From Wikipedia, the free encyclopedia
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಂಗಾಳದ ನವಾಬ ಹಾಗೂ ಅವನ ಫ್ರೆಂಚ್ ಬೆಂಬಲಿಗರ ನಡುವೆ ಪ್ಲಾಸಿಯಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರು ಗೆದ್ದು ಮುಂದೆ ೧೯೦ ವರ್ಷಗಳ ಕಾಲ ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಡಿಪಾಯ ಹಾಕಿದರು. ೧೭೫೭ರ ೨೩ನೇ ಜೂನಿನಂದು ಪಶ್ಚಿಮ ಬಂಗಾಳದ, ಭಾಗೀರಥಿ ನದಿಯ ದಂಡೆಯ ಮೇಲಿರುವ, ಪ್ಲಾಸಿಯಲ್ಲಿ ಈ ಯುದ್ಧ ನಡೆಯಿತು.
ಈ ಯುದ್ಧದ ಒಂದು ಕಡೆ ಬಂಗಾಳದ ಕೊನೆಯ ಸ್ವತಂತ್ರ ನವಾಬ ಸಿರಾಜುದ್ದೌಲನೂ, ಇನ್ನೊಂದು ಕಡೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೂ ಇದ್ದವು. ಯೂರೋಪಿನಲ್ಲಿ ನಡೆದ ಏಳು ವರ್ಷದ ಯುದ್ಧ (೧೭೫೬-೬೩) ದ ಕಾಲದಲ್ಲಿಯೇ ಈ ಕದನ ಭಾರತದಲ್ಲಿ ನಡೆಯಿತು. ಯೂರೋಪಿನ ಲ್ಲಿಯ ವೈರದ ಪ್ರಭಾವದಿಂದ , ಫ್ರೆಂಚರು , ಭಾರತದ ಈ ಕದನದಲ್ಲಿ ಬ್ರಿಟಿಷ್ರ ವಿರುದ್ಧ ಹೋರಾಡಲು ಸಣ್ಣ ತುಕಡಿಯನ್ನು ಕಳುಹಿಸಿದರು. ಸಿರಾಜುದ್ದೌಲನ ಸೈನ್ಯ ಬ್ರಿಟಿಷರಿಗಿಂತ ಉತ್ತಮವಾಗಿದ್ದು, ಪ್ಲಾಸಿಯಲ್ಲಿ ಬೀಡುಬಿಟ್ಟಿತ್ತು. ಸೋಲಿನ ಸಂಭವದಿಂದ ಚಿಂತಿತರಾದ ಬ್ರಿಟಿಷರು ಸಿರಾಜುದ್ದೌಲನ ಪದಚ್ಯುತ ಸೇನಾಪತಿ ಮೀರ್ ಜಾಫರ್ ಮತ್ತು ಇಬ್ಬರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಆ ಸಂಚಿನ ಪ್ರಕಾರ ಮೀರ್ ಜಾಫರನು ತನ್ನ ಸೈನ್ಯವನ್ನು ಯುದ್ಧದ ಕಣದಲ್ಲಿ ಜಮಾಯಿಸಿದರೂ, ಯುದ್ಧದಲ್ಲಿ ಭಾಗವಹಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದರಿಂದ ಸಿರಾಜುದ್ದೌಲನ ಸೈನ್ಯ ಸೋಲನ್ನುಂಡಿತು. ತಲೆಮರೆಸಿಕೊಂಡ ಸಿರಾಜುದ್ದೌಲ ನನ್ನು ನಂತರ ಹಿಡಿದು ಕೊಲ್ಲಲಾಯಿತು. ಈ ಸೋಲಿನ ಪರಿಣಾಮವಾಗಿ ಬಂಗಾಳ ಸಂಪೂರ್ಣ ಬ್ರಿಟಿಷರ ವಶವಾಯಿತು. ಮೀರ್ ಜಾಫರ್ ಬ್ರಿಟಿಷರ ಕೈಗೊಂಬೆ ನವಾಬನೆಂದು ನೇಮಕಗೊಂಡನು.
ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಸ್ಥಾಪಿಸುವುದರಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಪ್ಲಾಸಿಯ ಯುದ್ಧವೂ ಒಂದು ಎಂದು ಇಂದು ಗುರುತಿಸಲಾಗಿದೆ. ಬಂಗಾಳದ ಬೊಕ್ಕಸದ ಅಪರಿಮಿತ ಸಂಪತ್ತು , ತುಂಬಿ ತುಳುಕುತ್ತಿದ್ದ ದವಸ ಧಾನ್ಯಗಳ ಆಗರ , ಮತ್ತು ವಿಪುಲ ಸುಂಕದ ಉತ್ಪತ್ತಿ ಇವುಗಳಿಂದ ಬ್ರಿಟಿಷರು ತಮ್ಮ ಸೈನ್ಯಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ಭಾರತದಲ್ಲಿ ಬೇರು ಬಿಡಲು ಬಹಳ ಸಹಾಯವಾಯಿತು. ಆದರೂ , ಹತ್ತು ವರ್ಷಗಳ ನಂತರದ ಬಕ್ಸಾರ್ ಕದನ ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಬಲವಾಗಿ ನೆಲೆಯೂರಲು ಅತಿ ನಿರ್ಣಾಯಕವಾಗಿತ್ತು.
ಪ್ಲಾಸಿ ಶಬ್ದ ಮೂಲ ಬಂಗಾಳಿ ಪಲಾಶಿ ( ಒಂದು ಹೂವಿನ ಹೆಸರು)ಯಿಂದ ಬಂದಿದೆ.
ಪ್ಲಾಸಿ ಕದನಕ್ಕೆ ತೋರಿಕೆಯ ಕಾರಣ ಸಿರಾಜುದ್ದೌಲ ೧೭೫೬ರ ಜೂನಿನಲ್ಲಿ ಫೋರ್ಟ್ ವಿಲಿಯಮ್ ಅನ್ನು ವಶಪಡಿಸಿಕೊಂಡಿದ್ದು. ಆದರೂ, ಈ ಯುದ್ಧ ಈಸ್ಟ್ ಇಂಡಿಯಾ ಕಂಪನಿಯ ಭೂ ವಿಸ್ತಾರದ ಮಹತ್ವಾಕಾಂಕ್ಷೆಯ ಒಂದು ಭಾಗವಾಗಿತ್ತು ಎಂದು ಇಂದು ತಿಳಿಯಲಾಗುತ್ತದೆ.
ಈ ಯುದ್ಧಕ್ಕೆ ಇನ್ನೂ ಅನೇಕ ವ್ಯಾಜ್ಯಗಳು ಕಾರಣವಾದವು :
ಯುದ್ಧಕ್ಕಾಗಿ ಎರಡೂ ಪಕ್ಷಗಳ ಸೈನ್ಯ ಜಮಾವಣೆಯ ಕಾರ್ಯಶುರುವಾಗುತ್ತಿದ್ದಂತೆ ಬ್ರಿಟಿಷರು ಮದರಾಸಿನ ಫೋರ್ಟ್ ಸೆಯಿಂಟ್ ಜಾರ್ಜ್ ನ ಬ್ರಿಟಿಷ್ ಪ್ರೆಸಿಡೆನ್ಸಿಯಿಂದ ಸಹಾಯ ಬೇಡಿದರು. ಅದರ ಪ್ರಕಾರ ಮದರಾಸಿನಿಂದ ಕರ್ನಲ್ ರಾಬರ್ಟ್ ಕ್ಲೈವ್ ಮತ್ತು ಅಡ್ಮಿರಲ್ ಚಾರ್ಲ್ಸ್ ವ್ಯಾಟ್ಸನ್ ಇವರನ್ನು ಸಹಾಯಕ್ಕೆ ಕಳುಹಿಸಲಾಯಿತು. ೧೭೫೭ರ ಜನವರಿ ೨ರಂದು ಇವರಿಬ್ಬರು ಕಲಕತ್ತಾದ ಕೋಟೆಯನ್ನು ಮರಳಿ ವಶಕ್ಕೆ ತೆಗೆದುಕೊಂಡರು. ನವಾಬ ಫೆಬ್ರುವರಿ ೫ರಂದು ಮತ್ತೆ ದಾಳಿ ಮಾಡಿದರೂ ಬ್ರಿಟಿಷರ ಬೆಳಗಿನ ಜಾವದಲ್ಲಿ ಬ್ರಿಟಷರ ಅನಿರೀಕ್ಷಿತ ದಾಳಿಯ ಪರಿಣಾಮವಾಗಿ , ೭ನೆಯ ಫೆಬ್ರುವರಿಯಂದು ಅಲಿನಗರದಲ್ಲಿ (ಫೋರ್ಟ್ ವಿಲಿಯಮ್ ಗೆ ಸಿರಾಜುದ್ದೌಲ ಕೊಟ್ಟಿದ್ದ ಹೆಸರು) ಸಂಧಾನವಾಯಿತು.
ಫ್ರೆಂಚರ ಗವರ್ನರ್ ಜನರಲ್ ಜೋಸೆಫ್ ಫ್ರಾಂಕೋಯಿ ಡೂಪ್ಲೆಯ ಒಳ ಸಮ್ಮತಿಯೊಂದಿಗೆ ನವಾಬನ ಆಸ್ಥಾನದಲ್ಲಿ ಫ್ರೆಂಚರ ಪ್ರಭಾವ ಹೆಚ್ಚಾಗತೊಡಗಿತು. ಬಂಗಾಳದಲ್ಲಿ ಫ್ರೆಂಚರ ವ್ಯಾಪಾರ ವಹಿವಾಟುಗಳೂ ಹೆಚ್ಚತೊಡಗಿದವು. ನವಾಬನ ಭಾರೀ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತಮ್ಮ ಸೈನಿಕರನ್ನೂ ಅವರು ಸಾಲವಾಗಿ ನೀಡಿದರು.
ಸಿರಾಜುದ್ದೌಲನಿಗೆ ಎರಡು ಕಡೆಯಿಂದ ಸಂಕಟ ಉಂಟಾಯಿತು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಒಂದೆಡೆಯಾದರೆ, ಅವನ ಪ಼ಶ್ಚಿಮದ ಗಡಿಯಲ್ಲಿ ಅಫಘಾನ ಅಹಮದ್ ಶಹಾ ಬ್ದಾಲಿಯ ಸೈನ್ಯ ಮುನ್ನುಗ್ಗತೊಡಗಿತ್ತು. ಅಬ್ದಾಲಿಯ ಸೈನ್ಯವು ೧೭೫೬ರಲ್ಲಿ ದೆಹಲಿ ವಶಪಡಿಸಿಕೊಂಡು ಲೂಟಿ ಮಾಡಿತ್ತು. ಸಿರಾಜುದ್ದೌಲನು ತನ್ನ ಸೈನ್ಯದ ದೊಡ್ಡ ಭಾಗವನ್ನು ತನ್ನ ಪ್ರಿಯ ಮಿತ್ರ ಮತ್ತು ಬೆಂಬಲಿಗ ಪಟ್ನಾದ ದಿವಾಣ ರಾಮನಾರಾಯಣ ನ ಮುಖಂಡತ್ವದಲ್ಲಿ ಅಬ್ದಾಲಿಯ ಸೈನ್ವನ್ನು ಎದುರಿಸಲು ಕಳುಹಿಸಿದನು.
