೇವಾಲಯಗಳಿವೆ. - ಶ್ರೀ ರಾಮ ಮಂದಿರ, ಗೋಪಾಲ ಮಂದಿರ, ಹರಿ ಸಿದ್ಧಿ ದೇವೀ ಮಂದಿರ. ಗಣೇಶ ಮಂದಿರ , ಸಂದೀಪಿನೀ ಆಶ್ರಮ, .ಹೀಗೆ ಅನೇಕ ನೋಡತಕ್ಕ ಸ್ಥಳಗಳಿವೆ.
ಖಗೋಲ ವಿಜ್ಞಾನ ಕ್ಕೆ ಸಂಬಂಧ ಪಟ್ಟ ಜಂತರ್ ಮಂತರ್ ಪ್ರಯೋಗ ಮಂದಿರ ನೋಡಲೇಬೇಕಾದ ಸ್ಥಳ.
ಗೋಪಾಲ ಮಂದಿರ ಬಹಳ ಸುಂದರವಾಗಿದೆ. ಕೃಷ್ಣಜನ್ಮಾಷ್ಟಮಿ ಬಹಳ ವೈಭವದಿಂದ ನಡೆಯುತ್ತದೆ.
ವೈಕುಂಠ ಚತುರ್ದಶಿಯ ದಿನ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಉತ್ಸವ ಇಲ್ಲಿಗೆ ಬರುತ್ತದೆ. ಹರಿ -ಹರ ಮಿಲನದ ಉತ್ಸವ ಆದಿನ ನಡೆಯುತ್ತದೆ. ಶ್ರೀ ಮಹಾಕಾಳೇಶ್ವರನಿಗೆ ಪ್ರಾತಃ ಸಮಯದಲ್ಲಿ ನಡೆಯುವ ಭಸ್ಮಾರತಿ ಬಹಳ ವಿಶೇಷವಾದುದು. ಪ್ರತಿದಿನ ಐದು ಬಾರಿ ಈ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ವಿಶೇಷ ಆರತಿ ನಡೆಯುತ್ತದೆ.ಶಿವರಾತ್ರಿ ಯಲ್ಲಿ ಬಹಳ ಜನಸಂದಣಿ ಇರುವುದು.
ಹರಿದ್ವಾರ , ಪ್ರಯಾಗ , ನಾಸಿಕದಂತೆ ಇಲ್ಲಿಯೂ ಹನ್ನೆರಡು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಕ್ಷಿಪ್ರಾನದಿಯಲ್ಲಿ ಸ್ನಾನ ಮಾಡಿ ತರ್ಪಣ ಕೊಡುತ್ತಾರೆ . ನದಿಯ ಸ್ನಾನಘಟ್ಟಗಳು ವಿಶಾಲವಾಗಿ ಚೆನ್ನಾಗಿವೆ. ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತದ ಬಿಂದುಗಳು ಈ ನಾಲ್ಕು ಸ್ಥಳಗಳಲ್ಲಿ ಬಿದ್ದುದರಿಂದ ಪರ್ವಕಾಲದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರಕುವುದೆಂದು ಹೇಳುತ್ತಾರೆ. ದೇಶದ ನಾನಾ ಭಾಗಗಳಿಂದ ಭಕ್ತರು ಹಾಗೂ ವಿದೇಶೀಯರೂ ಸಹ ಕುಂಭ ಮೇಳದ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿಯ ವಿಶೇಷವೆಂದರೆ ದೇವರಿಗೆ ಅರ್ಪಿಸಿದ ಹೂ ಪತ್ರೆಗಳನ್ನು ತೊಳೆದು ಪುನಃ ಉಪಯೋಗಿಸುತ್ತಾರೆ. ದೇವಾಲಯದ ಬಾಗಿಲಲ್ಲಿ ಹೂ ಪತ್ರೆ ಮಾರುವವರಿಗೆ ಬಹಳ ಅನುಕೂಲ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಅಕಾಲ ಮೃತ್ಯು, ಅಪಮೃತ್ಯುವಿನ ಭಯವಿಲ್ಲವೆಂದೂ, ಮುಕ್ತಿ ದೊರಕುವುದೆಂದೂ ಭಕ್ತರ ನಂಬುಗೆ. ಶ್ರಾವಣ ಮಾಸದಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುವುದು.
"ದ್ವಾದಶ ಜ್ಯೋತಿರ್ಲಿಂಗಗಳು"- ಕೈ ಹೊತ್ತಿಗೆ- ಪ್ರವಾಸ ಕಥನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ
ಪ್ರತಿಕ್ರಿಯೆ, -ತಿದ್ದುಪಡಿ - ಸಲಹೆ ಕೊಡಲು ಈ ಮೇಲಿನ ಎಡಗಡೆ ಇರುವ- ಚರ್ಚೆಪುಟ:ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಪುಟಕ್ಕೆ ಹೋಗಿ. ಅಲ್ಲಿ ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.