From Wikipedia, the free encyclopedia
ಶಸ್ತ್ರಚಿಕಿತ್ಸೆಯು (ಸರ್ಜರಿ ಪದವು ಗ್ರೀಕ್ ಭಾಷೆಯ χειρουργική ಅಂದರೆ ಚೆಯಿರೋರ್ಗಿಕೆ ಯಿಂದ ಬಂದಿದೆ, ಮೂಲ ಲ್ಯಾಟಿನ್ನಲ್ಲಿ chirurgiae ಅಂದರೆ "ಕೈಯಿಂದ ಮಾಡಲಾಗುವ ಕೆಲಸ" ಎಂಬ ಅರ್ಥವಿದೆ) ಒಂದು ವೈದ್ಯಕೀಯ ಪರಿಣತಿಯಾಗಿದೆ. ಒಬ್ಬ ರೋಗಿಯನ್ನು ಪರೀಕ್ಷಿಸಲು ಹಾಗೂ/ಅಥವಾ ರೋಗಶಾಸ್ತ್ರೀಯ ಸಂದರ್ಭಗಳಾದ ಕಾಯಿಲೆ ಅಥವಾ ಗಾಯಗಳಿಗೆ ಚಿಕಿತ್ಸೆ ನೀಡಲು, ದೇಹಕ್ಕೆ ಶಸ್ತ್ರಚಿಕಿತ್ಸೆ ಹಾಗು ಉಪಕರಣ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಶರೀರ ಕ್ರಿಯೆ ಅಥವಾ ಸ್ವರೂಪವನ್ನು ಇನ್ನಷ್ಟು ಸುಧಾರಿಸುವಲ್ಲಿ ಹಾಗು ಕೆಲವೊಂದು ಬಾರಿ ಧಾರ್ಮಿಕ ಕಾರಣಗಳಿಗೆ ಸಹಾಯಕವಾಗಿದೆ.
ಸೋಂಕಿನ ನಿವಾರಣೆ, ಕೊಳೆತ ಅಂಗಗಳ ಅಂತೆಯೇ ಅರ್ಬುದರೋಗದ ಗೆಡ್ಡೆಗಳ ತೆಗೆಯುವಿಕೆ, ಛಿದ್ರಗೊಂಡ ಊತಕದ ದುರಸ್ತಿ, ಮುರಿದ ಮೂಳೆಗಳ ಜೋಡಣೆ, ಅಂಗಗಳ ಕಸಿ ಇವೇ ಮುಂತಾದವು ಶಸ್ತ್ರಚಿಕಿತ್ಸಾಕ್ರಮದಲ್ಲಿ ಸೇರಿವೆ. ಸಮಗ್ರವಾಗಿ ಇವೆಲ್ಲವೂ ಸಾಮಾನ್ಯ ಶಸ್ತ್ರಚಿಕಿತ್ಸೆ (ಜನರಲ್ ಸರ್ಜರಿ) ಎಂಬ ಶಿರೋನಾಮದಲ್ಲಿ ಸೇರಿದ್ದು ಪ್ರತ್ಯೇಕವಾಗಿ ಒಂದೊಂದು ಉಪಾಂಗಗಳಾಗಿವೆ.
ಶಸ್ತ್ರಚಿಕಿತ್ಸೆ ನಡೆಸುವ ವಿಧಾನವನ್ನು ಶಸ್ತ್ರಚಿಕಿತ್ಸಕ ವಿಧಾನ, ಶಸ್ತ್ರಕ್ರಿಯೆ, ಅಥವಾ ಕೇವಲ ಶಸ್ತ್ರಚಿಕಿತ್ಸೆ ಎಂದು ಕರೆಯಬಹುದು. ಈ ಸಂದರ್ಭದಲ್ಲಿ, ಕ್ರಿಯಾಪದವಾದ ಶಸ್ತ್ರಕ್ರಿಯೆ ಮಾಡುವುದು ಎಂದರೆ ಶಸ್ತ್ರಚಿಕಿತ್ಸೆಯನ್ನು ವೃತ್ತಿಪರವಾಗಿ ನಡೆಸುವುದು ಎಂಬ ಅರ್ಥವಿದೆ. ಶಸ್ತ್ರಚಿಕಿತ್ಸಕ ಎಂಬ ವಿಶೇಷಣವು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದೆ; ಉದಾಹರಣೆಗೆ ಶಸ್ತ್ರಚಿಕಿತ್ಸಾ ಉಪಕರಣಗಳು ಅಥವಾ ಸಹಾಯಕವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸುವ ದಾದಿ ಎಂದೂ ಅರ್ಥೈಸಬಹುದು. ಶಸ್ತ್ರಚಿಕಿತ್ಸೆಗೆ ಗುರಿಯಾಗುವ ರೋಗಿ ಅಥವಾ ವ್ಯಕ್ತಿಯು ಒಬ್ಬ ಮನುಷ್ಯ ಅಥವಾ ಒಂದು ಪ್ರಾಣಿಯಾಗಿರಬಹುದು. ಒಬ್ಬ ಶಸ್ತ್ರಚಿಕಿತ್ಸಕನು ಅಗತ್ಯವಿರುವ ರೋಗಿಗಳಿಗೆ ಶಸ್ತ್ರಕ್ರಿಯೆ ನಡೆಸುತ್ತಾನೆ. ಅಪರೂಪದ ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸಕರು ಸ್ವತಃ ತಾವೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಶಸ್ತ್ರಚಿಕಿತ್ಸಕರು ಎಂದು ಕರೆಯಲ್ಪಡುವ ವ್ಯಕ್ತಿಗಳು ಸಾಮಾನ್ಯವಾಗಿ ವೈದ್ಯಕೀಯ ವೃತ್ತಿಗಾರರಾಗಿರುತ್ತಾರೆ, ಆದರೆ ಈ ಪದವು ವೈದ್ಯರು, ಪಾದಚಿಕಿತ್ಸಕರು, ದಂತವೈದ್ಯರು (ಅಥವಾ ಬಾಯಿಯ (ಮುಖದ) ಹಾಗೂ ಒಸಡುಚಹರೆಯ ಶಸ್ತ್ರಚಿಕಿತ್ಸಕ) ಹಾಗು ಪ್ರಾಣಿಶಸ್ತ್ರಚಿಕಿತ್ಸಕರಿಗೂ ಅನ್ವಯವಾಗುತ್ತದೆ. ಶಸ್ತ್ರಚಿಕಿತ್ಸೆಯು ಕೆಲವೇ ನಿಮಿಷಗಳಿಂದ ಹಿಡಿದು ಗಂಟೆಗಳ ತನಕವೂ ತೆಗೆದುಕೊಳ್ಳಬಹುದು. ಆದರೆ ಇದು ಸಾಮಾನ್ಯವಾಗಿ ಪ್ರಗತಿಯಲ್ಲಿರುವ ಅಥವಾ ಆವರ್ತಕ ಬಗೆಯ ಚಿಕಿತ್ಸೆಯಲ್ಲ.
ಶಸ್ತ್ರಚಿಕಿತ್ಸೆ ಎಂಬ ಪದವು ಶಸ್ತ್ರಕ್ರಿಯೆ ನಡೆಯುವ ಸ್ಥಳವನ್ನು, ಅಥವಾ ಕೇವಲ ವೈದ್ಯರ ಕೋಣೆಯನ್ನು, ದಂತವೈದ್ಯ/ಬಾಯಿ ಹಾಗು ವಸಡು-ಚಹರೆಯ ಶಸ್ತ್ರಚಿಕಿತ್ಸಕ, ಅಥವಾ ಪ್ರಾಣಿಶಸ್ತ್ರಚಿಕಿತ್ಸಕರನ್ನೂ ಸೂಚಿಸುತ್ತದೆ.
ಶಸ್ತ್ರಚಿಕಿತ್ಸೆಯು ಒಂದು ವೈದ್ಯಕೀಯ ತಂತ್ರಜ್ಞಾನವಾಗಿದ್ದು, ಅಂಗಾಂಶಗಳ ಮೇಲಿನ ಭೌತಿಕ ಮಧ್ಯಸ್ಥಿಕೆಯನ್ನು ಒಳಗೊಂಡಿರುತ್ತದೆ.
ಒಂದು ಸಾಧಾರಣ ನಿಯಮದ ಪ್ರಕಾರ, ರೋಗಿಯ ಅಂಗಾಂಶದ ಛೇದನ ಅಥವಾ ಹಿಂದೆ ಆದಂತಹ ಗಾಯದ ಮುಚ್ಚುವಿಕೆಯನ್ನು ಒಳಗೊಳ್ಳುವ ವಿಧಾನವನ್ನು ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಇತರ ವಿಧಾನಗಳು ಅಗತ್ಯವಾಗಿ ಈ ಸಂಪ್ರದಾಯದ ಅಡಿಯಲ್ಲಿ ಬರುವುದಿಲ್ಲ, ಉದಾಹರಣೆಗೆ ಆಂಜಿಯೋಪ್ಲ್ಯಾಸ್ಟಿ ಅಥವಾ ಅಂತರ್ದರ್ಶನಗಳು "ಸಾಮಾನ್ಯವಾದ" ಶಸ್ತ್ರಚಿಕಿತ್ಸಕ ವಿಧಾನಗಳು ಅಥವಾ ಸನ್ನಿವೇಶಗಳನ್ನು ಒಳಗೊಂಡರೆ ಮಾತ್ರ ಅವನ್ನು ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ, ಉದಾಹರಣೆಗೆ ಒಂದು ನಿರ್ದಿಷ್ಟ ಸನ್ನಿವೇಶದ ಬಳಕೆ, ಅರಿವಳಿಕೆ, ಪೂತಿನಾಶಕ ಸನ್ನಿವೇಶಗಳು, ವಿಶಿಷ್ಟ ಶಸ್ತ್ರಚಿಕಿತ್ಸಕ ಉಪಕರಣಗಳು, ಹಾಗು ಹೊಲಿಗೆ ಹಾಕುವುದು ಅಥವಾ ತಂತಿಗಳಿಂದ ಜೋಡಿಸುವುದನ್ನು ಬಳಸಿಕೊಳ್ಳುವುದು ಇತ್ಯಾದಿ ಸೇರಿವೆ. ಎಲ್ಲ ರೂಪದ ಶಸ್ತ್ರಚಿಕಿತ್ಸೆಗಳನ್ನು ಛೇದನ ಬೇಕಿರುವ ವಿಧಾನಗಳೆಂದು ಪರಿಗಣಿಸಲಾಗುತ್ತದೆ; "ಛೇದನ ಬೇಕಿಲ್ಲದ ಶಸ್ತ್ರಚಿಕಿತ್ಸೆ" ಎಂದು ಕರೆಯಲ್ಪಡುವ ವಿಧಾನವು ಸಾಮಾನ್ಯವಾಗಿ ಛೇದಿಸಲ್ಪಡುತ್ತಿರುವ ರಚನೆಯನ್ನು ಭೇದಿಸಿಕೊಂಡು ಹೋಗದ ಛೇದನವನ್ನು ಸೂಚಿಸುತ್ತದೆ. (ಉದಾಹರಣೆಗೆ ಲೇಸರ್ ಮೂಲಕ ನಡೆಸಲಾಗುವ ಕಾರ್ನಿಯಾದ ವಿಚ್ಛೇದನ) ಅಥವಾ ರೇಡಿಯೋ ಶಸ್ತ್ರಚಿಕಿತ್ಸಾ ವಿಧಾನ (ಉದಾಹರಣೆಗೆ ದುರ್ಮಾಂಸದ ವಿಕಿರಣೀಕರಣ ಇತ್ಯಾದಿ).