ಇಷ್ಟರ ಮಧ್ಯೆ ಸಿರಾಜುದ್ದೌಲ ನ ಮುರ್ಶಿದಾಬಾದಿನ ಆಸ್ಥಾನದಲ್ಲಿಯೂ ಕಾರಸ್ಥಾನಗಳು ಶುರುವಾಗಿದ್ದವು. ಆತ ಅಷ್ಟೇನೂ ಜನಪ್ರಿಯ ದೊರೆಯಾಗಿರಲಿಲ್ಲ. ತನ್ನ ಅಜ್ಜನ ನಂತರ ಪಟ್ಟಕ್ಕೆ ಬಂದಾಗ ೨೩ರ ಹರೆಯದಲ್ಲಿದ್ದ ಅವನು ತನ್ನ ಶೀಘ್ರಕೋಪದ ಸ್ವಭಾವದಿಂದ ಬಹು ಬೇಗ ಶತ್ರುಗಳನ್ನು ಮಾಡಿಕೊಳ್ಳುತ್ತಿದ್ದ. ಅವರಲ್ಲೊಬ್ಬಳು , ಅತಿ ಶ್ರೀಮಂತಳೂ, ಗಂಡಾಂತರಕಾರಿಯೂ ಆದ ಘಸೇಟಿ ಬೇಗಂ ಎಂಬ ಅವನ ಚಿಕ್ಕಮ್ಮ. ಬೇರೊಬ್ಬ ಸೋದರ ಸಂಬಂಧಿ ದೊರೆಯಾಗಬೇಕು ಎಂದು ಅವಳ ಇಚ್ಛೆಯಾಗಿತ್ತು. ಇವಳಲ್ಲದೆ ಕಲಕತ್ತಾ ಮುತ್ತಿಗೆಯಿಂದ ತೊಂದರೆಗೊಳಗಾದ ಶಹಾ ಮತ್ತು ಸೇನಾ ಮುಖ್ಯಸ್ಥಾನದಿಂದ ಪದಚ್ಯುತನಾದ ಮೀರ್ ಜಾಫರ್ ಇವರೂ ಪ್ರಬಲ ಶತ್ರುಗಳಾಗಿದ್ದರು.
ರಾಜ್ಯದ ನಾಯಕತ್ವದ ಬದಲಾವಣೆ ತಮ್ಮ ಹಿತಾಸಕ್ತಿಗೆ ಅವಶ್ಯಕ ಎಂದು ಕಂಪನಿಯವರು ಮೊದಲೇ ನಿರ್ಧರಿಸಿಯಾಗಿತ್ತು. ೧೭೫೨ರಷ್ಟು ಮೊದಲೇ ರಾಬರ್ಟ್ ಓರ್ಮೆ ಎಂಬಾತನು ರಾಬರ್ಟ್ ಕ್ಲೈವನಿಗೆ ಬರೆದ ಪತ್ರದಲ್ಲಿ ಸಿರಾಜುದ್ದೌಲನ ಅಜ್ಜ ಅಲಿವರ್ದಿ ಖಾನನ್ನು ಪದ್ಯುತಗೊಳಿಸುವುದು ಕಂಪನಿಯ ಅಭಿವೃದ್ಧಿಗೆ ಅಗತ್ಯ ಎಂದು ಬರೆದಿದ್ದನು. ೧೭೫೬ರಲ್ಲಿ ಅಲಿವರ್ದಿ ಖಾನನ ಅಕಾಲ ಮರಣದ ನಂತರ ಅವನ ಉತ್ತರಾಧಿಕಾರಿಯಾಗಿ ಸಿರಾಜುದ್ದೌಲನ ಹೆಸರಿತ್ತು. ಅವನನ್ನು ಅಲಿವರ್ದ್ಖಾನನು ದತ್ತು ತೆಗೆದುಕೊಂಡಿದ್ದನು. ಈ ಬದಲಾವಣೆಯ ವೇಳೆಗೆ ನಡೆದ ಕೆಲ ಬೆಳವಣಿಗೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿ , ಬ್ರಿಟಿಷರು ಈ ಅವಕಾಶವನ್ನು ಉಪಯೋಗಿಸಿಕೊಂಡು ಸಿರಾಜುದ್ದೌಲನ ವಿರುದ್ಧ , ಅಲಿವರ್ದಿಖಾನನ ಮಗಳು ಘಸೇಟಿಬೇಗಂ ಪಕ್ಷ ಹಿಡಿದರು.