ಶಸ್ತ್ರಚಿಕಿತ್ಸಕ ವಿಧಾನಗಳನ್ನು ಸಾಮಾನ್ಯವಾಗಿ ತುರ್ತುಸ್ಥಿತಿ, ವಿಧಾನದ ಬಗೆ, ಒಳಗೊಂಡ ದೇಹ ವ್ಯವಸ್ಥೆ, ಛೇದನದ ಮಟ್ಟ, ಹಾಗು ವಿಶೇಷ ಉಪಕರಣಗಳನ್ನು ಆಧರಿಸಿ ವರ್ಗೀಕರಿಸಲಾಗುತ್ತದೆ.
ಜರೂರಲ್ಲದ ಶಸ್ತ್ರಚಿಕಿತ್ಸೆಯನ್ನು ಜೀವಕ್ಕೆ ಅಪಾಯವಿಲ್ಲದಂತಹ ಪರಿಸ್ಥಿತಿಗಳನ್ನು ಸರಿಪಡಿಸಲು ನಡೆಸಲಾಗುತ್ತದೆ. ಅದಲ್ಲದೇ ಇದನ್ನು ರೋಗಿಯ ಕೋರಿಕೆಯ ಮೇರೆಗೆ ನಡೆಸಲಾಗುತ್ತದೆ. ಇದು ಶಸ್ತ್ರಚಿಕಿತ್ಸಕರ ಹಾಗು ಲಭ್ಯವಿರುವ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಅವಲಂಬಿಸಿರುತ್ತದೆ. ತುರ್ತುಸ್ಥಿತಿಯ ಶಸ್ತ್ರಚಿಕಿತ್ಸೆ ಎಂದರೆ ಜೀವ, ಅಂಗ, ಅಥವಾ ಕಾರ್ಯಾತ್ಮಕ ಸಾಮರ್ಥ್ಯವನ್ನು ಉಳಿಸಲು ತಕ್ಷಣವೇ ನಡೆಸಲಾಗುವ ಶಸ್ತ್ರಚಿಕಿತ್ಸೆ.
ಪರಿಶೋಧನಾತ್ಮಕ ಶಸ್ತ್ರಚಿಕಿತ್ಸೆಯನ್ನು ರೋಗನಿರ್ಣಯಕ್ಕೆ ಸಹಾಯಾರ್ಥವಾಗಿ ಅಥವಾ ರೋಗವನ್ನು ದೃಢಪಡಿಸಲು ನಡೆಸಲಾಗುತ್ತದೆ. ಚಿಕಿತ್ಸಾತ್ಮಕ ಶಸ್ತ್ರಚಿಕಿತ್ಸೆಯು ಈ ಹಿಂದೆ ನಿರ್ಣಯಿಸಲಾದ ರೋಗ ಪರಿಸ್ಥಿತಿಗೆ ಚಿಕಿತ್ಸೆ ನೀಡುತ್ತದೆ.
ಅಂಗಛೇದನವು ದೇಹದ ಅಂಗದ ಛೇದನವನ್ನು ಒಳಗೊಂಡಿರುತ್ತದೆ, ಸಾಮಾನ್ಯವಾಗಿ ಒಂದು ಅವಯವ ಅಥವಾ ಬೆರಳು. ರೀಪ್ಲಾಂಟೇಶನ್ ಹಾನಿ ಉಂಟಾದ ಶರೀರ ಭಾಗದ ಮರುಜೋಡಣೆಯಾಗಿದೆ. ಪುನಾರಚನೆಯ ಶಸ್ತ್ರಚಿಕಿತ್ಸೆಯು ಗಾಯಗೊಂಡ, ಅಂಗಹೀನವಾದ, ಅಥವಾ ವಿರೂಪಗೊಂಡ ದೇಹದ ಭಾಗದ ಪುನಾರಚನೆಯನ್ನು ಒಳಗೊಂಡಿರುತ್ತದೆ. ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಮಾಮೂಲಾದ ರಚನೆಯ ರೂಪವನ್ನು ಸುಧಾರಣೆ ಮಾಡಲು ನಡೆಸಲಾಗುತ್ತದೆ. ಛೇದನ ಎಂದರೆ ಒಂದು ಅಂಗ, ಅಂಗಾಂಶ, ಅಥವಾ ದೇಹದ ಇತರ ಭಾಗವನ್ನು ರೋಗಿಯಿಂದ ಕತ್ತರಿಸಿ ಬೇರ್ಪಡಿಸುವುದು. ಕಸಿ ಶಸ್ತ್ರಚಿಕಿತ್ಸೆ ಎಂದರೆ ಅಂಗ ಅಥವಾ ದೇಹದ ಇತರ ಭಾಗವನ್ನು ರೋಗಿಗೆ ಬೇರೊಬ್ಬರಿಂದ (ಅಥವಾ ಪ್ರಾಣಿಯಿಂದ) ದೇಹದ ಒಳಗೆ ಜೋಡಿಸುವುದು. ಒಂದು ಅಂಗ ಅಥವಾ ದೇಹದ ಭಾಗವನ್ನು ಜೀವಂತ ಮಾನವರಿಂದ ಅಥವಾ ಪ್ರಾಣಿಯಿಂದ ಬೇರ್ಪಡಿಸಿ ಕಸಿಯಲ್ಲಿ ಬಳಸುವುದೂ ಶಸ್ತ್ರಚಿಕಿತ್ಸೆಯ ಒಂದು ಬಗೆಯಾಗಿದೆ.
ಒಂದು ಅಂಗವ್ಯವಸ್ಥೆ ಅಥವಾ ರಚನೆಯ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸಿದಾಗ, ಒಳಗೊಳ್ಳಲಾದ ಅಂಗ, ಅಂಗವ್ಯವಸ್ಥೆ ಅಥವಾ ಅಂಗಾಂಶವನ್ನು ಆಧರಿಸಿ ಅದನ್ನು ವರ್ಗೀಕರಿಸಬಹುದು. ಉದಾಹರಣೆ: ಹೃದಯ ಶಸ್ತ್ರಚಿಕಿತ್ಸೆ (ಹೃದಯಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತದೆ), ಜಠರ-ಕರುಳಿನ ಶಸ್ತ್ರಚಿಕಿತ್ಸೆ (ಜೀರ್ಣಾಂಗ ವ್ಯೂಹ ಹಾಗು ಅದರ ಅನುಬಂಧವಾದ ಅಂಗಗಳಿಗೆ ನಡೆಸಲಾಗುತ್ತದೆ), ಅಲ್ಲದೇ ಮೂಳೆ ಶಸ್ತ್ರಚಿಕಿತ್ಸೆ (ಮೂಳೆಗಳು ಹಾಗೂ/ಅಥವಾ ಸ್ನಾಯುಗಳ ಮೇಲೆ ನಡೆಸಲಾಗುತ್ತದೆ).
ಕನಿಷ್ಠತಮ ಛೇದನ ಶಸ್ತ್ರಚಿಕಿತ್ಸೆಯು ಸಣ್ಣದಾದ ಬಾಹ್ಯ ಛೇದನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ದೇಹದ ಕುಳಿ ಅಥವಾ ರಚನೆಯೊಳಗೆ ಕಿರಿದಾದ ಉಪಕರಣಗಳನ್ನು ಅಳವಡಿಸಲಾಗುತ್ತದೆ, ಉದರದರ್ಶಕ ಶಸ್ತ್ರಚಿಕಿತ್ಸೆ ಅಥವಾ ಆಂಜಿಯೋಪ್ಲ್ಯಾಸ್ಟಿಯಲ್ಲಿರುವಂತೆ. ಇದಕ್ಕೆ ವ್ಯತಿರಿಕ್ತವಾಗಿ, ತೆರೆದ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಅಗತ್ಯವಿರುವ ಭಾಗದಲ್ಲಿ ದೊಡ್ಡ ಛೇದನ ಮಾಡುವ ಅಗತ್ಯವಿರುತ್ತದೆ. ಲೇಸರ್ ಶಸ್ತ್ರಚಿಕಿತ್ಸೆಯಲ್ಲಿ ಅಂಗಾಂಶದ ಛೇದನಕ್ಕೆ ಚಿಕ್ಕಚಾಕು (ಚೂರಿ) ಅಥವಾ ಇದೇ ರೀತಿಯಾದ ಶಸ್ತ್ರಚಿಕಿತ್ಸಕ ಉಪಕರಣಗಳ ಬದಲಿಗೆ ಲೇಸರ್ನ ಅಗತ್ಯವಿರುತ್ತದೆ. ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರು ಸಣ್ಣ ರಚನೆಗಳನ್ನು ವೀಕ್ಷಿಸಲು ಛೇದನದ ಸಮಯದಲ್ಲಿ ಸೂಕ್ಷ್ಮದರ್ಶಕವನ್ನು ಬಳಸುತ್ತಾರೆ. ರೊಬೋಟಿಕ್ ಶಸ್ತ್ರಚಿಕಿತ್ಸೆಯು ಶಸ್ತ್ರಚಿಕಿತ್ಸಕ ರೋಬೋಟ್ ಅನ್ನು ಬಳಕೆ ಮಾಡಿಕೊಳ್ಳುತ್ತದೆ, ಉದಾಹರಣೆಗೆ ಡಾ ವಿಂಚಿ ಅಥವಾ ಜ಼್ಯೂಸ್ ಶಸ್ತ್ರಚಿಕಿತ್ಸಕ ವ್ಯವಸ್ಥೆಗಳು. ಇದನ್ನು ಶಸ್ತ್ರಚಿಕಿತ್ಸಕರ ನಿರ್ದೇಶನದಡಿಯಲ್ಲಿ ಉಪಕರಣಗಳ ಬಳಕೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ಆಸ್ಪತ್ರೆಯಲ್ಲಿ, ಆಧುನಿಕ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಕ ಉಪಕರಣಗಳು, ರೋಗಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೇಜು ಹಾಗು ಇತರ ಉಪಕರಣವನ್ನು ಬಳಸಿಕೊಂಡು ಆಪರೇಟಿಂಗ್ ಥಿಯೇಟರ್ (ಶಸ್ತ್ರಕ್ರಿಯಾ ಕೊಠಡಿ) ನಲ್ಲಿ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುವ ಪರಿಸರ ಹಾಗು ವಿಧಾನಗಳು ಅಪೂತಿಕಾರಿ ವಿಧಾನದ ನಿಯಮಗಳಿಂದ ವ್ಯವಸ್ಥಿತಗೊಂಡಿರುತ್ತದೆ: "ಸೂಕ್ಷ್ಮಜೀವಿರಹಿತ"(ಸೂಕ್ಷ್ಮಜೀವಿಗಳಿಂದ ಮುಕ್ತವಾದ) ವಸ್ತುಗಳನ್ನು "ಸೂಕ್ಷ್ಮಜೀವಿಸಹಿತ" ಅಥವಾ "ಕಲುಷಿತ" ಪದಾರ್ಥಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸುವುದು. ಎಲ್ಲ ಶಸ್ತ್ರಚಿಕಿತ್ಸಕ ಉಪಕರಣಗಳನ್ನು ಕ್ರಿಮಿನಾಶನಗೊಳಿಸಬೇಕು. ಜೊತೆಗೆ, ಉಪಕರಣವು ಕಲುಷಿತಗೊಂಡರೆ ಇದನ್ನು ಬದಲಾಯಿಸಬೇಕು ಅಥವಾ ಮತ್ತೆ ಕ್ರಿಮಿನಾಶನಗೊಳಿಸಬೇಕು (ಅಂದರೆ ಉಪಕರಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಹೋದರೆ, ಅಥವಾ ಅದು ಕ್ರಿಮಿಸಹಿತ ಮೇಲ್ಮೈಯನ್ನು ಸ್ಪರ್ಶಿಸಿದ ಸಂದರ್ಭದಲ್ಲಿ). ಶಸ್ತ್ರಚಿಕಿತ್ಸಕ ಕೊಠಡಿಯಲ್ಲಿನ ಸಿಬ್ಬಂದಿಯು ಸೂಕ್ಷ್ಮಜೀವಿರಹಿತ ಉಡುಪುಗಳನ್ನು ಧರಿಸಬೇಕು (ಕೈಯನ್ನು ಸಂಪೂರ್ಣವಾಗಿ ತೊಳೆಯುವುದು, ಸ್ಕ್ರಬ್ ಟೋಪಿ, ಸೂಕ್ಷ್ಮಜೀವಿರಹಿತ ಶಸ್ತ್ರಚಿಕಿತ್ಸಕ ಗೌನು, ಸೂಕ್ಷ್ಮಜೀವಿರಹಿತ ಕೃತಕ ರಬ್ಬರು ಅಥವಾ ರಬ್ಬರಲ್ಲದ ಪಾಲಿಮರ್ ಕೈಗವಸುಗಳು ಹಾಗು ಶಸ್ತ್ರಚಿಕಿತ್ಸಕ ಮುಖರಕ್ಷೆ). ಜೊತೆಗೆ ಅವರು ತಮ್ಮ ಕೈಗಳನ್ನು ಹಾಗು ತೋಳುಗಳನ್ನು ಒಂದು ಪ್ರಮಾಣೀಕೃತ ಸೋಂಕು ನಿವಾರಕ ಪದಾರ್ಥದಿಂದ ಪ್ರತಿ ವಿಧಾನಕ್ಕೆ ಮುಂಚೆ ತೊಳೆಯಬೇಕು.
ಶಸ್ತ್ರಚಿಕಿತ್ಸೆಗೆ ಮುಂಚೆ, ರೋಗಿಗೆ ವೈದ್ಯಕೀಯ ಪರೀಕ್ಷೆ, ಶಸ್ತ್ರಚಿಕಿತ್ಸೆಗೆ ಮುಂಚಿನ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ, ಹಾಗೂ ಅವರ ದೈಹಿಕ ಸ್ಥಿತಿಗತಿಯನ್ನು ಎಎಸ್ಎ ದೈಹಿಕ ಸ್ಥಿತಿಗತಿ ವರ್ಗೀಕರಣ ಪದ್ಧತಿಯ ಪ್ರಕಾರ ನಿರ್ಧರಿಸಲಾಗುತ್ತದೆ. ಇದರಿಂದ ಹೊರಬಿದ್ದ ಫಲಿತಾಂಶಗಳು ಸಮಾಧಾನಕರವಾಗಿದ್ದರೆ, ರೋಗಿಯು ಸಮ್ಮತಿ ಅರ್ಜಿಗೆ ಸಹಿ ಹಾಕುತ್ತಾನೆ. ಜೊತೆಗೆ ಈತನಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ರಕ್ತದ ಹಾನಿ ಉಂಟಾಗುವ ನಿರೀಕ್ಷೆ ಇದ್ದರೆ, ಸ್ವಜಾತ ರಕ್ತ ದಾನದಿಂದ ಶಸ್ತ್ರಚಿಕಿತ್ಸೆಗೆ ಕೆಲ ವಾರಗಳು ಮುಂಚಿತವಾಗಿ ರಕ್ತವನ್ನು ಮುಂಗಡವಾಗಿ ಕಾಯ್ದಿರಿಸಬೇಕು. ಶಸ್ತ್ರಚಿಕಿತ್ಸೆಯು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ್ದೇ ಆದರೆ, ರೋಗಿಗೆ ಶಸ್ತ್ರಚಿಕಿತ್ಸೆ ನಡೆಯುವ ಹಿಂದಿನ ರಾತ್ರಿ ಪಾಲಿಈಥಲಿನ್ ಗ್ಲೈಕಾಲ್ನ ದ್ರಾವಣವನ್ನು ನೀಡುವ ಮೂಲಕ ಕರುಳನ್ನು ಪೂರ್ವಸಿದ್ಧತೆಗೊಳಿಸಿಕೊಳ್ಳಲು ನಿರ್ದೆಶಿಸಲಾಗುತ್ತದೆ. ರೋಗಿಗಳಿಗೆ ಆಹಾರ ಅಥವಾ ದ್ರವಾಹಾರವನ್ನು ವರ್ಜಿಸಲು ಸಹ ಸೂಚಿಸಲಾಗುತ್ತದೆ (ಒಂದು ಎನ್ಪಿಒ ಆದೇಶ, ಇದರಂತೆ ಅವರು ಶಸ್ತ್ರಚಿಕಿತ್ಸೆ ನಡೆಯುವ ಹಿಂದಿನ ಮಧ್ಯರಾತ್ರಿಯ ನಂತರ ತೊರೆಯಬೇಕಾಗುತ್ತದೆ, ಶಸ್ತ್ರಚಿಕಿತ್ಸಾ ಪೂರ್ವದ ಔಷಧವು ಹೊಟ್ಟೆಯಲ್ಲಿರುವ ಪದಾರ್ಥಗಳ ಮೇಲೆ ಬೀರುವ ಪರಿಣಾಮವನ್ನು ತಗ್ಗಿಸಲು, ಜೊತೆಗೆ ರೋಗಿಯು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅಥವಾ ನಂತರ ಚೋಷಣೆಯ ಅಪಾಯವನ್ನು ತಗ್ಗಿಸಲು ಈ ರೀತಿ ಮಾಡಲಾಗುತ್ತದೆ).
ಶಸ್ತ್ರಚಿಕಿತ್ಸಾಪೂರ್ವದ ಕೊಠಡಿಯಲ್ಲಿ, ರೋಗಿಯು ತಮ್ಮ ಸಾಮಾನ್ಯ ಉಡುಪು, ಬಟ್ಟೆಗಳನ್ನು ಬದಲಾಯಿಸುತ್ತಾರೆ. ಜೊತೆಗೆ ಆತನ ಅಥವಾ ಆಕೆಯ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಣೆಯನ್ನು ದೃಢಪಡಿಸಬೇಕು. ಅತಿಮುಖ್ಯವಾದ ಲಕ್ಷಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ, ದೇಹದ ಹೊರಮೈಯ ನರಗಳ ತುದಿಗಳಿಗೆ IV ಲೈನ್ನ್ನು (ತೂರುನಳಿಕೆಯನ್ನು) ಅಳವಡಿಸಲಾಗುತ್ತದೆ. ಜೊತೆಗೆ ಶಸ್ತ್ರಚಿಕಿತ್ಸಾಪೂರ್ವದ ಔಷಧಗಳನ್ನು ನೀಡಲಾಗುತ್ತದೆ (ಆಂಟಿಬಯೋಟಿಕ್ಗಳು, ನಿದ್ರಾಜನಕಗಳು, ಮುಂತಾದವು). ಶಸ್ತ್ರಚಿಕಿತ್ಸಾ ಕೊಠಡಿಗೆ ರೋಗಿಯು ಪ್ರವೇಶಿಸಿದಾಗ, ಶಸ್ತ್ರಚಿಕಿತ್ಸೆ ಮಾಡಬೇಕಾದ ಚರ್ಮದ ಮೇಲ್ಮೈಯನ್ನು ಶುದ್ಧಗೊಳಿಸಿ, ಸೋಂಕಿನ ಸಂಭಾವ್ಯತೆಯನ್ನು ತಗ್ಗಿಸಲು ಕ್ಲೋರ್ಹೆಕ್ಸಿಡೈನ್ ಗ್ಲುಕೊನೆಟ್ ಅಥವಾ ಪೋವಿಡೋನ್-ಐಯೋಡಿನ್ ನಂತಹ ಕೀವುಗಳೆಕಗಳನ್ನು ಲೇಪಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ಜಾಗದಲ್ಲಿ ರೋಮಗಳಿದ್ದರೆ, ಅದನ್ನು ಕೀವುಗಳೆಕಗಳ ಲೇಪನಕ್ಕೆ ಮುಂಚೆ ತೆಗೆದುಹಾಕಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ಜಾಗವನ್ನು ಹೊರತುಪಡಿಸಿ ಸೂಕ್ಷ್ಮಕ್ರಿಮಿರಹಿತ ಬಟ್ಟೆಗಳನ್ನು ರೋಗಿಯ ದೇಹದ ಎಲ್ಲ ಭಾಗಕ್ಕೂ ಹಾಗೂ ತಲೆಗೆ ಸುತ್ತಲಾಗುತ್ತದೆ; ನಂತರ "ಈಥರ್ ಪರದೆಯನ್ನು" ರೂಪಿಸಲು ಬಟ್ಟೆಯನ್ನು ಆತನ ತಲೆಗೆ ಸಮೀಪದಲ್ಲಿರುವ ಕಂಬಿಗಳ ಹಿಡಿಕೆಗಳಿಗೆ ಭದ್ರಪಡಿಸಲಾಗುತ್ತದೆ, ಇದು (ಸೂಕ್ಷ್ಮಕ್ರಿಮಿಸಹಿತ) ಅರಿವಳಿಕೆತಜ್ಞ/ಅರಿವಳಿಕೆತಜ್ಞರು ನಡೆಸುವ ಕಾರ್ಯವನ್ನು (ಸೂಕ್ಷ್ಮಕ್ರಿಮಿರಹಿತ) ಶಸ್ತ್ರಚಿಕಿತ್ಸಾ ಜಾಗದಿಂದ ಪ್ರತ್ಯೇಕಿಸುತ್ತದೆ.
ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನೋವನ್ನು ತಡೆಗಟ್ಟಲು, ಅಂಗಾಂಶದ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವುದು ಹಾಗು ಹೊಲಿಗೆ ಹಾಕುವುದರಿಂದ ಉಂಟಾಗುವ ನೋವನ್ನು ತಡೆಗಟ್ಟಲು ಅರಿವಳಿಕೆಯನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸಾ ವಿಧಾನವನ್ನು ಆಧರಿಸಿ, ಅರಿವಳಿಕೆಯನ್ನು ಸ್ಥಳೀಯವಾಗಿ ಅಥವಾ ಸಾಮಾನ್ಯ ಅರಿವಳಿಕೆಯಾಗಿ ನೀಡಲಾಗುತ್ತದೆ. ಬೆನ್ನುಮೂಳೆಗೆ ನೀಡಲಾಗುವ ಅರಿವಳಿಕೆಯನ್ನು ಶಸ್ತ್ರಚಿಕಿತ್ಸೆ ಮಾಡುವ ಭಾಗಕ್ಕೆ ಬಳಸಿಕೊಳ್ಳಬಹುದಾದರೂ ಬಹಳ ಅಗಾಧ ಪ್ರಮಾಣದಲ್ಲಿ ನೀಡಬೇಕಾಗುತ್ತದೆ ಅಥವಾ ಸ್ಥಳೀಯ ವಿಭಾಗಕ್ಕೆ ಆಳವೆನಿಸುತ್ತದೆ, ಆದರೆ ಸಾಮಾನ್ಯ ಅರಿವಳಿಕೆಯು ಸಹ ಅಪೇಕ್ಷಣೀಯವಲ್ಲ. ಸ್ಥಳೀಯ ಹಾಗು ಬೆನ್ನುಮೂಳೆಗೆ ನೀಡಲಾಗುವ ಅರಿವಳಿಕೆಯೊಂದಿಗೆ ಶಸ್ತ್ರಚಿಕಿತ್ಸೆ ಮಾಡುವ ಜಾಗವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ, ಆದರೆ ರೋಗಿಗೆ ಪ್ರಜ್ಞೆ ಇರುತ್ತದೆ ಅಥವಾ ಕಡಿಮೆ ಮಟ್ಟದಲ್ಲಿ ನಿದ್ರಾಜನಕಗಳನ್ನು ನೀಡಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ, ಸಾಮಾನ್ಯ ಅರಿವಳಿಕೆಯಿಂದಾಗಿ ರೋಗಿಯು ಪ್ರಜ್ಞೆ ತಪ್ಪುತ್ತಾನೆ, ಹಾಗೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಷ್ಕ್ರಿಯಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ರೋಗಿಯಲ್ಲಿ ಒಂದು ನಳಿಕೆಯನ್ನು ತೂರಿಸಲಾಗುತ್ತದೆ. ಅದಲ್ಲದೇ ಈತನನ್ನು ಒಂದು ಯಂತ್ರಚಾಲಿತ ಕೃತಕ ಶ್ವಾಸಸಾಧನದ ಮೇಲೆ ಮಲಗಿಸಲಾಗಿರುತ್ತದೆ. ಅಲ್ಲದೇ ಅರಿವಳಿಕೆ ಚುಚ್ಚುಮದ್ದು ಹಾಗು ಒಳಕ್ಕೆ ನಿಶ್ವಾಸ ಪದಾರ್ಥಗಳ ಸಂಯೋಜನೆಯಿಂದ ಇದಕ್ಕೆ ಸಿದ್ಧಪಡಿಸಲಾಗಿರುತ್ತದೆ.