ರಾಬರ್ಟ್ ಕ್ಲೈವನ ಸೈನ್ಯಲ್ಲಿ ಬರಿಯ ೯೫೦ ಯೂರೋಪಿಯನ್ ಸೈನಿಕರು, ೨೧೦೦ ಭಾರತೀಯ ಸೈನಿಕರು ಮತ್ತು ಒಂದಷ್ಟು ತುಪಾಕಿಗಳು ಇದ್ದರೆ , ನವಾಬನ ಸೈನ್ಯದಲ್ಲಿ ೫೦,೦೦೦ ಸೈನಿಕರೂ, ಭಾರೀ ಫಿರಂಗಿಗಳೂ ಹಾಗು ಅದನ್ನು ನಿರ್ವಹಿಸಲು ಫ್ರೆಂಚರು ಕಳುಹಿಸಿದ ೪೦ ಜನ ಫ್ರೆಂಚ್ ಸೈನಿಕರೂ ಇದ್ದರು. ಇದರಲ್ಲಿ ೧೬,೦೦೦ ಸೈನಿಕರು , ಬ್ರಿಟಿಷರೊಂದಿಗೆ ಒಳ ಸಂಧಾನ ಮಾಡಿಕೊಂಡಿದ್ದ ಮೀರ್ ಜಾಫರ್ ನ ಅಧೀನದಲ್ಲಿದ್ದು , ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ. ಅಂತೂ ಕೊನೆಗೆ ಬರಿಯ ೫೦೦೦ ಸೈನಿಕರು ಯುದ್ಧಕ್ಕಿಳಿದರು. ಆದರೂ ಸಂಖ್ಯೆಯಲ್ಲಿ ಬ್ರಿಟಿಷರಿಗಿಂತ ಹೆಚ್ಚಿದ್ದ ನವಾಬನ ಸೈನ್ಯದ, ಸೇನಾಪತಿ ಮೀರ್ ಮದನ್ ಫಿರಂಗಿಯ ಗುಂಡು ತಗಲಿ ಸತ್ತು ಅದರಿಂದ ನವಾಬನ ಸೈನ್ಯದಲ್ಲಿ ಗೊಂದಲ ಉಂಟಾದುದರಿಂದ ಯುದ್ಧದ ಪರಿಣಾಮವೇ ಬದಲಾಯಿತು.ಈ ಯುದ್ಧ ಮುಗಿದಾಗ ೨೦ಕ್ಕೂ ಕಡಿಮೆ ಬ್ರಿಟಿಷ್ ಸೈನಿಕರು ಸತ್ತಿದ್ದರು.
ಸಿರಾಜುದ್ದೌಲನಿಗೆ ಎರಡು ಬಗೆದ ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಯಿತು. ತಲೆ ಮರೆಸಿಕೊಂಡು ಓಡುವುದರಲ್ಲಿದ್ದ ಸಿರಾಜುದ್ದೌಲನ್ನು ಹಿಡಿದು ,ಮುಂದೆ , ಕೊಲ್ಲಲಾಯಿತು. ಘಸೇಟಿ ಬೇಗಂ ಮತ್ತು ಇತರ ಅನೇಕ ಪ್ರಬಲ ಮಹಿಳೆಯರನ್ನು ಸೆರೆಹಿಡಿದು ಢಾಕಾದಲ್ಲಿ ಬಂದೀಖಾನೆಯಲ್ಲಿರಿಸಲಾಯಿತು.