ಶಸ್ತ್ರಚಿಕಿತ್ಸೆ ಮಾಡುವ ಭಾಗವನ್ನು ತಲುಪಲು ಛೇದನ ಮಾಡಲಾಗುತ್ತದೆ. ರಕ್ತಸ್ರಾವ ತಡೆಗಟ್ಟಲು ರಕ್ತನಾಳಗಳನ್ನು ಬಂಧಿಸಲಾಗುತ್ತದೆ, ಜೊತೆಗೆ ಜಾಗವು ತೆರೆದುಕೊಳ್ಳಲು ಅಥವಾ ಛೇದನವು ತೆರೆದುಕೊಂಡಂತೆ ಹಾಗೆ ಇಡಲು ಪ್ರತಿಕರ್ಷಕಗಳನ್ನು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಭಾಗವು ಹಲವಾರು ಪದರಗಳ ಛೇದನವನ್ನು ಹಾಗು ಅಂಗವಿಚ್ಛೇದನವನ್ನು ಒಳಗೊಳ್ಳಬಹುದು. ಉದರ ಶಸ್ತ್ರಚಿಕಿತ್ಸೆಯಲ್ಲಿ, ಛೇದನವು ಚರ್ಮವನ್ನು, ಚರ್ಮದಡಿಯ ಅಂಗಾಂಶ, ಸ್ನಾಯುಗಳ ಮೂರು ಪದರಗಳು ಹಾಗು ನಂತರ ಪರಿವೇಷ್ಟನ ಪಟಲವನ್ನು ಹಾದು ಹೋಗಬೇಕು. ಕೆಲವು ಸಂದರ್ಭಗಳಲ್ಲಿ, ಮತ್ತಷ್ಟು ದೇಹದ ಒಳ ಪ್ರವೇಶ ಪಡೆಯಲು ಮೂಳೆಯನ್ನು ಕತ್ತರಿಸಬೇಕಾಗುತ್ತದೆ; ಉದಾಹರಣೆಗೆ, ಮಿದುಳಿನ ಶಸ್ತ್ರಚಿಕಿತ್ಸೆಯಲ್ಲಿ ಬುರುಡೆಯನ್ನು ಕತ್ತರಿಸುವುದು ಅಥವಾ ಪಕ್ಕೆಗೂಡುಗಳನ್ನು ತೆರೆಯಲು ವಕ್ಷದ (ಹೃದಯ) ಶಸ್ತ್ರಚಿಕಿತ್ಸೆಯಲ್ಲಿ ವಕ್ಷಾಸ್ಥಿಯನ್ನು ಕತ್ತರಿಸುವುದು.
ದೇಹದಲ್ಲಿನ ಸಮಸ್ಯೆಯನ್ನು ಸರಿಪಡಿಸುವ ಕಾರ್ಯವು ನಂತರದಲ್ಲಿ ಮುಂದುವರೆಯುತ್ತದೆ. ಈ ಕಾರ್ಯದಲ್ಲಿ ಕೆಳಕಂಡ ವಿಧಾನಗಳು ಸೇರಿರುತ್ತವೆ:
ರಕ್ತ ಅಥವಾ ರಕ್ತದ ವರ್ಧಕಗಳನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಾಗುವ ರಕ್ತದ ನಷ್ಟವನ್ನು ಭರ್ತಿ ಮಾಡಲು ಕೊಡಬಹುದು. ಒಂದೊಮ್ಮೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಹೊಲಿಗೆಯನ್ನು ಅಥವಾ ತಂತಿಜೋಡಣೆಯ ಮೂಲಕ ಛೇದನ ಮುಚ್ಚಲು ಬಳಸಿಕೊಳ್ಳಬಹುದು. ಛೇದನವನ್ನು ಮುಚ್ಚಿಹಾಕಿದ ನಂತರ, ಅರಿವಳಿಕೆ ಪದಾರ್ಥಗಳನ್ನು ನಿಲ್ಲಿಸಲಾಗುತ್ತದೆ. ಅದಲ್ಲದೇ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ, ಜೊತೆಗೆ ರೋಗಿಗೆ ಹಾಕಲಾದ ಕೃತಕ ಶ್ವಾಸಸಾಧನಗಳನ್ನು ತೆಗೆದುಹಾಕಲಾಗುತ್ತದೆ, ಹಾಗು ಕೊಳವೆಯನ್ನು ಹೊರತೆಗೆಯಲಾಗುತ್ತದೆ (ಸಾಮಾನ್ಯ ಅರಿವಳಿಕೆ ನೀಡಲಾದ ಸಂದರ್ಭಗಳಲ್ಲಿ).
ಶಸ್ತ್ರಚಿಕಿತ್ಸೆಯು ಪೂರ್ಣಗೊಂಡ ನಂತರ, ರೋಗಿಯನ್ನು ಅರಿವಳಿಕೆ ನಂತರದ ಆರೈಕೆ ಘಟಕಕ್ಕೆ ವರ್ಗಾವಣೆ ಮಾಡುವುದರ ಜೊತೆಗೆ ಸಮೀಪದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ರೋಗಿಯು ಅರಿವಳಿಕೆಯಿಂದ ಚೇತರಿಸಿಕೊಂಡ ನಂತರ, ಆತ/ಆಕೆಯನ್ನು ಶಸ್ತ್ರಚಿಕಿತ್ಸಕ ವಾರ್ಡ್ಗೆ ಅಥವಾ ಆಸ್ಪತ್ರೆಯಲ್ಲಿರುವ ಬೇರೆ ಕೊಠಡಿಗೆ ವರ್ಗಾವಣೆ ಮಾಡಲಾಗುತ್ತದೆ ಅಥವಾ ಮನೆಗೆ ಬಿಡುಗಡೆ ಮಾಡಿ ಕಳುಹಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ನಂತರದ ಅವಧಿಯಲ್ಲಿ, ರೋಗಿಯ ಸಾಮಾನ್ಯ ಕ್ರಿಯೆಗಳನ್ನು ನಿರ್ಧರಿಸಲಾಗುತ್ತದೆ, ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಲ್ಲದೇ ಸೋಂಕಿನ ಯಾವದೇ ಲಕ್ಷಣಗಳಿಗಾಗಿ ಶಸ್ತ್ರಚಿಕಿತ್ಸೆಯಾದ ಭಾಗವನ್ನು ಪರೀಕ್ಷಿಸಲಾಗುತ್ತದೆ. ತೆಗೆದು ಹಾಕಬಹುದಾದ ಚರ್ಮಕ್ಕೆ ಮುಚ್ಚಲಾಗುವ ವಸ್ತುಗಳನ್ನು ಬಳಸಿದ್ದಲ್ಲಿ, ಅವುಗಳನ್ನು ಶಸ್ತ್ರಚಿಕಿತ್ಸೆಯಾದ ಏಳರಿಂದ ಹತ್ತು ದಿನಗಳ ನಂತರ ತೆಗೆದು ಹಾಕಲಾಗುತ್ತದೆ, ಅಥವಾ ಛೇದನವು ಸಂಪೂರ್ಣವಾಗಿ ಗುಣವಾದ ನಂತರದಲ್ಲಿ ತೆಗೆಯಲಾಗುತ್ತದೆ.
ಶಸ್ತ್ರಚಿಕಿತ್ಸೆಯ ನಂತರದ ಉಪಚಾರದಲ್ಲಿ ಸಹೌಷಧ ಚಿಕಿತ್ಸೆಗಳಾದ ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಅಥವಾ ಔಷಧಗಳನ್ನು ನೀಡುವುದು ಉದಾಹರಣೆಗೆ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಉಂಟಾಗಬಹುದಾದ ನಿರಾಕರಣ ನಿರೋಧಿ ಔಷಧಿಗಳು ಸೇರಿರಬಹುದು. ಇತರ ಅನುಸರಣಾ ಅಧ್ಯಯನಗಳು ಅಥವಾ ಪುನಃಸ್ಥಾಪನೆಯನ್ನು ಚೇತರಿಸಿಕೊಳ್ಳುವ ಅವಧಿಯಲ್ಲಿ ಹಾಗು ನಂತರದಲ್ಲಿ ಸೂಚಿಸಲಾಗುತ್ತದೆ.
ಕಡೇಪಕ್ಷ ಎರಡು ಇತಿಹಾಸಪೂರ್ವ ಸಂಸ್ಕೃತಿಗಳು ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ಅಭಿವೃದ್ಧಿಪಡಿಸಿವೆ. ಸಾಕ್ಷ್ಯವಿರುವ ಅತ್ಯಂತ ಹಳೆಯ ವಿಧಾನವೆಂದರೆ ತಲೆಚಿಪ್ಪು ಕೊರೆತ.[2] ಇದರಲ್ಲಿ ತಲೆಬುರುಡೆಯಲ್ಲಿ ಒಂದು ರಂಧ್ರವನ್ನು ಕೊರೆಯಲಾಗುತ್ತದೆ ಅಥವಾ ಕೆರೆದು ತೆಗೆದು ಹಾಕಲಾಗುತ್ತದೆ. ಈ ರೀತಿಯಾಗಿ, ತಲೆಬುರುಡೆಯೊಳಗಿನ ಒತ್ತಡ ಹಾಗು ಇತರ ಕಾಯಿಲೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಡ್ಯೂರ ಮೇಟರ್ (ದರುಕು ಪೊರೆ) ಅನ್ನು ತೆರೆದಿಡಲಾಗುತ್ತದೆ. ನವಶಿಲಾಯುಗದ ಅವಧಿಯ ಇತಿಹಾಸಪೂರ್ವ ಮಾನವನ ಅವಶೇಷಗಳಿಂದ, ಗುಹೆಯಲ್ಲಿನ ವರ್ಣಚಿತ್ರಗಳಿಂದ ಸಾಕ್ಷ್ಯಗಳು ಪತ್ತೆಯಾದವು. ಜೊತೆಗೆ ಈ ಪ್ರಕ್ರಿಯೆಯು ದಾಖಲಿತ ಇತಿಹಾಸದವರೆಗೂ ಉತ್ತಮವಾಗಿ ಮುಂದುವರೆಯಿತು. ಆಶ್ಚರ್ಯಕರವಾಗಿ, ಹಲವು ಇತಿಹಾಸಪೂರ್ವ ಹಾಗು ಆಧುನಿಕಪೂರ್ವ ರೋಗಿಗಳು ತಮ್ಮ ತಲೆಬುರುಡೆಯು ಮಾಗುತ್ತಿರುವ ಲಕ್ಷಣಗಳನ್ನು ತೋರಿದರು; ಇದು ಹಲವರು ಶಸ್ತ್ರಚಿಕಿತ್ಸೆಯ ನಂತರ ಬದುಕುಳಿದಿದ್ದರೆಂಬುದನ್ನು ಸೂಚಿಸುತ್ತದೆ. ಇಂಡಸ್ ವ್ಯಾಲಿ ನಾಗರೀಕತೆಯ ಆರಂಭದ ಹರಪ್ಪನ್ ಅವಧಿಯ ಅವಶೇಷಗಳು (ಸುಮಾರು. ಕ್ರಿ.ಪೂ. 3300) ಹಲ್ಲಿನಲ್ಲಿ ರಂಧ್ರ ಕೊರೆದ ಬಗ್ಗೆ ಸಾಕ್ಷ್ಯವನ್ನು ಪ್ರದರ್ಶಿಸುತ್ತವೆ, ಈ ವಿಧಾನವು ಸುಮಾರು 9,000 ವರ್ಷಗಳಷ್ಟು ಹಳೆಯದೆನಿಸಿದೆ.[3] ಇತಿಹಾಸಪೂರ್ವ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಿದ ಕೊನೆಯ ಜನರೆಂದರೆ ಪ್ರಾಚೀನ ಈಜಿಪ್ಟ್ನವರಾಗಿದ್ದಾರೆ. ಇಲ್ಲಿನ ಸರಿಸುಮಾರು ಕ್ರಿ.ಪೂ. 2650 ಯಷ್ಟು ಹಳೆಯದಾದ ಮ್ಯಾಂಡಿಬಲ್ನಲ್ಲಿ (ಕೆಳ ದವಡೆಯ ಮೂಳೆ) ಮೊದಲ ಹಲ್ಲಿನ ಕೆಳಭಾಗದಲ್ಲಿರುವ ಬುಡದಲ್ಲಿ ಎರಡು ರಂಧ್ರೀಕರಣಗಳು ಕಂಡುಬಂದಿವೆ, ಇದು ಕೀವು ತುಂಬಿದ ಹಲ್ಲಿನ ಕುರುವನ್ನು ಸೂಚಿಸುತ್ತದೆ.
ಅತ್ಯಂತ ಹಳೆಯ ಶಸ್ತ್ರಚಿಕಿತ್ಸಾ ಗ್ರಂಥಗಳು ಸುಮಾರು 3500 ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್ನಲ್ಲಿ ಕಂಡುಬಂದಿವೆ. ಶಸ್ತ್ರಚಿಕಿತ್ಸೆಗಳನ್ನು ಪುರೋಹಿತರು ನಡೆಸುತ್ತಿದ್ದರು, ಆಗ ಇವರು ಇಂದಿನವರಿಗೆ ಸರಿಸಮಾನರಾಗಿ, ಸದೃಶವಾಗಿ ವೈದ್ಯಕೀಯ ಚಿಕಿತ್ಸೆಗಳಲ್ಲಿ ಪರಿಣಿತರಾಗಿದ್ದರು. ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಪಪೈರಸ್ನ ಹಸ್ತ ಕೃತಿಯಲ್ಲಿ ದಾಖಲು ಮಾಡಲಾಗಿದೆ. ಜೊತೆಗೆ ಮೊದಲ ಬಾರಿಗೆ ರೋಗಿಯ ಪರಿಸ್ಥಿತಿಯನ್ನು ವಿವರಿಸಿದ ಕಡತ ಇದಾಗಿದೆ; ಎಡ್ವಿನ್ ಸ್ಮಿತ್ ಪಪೈರಸ್ (ನ್ಯೂಯಾರ್ಕ್ ಅಕ್ಯಾಡೆಮಿ ಆಫ್ ಮೆಡಿಸಿನ್ನಲ್ಲಿ ರಕ್ಷಿಸಲಾಗಿದೆ) ದಾಖಲೆಗಳು ಶರೀರಛೇದನ ಹಾಗು ಶರೀರವಿಜ್ಞಾನವನ್ನು ಆಧರಿಸಿದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳ ವಿವರಣೆಗಳನ್ನು ಒಳಗೊಂಡಿವೆ. ಈ ನಡುವೆ, ಎಬೆರ್ಸ್ ಪಪೈರಸ್ ಗ್ರಂಥವು ಇಂದ್ರಜಾಲವನ್ನು ಆಧರಿಸಿ ಗಾಯವನ್ನು ಮಾಯಿಸುವ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ವೈದ್ಯಕೀಯ ಪರಿಣತಿಯನ್ನು ನಂತರದಲ್ಲಿ ಹೆರಾಡೋಟಸ್ ದಾಖಲಿಸಿದ್ದಾರೆ: "ಔಷಧಶಾಸ್ತ್ರ ಬಳಕೆಯು ಅವರಲ್ಲಿ ಬಹಳ ವಿಶೇಷವಾಗಿತ್ತು. ಪ್ರತಿ ವೈದ್ಯನೂ ಒಂದು ಬಗೆಯ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದನು. ದೇಶವು ವೈದ್ಯರುಗಳಿಂದ ತುಂಬಿಹೋಗಿದೆ, ಕೆಲವರು ಕಣ್ಣಿಗೆ ಚಿಕಿತ್ಸೆ ನೀಡಿದರೆ, ಮತ್ತೆ ಕೆಲವರು ಹಲ್ಲಿಗೆ, ಮತ್ತೆ ಕೆಲವರು ಉದರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ, ಮತ್ತೆ ಕೆಲವರು ಆಂತರಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು."[4]
ಶಸ್ತ್ರಚಿಕಿತ್ಸೆಯ ಬಗ್ಗೆ ಜ್ಞಾನ ಹೊಂದಿದ್ದ ಇತರ ಪುರಾತನ ಸಂಸ್ಕೃತಿಗಳಲ್ಲಿ ಭಾರತ, ಚೀನಾ ಹಾಗು ಗ್ರೀಸ್ಗಳು ಸೇರಿವೆ.
ಮನುಕುಲದ ಜೊತೆ ಶಸ್ತ್ರಚಿಕಿತ್ಸೆ ಪುರಾಣಕಾಲದಿಂದಲೂ ಬೆಳೆದುಬಂದಿದೆ. ಶಿವಪುರಾಣದಲ್ಲಿ ಗಣಪತಿಯ ಶಿರಚ್ಛೇದನವಾಗಿ ಅದರ ಬದಲಿಗೆ ಒಂದು ಆನೆ ತಲೆಯನ್ನು ಜೋಡಿಸಿದ ವಿಚಾರ ಅವಲೋಕಿಸಿದರೆ ದೇಹದಲ್ಲಿ ಅಂಗಗಳನ್ನು ನಾಟಿಮಾಡುವ ಅರಿವು ಆಗಲೇ ಇದ್ದ ಹಾಗೆ ತೋರುತ್ತದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಶಸ್ತ್ರವೈದ್ಯದ ಪರಂಪರೆ ಇದೆ.
ಸುಶ್ರುತ ಸುಮಾರು ಕ್ರಿ.ಪೂ. ಆರನೇ ಶತಮಾನದಲ್ಲಿ ಪ್ರಾಚೀನ ಭಾರತದ ಒಬ್ಬ ಪ್ರಖ್ಯಾತ ಶಸ್ತ್ರಚಿಕಿತ್ಸಕ ಹಾಗು ಸುಶ್ರುತ ಸಂಹಿತದ ಕರ್ತೃವಾಗಿದ್ದರು. ಸಂಸ್ಕೃತದಲ್ಲಿ ಬರೆಯಲಾದ ಅವನ ಕೃತಿಗಳಲ್ಲಿ, ಈತ ಸುಮಾರು 120ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳ ಬಗ್ಗೆ, 300 ಶಸ್ತ್ರಚಿಕಿತ್ಸಾ ವಿಧಾನಗಳ ಬಗ್ಗೆ ವಿವರಣೆ ನೀಡಿದ್ದಾನೆ. ಅಲ್ಲದೇ ಮಾನವ ಶಸ್ತ್ರಚಿಕಿತ್ಸೆಯನ್ನು ಎಂಟು ವಿಭಾಗಗಳಾಗಿ ವರ್ಗೀಕರಣ ಮಾಡಿದ್ದಾನೆ. ಈತ ಪ್ಲ್ಯಾಸ್ಟಿಕ್ ಸರ್ಜರಿಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದ. ಈತ ಅರಿವಳಿಕೆಗೆ ಸಮನಾದ ಒಂದು ಬಗೆಯ ಮೂಲಿಕೆಯ ರಸವನ್ನು ನೀಡುತ್ತಿದ್ದ. ಈತ ಧನ್ವಂತರಿ ಆಯುರ್ವೇದ ಶಾಲೆಯ ಒಬ್ಬ ಶಸ್ತ್ರಚಿಕಿತ್ಸಕನಾಗಿದ್ದ. ಸುಶ್ರುತ ನಿರೂಪಿಸಿದ್ದ ಚಾಕು (ಸ್ಕಾಲ್ಪೆಲ್), ಬಿಸ್ಚೂರಿ, ಮೂಳೆ ಹೆಕ್ಕುವ ಇಕ್ಕಳ (ಬೋನ್ ನಿಬ್ಲರ್), ಮೂಳೆ ಕತ್ತರಿಸುವ ಇಕ್ಕಳ, ಟ್ರೊಕಾರ್ ಮತ್ತು ಸೂಜಿಗಳ ಉಪಯೋಗ ಇಂದಿಗೂ ಪ್ರಸ್ತುತ.