ಬ್ರಿಟಿಷರ ಮೇಲುಸ್ತುವಾರಿಯಲ್ಲಿ ಅಸಮಾಧಾನಗೊಂಡ ಮೀರ್ ಜಾಫರನು ಡಚ್ಚರನ್ನು ಸಹಾಯಕ್ಕಾಗಿ ಬೇಡಿದನು. ಅವರು ಕಳುಹಿಸಿದ ಏಳು ಹಡಗುಗಳು ಮ್ತು ೭೦೦ ನಾವಿಕರನ್ನು ಬ್ರಿಟಿಷರು ಯುದ್ಧದಲ್ಲಿ ಪರಾಭವಗೊಳಿಸಿದರು. ಅದರ ನಂತರ ಮೀರ್ ಜಾಫರನನ್ನು ಕೆಳಗಿಳಿಸಿ ಅವನ ಸ್ಥಾನಕ್ಕೆ , ಅವನ ಅಳಿಯ ಮೀರ್ ಕಾಸೀಮನನ್ನು ತರಲಾಯಿತು. ಸ್ವತಂತ್ರ ಮನೋವೃತ್ತಿಯನ್ನು ತೋರಿದ ಅವನನ್ನು ೧೭೬೪ರ ಬಕ್ಸಾರ್ ಕದನದಲ್ಲಿ ಬ್ರಿಟಿಷರು ಸೋಲಿಸುವುದರೊಂದಿಗೆ ಬಂಗಾಳ ಸಂಪೂರ್ಣವಾಗಿ ಬ್ರಿಟಿಷರ ಕೈಗೆ ಹೋಯಿತು. ಮೀರ್ ಜಾಫರನನ್ನು ಪುನಃ ಬ್ರಿಟಿಷ್ ಅಧೀನದ ನವಾಬನನ್ನಾಗಿ ಸ್ಥಾಪಿಸಲಾಯಿತು.
ಕ್ಲೈವನು ಕಂಪನಿಗಾಗಿ ೨.೫ ಮಿಲಿಯನ್ ಪೌಂಡುಗಳು, ಹಾಗೂ ತನ್ನಸ್ವಂತಕ್ಕಾಗಿ ೨,೩೪,೦೦೦ ಪೌಂಡುಗಳನ್ನು ನವಾಬನ ಬೊಕ್ಕಸದಿಂದ ವಸೂಲು ಮಾಡಿದನು. ಕಂಪನಿ ಫೋರ್ಟ್ ವಿಲಿಯಮ್ಮ ಸುತ್ತಮುತ್ತ ಜಮೀನಿನ ಉಪಯೋಗಕ್ಕ್ಕೆ ಕೊಡಬೇಕಾದ ೩೦,೦೦೦ ಪೌಂಡು ವಾರ್ಷಿಕ ಕಂದಾಯವನ್ನೂ ಕ್ಲೈವನಿಗೆ ಜಹಗೀರು ಬಿಡಲಾಯಿತು. ಆ ಕಾಲದಲ್ಲಿ ೮೦೦ ಪೌಂಡಿನಲ್ಲಿ ಇಬ್ಬ ಬ್ರಿಟಿಷ್ ಆಢ್ಯ ಗೃಹಸ್ತ ಐಷಾರಾಮದ ಜೀವನ ಮಾಡಬಹುದಾಗಿತ್ತು ಎಂದರೆ ಕ್ಲೈವನ ಸಂಪತ್ತಿನ ಕಲ್ಪನೆ ಬರಬಹುದು. ೧೭೭೬ರಲ್ಲಿ ಕ್ಲೈವನನ್ನು ಬಂಗಾಳದ ಗವರ್ನರ್ ಎಂದು ನೇಮಿಸಲಾಯಿತು. ಮುಂದೆ ೧೭೭೪ರಲ್ಲಿ , ಅಫೀಮಿನ ವ್ಯಸನವಿದ್ದ ಕ್ಲೈವನು , ಆತ್ಮಹತ್ಯೆ ಮಾಡಿಕೊಂಡನು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.