ಪ್ರಾಚೀನ ಗ್ರೀಸ್ನಲ್ಲಿ, ರೋಗಗಳನ್ನು ಗುಣಪಡಿಸುವ ದೇವರು ಎನ್ನಲಾದ ಎಸ್ಕ್ಲೆಪಿಯಸ್ಗೆ ದೇವಾಲಯಗಳನ್ನು ನಿರ್ಮಿಸಿ ಅರ್ಪಿಸಲಾಗುತ್ತಿತ್ತು, ಇದನ್ನು ಎಸ್ಕ್ಲೆಪಿಯಾ ಎಂದು ಕರೆಯಲಾಗುತ್ತಿತ್ತು (ಗ್ರೀಕ್: Ασκληπιεία, ಏಕವಚನ. ಆಸ್ಕ್ಲೆಪಿಯಾನ್ Ασκληπιείον) ಇವುಗಳು ವೈದ್ಯಕೀಯ ಸಲಹೆ, ತಪಾಸಣೆ ಮತ್ತು ಗುಣಪಡಿಸುವ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.[5] ಇಂತಹ ದೇವಾಲಯಗಳ ಆವರಣಗಳಲ್ಲಿ ಪ್ರವೇಶಿಸಿದ ರೋಗಿಗಳು ಯಾವದೋ ಒಂದು ಕನಸಿನ ಸ್ಥಿತಿಗೆ ಕಾಲಿಟ್ಟು "ಎನ್ಕೊಯಿಮೆಸಿಸ್" (ಗ್ರೀಕ್: ενκοίμησις) ಎಂಬ ವಿಚಿತ್ರ ಅನುಭವಕ್ಕೆ ತುತ್ತಾಗುತ್ತಿದ್ದರು. ಆದರೆ ಇದು ಅರಿವಳಿಕೆಗಿಂತ ಭಿನ್ನವಾಗಿರುತ್ತಿತ್ತು. ಇದರಲ್ಲಿ ಅವರು ದೇವಾಲಯದಲ್ಲಿನ ದೇವರಿಂದ ತಮ್ಮ ಕನಸಿನಲ್ಲಿ ಸಲಹೆ ಪಡೆಯುತ್ತಿದ್ದರು ಅಥವಾ ಶಸ್ತ್ರಕ್ರಿಯೆಯಿಂದ ಗುಣಮುಖರಾಗುತ್ತಿದ್ದರು.[6] ಎಸ್ಕ್ಲೆಪಿಯಾನ್ನ ಎಪಿಡೌರಸ್ನಲ್ಲಿ, ಕ್ರಿ.ಪೂ. 350 ರಲ್ಲಿ ಮೂರು ಅಮೃತಶಿಲೆಯ ಫಲಕಗಳಲ್ಲಿನ ಹೆಸರುಗಳು, ರೋಗದ ಇತಿಹಾಸ, ಅಸ್ವಸ್ಥತೆ, ಹಾಗು ಸುಮಾರು 70 ರೋಗಿಗಳು ಗುಣಮುಖರಾದ ದಾಖಲೆಯನ್ನು ಹೊಂದಿದೆ. ಇವರೆಲ್ಲರೂ ದೇವಾಲಯಕ್ಕೆ ರೋಗಿಗಳಾಗಿ ಪ್ರವೇಶಿಸಿ, ನಂತರ ಅಲ್ಲಿಂದ ಗುಣಮುಖರಾಗಿ ತೆರಳಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಕೆಲ ಕಾಯಿಲೆಗಳನ್ನು ಗುಣಪಡಿಸಲಾದ ಬಗ್ಗೆ ಪಟ್ಟಿ ದೊರೆಯಿತು, ಉದಾಹರಣೆಗೆ ಅಪಾಯಕಾರಿ ಬಾಹ್ಯವಸ್ತುಗಳನ್ನು ತೆಗೆದುಹಾಕಲು ಉದರದ ಛೇದನವು ವಾಸ್ತವವಾಗಿ ನಡೆದಿತ್ತು, ಆದರೆ ರೋಗಿಗೆ ಅಫೀಮಿನಂತಹ ನಿದ್ರಾಜನಕ ವಸ್ತುಗಳನ್ನು ನೀಡಿ ಎನ್ಕೊಯಿಮೆಸಿಸ್ನ ಸ್ಥಿತಿಯನ್ನು ಉಂಟುಮಾಡಲಾಗುತ್ತಿತ್ತು.[7]
ಪ್ರಾಚೀನ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಚಿಕಿತ್ಸಕರಲ್ಲಿ ಗ್ರೀಸ್ನ ಗಾಲೆನ್ ಸಹ ಒಬ್ಬನಾಗಿದ್ದ. ಜೊತೆಗೆ ಈತ ಹಲವು ಸಾಹಸಭರಿತ ಶಸ್ತ್ರಚಿಕಿತ್ಸೆಗಳಾದ ಮಿದುಳು ಹಾಗು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಿದ - ಇಂತಹ ಶಸ್ತ್ರಚಿಕಿತ್ಸೆಗಳನ್ನು ನಂತರ ಸರಿಸುಮಾರು ಎರಡು ಸಾವಿರ ವರ್ಷಗಳವರೆಗೆ ಪ್ರಯತ್ನಿಸಲಾಗಲಿಲ್ಲ.
ಚೀನಾದಲ್ಲಿ, ಹುವ ಟುವೊ, ಪೂರ್ವ ಹಾಂ ಹಾಗು ಮೂರು ಸಾಮ್ರಾಜ್ಯಗಳ ಅವಧಿಯಲ್ಲಿ ಅತ್ಯಂತ ಪ್ರಸಿದ್ಧ ಚೈನೀಸ್ ವೈದ್ಯ ಎನಿಸಿಕೊಂಡಿದ್ದ, ಈತ ಅರಿವಳಿಕೆಯ ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಆದಾಗ್ಯೂ ಇದು ಆರಂಭಿಕ ಸ್ಥಿತಿ ಹಾಗು ಅತ್ಯಾಧುನಿಕವಲ್ಲದ ವಿಧಾನವೆನಿಸಿದೆ.
ಮಧ್ಯಯುಗಗಳಲ್ಲಿ, ಇಸ್ಲಾಮೀ ಜಗತ್ತಿನಲ್ಲಿ ಶಸ್ತ್ರಚಿಕಿತ್ಸೆಯನ್ನು ಒಂದು ಉನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಯಿತು. ಅಬುಲ್ಕಾಸಿಸ್ (ಅಬು ಅಲ್-ಖಾಸಿಂ ಖಲಾಫ್ ಇಬ್ನ್ ಅಲ್-ಅಬ್ಬಾಸ್ ಅಲ್-ಜಹ್ರಾವಿ) ಒಬ್ಬ ಅಂಡಲೂಶಿಯನ್-ಅರಬ್ ವೈದ್ಯ ಹಾಗು ವಿಜ್ಞಾನಿಯಾಗಿದ್ದ. ಈತ ಕಾರ್ಡೋಬದ ಜಹ್ರಾ ಉಪನಗರದಲ್ಲಿ ವೃತ್ತಿಯನ್ನು ನಡೆಸುತ್ತಿದ್ದ. ಈತ ಹಲವಾರು ವೈದ್ಯಕೀಯ ಗ್ರಂಥಗಳನ್ನು ಬರೆದಿದ್ದಾನೆ. ಇವುಗಳು ಪುನರುದಯದವರೆಗೂ ಯುರೋಪ್ ನ ಶಸ್ತ್ರಚಿಕಿತ್ಸಕ ಪ್ರಕ್ರಿಯೆಗಳನ್ನು ನಿರ್ದೇಶಿಸಿತು.[8]
ಪಾಶ್ಚಾತ್ಯ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಹಲವಾರು ವರ್ಷಪರ್ಯಂತ ನಿಗೂಢತೆ, ಭಯ, ಭಕ್ತಿ ಮತ್ತು ಧಾರ್ಮಿಕ ಆಚರಣೆಗಳ ಸಮ್ಮಿಶ್ರಣವಾಗಿತ್ತು. ಶಿಶ್ನದ ಮುಂದೊಗಲಿನ ಸುನತಿ (ಸರ್ಕಮ್ಸಿಶನ್) ಮಾಡುವುದು ಆಸ್ತಿಕ್ಯದ ಹಕ್ಕು ಎಂದಾಗಿತ್ತು. ದೆವ್ವ ಬಿಡಿಸುವುದಾಗಿ ತಲೆಬುರುಡೆ ಸೀಳುವುದು ವಾಡಿಕೆಯಾಗಿತ್ತು. ನೋವು, ಕೀವು ಮತ್ತು ಸಾವು ಎಂಬ ಶಬ್ದಗಳು ಶಸ್ತ್ರಚಿಕಿತ್ಸೆಯ ಅಪಭ್ರಂಶಗಳಾಗಿದ್ದುವು. ಎಂದೇ ಈ ಚಿಕಿತ್ಸೆಯ ಬೆಳೆವಣಿಗೆಗೆ ಧರ್ಮ ಗುರುಗಳ ಅಡ್ಡಿ, ಅಡಚಣೆಗಳಿದ್ದುವು. ಹೀಗಾಗಿ ಆ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಪ್ರಗತಿ ಕಾಣಲಿಲ್ಲ.
ಯುರೋಪ್ ನಲ್ಲಿ, ವೃತ್ತಿಗೆ ಮುಂಚೆ ಶಸ್ತ್ರಚಿಕಿತ್ಸಕರು ಹಲವು ವರ್ಷ ಅಧಿಕೃತವಾಗಿ ಅಧ್ಯಯನವನ್ನು ನಡೆಸುವುದಕ್ಕೆ ಬೇಡಿಕೆ ಹೆಚ್ಚಾಯಿತು; ಮೊಂಟ್ಪೆಲ್ಲಿಯರ್, ಪಡುವಾ ಹಾಗು ಬೋಲೋಗ್ನದಂತಹ ವಿಶ್ವವಿದ್ಯಾಲಯಗಳು ವಿಶೇಷವಾಗಿ ಖ್ಯಾತಿ ಗಳಿಸಿದ್ದವು. ಮಧ್ಯಯುಗದಲ್ಲಿ ಗೈ ಡೆ ಚೌಲಿಯಾಕ್ ಒಬ್ಬ ಅತ್ಯುತ್ತಮ ಶಸ್ತ್ರಚಿಕಿತ್ಸಕರಲ್ಲಿ ಒಬ್ಬನೆನಿಸಿದ್ದ. ಆತನ ಚಿರುರ್ಗಿಯ ಮ್ಯಾಗ್ನ ಅಥವಾ ಗ್ರೇಟ್ ಸರ್ಜರಿ (1363) ಹದಿನೇಳನೆಯ ಶತಮಾನದವರೆಗೂ ಶಸ್ತ್ರಚಿಕಿತ್ಸಕರಿಗೆ ಒಂದು ಉತ್ತಮ ವೈದ್ಯಕೀಯ ಗ್ರಂಥವೆನಿಸಿತ್ತು.[9] ಹದಿನೈದನೆಯ ಶತಮಾನದ ಸುಮಾರಿಗೆ, ಶಸ್ತ್ರಚಿಕಿತ್ಸೆಯು ರೋಗಚಿಕಿತ್ಸೆಯಿಂದ ಬೇರ್ಪಟ್ಟು ತನ್ನದೇ ಆದ ಅಧ್ಯಯನವನ್ನು ರೂಪಿಸಿಕೊಂಡಿತು. ಇದು ಶುದ್ಧ ಔಷಧಶಾಸ್ತ್ರಕ್ಕಿಂತ ಸ್ವಲ್ಪಮಟ್ಟಿಗಿನ ಕಡಿಮೆ ಸ್ಥಾನ ಗಳಿಸಿತ್ತು. ಜೊತೆಗೆ ರೋಜೆರಿಯಸ್ ಸಾಲರ್ನಿಟನಸ್ ರಚಿಸಿದ ಚಿರುರ್ಗಿಯ ಕೃತಿ ಬಿಡುಗಡೆಯಾಗುವವರೆಗೂ ಆರಂಭಿಕವಾಗಿ ಕೈಕಸುಬಿನ ಸಂಪ್ರದಾಯದ ರೂಪವನ್ನು ಪಡೆಯಿತು. ಇದು ಆಧುನಿಕ ಅವಧಿಯವರೆಗೂ ಆಧುನಿಕ ಪಾಶ್ಚಿಮಾತ್ಯ ಶಸ್ತ್ರಚಿಕಿತ್ಸಕ ಕೈಪಿಡಿಗೆ ಅಡಿಪಾಯ ಹಾಕಿಕೊಟ್ಟಿತು. ಹತ್ತೊಂಬತ್ತನೇ ಶತಮಾದ ಕಡೆಯ ಭಾಗದಲ್ಲಿ, ಬ್ಯಾಚಲರ್ ಆಫ್ ಸರ್ಜರಿ ಡಿಗ್ರೀಸ್ (ಸಾಮಾನ್ಯವಾಗಿ ChB) ಅನ್ನು (MB) ಪದವಿಯೊಂದಿಗೆ ನೀಡಲಾಗುತ್ತಿತ್ತು, ಜೊತೆಗೆ ಇದರಲ್ಲಿ ವಿಶೇಷತೆ ಪಡೆಯುವುದು ಹೆಚ್ಚಿನ ಪದವಿಯಾಗಿ ಮಾರ್ಪಟ್ಟಿತು. ಸಾಮಾನ್ಯವಾಗಿ ಇದನ್ನು ಲಂಡನ್ ನಲ್ಲಿ ChM ಅಥವಾ MS ಎಂದು ಕರೆಯಲಾಗುತ್ತಿತ್ತು, ಇಲ್ಲಿ ಮೊದಲ ಪದವಿಯೆಂದರೆ MB, BS ಎನ್ನಲಾಗುತ್ತಿದೆ.
ಕ್ಷೌರಿಕ-ಶಸ್ತ್ರಚಿಕಿತ್ಸಕರು ಸಾಧಾರಣವಾಗಿ ಕುಖ್ಯಾತಿ ಗಳಿಸಿದ್ದರು. ಇದು ಶೈಕ್ಷಣಿಕ ಶಸ್ತ್ರಚಿಕಿತ್ಸೆಯ ಉಪಕ್ಷೇತ್ರಕ್ಕಿಂತ ಹೆಚ್ಚಾಗಿ ಔಷಧಶಾಸ್ತ್ರ ಒಂದು ವಿಭಾಗವಾಗಿ ಬೆಳವಣಿಗೆ ಹೊಂದುವವರೆಗೂ, ಹೆಚ್ಚಿನ ಚೇತರಿಕೆ ಕಂಡಿರಲಿಲ್ಲ.[10] ಅಪೂತಿ ಚಿಕಿತ್ಸೆ ಮುಂತಾದವುಗಳ ಮೂಲಭೂತ ಶಸ್ತ್ರಚಿಕಿತ್ಸಕ ನಿಯಮಗಳನ್ನು ಹಾಲ್ಸ್ಟೆಡ್ನ ತತ್ತ್ವಗಳು ಎಂದು ಕರೆಯಲಾಗುತ್ತದೆ.
ಸೂಕ್ಷ್ಮದರ್ಶಕ, ದೂರದರ್ಶಕ, ಮುದ್ರಣ ಯಂತ್ರಗಳ ಉಪಜ್ಞೆ, ನ್ಯೂಟನ್ ತತ್ತ್ವಗಳ ಘೋಷಣೆ ಮುಂತಾದವು (ಸು. 15-16ನೆಯ ಶತಮಾನಗಳು) ಮಾನವನನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ ಇನ್ನೊಂದು ಕಡೆ 1543ರಲ್ಲಿ ಪಡುವಾ ವಿಶ್ವವಿದ್ಯಾಲಯದ ವೆಸೇಲಿಯಸ್ (1514-64) ಎಂಬಾತ ತನ್ನ ಡಿ ಕಾರ್ಪೊರಿಸ್ ಹ್ಯೂಮನಿ ಎಂಬ ಲೇಖನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಪ್ರಾರಂಭಿಸಿದ. ವಿಜ್ಞಾನದ ಆಸರೆಯಲ್ಲಿ ಅಂಗರಚನಾವಿಜ್ಞಾನದ (ಅನಾಟಮಿ) ಬೆಳೆವಣಿಗೆಯಾಯಿತು. ವೈಜ್ಞಾನಿಕ ಯುಗದೊಂದಿಗೆ ಆಧುನಿಕ ಶಸ್ತ್ರಚಿಕಿತ್ಸೆಯು ಶೀಘ್ರದಲ್ಲಿಯೇ ಅಭಿವೃದ್ಧಿ ಹೊಂದಿತು.ಬಾಹ್ಯಕ್ಕೆ ಕಾಣಿಸದೇ ಇರುವ ರೋಗಗಳ ಕಾರಣವನ್ನು ಬೆನೆವಿನಿ, ಮ್ಯಾಲ್ಪೀಗಿ (1628-94) ಮತ್ತು ವಲ್ಸಾಲ್ವ ಎಂಬವರು ಮರಣೋತ್ತರ ಪರೀಕ್ಷೆಯಿಂದ ಪತ್ತೆಹಚ್ಚಿ ರೋಗವಿಜ್ಞಾನದ (ಪೆತಾಲಜಿ) ಅರಿವನ್ನು ಬೆಳಕಿಗೆ ತಂದರು. ಫ್ರೆಂಚ್ ಸೈನ್ಯದ ಶಸ್ತ್ರತಜ್ಞ ಆಂಬ್ರೋಯಿಸೆ ಪಾರೆ (ಕೆಲವೊಂದು ಬಾರಿ "ಆಂಬ್ರೋಸ್"[11] ಎಂದು ಉಚ್ಚರಿಸಲಾಗುತ್ತದೆ) ಬಂದೂಕಿನಿಂದ ಸಿಡಿದ ಗುಂಡುಗಳಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ಮೊದಲಿಗರೆನಿಸಿದರು. ಜೊತೆಗೆ ನೆಪೋಲಿಯನ್ನನ ಯುದ್ಧಗಳಲ್ಲಿ, ಸಮರಾಂಗಣದಲ್ಲಿ ಚಿಕಿತ್ಸೆ ನೀಡಿದ ಮೊದಲ ಆಧುನಿಕ ಶಸ್ತ್ರಚಿಕಿತ್ಸಕರೆನಿಸಿಕೊಂಡರು. ಮುಂದಿನ ಶತಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಬೆಳೆವಣಿಗೆಗಳೇನೂ ಆಗಲಿಲ್ಲ. ನೌಕಾದಳದ ಶಸ್ತ್ರಚಿಕಿತ್ಸಕರು ಸಾಮಾನ್ಯವಾಗಿ ಕ್ಷೌರಿಕ ಶಸ್ತ್ರಚಿಕಿತ್ಸಕರಾಗಿದ್ದರು. ಇವರು ಶಸ್ತ್ರಚಿಕಿತ್ಸೆಯೊಂದಿಗೆ ತಮ್ಮ ಮುಖ್ಯ ಕಸುಬಾದ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದರು.
1630ರ ಸುಮಾರಿಗೆ ಡಿ ಮೋಟು ಕಾರ್ಡಿಸ್ ಎಟ್ ಸ್ಯಾಂಗ್ವಿನಿಸ್ ಇನ್ ಅನಿಮಾಲಿಬಸ್ ಎಂಬ ಪ್ರಕಟಣೆಯಿಂದ ವಿಲಿಯಮ್ ಹಾರ್ವೆ (1578-1657) ವೈದ್ಯವಿಜ್ಞಾನದಲ್ಲಿ ಪ್ರಯೋಗಗಳನ್ನು ಬಳಕೆಗೆ ತಂದ. ಮುಂದೆ ಜಾನ್ ಹಂಟರ್ (1728-93) ಇದರ ಉಪಯೋಗವನ್ನು ಶಸ್ತ್ರಚಿಕಿತ್ಸಾವಿಧಾನಗಳಿಗೆ ವಿಸ್ತರಿಸಿದ.
ಮೂರು ಮುಖ್ಯ ಬೆಳವಣಿಗೆಗಳು ಆಧುನಿಕ ಶಸ್ತ್ರಚಿಕಿತ್ಸಕ ಮಾರ್ಗಗಳ ಬದಲಾವಣೆಗೆ ಅವಕಾಶ ನೀಡಿದವು. ಇವುಗಳೆಂದರೆ - ರಕ್ತಸ್ರಾವದ ನಿಯಂತ್ರಣ, ಸೋಂಕಿನ ನಿಯಂತ್ರಣ ಹಾಗು ನೋವಿನ ನಿಯಂತ್ರಣ (ಅರಿವಳಿಕೆ).
ನೋವು ನಿವಾರಿಸುವ ಸಂವೇದನಹಾರಿಗಳು, ಪೂತಿರೋಧಕ ವಿಧಾನಗಳು, ರಕ್ತಸ್ರಾವದ ಹತೋಟಿ ಕ್ರಮಗಳು ಮತ್ತು 20ನೆಯ ಶತಮಾನದ ಪೂರ್ವಾರ್ಧದ ಪ್ರತಿಜೈವಿಕಗಳು - ಈ ಉಪಜ್ಞೆಗಳಿಂದಾಗಿ ಆಧುನಿಕ ಯುಗದಲ್ಲಿ ಶಸ್ತ್ರಚಿಕಿತ್ಸೆ ಅತ್ಯಂತ ಕ್ಷೇಮಕರವಾಗಿದೆ. ಇದರಿಂದಾಗುವ ಸಾವಿನ ಪ್ರಮಾಣ ಕಡಿಮೆಯಾಗಿ ಅಪೆಂಡಿಕ್ಸ್ ತೆಗೆಯುವಿಕೆ, ಹರ್ನಿಯ ಶಸ್ತ್ರಕ್ರಿಯೆ ಮುಂತಾದವು ಕೇವಲ ಒಂದು ದಿನದ ಚಿಕಿತ್ಸೆಗಳಾಗಿ ಪರಿಣಮಿಸಿವೆ.
ಜೀವವೈದ್ಯಕೀಯ ಎಂಜಿನಿಯರಿಂಗ್ನ ಅಪ್ರತಿಮ ಸಾಧನೆಯಿಂದಾಗಿ ಶೈಶವಾವಸ್ಥೆಯಲ್ಲೇ ರೋಗ ಪತ್ತೆಮಾಡಬಲ್ಲ ಅಲ್ಟ್ರಾಸೊನೋಗ್ರಫಿ (ಯುಎಸ್ ಸ್ಕ್ಯಾನ್), ಕಂಪ್ಯೂಟರೈಸ್ಡ್ ಟೊಮೋಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂಆರ್ಐ) ಮುಂತಾದ ಸಾಧನಗಳು ತಜ್ಞರಿಗೆ ಲಭ್ಯವಾಗಿ ಶಸ್ತ್ರಚಿಕಿತ್ಸಾನಂತರದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅನ್ನನಾಳ, ಜಠರ ಮತ್ತು ಕರುಳು ದರ್ಶಕ ವೀಡಿಯೊಯಂತ್ರಗಳ ಮತ್ತು ಕ್ಯಾಪ್ಸೂಲ್ ಎಂಡೊಸ್ಕೋಪಿಗಳ ಉಪಜ್ಞೆಯಿಂದ ಸಂಬಂಧಿತ ಅಂಗಗಳ ರೋಗಗಳು ಖಚಿತವಾಗಿ ಪತ್ತೆಯಾಗಿ ಅವುಗಳ ಶಸ್ತ್ರಚಿಕಿತ್ಸೆಗಳೂ ಸಮರ್ಪಕವಾಗಿ ನಡೆಯುವಂತಾಗಿವೆ.
ಇತ್ತೀಚಿನ ಬೆಳೆವಣಿಗೆ ಎಂದರೆ ಉದರದರ್ಶಕದಿಂದ ಮಾಡುವ ಶಸ್ತ್ರಚಿಕಿತ್ಸೆ ಅಥವಾ ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್). ಇದು ರೋಗಿಯ ಹೊಟ್ಟೆ ಮೇಲೆ 1-0.5 ಸೆಂಮೀ ಗಾತ್ರದ 4-6 ರಂಧ್ರಗಳನ್ನು ಮಾಡಿ ಇವುಗಳ ಮೂಲಕ ಉದರದರ್ಶಕ ಮತ್ತು ಇತರ ಉಪಕರಣಗಳನ್ನು ತೂರಿಸಿ ಮಾಡಬಹುದಾದ ಶಸ್ತ್ರಚಿಕಿತ್ಸೆ. ಅನ್ನನಾಳ, ಜಠರ, ಕರುಳು, ಪಿತ್ತಕೋಶ, ಮೂತ್ರಪಿಂಡ, ಗರ್ಭಕೋಶ, ಅಂಡಾಶಯಗಳು ಮುಂತಾದ ಅಂಗಗಳ ಶಸ್ತ್ರಚಿಕಿತ್ಸೆಗಳನ್ನು ವಿವೃತ ಕ್ರಮ (ಓಪನ್ ಪ್ರೊಸೀಜರ್) ಅನುಸರಿಸಿ ಮಾತ್ರ ಯಶಸ್ವಿಯಾಗಿ ನಿರ್ವಹಿಸಬಹುದು. ಉದರದರ್ಶಕ ಶಸ್ತ್ರಕ್ರಿಯೆಯಿಂದ ರೋಗಿ ಪಡೆವ ಲಾಭಗಳೆಂದರೆ ಕನಿಷ್ಠ ಆಸ್ಪತ್ರೆ ವಾಸ, ನೋವು ಮತ್ತು ಕೆಲಸದಿಂದ ಕನಿಷ್ಠ ಗೈರುಹಾಜರಿ.
ಮೂಳೆ ಮತ್ತು ಕೀಲುಗಳ ಚಿಕಿತ್ಸೆಯಲ್ಲಿ ಸಾಕಷ್ಟು ಬೆಳೆವಣಿಗೆ ಆಗಿದೆ. ಮುರಿದ ಮೂಳೆಗಳ ಜೋಡಣೆಗಾಗಿ ಬಾಹ್ಯ ಫಿಕ್ಸೇಟರುಗಳು, ಇಂಟರ್ಲಾಕಿಂಗ್ ನೆಯ್ಲಿಂಗ್, ಡೈನಮಿಕ್ ಹಿಪ್ಸ್ಕ್ರೂ ಮತ್ತು ರಷ್ಯದ ಇಲಿಜಾರೋವ್ ವಿಧಾನಗಳು ಬಳಕೆಯಲ್ಲಿವೆ. ಚರ್ಮದ ಮೇಲೆ ಮಾಡಿದ 1 ಸೆಂಮೀ ಚಿಕ್ಕರಂಧ್ರದಿಂದ ಕೀಲುಗಳ ಒಳಭಾಗವನ್ನು ಪರೀಕ್ಷಿಸಿ, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಇದಕ್ಕೆ ಆರ್ಥ್ರೊಸ್ಕೊಪಿ ಎಂದು ಹೆಸರು. ಇದಲ್ಲದೆ ಪೂರ್ಣ ಕೆಟ್ಟಿರುವ ಕೀಲಿನ ಮೂಳೆಗಳ ಜೋಡಣೆಯೂ ಬಳಕೆಯಲ್ಲಿದೆ. ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್) ಮೂಲಕ ಅಂತರಕಶೇರಿನ ಮೃದ್ವಸ್ಥಿಯ ಜಾರಿಳಿತ ಚಿಕಿತ್ಸೆಮಾಡಿ ಎರಡು ದಿನಗಳಲ್ಲಿ ರೋಗಿ ಗುಣ ಹೊಂದಬಹುದು.
ಅಂಗಗಳ ನಾಟಿ ಮಾಡುವ ಶಸ್ತ್ರಚಿಕಿತ್ಸೆ 1900ರ ದಶಕದಲ್ಲಿ ಪ್ರಾರಂಭವಾಗಿ 1960ರಲ್ಲಿ ಹೃದಯ-ಶ್ವಾಸಕೋಶ (ಹಾರ್ಟ್-ಲಂಗ್) ಯಂತ್ರದ ಅನ್ವೇಷಣೆಯಿಂದ ಇನ್ನಷ್ಟು ಫಲಪ್ರದವಾಗಿದೆ. ಹೃದಯದ ನಾಟಿ ಪ್ರಪ್ರಥಮವಾಗಿ 1967ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಕ್ರಿಶ್ಚಿಯನ್ ಬಾರ್ನಾರ್ಡ್ (1922-2001) ಎಂಬವನಿಂದ ನಡೆಯಿತು.[15][16] ಭಾರತದಲ್ಲಿ ಪಿ.ಕೆ.ಸೇನ್ ಮುಂಬಯಿಯಲ್ಲಿ ಇದರ ಪ್ರಯತ್ನ ನಡೆಸಿದ್ದರು.[17]
ಮೂತ್ರಪಿಂಡಗಳ ನಾಟಿ ಈಗ ಸರ್ವೇಸಾಧಾರಣವಾಗಿ ಹಲವಾರು ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ದೇಹದ ಏಕಾಂಗಗಳಾದ ಪಿತ್ತಜನಕಾಂಗ ಮತ್ತು ಮೇದೋಜೀರಕಾಂಗಗಳ ಬದಲಿ ಜೋಡಣೆ ಇನ್ನಷ್ಟು ಕ್ಲಿಷ್ಟಕರ. ಇದನ್ನು ಪ್ರಪಂಚದ ಕೆಲವೇ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
ಹೃದಯದ ಕಿರೀಟ ಧಮನಿಗಳ ಹೊರಳು ನಾಟಿ (ಕರೋನರಿ ಬೈಪಾಸ್ ಗ್ರಾಫ್ಟ್) 1960ರಿಂದ ಈಚಿನ ತನಕವೂ ಅವ್ಯಾಹತವಾಗಿ ನಡೆದು, ಕಳೆದ ಒಂದೆರಡು ವರ್ಷಗಳಿಂದ ಇತರ ಪರಿಣಾಮಕಾರಿ ಚಿಕಿತ್ಸೆಗಳಿಂದಾಗಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಂತಿದೆ. ರೋಗಿಯ ರಕ್ತಪರಿಚಲನೆಯನ್ನು ಹೃದಯ-ಶ್ವಾಸಕೋಶ ಯಂತ್ರದ ಮೂಲಕ ಹಾಯಿಸಿ, ಹೃದಯವನ್ನು ತಾತ್ಕಾಲಿಕವಾಗಿ ಸ್ತಂಭಿಸಿ, ವಿವೃತ ಹೃದಯ ಶಸ್ತ್ರಚಿಕಿತ್ಸೆಗಳಾದ ಹೊರಳು ನಾಟಿ (ಬೈಪಾಸ್ ಗ್ರಾಫ್ಟ್) ಅಲ್ಲದೆ, ಕವಾಟಗಳ ಜೋಡಣೆ, ಅಂತರಹೃತ್ಕರ್ಣಗಳ ಮತ್ತು ಅಂತರಹೃತ್ಕುಕ್ಷಿಗಳ ಸೆಪ್ಟಮ್ನ ದುರಸ್ತಿ ಮುಂತಾದ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ಮಾಡಬಹುದಾಗಿದೆ. ಅತ್ಯಾಧುನಿಕವಾಗಿ ಮೇಲೆ ಹೇಳಿದ ಯಂತ್ರದ ಬಳಕೆ ಇಲ್ಲದೆ, ಮಿಡಿಯುತ್ತಿರುವ ಹೃದಯದ ಮೇಲೆಯೇ ಶಸ್ತ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ ಎದೆಗೂಡನ್ನು ತೆರೆಯದೇ ಚಿಕ್ಕ ಚಿಕ್ಕ ರಂಧ್ರಗಳ ಮೂಲಕ ಥೊರ್ಯಾಕೊಸ್ಕೋಪ್ ಎಂಬ ಉಪಕರಣದಿಂದ ಹೊರಳುನಾಟಿ ಶಸ್ತ್ರಕ್ರಿಯೆಯನ್ನು ಕೂಡ ಮಾಡಲಾಗುತ್ತಿದೆ.
ಮೂತ್ರಪಿಂಡಗಳ ಶಸ್ತ್ರಕ್ರಿಯೆಗಳನ್ನು ಇದೇ ರೀತಿ ಚಿಕ್ಕರಂಧ್ರಗಳ ಮೂಲಕ ನಿರ್ವಹಿಸುವ ವ್ಯವಸ್ಥೆ ಕೂಡ ಉಂಟು. ಮೂತ್ರಕೋಶ ಮತ್ತು ಮೂತ್ರನಾಳಗಳ ಅನೇಕ ತೊಂದರೆಗಳನ್ನು ಅಂತರದರ್ಶಕ ಉಪಕರಣದಿಂದ ಶಮನಪಡಿಸಬಹುದಾಗಿದೆ. ಮೂತ್ರಸಂಬಂಧೀ ಕಶ್ಮಲಗಳನ್ನು ತೆಗೆಯಲು ವಿವೃತ ಶಸ್ತ್ರಚಿಕಿತ್ಸೆ ವಿರಳವಾಗುತ್ತಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯ ಇತರ ಉಪಾಂಗಗಳಾದ ರಕ್ತನಾಳಗಳ ಪ್ಲಾಸ್ಟಿಕ್, ಪುನಾರಚನೆ ಮಿದುಳು ಮತ್ತು ನರಗಳ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯುತ ಸಾಧನೆಗಳಾಗಿವೆ.
ರೊಬೋಟಿಕ್ ಶಸ್ತ್ರಚಿಕಿತ್ಸೆ: ಗಣಕಾವಲಂಬಿತ ರೊಬೋಟುಗಳ ಮೂಲಕ ಮಾಡುವ ಈ ವಿಧಾನ ಇನ್ನೂ ಪ್ರಯೋಗಾವಸ್ಥೆಯಲ್ಲಿದೆ. ರೊಬೋಟಿಕ್ ಶಸ್ತ್ರಚಿಕಿತ್ಸೆಯ ಯಶಸ್ಸನ್ನು ಕಾಲವೇ ತೀರ್ಮಾನಿಸಬೇಕಾಗಿದೆ.
ಇತರ ಕೆಲವು ಪರಿಣತಿಗಳು ಕೆಲವು ರೀತಿಯ ಶಸ್ತ್ರಚಿಕಿಸ್ತಾ ಮಧ್ಯಸ್ಥಿಕೆಯನ್ನು ಒಳಗೊಂಡಿರುತ್ತದೆ, ವಿಶೇಷವಾಗಿ ಸ್ತ್ರೀರೋಗ ಶಾಸ್ತ್ರ. ಅಲ್ಲದೆ, ಕೆಲವರು ಚಿಕಿತ್ಸಾಕ್ರಮ/ರೋಗನಿರ್ಣಯದ ಛೇದನ ಬೇಕಿರುವ ವಿಧಾನಗಳನ್ನು ಪರಿಗಣಿಸುತ್ತಾರೆ, ಉದಾಹರಣೆಗೆ ಹೃದಯಕ್ಕೆ ನಳಿಕೆಯನ್ನು ಒಳತೂರಿಸುವುದು, ಅಂತರ್ದರ್ಶಕ ಪರೀಕ್ಷೆ, ಹಾಗು ಹೃದಯದ ನಾಳಗಳು ಅಥವಾ ಕೇಂದ್ರ ನಾಳಗಳನ್ನು ಸರಿಪಡಿಸುವ "ಶಸ್ತ್ರಚಿಕಿತ್ಸೆ". ವೈದ್ಯಕೀಯ ಕ್ಷೇತ್ರದ ಹಲವು ಭಾಗಗಳಲ್ಲಿ, ಈ ದೃಷ್ಟಿಕೋನವನ್ನು ಹಂಚಿಕೊಳ್ಳಲಾಗಿಲ್ಲ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.